Wednesday, March 28, 2012

ಸರ್ಕಾರಿ ಶಾಲೆ ನಕ್ಸಲೈಟ್ ಹುಟ್ಟಿಸೊ ಕೇಂದ್ರಗಳಾಗಿ ಕಂಡಿದ್ದೇಕೆ ರವಿಶಂಕರ್?

ಸಮಾಜದ ನಡುವಿನ ಅಸಮತೋಲನ ವ್ಯವಸ್ಥೆ ಮಧ್ಯೆ ಇದಕ್ಕೆ ಸಿಡಿದೆದ್ದು ನಿಂತು ನಕ್ಸಲೈಟ್ ಅನ್ನೋದು ಹುಟ್ಟು ಪಡೆಯಿತು ಎಂಬುದು ಒಂದು ಸಾಮಾನ್ಯ ತಿಳುವಳಿಕೆಯನ್ನು ಹೊಂದಿದ ವ್ಯಕ್ತಿಯ ಅರಿವಿಗೆ ಬರುವಂತದ್ದು.ಬಡತನ,ದೌರ್ಜನ್ಯ ಇತರದರಿಂದ ಬೇಸತ್ತು ನಕ್ಸಲೈಟ್ ವ್ಯವಸ್ಥೆಗೆ ಸೇರುವ ಮಂದಿ ಇರಬಹುದು ಆದರೆ ಇದಕ್ಕೂ ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಂದಿ ನಕ್ಸಲೈಟ್ ಗಳಾಗಿ ಬದಲಾಗುತ್ತಾರೆ ಎಂಭ ರವಿಶಂಕರ್ ನಿಮ್ಮ ಮಾತುಗಳಿಗೆ ಎತ್ತಣಿಂದೆತ್ತ ಸಂಬಂಧ ಅನ್ನೋದನ್ನ ನಾ ತಿಳಿಯೆ.ದೇಶದ ೬೦% ಮಂದಿ ಇವತ್ತು ಸರ್ಕಾರಿ ಶಾಲೆಯಿಂದ ಬಂದವರೆ ಆಡಳಿತದ ಬೇರೆ ಬೇರೆ ಸ್ತರದಲ್ಲಿ ಇದ್ದಾರೆ,ತಾಂತ್ರಿಕ, ಶೈಕ್ಷಣಿಕ, ವೈಜ್ಞಾನಿಕ, ವೈದ್ಯಕೀಯ ಇಂಥ ಎಲ್ಲಾ ಕ್ಷೇತ್ರಗಳಲ್ಲಿಯು ಸರ್ಕಾರಿ ಶಾಲೆಯಿಂದ ಬಂದವರೆ ಇದ್ದಾರೆ,ಹೀಗಿರಬೇಕಾದರೆ ಸಮಾಜದ ಒಂದು ಸಮೂಹದಿಂದ ಗುರೂಜಿ ಎಂದು ಕರೆಸಿಕೊಳ್ಳುವ ನೀವು ಸರ್ಕಾರಿ ಶಾಲೆಗಳು ಮಕ್ಕಳನ್ನು ಹಿಂಸೆಗೆ ತನ್ಮೂಲಕ ನಕ್ಸಲಿಸಂಗೆ ಸೆಳೆಯುತ್ತವೆ. ಈ ಕಾರಣದಿಂದ ಎಲ್ಲ ಸರ್ಕಾರಿ ಶಾಲೆ-ಕಾಲೇಜುಗಳನ್ನು ಖಾಸಗಿಯವರಿಗೆ ವಿಶೇಷವಾಗಿ ಆದರ್ಶ ಶಾಲೆಗಳಿಗೆ ಒಪ್ಪಿಸಬೇಕು ಎನ್ನುವ ಹೇಳಿಕೆ ನೀಡ್ತೀರಾ ಅಂದರೆ ನಮ್ಮಂತ ಜನಸಾಮಾನ್ಯ ಅದು ಬಾಲಿಶ ಹಾಗು ಈ ಬಗ್ಗೆಯ ಯಾವುದೆ ಅರಿವಿರದ, ಪೂರ್ವಾಗ್ರಹ ಪೀಡಿತವಾದ,ಅನೈತಿಕ, ಜೀವವಿರೋಧಿಯಾದ, ಮಾನಸಿಕ ಸಮತೋಲನ ಕಳಕೊಂಡ ವ್ಯಕ್ತಿಯ ತಲೆಕೆಟ್ಟ ಹೇಳಿಕೆಯೆಂದೆ ಪರಿಗಣಿಸಬೇಕಾಗಿದೆ.

