Monday, June 25, 2012

ಹಣ ಮತ್ತು ಜೀವನದ ಕೆಲ ಮುಗ್ಗುಲು

ಆ ದಿವಸಗಳ್ಯಾಕೊ ನನ್ನವೂ ಎನಿಸುತಿರಲಿಲ್ಲ. ಇದ್ದುದರಲ್ಲೆ ಖುಷಿ ಹುಡುಕಲು ಹೊರಟಾಗಲೆ, ಕಷ್ಟಗಳ ಅರಿವುಗಳು ನಮ್ಮ ಅರಿವಿಗೆ ಬಂದಾವಾಗಲೆ, ಜೀವನದ ಬೇರೆ ಬೇರೆ ಕವಲುಗಳು ಗೋಚರಿಕೆಗೆ ಬಂದು ಬದುಕು ಪಕ್ವತೆ ಪಡೆಯುವುದಂತೆ.ಬಹುಶಃ ನಾ ಆ ದಿನಗಳಲ್ಲಿ ಇದ್ದಿರಬೇಕು. ಜೇಬಲ್ಲಿ ೧೬ ರುಪಾಯಿ ಬಸ್ ಚಾರ್ಜ್ ಗೆ ಇಲ್ಲವೆಂದು ಮನೆ ಕಡೆ ತಿಂಗಳು ಗಟ್ಟಲೆ ಹೆಜ್ಜೆ ಹಾಕದೆ ಪೇಪರ್ ಹಾಸಿ ಕೆಲಸದ ಜಾಗದಲ್ಲೆ ಮಲಗಿರುತಿದ್ದ ದಿನಗಳವು ,ಇತರರ ಟಿಫಿನ್ ಬಾಕ್ಸ್ ಕಡೆ ಆಸೆಯಿಂದ ನೋಡಿ ಅವರು ನನ್ನ ದೃಷ್ಟಿಗೆ ಬೆಚ್ಚಿ ಹಂಚಿಕೊಳ್ಳೋ ಅನ್ನ ತಿಂಡಿಗಾಗಿ ಹಾತೊರೆಯುತಿದ್ದ ದಿನಗಳವೂ,ನೆಮ್ಮದಿ ಮಾಗಿದ ಕ್ಷಣಗಳಲ್ಲೆ ನೆಮ್ಮದಿಯ ಹುಡುಕ ಹೊರಟ ದಿನಗಳವು,ಅತ್ಮ ಸ್ಥೈರ್ಯವೆ ಬರಿದಾದ ದಿನಗಳಲ್ಲಿ ಅದುಕ್ಕಾಗೆನೆ ಹುಡುಕಾಡಿದ ದಿನಗಳವು,ಆ ದಿನಗಳ ಮೆಟ್ಟಿ ನಿಂತು ಸಫಲತೆಯ ಕಂಡುಕೊಂಡಾಗಲೆ ಅನುಭವಗಳ ಕಲಿಸಿಕೊಟ್ಟ ಪಾಠದ ಪರಿಧಿಯೊಳಗೆ ನಾ ಸಣ್ಣವನಾಗಿ ನನ್ನೆತ್ತರಕ್ಕೆ ಬೆಳೆದು ನಿಂತಿದ್ದು. ಬೆಳೆದೆ..... ಬೆಳೆಯುತ್ತಿದ್ದೇನೆ.....ಹೇಗೆಂದರೆ ಕುಸಿಯುತ್ತಾ ಮತ್ತೆದ್ದೂ ನಿಲ್ಲೂತ್ತ, ಆದರೆ ಮೊದ ಮೊದಲ ಕಷ್ಟಗಳು ಕಟ್ಟಿ ಕೊಟ್ಟ ಪಾಠದ ಬುತ್ತಿಯು ಎದುರಿಗೆ ದುತ್ತೆಂದೂ ಎದ್ದು ನಿಲ್ಲುವ ಅದೆಷ್ಟೋ ಕಷ್ಟಗಳನ್ನೂ ಸುಖದಿ ಎದುರಿಸುವ ಪಾಠವ ಹೇಳಿಕೊಟ್ಟಿದೆ, ಜೀವನ ಕವಲುಗಳ ಒಂದು ಮುಗ್ಗುಲನ್ನೂ ೧೪ ವರುಷಗಳ ಹಿಂದೆನೆ ಬದಲಾಯಿಸಿಯಾಗಿತ್ತು.ಈಗ ಜೀವನಗಳ ಮುಗ್ಗುಲುಗಳನ್ನೂ ಬದಲಾಯಿಸುವ ಪ್ರೌಢ ನಾನು, ಕಷ್ಟಗಳಿಗೆ ನನ್ನದೆ ಚಾಠಿ ಬೀಸುವ ತಂತ್ರಗಳ ಹೆಣೆದುಕೊಂಡ ತಂತ್ರಗಾರ,ಅದಕ್ಕಾಗೆ ನಾ ಸುಖಿ ಎಂಬುದನ್ನು ಎದೆ ತಟ್ಟಿ ಹೇಳುವ ಇಚ್ಚೆ.