ಕುವೆಂಪು,ದ ರಾ ಬೇಂದ್ರೆ, ಶಿವರಾಮ ಕಾರಂತ್ ,ನಿಸಾರ್ ಅಹ್ಮದ್, ವಿಜ್ಞಾನಿಗಳಾದ ಜಗದೀಶ್ ಚಂದ್ರ ಭೋಸ್, ಅಬ್ದುಲ್ ಕಲಾಂ ಮುಂತಾದ ಮುಂತಾದ ಸಾವಿರಾರು ಗಣ್ಯರು ಕಲಿತದ್ದು ಇದೆ ಸರ್ಕಾರಿ ಶಾಲೆಗಳಲ್ಲಿ ಅನ್ನೊ ಪರಿಜ್ಞಾನ ಹೇಳಿಕೆ ಕೊಡೊ ಮುನ್ನ ನಿಮ್ಮಲ್ಲಿ ಇರಲಿಲ್ಲವೆ?, ಇಲ್ಲದೆ ಏನಿಲ್ಲ ಶ್ರೀಮಂತ ಸಮುದಾಯವನ್ನು ಓಲೈಸುವ ಸಲುವಾಗಿ ಕಾರ್ಪೋರೇಟ್ ದಂದೆ ಮಾಡುವ ನಿಮಗೆ ಏನಾದರೊಂದು ಹೇಳಿ ಆ ಜನಗಳನ್ನ ತನ್ನತ್ತ ಸೆಳೆಯಬೇಕಾದ ಹಪಹಪಿತನದಲ್ಲಿ ಬಾಯಿ ಹರಿಯಬಿಟ್ಟಿರಿ ಅನ್ನುವದು ಸ್ಪಷ್ಟ, ಇದೊಂದು ನಿಮ್ಮ ಸೋಗಲಾಡಿತನದ ವ್ಯಾಪಾರಿಯ ಬುದ್ದಿಯ ಬೇಜವಬ್ದಾರಿ ಹೇಳಿಕೆ ಅಷ್ಟೆ. ನನ್ನ ಈ ಹೇಳಿಕೆ ಸಮಾಜದ ಮೇಲೆ ಅದೆಂಥ ಪರಿಣಾಮ ಬೀರಬಹುದು ಅನ್ನುವ ಯಾವುದೆ ಯೋಚನೆ ಬಾಯಿ ಹರಿಬಿಡೋ ಮುನ್ನ ನಿಮಗೆ ಇದ್ದಂತಿಲ್ಲ. ಹಾಗೆಯೆ ಸರ್ಕಾರಿ ಶಾಲೆಯಲ್ಲಿ ಕಲಿತ ನಮಗೆ ನಿಮ್ಮ ಹೇಳಿಕೆಗೆ ಕೈ ಕಟ್ಟಿ ಕೂತು ಕೇಳಿಸಿಕೊಂಡು ಕೂರುವ ದರ್ದು ಬಂದೊದಗಿಲ್ಲ.ಜೀವನದ ಕಲೆಯನ್ನು ಕಲಿಸುವ ನಿಮಗೆ ಕೆಲವು ಜೀವನದ ಮೌಲ್ಯಗಳ ಕಲೆ, ಜನರ ನಾಡಿ ಮಿಡಿತವ ಅರಿಯುವ ಕಲೆ,ಹಸಿದವನ ಹಸಿವಿನ ತೊಳಲು ತಿಳಿಯುವ ಕಲೆ ಇದ್ದಂತಿಲ್ಲ, ಅದನ್ನ ನಮ್ಮಿಂದ ಹೇಳಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ನಿಮಗೆ ನೀವೆ ತಂದುಕೊಡಿದ್ದೀರಿ, ಸಂತೋಷ.ಸರ್ಕಾರಿ ಶಾಲೆಯಲ್ಲಿ ಕಲಿತ ನಮಗೆ ಆ ಮಟ್ಟಿಗಿನ ಬದ್ದತೆ ಇದೆ ಎಂದು ತಿಳಿದೆ ಒಂದಷ್ಟು ವಿಷಯಗಳನ್ನು ನಮ್ಮೊಳಗೆ ಅವಲೋಕಿಸಿ ನಿಮ್ಮಂತವರ ಸಾಚಾತನವನ್ನು ತಿಳಿಯಬೇಕಾಗಿದೆ.

ನೀವು ದೇಶ ವಿದೇಶದಲ್ಲಿ ಹೆಸರುವಾಸಿ, ನೀವು ಆ ಮೂಲಕ ಯೋಗ ಅದ್ಯಾತ್ಮ ಗುರುಗಳು ಅನಿಸಿಕೊಂಡವರು ಸಾಕಷ್ಟು ಆಸ್ತಿಯು ಉಳ್ಳವರ ಸಂಘವು ನಿಮಗಿದೆ, ಹಾಗಿರಬೇಕಾದರೆ ದೇಶ ವಿದೇಶ ಬೇಡ ನಿಮ್ಮ ಅಸ್ತಿತ್ವ ಕಾಯ್ದುಕೊಂಡಿರುವ ನಿಮಗೊಂದು ಮಾನ್ಯತೆ ಕೊಟ್ಟಿರುವ ಈ ರಾಜ್ಯದಲ್ಲಿರುವ ಬಡವರು ಎನಿಸಿಕೊಂಡಿರುವ ಸಾವಿರಾರು ಕುಟುಂಬಗಳಿದ್ದಾವೆ, ದಿನಗೂಲಿಗೆ ದುಡಿಯುತ್ತಿರುವ ಪೌರ ಕಾರ್ಮಿಕ ಕುಟುಂಬಗಳು, ಮಾನ್ಯುಯಲ್ ಸಾವೆಂಜರ್ ಅನ್ನೊ ಅನಿಷ್ಟ ಪದ್ದತಿಯೊಳಗೆ ಹೊತ್ತನ್ನ ತಿನ್ನುವ ಕುಟುಂಬಗಳು,ಊರುರೂ ಕೂಲಿಗಾಗಿ ಅಲೆದು ಬದುಕು ಕಂಡುಕೊಳ್ಳುವ ಉತ್ತರ ಕರ್ನಾಟಕದ ಕುಟುಂಬಗಳು,ದಿನವಿಡಿ ಬಿಸಿಲಲ್ಲಿ ಪುಟ್ ಪಾತ್ ಮೇಲೆ ವ್ಯಾಪಾರ ಮಾಡಿ ಜೀವನ ಕಂಡುಕೊಳ್ಳೊ ಕುಟುಂಬಗಳು,ಸಂಪರ್ಕ ಸೌಲಭ್ಯವೆ ಇಲ್ಲದ ಹಲವು ಹಳ್ಳಿಯೂರಿನ ಕುಟುಂಬಗಳು,ಗುಡ್ಡ ಗಾಡು ಪ್ರದೇಶದ ಹಲವು ಹಿಂದುಳಿದ ಜನಾಂಗದ ಕುಟುಂಬಗಳು, ಭಿಕ್ಷೆ ಹೊರೆದು ಜೀವನ ನಡೆಸುತ್ತಿರುವ ಇಂಥಹ ಸಾವಿರಾರು ಕುಟುಂಬಗಳನ್ನು ಹಾಗು ಅವರ ಮಕ್ಕಳನ್ನು ದತ್ತು ತೆಗೆದುಕೊಂಡು ಜೀವಿತದ ಕಲೆ ಆ ಕುಟುಂಬಗಳಿಗೆ ಹಾಗು ಅವರ ಮಕ್ಕಳಿಗೆ ನೀವು ಹೇಳುವಂತಹ ಉತ್ತಮ ಶಿಕ್ಷಣ ಕೊಡಬಲ್ಲಿರೆ?ಸಾಮರ್ಥ್ಯ ಇದ್ದಾಗಿಯು ನೀವು ಆ ನಿಟ್ಟಿನಲ್ಲಿ ಕೆಲಸ ಮಾಡಲಾರಿರಿ, ಕಾರಣ ಸ್ಪಷ್ಟ ನೀವು ಜೀವಿತದ ಕಲೆ ಕಲಿಸಿಕೊಡೋದು ನಿಮ್ಮ ವ್ಯಾಪಾರಿ ಬುದ್ದಿಯಿಂದ, ವ್ಯಾಪಾರಿ ಅಂದೊಡೆ ಲಾಭವಿರುವಲ್ಲಿ ನೀವಿರಲು ಸಾಧ್ಯ. ಅದಕ್ಕಾಗಿ ನೀವು ಉಳ್ಳವರ ಓಲೈಕೆಗೆ ಮುಂದಡಿ ಇಡುತ್ತೀರಿ.