ಮಡಿವಾಳ ಮಾರ್ಕೇಟಿನ ಪೆಟ್ಟಿ ಅಂಗಡಿಯಲ್ಲಿ ಅಪರಾತ್ರಿ ಬನ್ ಪ್ಲಾಸ್ಟೀಕ್ ಕಫ್ ಟೀ ಸವಿದು ಹೊಟ್ಟೆ ತುಂಬಿಸುತ್ತಾ ಇದ್ದ ದಿನಗಳೂ,ಮಾಲ್ ಸುತ್ತಿ, ರೆಷ್ಟೋರೆಂಟ್ ಹೊಕ್ಕು, ಕಡಾಯಿ ಮಸಾಲ, ರೋಟಿ, ಪಿಜ್ಜಾ, ಬರ್ಗರ್ ಅನ್ನುತ್ತಾ ತಿನ್ನುವ ಈ ಕಾಲದ ವ್ಯತ್ಯಾಸದ ತುಲನೆಯೊಳಗೆ, ಕಷ್ಟಗಳೊಳಗಿನ ಹಸಿವಿಗೆ ಸಿಕ್ಕ ಬನ್ನಿನ ರುಚಿಯ ಮುಂದೆ ಈ ಪ್ರತಿಷ್ಟಿತ ರುಚಿಯು ಯಾಕೋ ಸಪ್ಪೆ ಸಪ್ಪೆ. ದುಡಿಮೆಯ ಸಾರ್ಥಕತೆ ಹಸಿವ ನೀಗುವ ಆ ಟೀ ಬನ್ನಿನಲ್ಲಿದ್ದಷ್ಟೂ ಇವುಗಳಿಲ್ಲವೇನೂ ಅನಿಸುತ್ತಲೆ ಹೊಟ್ಟೆಯೆಲ್ಲ ಭಾರ ಭಾರ.ಕಳಕೊಂಡಿದ್ದೇನನ್ನೂ ಕಷ್ಟಗಳನ್ನೋ???? ಸಂತೋಷ ನೆಮ್ಮದಿಗಳನ್ನೋ??? ಉತ್ತರದ ಹುಡುಕಾಟ ನಡೆದೆ ಇದೆ.ಮತ್ತದೆ ಜೀವನದ ಕವಲಿನಲ್ಲಿ ನಾ ಸುಖಿ ಎಂದು ಎದೆ ತಟ್ಟಿ ಹೇಳಿಕೊಂಡಿದ್ದು ಸಿನಿಕತನ ಅನಿಸಿಬಿಡುತ್ತೆ.ಬದುಕೆ ಒಂದು ಜಂಜಾಟವೆಂಬ ವಾಸ್ತವಕ್ಕೆ ಮರಳುತ್ತೇನೆ ತುಸು ಹೊತ್ತಿನಲ್ಲೆ ಹಾಗೆ ಮುಗ್ಗುಲ ಬದಲಿಸುವದು ನನ್ನ ಅನಿವಾರ್ಯವೂ ಹೌದು.

೧೫೦೦ ರೂಗಳನ್ನೂ ದಾಟದ ಸಂಪಾದನೆಯ ದಿನಗಳಲ್ಲೂ ೩ ಅಂಕೆಯ ಮುಂದೆ ೪ ಸೊನ್ನೆಗಳಿರುವ ಈ ದಿನಗಳ ಸಂಪಾದನೆಯಲ್ಲೂ ನಡೆಸಿದ್ದು ಬದುಕನ್ನೆ.ಪ್ರತಿಷ್ಟೆ ಅನುಕೂಲಗಳನ್ನೂ ಈ ದಿನಗಳ ಸಂಪಾದನೆಯೂ ತಂದಿತೆ ಹೊರತಾಗಿ ಇಂಚಿಂಚಾಗಿ ನೆಮ್ಮದಿ, ಆರೋಗ್ಯ,ಜೀವ ಚೈತನ್ಯಗಳನ್ನೂ ಕಬಳಿಸುತ್ತಾ ಸಾಗಿದೆ ಅನ್ನುವದೂ ನನ್ನ ಮಟ್ಟಿಗಂತೂ ನಿಜ.ಚೈತನ್ಯ ತುಂಬ ಬಹುದಾದರೆ ಅದೊಂದೆ ಕೈಲಾದಷ್ಟೂ ಇತರರ ಕಷ್ಟಗಳನ್ನೂ ನೀಗಿಸುವದು, ಇಲ್ಲೊಂದು ಜಿಜ್ಞಾಸೆ ಅನಿವಾರ್ಯ ಕಷ್ಟಗಳನ್ನೂ ನೀಗಿಸಬೇಕೆ?? ಕಷ್ಟವೆಂದಲ್ಲವಕ್ಕೂ ಸ್ಪಂದಿಸಬೇಕೆ???ಕಷ್ಟಗಳು ಬದುಕನ್ನು ಪಕ್ವತೆಗೊಳಿಸುವಂತದ್ದೂ, ಕಷ್ಟಗಳ ಅನುಭವ ಪಡೆಯದೆ ಆತ ಮೌಲ್ಯತೆಗಳ ಪಡೆಯಲಾರ ಎಂಬುದು ನನ್ನನುಭವಕ್ಕೆ ಹೊಳೆಯುತಿದ್ದಂತೆ ಇತರರ ಅನಿವಾರ್ಯ ಕಷ್ಟಗಳಿಗಷ್ಟೆ ಸ್ಪಂದಿಸೋದು ಸರಿಯೆಂಬ ನನ್ನದೆ ನಿಲುವುಗಳಿಗೆ ಬಂದು ನಿರಾಳನಾಗುತ್ತಿರುತ್ತೇನೆ.ಇತರರ ಕಷ್ಟಗಳಿಗೆ ಸ್ಪಂದಿಸೋದೆಂದರೆ ನನ್ನ ಕಷ್ಟಗಳಿಗೆ ಸ್ಪಂದನೆಯಾಗಬಲ್ಲರೂ ಇತರರೂ ಎಂಬ ನಿರೀಕ್ಷೆ, ಸ್ವಾರ್ಥತೆ ಇರಬಹುದೆ ನನ್ನೊಳಗೆ?ಕಷ್ಟಗಳ ನಿರೀಕ್ಷೆಯೊಳಗೆ ಜೀವನವಿರುತ್ತೋ?? ಹೆಚ್ಚಿನೆಲ್ಲಾ ಸಂದರ್ಭಗಳಿಗೆ ಮನಸಿಗೆ ತಾಕುವಂತೆ ಈ ವಿಚಾರಗಳು ಕಾಡುತ್ತೆ.ಏನಾದರಾಗಲಿ ಈ ವಿಚಾರದಲ್ಲಿ ಆದರ್ಶ ಮೇರೈಕೆಗೆ ಒತ್ತು ಕೊಡುತ್ತಿಲ್ಲವಲ್ಲ ಅನ್ನೋ ನೆಮ್ಮದಿಯನ್ನ ಬಲತ್ಕಾರವಾಗಿ ತಂದುಕೊಳ್ಳುತ್ತೇನೆ.ಒಂದಿನಿತು ಸಂತೋಷ ಪಡೆಯಲು. 