ರವಿಶಂಕರ್ ಅವರೆ ಮೇಲೆ ಹೇಳಿದ ಕುಟುಂಬದ ಮಕ್ಕಳು ಒಂದಷ್ಟು ಅಕ್ಷರ ಕಲಿಯುತ್ತಾರೆಂದರೆ ಅದು ನಿಮ್ಮಂತ ವ್ಯಾಪಾರಿಯಿಂದಾಗಲಿ, ಇತರ ಡೋನೇಷನ್ ಹಪಹಪಿತನಕ್ಕೊಳಪಟ್ಟ ಖಾಸಗಿ ಶಾಲೆಯಿಂದಲ್ಲ ಅದೇನಿದ್ದರು ಸರ್ಕಾರಿ ಶಾಲೆಯಿಂದಷ್ಟೆ ಸಾಧ್ಯ, ಬಲ್ಲಿದರನ್ನು ಭಿಕ್ಷಾಟನೆ ಅನುಭವ ಪಡೆದು ಬನ್ನಿ ಅಂದು ಕಳಿಸೋದು ಸುಲಭ,ನಿಜ ಭಿಕ್ಷುಕರನ್ನು ಬಲ್ಲಿದರನ್ನಾಗಿ ಮಾಡುವತ್ತ(ಸಾಮರ್ಥ್ಯ ಇದ್ದಾಗಿಯು) ನೀವು ಹೆಜ್ಜೆಯಿಡಲಾರಿರಿ ಅನ್ನೋದು ಸ್ಪಷ್ಟ. 

ಸರ್ಕಾರಿ ಶಾಲೆಯಲ್ಲಿ ಸಂವಿಧಾನಕ್ಕೊಳಪಟ್ಟ ರೀತಿಯಲ್ಲೆ ಪಠ್ಯಕ್ರಮಗಳಿರೋದು,ಅದೆಲ್ಲೂ ನಕ್ಸಲೈಟ್ ಅಂತ ಕಡೆಗೆ ಪ್ರಚೋದಿಸುವಂತದ್ದಲ್ಲ,ಕಾಲದಿಂದ ಕಾಲಕ್ಕೆ ಅದು ಬದಲಾಗಬಹುದಾಗಿದ್ದರು ಅದು ಸಂವಿಧಾನಿಕ ಚೌಕಟ್ಟಿನೊಳಗೆ ಬದಲಾಗುವಂತದ್ದು, ನಿಮ್ಮ ಈ ಬಾಲಿಶತನದ ಮಾತು ಸಂವಿಧಾನ ವಿರೋಧವಾಗಿ ನನ್ನಂತ ಜನಸಾಮಾನ್ಯನಿಗೆ ಕಾಣುತ್ತಿದೆ, ಬದುಕುವ ಕಲಿಯುವ ಹಕ್ಕುಗಳು ಉಳ್ಳವರ ಸೊತ್ತಲ್ಲ,ಅದು ಪ್ರತಿ ಪ್ರಜೆಯ ಸೊತ್ತು, ಅದೆಷ್ಟು ಖಾಸಗಿ ಶಾಲೆಗಳು ಬಡವರ ಮಕ್ಕಳಿಗೆ ಅಕ್ಷರ ಕಲಿಸುತ್ತಿದೆ ಅನ್ನುವದ ಅವಲೋಕಿಸಿ.ಸರ್ಕಾರಿ ಶಾಲೆಯ ಸವಲತ್ತುಗಳನ್ನು ಖಾಸಗಿ ಶಾಲೆಗಳು ಬಡವರ ಮಕ್ಕಳಿಗೆ ಕೊಡಮಾಡಬಲ್ಲುದೆ? ನೀವು ಹೇಳಿದಂತೆ ಆದರೆ ೧೪ ವರುಷದೊಳಗಿನ ಶೇಕಡಾ ೭೫% ಸರ್ಕಾರಿ ಶಾಲೆಯ ಮಕ್ಕಳು ವಿದ್ಯೆಯಿಂದ ವಂಚಿತರಾಗುತ್ತಾರೆ,ನಿಮ್ಮ ಈ ಹೇಳಿಕೆ ಉಳ್ಳವರನ್ನು ನಿಮ್ಮ ಬಗಲಿಗೆ ಹಾಕಿಕೊಳ್ಳಲಾಡಿದ್ದು ಅನ್ನೋದು ಮೇಲಿನ ಕಾರಣಗಳಿಂದ ಸ್ಪಷ್ಟವಾಗುತ್ತಿದೆ.ದಾಸ್ಯದ ದಿನಗಳನ್ನು ಮೆಟ್ಟಿ ನಿಂತಾಗಿದೆ, ಮತ್ತೆ ಅದೆ ಉರುಳಿಗೆ ಸಮಾಜವ ದೂಡಲು ಇಚ್ಚಿಸದಿರಿ, ಅಷ್ಟಕ್ಕೂ ನಿಮ್ಮಂತ ಸೋಗಲಾಡಿತನರು ಆಡಿದ ಮಾತ್ರಕ್ಕೆ ಹಾಗಾಗುತ್ತದೆ ಅಂತಲ್ಲ, ಸಮಾಜದಲ್ಲಿ ಗೌರವ ಸ್ಥಾನದಲ್ಲಿ ಕಾಣಿಸಿಕೊಳ್ಳೊ ನಿಮ್ಮಂತವರ ಬುದ್ದಿಗೇಡಿತನದ ಮಾತುಗಳಿಗೆ ಬ್ರೇಕ್ ಬೀಳಬೇಕಾದ ಅವಶ್ಯಕತೆಯಿದೆ.ಇಂದಿನ ಜನಾಂಗದ ಮಕ್ಕಳು ಕೂಡ ಹುಟ್ಟು ಪ್ರಬುದ್ದರೆ,ಅಂತಹ ಕಲಿಯೊ ವಯಸ್ಸಿನ ಮಕ್ಕಳ ಮೇಲೆ ಅದರಲ್ಲೂ ಈ ವಿಷಯ ಸರ್ಕಾರಿ ಶಾಲೆಯಲ್ಲಿ ಕಲಿಯೊ ಮಕ್ಕಳ ಕಿವಿ ತಲುಪಿದರೆ ಅವರ ಮೇಲೆ ಅದೆಂತ ಪರಿಣಾಮ ಬೀರಬಹುದು ಅನ್ನೊ ಕನಿಷ್ಟ ತಿಳುವಳಿಕೆ ನಿಮ್ಮಲ್ಲಿ ಹೇಳಿಕೆ ಕೊಡೊ ಮುನ್ನ ಇರಬೇಕಾಗಿತ್ತು.ಅದ್ಯಾಕೊ ಈ ವಿಷಯದಲ್ಲಿ ಆ ಮಟ್ಟಿಗಿನ ತಿಳುವಳಿಕೆ ಉಳ್ಳವರಿಗೆ ಜೀವನದ ಕಲೆ ಕಲಿಸುವ ನಿಮಗೆ ಇದ್ದಂತಿಲ್ಲ.

ಮೇಲಿನ ಹೇಳಿಕೆಗೆ"ಸರಕಾರಿ ಶಾಲೆಯ ಎಲ್ಲಾ ಮಕ್ಕಳೂ ನಕ್ಸಲೀಯರು ಅಂತಲ್ಲ, ನಕ್ಸಲೀಯರೆಲ್ಲರೂ ಸರಕಾರಿ ಶಾಲೆಗಳಿಂದ ಬಂದವರು. ಸರಕಾರೀ ಶಾಲೆಗಳಲ್ಲಿ ಯಾವುದೇ ಮೌಲ್ಯಗಳನ್ನು ಕಲಿಸದೆ ಇರುವುದೆ ಇದಕ್ಕೆ ಕಾರಣವಿರಬಹುದು. ಬದುಕಿನ ಮೌಲ್ಯಗಳನ್ನು ಕಲಿಸಿಕೊಡುವ, ಆಧ್ಯಾತ್ಮದ ಮೌಲ್ಯಗಳನ್ನು ಕಲಿಸಿಕೊಡುವ ಯಾವುದೇ ಖಾಸಗಿ ಶಾಲೆಯಲ್ಲಿ ಓದಿ ಬಂದ ಮಕ್ಕಳು ನಕ್ಸಲೀಯರಾಗೋಲ್ಲ"ಅನ್ನೊ ಸ್ಪಷ್ಟನೆ ಕೊಟ್ಟು ಮತ್ತೆ ಬೆತ್ತಲಾಗಿದ್ದೀರಿ.