ಹಸಿವು ......ಬಹುಶಃ ಇರೋದು ಇದೊಂದೆ ಜಾತಿ.ಅದನ್ನೂ ಅನಿವಾರ್ಯವಾಗಿ ಎಲ್ಲವೂ ಇದ್ದು ನಾ ಒಪ್ಪಿಕೊಂಡಿದ್ದು ನನ್ನ ಜೀವನದ ಒಂದು ಮಜಲಿನಲ್ಲಿ.ನನ್ ಧರ್ಪಕ್ಕೊ, ಸ್ವಾಭಿಮಾನಕ್ಕೊ, ಅಹಂಕಾರಕ್ಕೋ ಯಾವುದಕ್ಕೋ ಒಂದಕ್ಕೆ ಕಟ್ಟು ಬಿದ್ದು. ಈ ದಿನಗಳಲ್ಲಿ ಹಿಂತುರಿಗಿ ನೋಡಿದಾಗ ಅದುವೆ ನನ್ನ ಜೀವನದ ಮಹತ್ತರ ಮಜಲಾಗಿ ಗೋಚರಿಸುವದನ್ನ ಅಷ್ಟೆ ಆಶ್ಚರ್ಯ ಚಕಿತನಾಗಿ ನೋಡುತಿದ್ದೇನೆ, ನನ್ನೊಳಗಿನ ಹಮ್ಮು ಬಿಮ್ಮು ಜಾತೀಯತೆಯನ್ನು ಕೊಚ್ಚಿ ತೊಳೆದ ದಿನಗಳವು.ಆ ದಿನಗಳೂ ಕಾಠೀಣ್ಯತೆಯಿಂದ ಕೂಡಿತ್ತಾದರೂ,ಅದರಿಂದಾಗಿ ಕಳೆದಿದ್ದೂ ಏನೂ ಇಲ್ಲ ಬದಲಾಗಿ ಆ ದಿನಗಳಿಂದ ಪಡೆದಿದ್ದೆ ಹೆಚ್ಚು, ಎಲ್ಲಕ್ಕಿಂತ ಮುಖ್ಯವಾಗಿ ಜೀವನದ ಒಂದು ಮುಗ್ಗುಲಿನ ತಳಪಾಯದ ಪಾಠವನ್ನು ಅನುಭವದಿಂದ ಪಡಕೊಂಡಿರುವ ದಿನಗಳವು. ಅದಕ್ಕಾಗಿ ನಾನೆಷ್ಟೆ ಎತ್ತರಕ್ಕೆ ಏರಿದರೂ ಮಗಿಚಿ ಬಿದ್ದರೂ ಎರಡನ್ನೂ ಸಮಾನಾಗಿ ಸ್ವೀಕರಿಸುತ್ತಾ ಆ ದಿನಗಳನ್ನ ಮೆಲುಕು ಹಾಕುತ್ತಿರುತ್ತೇನೆ, ಕಾರಣ ಆ ದಿನಗಳಲ್ಲಿ ಅಡಗಿದ ಅದೆಷ್ಟೋ ನೀತಿ ಪಾಠಗಳನ್ನೂ ಜೀವನದ ಬೇರೆ ಬೇರೆ ಕವಲುಗಳಲ್ಲಿ ಬೇರೆ ಬೇರೆ ದಾರಿಯ ಸೂಚಿಸುವ ಸವಾಲನ್ನು ಎದುರಿಸುವ ಪಾಠಗಳು ಆ ಪಠ್ಯದಲ್ಲಿ ಇದೆಯೆಂದು. ಕಷ್ಟಗಳನ್ನು ಹಂಚ್ಕೋಬಾರದು ಅಂತಾರೆ, ಆದರೆ ಕಷ್ಟದ ಹಿನ್ನಲೆಯಿಂದ ಪಡೆದ ಸುಖವನ್ನು ಹಾಗೂ ಪಾಠಗಳನ್ನೂ ಹಂಚ್ಕೋಬಹುದು ಎಂಬುದು ನನ್ನ ನಂಬಿಕೆ.ಇಲ್ಲಿ  ಹಂಚ್ಕೊಂಡಿದ್ದು ಹಣ ಮತ್ತು ಜೀವನದ ಕೆಲ ಮುಗ್ಗುಲುಗಳೂ ಅಷ್ಟೆ,ಇದೆ ತೆರನಾದವೂ, ಬೇರೆ ತೆರನಾದವೂ ಬೇರೆ ಬೇರೆನೆ ತೆರದಲ್ಲಿ ಎಲ್ಲರ ಜೀವನದಲ್ಲೂ ಲಭ್ಯ. ಕಷ್ಟಗಳೂ ಜೀವನ ಮಾರ್ಗದರ್ಶಿ ಎಂದು ತಿಳಿದು ಅವುಗಳನ್ನೂ ಸುಖಿಸೋದು ಕಲಿಯೋಣ, ಅಷ್ಟಕ್ಕೂ ಉಪ್ಪಿಲ್ಲದೆ ರುಚಿ ಹುಟ್ಟೋದು ಸಾಧ್ಯನಾ??