ನಕ್ಸಲೀಸಂ ತಳಹದಿನೆ ಉಳ್ಳವರ ವಿರುದ್ದದ ಹೋರಾಟ,ಬಡವರ ವ್ಯವಸ್ಥೆಯೆಡೆಗಿನ ಕಿಚ್ಚು ನಕ್ಸಲ್ ಕಡೆ ಬದಲಾಗೋದು ಹಾಗು ಬದಲಾಗಿರೋದು,ಹಾಗಿರಬೇಕಾದರೆ ಅವರೆಲ್ಲ ಹೈ ಫೈ ಶಾಲೆಗಳಲ್ಲಿ ಓದಿರುವ ಮಂದಿಯಾಗಿರೋದು ಕಷ್ಟ,ಬರೀಯ ಅಷ್ಟಕ್ಕೆ ನಿಮಗೆ ಸರ್ಕಾರಿ ಶಾಲೆ ನಕ್ಸಲೈಟ್ಗಳನ್ನು ಹುಟ್ಟು ಹಾಕುವ ಕೇಂದ್ರಗಳಾಗಿ ಕಂಡಿದ್ದು ವಿಪರ್ಯಾಸ.ಭಾರತ ಅನ್ನೋದು ಜಾತ್ಯಾತೀತ ರಾಷ್ಟ್ರ,ಹೀಗಿರಬೇಕಾದರೆ ಸಣ್ಣ ಮಕ್ಕಳಿಗೆ ಆದ್ಯಾತ್ಮದ ಅರಿವು ಮೂಡಿಸುವ ಅಗತ್ಯತೆಯಾದರು ಏನು?ಅವರಿಗೆ ಅರಿವು ಮೂಡಿಸಬೇಕಾದ್ದು ಬದುಕನ್ನು ಸ್ವೀಕರಿಸಬೇಕಾದ ನೀತಿಗಳನ್ನು ಕಲಿಸಿಕೊಡುವತ್ತ, ಅದು ಆದ್ಯಾತ್ಮದಿಂದಲೆ ಕೊಡಬೇಕಾದದ್ದು ಅನ್ನೊದನ್ನ ನೀವು ಹೇಳೋದಾದರೆ ನಿಮ್ಮಂತವರು ಆ ನಿಟ್ಟಿನಲ್ಲಿ ಸ್ವಯಂಪ್ರೇರಿತರಾಗೆ ಕೊಡಬಹುದಲ್ಲವೆ.ಸರಕಾರಿ ಶಾಲೆ ಖಾಸಗಿ ಶಾಲೆಯೆಂಬ ಭೇದವಿಲ್ಲದೆ ಆ ನಿಟ್ಟಿನಲ್ಲಿ ಕೆಲಸ ಮಾಡಬಹುದಲ್ಲವೆ? ಇಲ್ಲಿ ಭೇದ ಯಾಕೆ ಮಾಡುತ್ತೀರೆಂದರೆ ಖಾಸಗಿ ಶಾಲೆ ಅಂತಾದರೆ ಇಂಥಹ ಕಾರ್ಯಕ್ರಮಗಳ ಮೂಲಕ ಜೇಬು ತುಂಬಿಸಿಕೊಳ್ಳಬಹುದು, ಆ ಮೂಲಕ ನಿಮ್ಮ ವ್ಯಾಪಾರಿ ಬುದ್ದಿ ತೋರಿಸಬಹುದು ಅನ್ನೊ ನಿಮ್ಮ ಯೋಚನೆಯಿಂದಲೆ ಗೊಡ್ಡು ಉಪದೇಶಿಸುತ್ತೀರಿ ಅಂತ ತಿಳಿಯಬೇಕಾಗುತ್ತೆ.ಅಷ್ಟಕ್ಕೂ ಇದರ ಔಚಿತ್ಯವಂತು ನೀವು ತಿಳಿದುಕೊಂಡಂತೆ ಇಲ್ಲ ಅದು ಬೇರೆ ಮಾತು.