Wednesday, June 20, 2012

ನಿತ್ಯಾನಂದ ಪ್ರಕರಣದ ಸುತ್ತಲಿನ ಶಂಕೆಗಳು

ಇತ್ತೀಚೆಗೆ ಗಮನ ಸೆಳೆದ ಪ್ರಕರಣಗಳಲ್ಲೊಂದು ನಿತ್ಯಾನಂದ ಪ್ರಕರಣ.ಕನ್ನಡದ ನ್ಯೂಸ್ ಚಾನಲ್ ಒಂದು ೩-೪ ದಿನ, ದಿನದ ೨೪ ಘಂಟೆಗಳನ್ನು ಮೀಸಲಿಟ್ಟು ನಿತ್ಯಾನಂದನ ಕರ್ಮಕಾಂಡಗಳನ್ನು ಜನತೆಯ ಮುಂದೆ ತಂದಿತ್ತು. ಇಂಥ ಲಂಪಟ ಸ್ವಾಮಿಯನ್ನು ಬೆತ್ತಲೆಗೊಳಿಸಿದ್ದು ಸಂತೋಷವೆ.ಇಂಥಹ ಲಂಪಟ ಕೋರ , ಭೂಗಳ್ಳ ಸ್ವಾಮಿಗಳು ಬಹಳರಿದ್ದಾರೆ ಎಲ್ಲರ ಮುಖವಾಡಗಳನ್ನು ಕಳಚುವಲ್ಲಿ ಇದೆ ತೆರನಾದ ನಿಲುವನ್ನು ಚಾನೆಲ್ ಗಳು,ಸರ್ಕಾರ ತೆಗೆದುಕೊಳ್ಳಬಹುದೆ ಎಂಭ ಪ್ರಶ್ನೆಯು ಕಾಡಿದೆ. ಬಹುಶಃ ಇಲ್ಲ ಅನ್ನುವದೆ ನನ್ನುತ್ತರ, ನಾನಿಲ್ಲಿ ಲಂಪಟ ಕಾವಿ ವೇಷಧಾರಿ ನಿತ್ಯಾನಂದನನ್ನು ಸಮರ್ಥಿಸುತ್ತಿಲ್ಲ ಎನ್ನುವದನ್ನು ಮುಂಚಿತವಾಗಿಯೆ ಸ್ಪಷ್ಟ ಪಡಿಸುತಿದ್ದೇನೆ.ಒಂದು ಪ್ರಕರಣದ ಹಿಂದೆ ಇರಬಹುದಾದ ಗುಮಾನಿಗಳು ಮತ್ತು ಕಾಣದ ಕೈಗಳ ಕೈವಾಡಗಳು, ಸಮಾಜಮುಖಿ ನಿಲುವನ್ನು ಹೊದಿರುವ ಎಲ್ಲರೀಗೂ ಕಾಡುವ ಶಂಕೆಯನ್ನು ವ್ಯಕ್ತಪಡಿಸುವದಕ್ಕೆ ಅಷ್ಟೆ ಸೀಮಿತವಾಗಿ, ನನ್ನ ಅಭಿಪ್ರಾಯ, ಕೇಳಿ ತಿಳಿದ ವಿಚಾರಗಳು ,ಪತ್ರಿಕೋದ್ಯಮದೊಳಗೆ ಹಬ್ಬಿರುವ ಗುಸು ಗುಸು ವಿಚಾರಗಳೆಲ್ಲದರ, ಬಗ್ಗೆ ಬೆಳಕು ಚೆಲ್ಲುವದಕ್ಕಷ್ಟೆ ಈ ಬರಹ.

ಸ್ಥಾವರಧೀಶರನ್ನು ಒದ್ದೊಡಿಸುವಲ್ಲಿ ಇತರ ಸ್ಥಾವರಧೀಶರ ವ್ಯಾಪಾರಿ ಹಿತಾಸಕ್ತಿ ಅಡಗಿದೆಯೆ???ಹೀಗಿದ್ದಲ್ಲಿ ಇದು ಕಳವಳಕಾರಿಯೆ ಸರಿ.ಹೋದೆಯ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ ಎಂಭಂತೆ ಮತ್ತೊಬ್ಬ ಲಂಪಟ ಮೆರೆದಲ್ಲಿ ಮತ್ತದೆ ರಾಮಾಯಣ.ಮೆರೆಯುವ ರೀತಿಗಳು ಬೇರೆಯಾಗಿರಬಹುದು ಅದರೆ ಮನೋಭಾವನೆ ಅದೆ ವ್ಯಾಪಾರಿ ಬುದ್ದಿ.ಇತ್ತೀಚೆಗೆ ಸ್ವಾಮಿಗಳು ಮಠ ಮಾನ್ಯ ಅಧಿಪತಿಗಳನ್ನು ವ್ಯಾಪಾರಿಗಳ ನಿಲುವಿಂದ ಹೊರತಾಗಿ ನೋಡುವದೆ ಕಷ್ಟವಾಗಿದೆ. ಸರ್ವಸಂಗ ಪರಿತ್ಯಾಗಿಗಳಿಗೆ ಪಲ್ಲಂಗ ಬೇಕು, ರಾಜಕೀಯ ಹಿತಾಸಕ್ತಿಗಳು ಬೇಕು, ಯಾವುದು ಬೇಡ ಅನ್ನದೆ ಎಲ್ಲವೂ ಬೇಕು ಅನ್ನೊ ಹೆಚ್ಚಿನ ಪೀಠಾಧಿಪತಿಗಳನ್ನು ನೋಡೊ ಈ ದಿನದಲ್ಲಿ ಸಭ್ಯ ಸ್ವಾಮಿಗಳ್ಯಾರೊ ಅನ್ನೊ ಗೊಂದಲಗಳು ಸಹಜವಾಗಿ ಒಡಮೂಡಿದೆ.ಈ ಪರಿಸ್ಥಿತಿಯನ್ನು ನಿರ್ಮಾಣ ಮಾಡುವಲ್ಲಿ ನಿತ್ಯಾನಂದನೆ ಮೂಲಪುರುಷ ಅನ್ನುವದು ವಾಸ್ತವ ಅಲ್ಲ ಅನ್ನೋದು ತಿಳಿದಿದ್ದರೂ ಆತನನ್ನೆ ಆ ರೀತಿಯಾಗಿ ಬಿಂಬಿಸಲಾಗಿದೆ.ಹಾಗೆ ನೋಡಿದಲ್ಲಿ ಈತನ ಆಶ್ರಮದಿಂದ ಹೊರಜಗತ್ತಿಗೆ ಯಾವೂದೆ ಉಪಕಾರವಾಗಲಿ ಭಾಧೆಯಾಗಲಿ ಅಷ್ಟಾಗಿ ಇರಲಿಲ್ಲ. ಈತನಿಂದ ಭಾಧಿತರು ಅವರೆ ಒಪ್ಪಿ ಅತನೊಂದಿಗೆ ಇದ್ದವರೆ ಹೊರತಾಗಿ ಸಾರ್ವಜನಿಕ ಮಂದಿಯಲ್ಲ.ಹೀಗಿರಬೇಕಾದರೆ ಹಲವು ವರುಷಗಳ ನಂತರ ಆತ್ಮೀಯ ವಲಯದಲ್ಲಿದ್ದ ಕೆಲ ಮಂದಿ ತಿರುಗಿ ಬಿದ್ದಿದ್ದೇತಕೆ?? ಲೈಂಗಿಕ ಕಿರುಕುಳ ೪-೫ ವರುಷಗಳ ನಂತರ ಬಯಲು ಮಾಡಲು ಹೊರಟಿದ್ದೇಕೆ???ಅದು ಹೇಗೆ ೫ ವರುಷ ನಿರಂತರ ಅತ್ಯಾಚಾರ ಮಾಡಲು ಸಾಧ್ಯ??? ನಿತ್ಯಾನಂದನ ಆಶ್ರಮ ಆ ಮಟ್ಟಿನ ಗೌಪ್ಯತೆಯನ್ನು ಉಳಿಸಿಕೊಳ್ಳಬಹುದಾದ ಕೇಂದ್ರವೆ??? ಅರತಿರಾವ್ ಅಲಿಯಾಸ್ ಸೀಮಾ ಪಾಟೀಲ್ ಲೆನಿನ್ ಮುಂತಾದವರೂ ಆಶ್ರಮವನ್ನು ಒಂದೊಮ್ಮೆ ಸ್ವತಂತ್ರವಾಗಿ ತೊರೆದು ಬಂದವರೆ, ಹಾಗಿದ್ದಾಗ ಲೈಂಗಿಕ ದೌರ್ಜನ್ಯ ನಡೆಯುತ್ತೆ ಎಂದು ಗೊತ್ತಾದ ಕೂಡಲೆ ಯಾಕೆ ಹೊರಬರಲಿಲ್ಲ??? ಇಂಥಹ ಹಲವು ಸಾಮಾನ್ಯ ಪ್ರಶ್ನೆಗಳು ನಮ್ಮ ಮುಂದೆ ಬಂದು ನಿಲ್ಲುತ್ತೆ. ಉತ್ತರ ಹುಡುಕೋ ಕೆಲಸ ನಡೆಯಬೇಕಿದೆ, ಕಾರಣ ನಮಗೆ ಇಂಥಹ ಚಟುವಟಿಕೆ ವ್ಯಾಪಾರಿ ಮನೋಭಾವದವರೂ ಇನ್ಯಾರ್ಯಾರು ಇದ್ದಾರೆ ಅನ್ನೊದನ್ನ ತಿಳಿದು ಎಲ್ಲಾ ಕಾವಿ, ಸ್ವಾಮಿ,ಸ್ಥಾವರಧೀಶರ ಅಸಲಿಯತ್ತು ಅರಿಯಬೇಕಿದೆ.ಅದಕ್ಕಾಗಿಯಾದರೂ ಈ ಮೇಲಿನ ಹಲವು ಶಂಕೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.ಬರೀ ನಿತ್ಯಾನಂದನನ್ನಷ್ಟೆ ಓಡಿಸಿದರೆ ಸಾಲದು.