ಹೌದು ಸರ್ಕಾರಿ ಶಾಲೆಯಲ್ಲಿನ ಶಿಕ್ಷಣ ಗುಣಮಟ್ಟ ಕುಸಿದಿದೆ, ಒಪ್ಪಬೇಕಾದ ಮಾತು, ಯಾವಾಗ ವಿದ್ಯಾ ಕ್ಷೇತ್ರಕ್ಕೆ ಧನದಾಹಿಗಳ ಆಗಮನವಾದವೊ, ವಿದ್ಯಾಕ್ಷೇತ್ರ ಮಾಫಿಯಾವಾಗಿ ಬೆಳೆದವೊ ಅವಾಗ ಅದಕ್ಕೆ ಅಡ್ಡಿಯಾಗಿದ್ದು/ಆಗುತ್ತಿರುವದು ಇದೆ ಸರ್ಕಾರಿ ಶಾಲೆಗಳು,ವ್ಯವಸ್ಥಿತವಾಗಿ ಸರ್ಕಾರಿ ಶಾಲೆಯನ್ನು ಹಣಿಯುತ್ತಲೆ ಬಂದಿರುವ ಈ ಮಾಫಿಯಾಗಳು ಆ ನಿಟ್ಟಿನಲ್ಲಿ ಸಫಲತೆಯನ್ನು ಒಂದಷ್ಟರ ಮಟ್ಟಿಗೆ ಪಡೆದಿದೆ, ಅದಕ್ಕಾಗಿ ನನ್ನಂತವ ಕೇಳುತ್ತಿರುವದು ಸಂಪೂರ್ಣ ಶಿಕ್ಷಣ ಕ್ಷೇತ್ರವೆ ಸರ್ಕಾರಿಕರಣವಾಗಿ ಪ್ರತಿ ಪ್ರಜೆಗೂ ಶಿಕ್ಷಣ ಅನ್ನೋದು ಸುಲಭದಿ ನಿಲುಕುವಂತಾಗಲಿ, ಶಿಕ್ಷಣ ಕ್ಷೇತ್ರದಲ್ಲಿನ ವ್ಯಾಪಾರಿಕರಣ ನೀಗಿದಾಗ ಸೇವೆ ಎಂಭ ಭಾವನೆ ಬಂದು ಶಿಕ್ಷಣ ಕ್ಷೇತ್ರ ಬೆಳಗಲಿ ಅನ್ನೊ ಭಾವನೆಯಿಂದ, ಅದೆಷ್ಟರ ಮಟ್ಟಿಗೆ ಇದು ಸಾಧ್ಯನೊ ಗೊತ್ತಿಲ್ಲ.ಹಾಗಿದ್ದರೂ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಿಸುವತ್ತ ಯೋಚನೆಯನ್ನು ನೀವು ಮಾಡಬಹುದಿತ್ತು,ಸರ್ಕಾರಿ ಶಾಲೆಯಲ್ಲು ಖಾಸಗಿ ಶಾಲೆಯನ್ನು ಮೀರಿಸುವ ಮಾದರಿ ಶಾಲೆಗಳು ಸಾಕಷ್ಟಿವೆ, ಸರ್ಕಾರಿ ಶಾಲೆಯಲ್ಲು ಪ್ರತಿಭಾವಂತರು ಹುಟ್ಟಿ ಬರುವದೇನು ಇವತ್ತಿಗೂ ಕಡಿಮೆಯಾಗಿಲ್ಲ.ಇದೆಲ್ಲವನ್ನು ಅವಲೋಕಿಸದೆ ಬರಿಯ ಕಾರ್ಪೋರೇಟ್ ಸಂಸ್ಕೃತಿಯನ್ನು ಮೈ ಹತ್ತಿಸಿಕೊಂಡ ನೀವು ಖಾಸಗಿ ಶಾಲೆ ಬಗ್ಗೆ ಫಾರ್ಮಾನು ಹೊರಡಿಸಿಬಿಟ್ಟಿರಲ್ಲ ನಾಚಿಕೆಯಾಗಬೇಕು, ನಿಮ್ಮ ಈ ನಡವಳಿಕೆ ಈ ತೆರನಾದ ಮಾತು ಹುಟ್ಟಿಸಿರೋದು ಬರೀಯ ಅಸಹ್ಯವನ್ನಷ್ಟೆ.