ಒಂದು ಕಾಲ್ಪನಿಕ ಕಥೆ ಹೆಣೆಯುತ್ತೇನೆ.ಮೊನ್ನೆಯ ನಿತ್ಯಾನಂದನ ಘಟನೆಗಳಿಗೆ ಹಿನ್ನಲೆಯಾಗಿ ಒಂದು ಆರೋಗ್ಯಕರ ಶಂಕೆಯಿರಿಸಿ ಬರೆದಿದ್ದು ಅಂದುಕೊಳ್ಳಿ. ಒಟ್ಟಿನಲ್ಲಿ ಮೇಲೆ ಹೇಳಿದಂತೆ ಕಪಠಿಗಳ ಕಪಟತನವೆಲ್ಲ ಹೊರಬರಬೇಕಿದೆ ಹಾಗೂ ಇಂಥ ಸಮಾಜ ಕಂಟಕ ಕಪಟಿಗಳು ಸಮಾಜದಿಂದ ದೂರವಾಗಿ ನೆಮ್ಮದಿ ಮೂಡಬೇಕಿದೆ.ಸಂಕ್ಷಿಪ್ತವಾಗಿ ಹೇಳಬಹುದಾದುದನ್ನ ಕೆಳಗಿನಂತೆ ಹೇಳುತಿದ್ದೇನೆ.
"ತನ್ನನ್ನೆ ತಾನು ದೆವ್ವ sorry ದೇವಮಾನವನೆಂದು ಕರೆಸಿಕೊಂಡು ಮೆರೆಯುವ ಕಾಲದಲ್ಲಿ ಆತನ ಆಶ್ರಮದೊಳಗೆ ಆಕೆಯ ಪ್ರವೇಶವಾಗಿತ್ತು.ಕೆಲವೆ ತಿಂಗಳುಗಳಲ್ಲಿ ದೇವಮಾನವನ ಶಯನಗೃಹಕ್ಕೆ ಎಂಟ್ರಿ ಪಡೆದ ಆಕೆ ಆತನ ಪಲ್ಲಂಗದ ಅರಸಿಯಾಗಿ ವೈಭೋಗ ಮೆರೆದು ಅತನ ವ್ಯವಹಾರವನ್ನು ತನ್ನ ತೆಕ್ಕೆಕೆ ತೆಗೆದುಕೊಳ್ಳಲು ಹವಣಿಸುತಿದ್ದಳು.ಒಂದಷ್ಟರ ಮಟ್ಟಿಗೆ ಯಶಸ್ವಿಯೂ ಆಗಿದ್ದಳೆನ್ನಿ.ಎಷ್ಟೂ ದಿನ ದೇವಮಾನವ ತನ್ನ ಸೃಷ್ಟಿಯ ಅಗಾದತೆಯನ್ನ ಪೂರ್ಣವಾಗಿ ಬಳಸಿಕೊಳ್ಳದೆ ಈಕೆಗೊಬ್ಬಳಿಗೆ ತನ್ನೊಳಗೆ ಜಾಗವೀಯಬಲ್ಲ ??? ಸಾಕೆನಿಸಿದಾಗಲೆ ಒಬ್ಬಳು ನಟಿ ಮತ್ತೊಬ್ಬಳು ಈತನೀಗೆ ಹತ್ತಿರವಾಗುತ್ತಲೆ ಬಂದಾಗ, ಮೊದಲಿಗೆ ಪ್ರವೇಶ ಪಡೆದ ಆಕೆಯ ಆಕಾಂಕ್ಷೆಗಳು, ಹವಣಿಕೆಗಳು ತೊಪ್ಪೆದ್ದು ಆಕೆಯಲ್ಲಿ ಅಸಹನೀಯತೆ ಬುಗಿಲೇಳುತ್ತದೆ.ತನ್ನೆದುರೆ ತನ್ನ ಅಸ್ತಿತ್ವಕ್ಕೆ ಬರುತ್ತಿರುವ ಸಂಚಾಕಾರಕ್ಕೆ ಒಳಗೊಳಗೆ ಕುದಿಯುತ್ತಿರುತ್ತಾಳೆ. ಈ ಬೆಳವಣಿಗೆಯೆಲ್ಲವೂ ದೇವಮಾನವನ ಸಾರಥಿ ಗಮನಿಸುತ್ತಲೆ ಇರುತ್ತಾನೆ.ಇತ್ತ ಮಗದೊಬ್ಬ ಸ್ಥಾವರಾಧೀಶನೂ ಕುದಿಯುತಿದ್ದ.ಕಾರಣ ಆತನ ಸ್ಥಾವರಕ್ಕೆ ಜನ ಹರಿವು ,ಒಳ ಹೊರ ಹರಿವುಗಳೆಲ್ಲ ಈ ದೇವಮಾನವನ ಜನಪ್ರಿಯತೆಯಿಂದ ಕುಂಠಿತಗೊಳ್ಳುತಿತ್ತು.ಎಷ್ಟಾದರೂ ಆತನದೂ ಕೂಡ ಈ ದೇವಮಾನವನ ಸಾಮ್ರಾಜ್ಯದ ಪಕ್ಕದ ಸಾಮ್ರಾಜ್ಯ,ಹೇಗಾದರೂ ಮಾಡಿ ದೇವಮಾನವನನ್ನು ತೊಲಗಿಸಿ ದಕ್ಕಿಸಿಕೊಳ್ಳಬೇಕೆಂಬ ಹವಣಿಕೆಯೊಂದಿಗೆನೆ ಕಾಲಕ್ಕಾಗಿ ಕಾಯುತಿದ್ದಾತನಿಗೆ ಒಂದು ಸಂಚನ್ನು ಹೊತ್ತುಕೊಂಡು ಹತ್ತಿರನಾದವ ದೇವಮಾನವನ ರಥದ ಸಾರಥಿ.