1 comment:

  1. ಪ್ರಪಂಚದ ಎಲ್ಲಾ ಶ್ರೇಷ್ಠ ಚಿಂತಕರು, ದಾರ್ಶನಿಕರ ಪ್ರಕಾರ ಪ್ರಾಥಮಿಕ ಶಿಕ್ಷಣವು ಆಯ ಪ್ರದೇಶದ ಪ್ರಾದೇಶಿಕ ಭಾಷೆಯಲ್ಲೆ ನೀಡಬೇಕು ಅನ್ನೊದನ್ನ ಒತ್ತಿ ಒತ್ತಿ ಹೇಳಿದ್ದಾರೆ, ಈಗ ಆ ಪ್ರಾದೇಷಿಕ ಶಿಕ್ಷಣ ನೀಡುತ್ತಿರೋದು ಕೇವಲ ಸರಕಾರಿ ಸ್ವಾಮ್ಯದ ಶಾಲೆಗಳು ಮಾತ್ರ ಹಾಗಿದ್ದಲ್ಲಿ ಈ ಗುರುಜಿಗಳು ಆ ಎಲ್ಲಾ ಚಿಂತಕರ ಚಿಂತನೆಯನ್ನು ಸರಾಸಗಟವಾಗಿ ತಿರಸ್ಕಿರದ್ದಾರೆ (ಪರೋಕ್ಷವಾಗಿ ಹಾಗು ಪ್ರತ್ಯಕ್ಷವಾಗಿ). ನಕ್ಸಲಿಸಂ ಅನ್ನೊದು ಹುಟ್ಟೊಕೆ ಮೂಲ ಕಾರಣ ಆ ಜನ ಅನುಭವಿಸಿದ ಸಾಮಾಜಿಕ ಅಸಮಾನತೆ ಹಾಗು ಹೊಟ್ಟೆ ಹಸಿವು. ಇದು ಅನುಭವಿಸೋರೆಲ್ಲ ಸಮಾಜದಲ್ಲಿ ಮೂಲಭೂತವಾದಿಗಳ ಕಾಲುತುಳಿತಕ್ಕೆ ಒಳಗಾದವರು ಮಾತ್ರ, ಆ ಮೂಲಭೂತವಾದಿಗಳ ಪರ ನಿಲ್ಲೊ ಈ ಗುರುಜಿಗಳ ಮಾತು ಇನ್ನೇಗಿರಲು ಸಾಧ್ಯ. ಸಾಮಾಜಿಕವಾಗಿ ಎಲ್ಲಾ ಸೌಕರ್ಯ ಅನುಭವಿಸಿದ ಜನ ನಕ್ಸಲ್ ಆಗೊಕೆ ಸಾಧ್ಯನೆ ಇಲ್ಲ, ನಕ್ಸಲಿಸಂನ ಒಪ್ಪಿರೊ ಜನಕ್ಕೆ ಪ್ರೇರಣೆ ಸರಕಾರಿ ಶಾಲೆಯ ಶಿಕ್ಷಣವಲ್ಲ, ಅವರು ಅನುಭವಿಸಿದ ನೋವು ದುಃಖ. ಸರಕಾರಿ ಶಾಲೆಲೆ ಓದಿದ ಅದೆಷ್ಟೊ ಮಹನೀಯರು ನಮ್ಮ ನಡವೆ ಬಂದು ಪ್ರಪಂಚವೆ ಕೊಂಡಾಡೊ ಕೆಲಸ ಮಾಡಿದಾರೆ, ಮಾಡ್ತಾ ಇದಾರೆ. ಹೀಗಿರುವಾಗ, ಬೆರಳೆಣಿಕೆಯ ಜನ ನಕ್ಸಲ್ ಆದರೆ ಅದಕ್ಕೆ ಕಾರಣ ಶಿಕ್ಷಣ ವ್ಯವಸ್ಥೆ ಅಲ್ಲ ಸಾಮಾಜಿಕ ಅವ್ಯವಸ್ಥೆ. ಖಾಸಾಗಿ ಶಾಲೆಗಳಲ್ಲಿ ಓದೊ ಜನ ನಕ್ಸಲಿಸಂಗಿಂತ ಕೆಟ್ಟ ಆಲೋಚನೆಗಳಲ್ಲಿ ಸಾಮಾಜ ವಿರೋಧಿ ಕೆಲಸಗಳಲ್ಲಿ ತೊಡಗಿರೋದು ಗುರುಜಿಗಳಿಗೆ ತಿಳಿದಿಲ್ಲ. ಅದೇನೆ ಇರಲಿ, ನಿಮ್ಮ ಈ ಮಾತುಗಳಿಗೆ ಮೂಲ ಪ್ರೇರಣೆ ನಿಮ್ಮ ದುಬಾರಿ "ಆರ್ಟ್ ಆಫ್ ಲೀವಿಂಗ್" ನ ದುಬಾರಿ ಭಕ್ತಾದಿಗಳ ಓಲೈಕೆಯೆ ಅಲ್ಲವೆ? ಹೇಗು ನಿಮ್ಮ ದುಬಾರಿ ಲಿವಿಂಗ್ ಸ್ಟೈಲ್ ಕಲಿಯಲು ಸರಕಾರಿ ಶಾಲೆ ನಂಬಿರೊ ಬಡ ಸಮುದಾಯ ಬರೊದಿಲ್ಲ ಅವರನ್ನು ತಿರಸ್ಕರಿಸಿದರಾಯಿತು ಎಂಬ ಮನೋಭಾವ ನಿಮಗೆ ಅಲ್ಲವೆ..

    ReplyDelete