ಅದರಂತೆ ಒಂದಷ್ಟು ವರಹಗಳ ಡೀಲ್ ಕುದುರುತ್ತೆ ದೇವಮಾನವನಿಂದ ದೂರವಾಗಿ ಕುದಿಯಾಗಿದ್ದ ಆಕೆಗೆ ಶಯನಗೃಹದಲ್ಲಿ ನಡೆಯುವ ಚಿತ್ರಣವನ್ನ ಚಿತ್ರಿಕರಣ ಮಾಡಿ ಸಾರಥಿಗೆ ಕೊಡುವ ಸಣ್ಣದೊಂದು ಕೆಲಸ ವಹಿಸಿಕೊಡಲಾಗುತ್ತೆ ಬದಲಾಗಿ ಕೈತುಂಬಾ ವರಹಗಳು.ಆಕೆಯೂ ಅಂತೆಯೆ ಮಾಡಿ ಆಶ್ರಮದಿಂದ ಹೊರನಡೆದು ಬಿಡುತ್ತಾಳೆ. ಮಾಡಿದ ಪುಣ್ಯ ಕಾರ್ಯಕ್ಕೆ ಕೈತುಂಬಾ ವರಹಗಳನ್ನು ಪಡೆಯುತ್ತಾಳೆ, ಈ ಚಿತ್ರಿಕರಣದ ಪ್ರತಿಯು ಮಾಧ್ಯಮದ ಮೂಲಕ ದೇವಮಾನವನ ಲಂಪಟತನ ಜಗತ್ತಿಗೆ ಬಯಲಾಗುತ್ತೆ, ದೇವಮಾನವ ಕೃಷ್ಣನ ಜನ್ಮಸ್ಥಾನಕ್ಕೆ ನಗುತ್ತೆಲೆ ತೆರಳಿ ಹಿಂತಿರುಗುತ್ತಾನೆ,ಒಂದಷ್ಟೂ ಕೇಸ್ಗಳನ್ನು ಮೈಮೆಲೆ ಹಾಕೊಳ್ಳುತ್ತಾನೆ", ಇಲ್ಲಿಗೆ ಈ ಕಥೆಯ ಒಂದನೆ ಅಧ್ಯಾಯ ಮುಗಿಯುತ್ತೆ.ಬಹುಶಃ ಇಲ್ಲಿಗೆ ಎಲ್ಲವೂ ಮುಗಿಯಬೇಕಿತ್ತು ಆದರೆ ದೇವಮಾನವ ಸ್ಥಾವರದಿಂದ ದೂರವಾಗಲಿಲ್ಲ,ಬದಲಾಗಿ ಮತ್ತದೆ ಚಟುವಟಿಕೆಗೆ ಮೊದಲ್ಗೊಂಡು ಗಟ್ಟಿಗೊಳ್ಳುವತ್ತ ಸಾಗಿದ ಆದ ಕಾರಣವೆ ಎರಡನೇ ಅಧ್ಯಾಯಕ್ಕೆ ಈ ಕಥೆ ಮುಂದುವರಿಯಿತು.ಯಾಕೆಂದರೆ ಸ್ಥಾವರಧೀಶನಿಗೆ ಬೇಕಿದ್ದಿದೂ ತನಗೆ ತೊಡಕಾದ ದೇವಮಾನವನನ್ನು ಈ ನಾಡಿನಿಂದಲೆ ತೊಲಗಿಸುವದು.ಸ್ಥಾವರಧೀಶ ಅನ್ನುವದು ಯಾರು ಎಂಬುದನ್ನು ಒಂದು ಕಾಣದ ಕೈ ಎನ್ನುತ್ತಾ ಉಳಿದವುಗಳನ್ನು ನಿಮ್ಮ ತಿಳುವಿಕೆಗೆ ಬಿಟ್ಟಿದ್ದೇನೆ. 

ಎರಡನೇ ಅಧ್ಯಾಯ ಅತೀ ವ್ಯವಸ್ಥಿತವಾಗಿ ರೂಪುಗೊಳ್ಳುತ್ತದೆ. ಈ ಎರಡನೇ ಅಧ್ಯಾಯದ ಮೊದಲ್ಗೊಳ್ಳುವಿಕೆಯೆ ಆರತೀರಾವ್ ತನ್ನ ಕಥೆ ಚಾನಲ್ ಒಂದರಲ್ಲಿ ಹೇಳಿಕೊಳ್ಳುವದರಲ್ಲಿಂದ. ತದ ನಂತರ ಎಲ್ಲವೂ ನಮಗೆಲ್ಲರೀಗೂ ಗೊತ್ತಿರುವಂತದ್ದೆ. ಆಕ್ರೋಶ, ಜನ ಸಹಜ ಕೋಪಗಳು, ಸಹಜ ಕಣ್ಣೀರು ದುಖಃ ಎಲ್ಲವೂ ಬುಗಿಲೇಳುತ್ತವೆ ಎಲ್ಲವೂ ನಿಜ ಆದರೆ ಇದಷ್ಟೆ ನಿಜವೆ ಎಂಭ ಶಂಕೆ ಮೂಡಿದೆ ???ಬಹುಶಃ ಮೇಲಿನ ಒಂದು ಕಥೆ ನಿಜವೆ ಆಗಿದ್ದಲ್ಲಿ ಸ್ಥಾಪಿತ ಹಿತಾಸಕ್ತಿಗಳು ಸದ್ದಿಲ್ಲದೆ ವ್ಯವಸ್ಥಿತ ಸಂಚು ರೂಪಿಸಿದೆ ಅನ್ನುವದೂ ಕೂಡ ಅಷ್ಟೆ ಸತ್ಯ.ಆರತಿ ರಾವ್ ತಂದೆ ದುಃಖ ನಮ್ಮ ಕಣ್ಣನ್ನೂ ಒದ್ದೆಯಾಗಿಸಿದ್ದೂ ನಿಜ. ಅವರ ದುಃಖಕ್ಕೆ ನಿತ್ಯಾನಂದ ಮಾತ್ರ ಕಾರಣವೆ??? ತನ್ನದೆ ಮಗಳ ಪಾತ್ರ ಏನೂ ಇಲ್ವೆ ??ಅನ್ನೊ ಪ್ರಶ್ನೆ ನಮ್ಮಲ್ಲಿ ಹುಟ್ಟಿದ್ದರೆ ಅದೂ ಕೂಡ ಸಹಜ.ಪ್ರೆಸ್ ಮೀಟ್ ನಡೆಯುತ್ತೆ ಸಭ್ಯ ಅಜಿತ್ ಹನುಮಕ್ಕನವರ್ ಅಮೇರಿಕದ ಲಾಯರ್ ಒಬ್ಬರ ಸಮನ್ಸ್ ಪ್ರೆಸ್ ಮೀಟಲ್ಲಿ ನಿತ್ಯಾನಂದನಿಗೆ ತಲುಪಿಸಲು ಮುಂದಾಗುತ್ತಾರೆ ಜ್ವರ ಬಂದವನಂತೆ ನಡುಗುತ್ತೆ ನಿತ್ಯಾ ಮತ್ತು ನಿತ್ಯಾನ ಪಟಲಾಂ.ಅಜಿತ್ ರ ಈ ಕಾರ್ಯ ಮೆಚ್ಚುವಂತದ್ದೂ ಇದರಲ್ಲಿ ಎರಡೂ ಮಾತಿಲ್ಲ. ಆದರೆ ಇವಿಷ್ಟು ಘಟನೆ ಒಳಗೆ ನಡೆಯುತ್ತಿರುವಂತೆ ಹೊರಗೆ ಪ್ರತಿಭಟನಾಕಾರರೂ ಜಮಾಯಿಸುತ್ತಾರಲ್ಲ??? ಅಂದರೆ ಈ ಕಾರ್ಯಕ್ರಮಗಳೂ ಮೊದಲೇ ರೂಪಿತಗೊಂಡಂತವೆ???ಈ ಶಂಕೆ ಮೂಡೋದು ಕೂಡ ಸಹಜ.ಇದೆಲ್ಲವೂ ಸಹಜ ಶಂಕೆಯಂತೆ ಒಂದು ಸ್ಥಾಪಿತ ಹಿತಾಸಕ್ತಿಯ ಅಣತಿಯಂತೆ ನಡೆದಿದೆ ಅನ್ನುವುದಾದರೆ ಅಕ್ಷಮ್ಯ.ಸ್ಥಾಪಿತ ಹಿತಾಸಕ್ತಿಯ ಅಣತಿಯಂತೆ ಇದು ನಡೆದಿದೆ ಅಂತಾದರೆ ಕೋಟ್ಯಾಂತರ ರುಪಾಯಿಗಳೂ ಅದಲು ಬದಲಾಗೋ ಸಾಧ್ಯತೆ ಇದೆ. ಬರೀಯ ಸಾಮಾಜಿಕ ಒಳಿತಿನ ದೃಷ್ಟಿಯಿಂದಲೆ ಚಾನಲ್ಲೊಂದು ಲಾಭೊದ್ದೇಶಗಳನ್ನು ಪಕ್ಕಕ್ಕಿಟ್ಟು ಈ ವಿಷಯ ಕೈಗೆತ್ತಿಕೊಂಡಿತು ಎಂದರೆ ಅಪಾರ ಮೆಚ್ಚುಗೆಗೆ ಪಾತ್ರರೂ!! ಅದಾಗದೆ ಶಂಕೆಯಂತೆ ಬೇರೇನಾದರೂ ಆಗಿದ್ದಲ್ಲಿ ಈ ಡೀಲ್ ಎಲ್ಲಿವರೆಗೆ ತಲುಪಿದೆ ಎಂಬುದು ಊಹಿಸೋದು ಕಷ್ಟ.ಸರ್ಕಾರ ಕೂಡ ಆಶ್ರಮ ಲಾಕ್ ಔಟ್ ಆದೇಶ ನೀಡಿದುದರಿಂದ ಈ ವಿಷಯದಲ್ಲಿ ಮೇಲಿನ ಶಂಕೆಯ ವ್ಯಾಪ್ತಿ ಕೂಡ ನನ್ನ ತಿಳುವಳಿಕೆಯ ಪರಿಧಿಯ ಮೀರಿ ನಿಂತಿದೆ.ನಿತ್ಯಾನಂದ ಆಶ್ರಮದಲ್ಲಿ ಇಲ್ಲ ಎಂದೂ ಸರ್ಕಾರದ ಅಧಿಕಾರಿ ವರ್ಗ ಘೋಷಿಸುತ್ತೆ,2 ನೇ ದಿನದಲ್ಲಿ ರಾಮನಗರದ ಕೋರ್ಟಲ್ಲಿ ಧಿಡೀರ್ ಆಗಿ ನಿತ್ಯ ಪ್ರತ್ಯಕ್ಷನಾಗುತ್ತಾನೆ, ಆದರೆ ಗಡಿಭಾಗದ ಯಾವ ಗೇಟ್ಗಳನ್ನು ನಿತ್ಯಾ ಪರಾರಿ ಅಥವಾ ಪ್ರವೇಶದ ಬಗ್ಗೆ ಧೃಡೀಕರಣ ಇರುವದಿಲ್ಲ , ಇಲ್ಲಿ ಒಂದಂತೂ ಸತ್ಯ , ನಿತ್ಯ ಪರಾರಿಯಾಗಿರಲೇ ಇಲ್ಲ. ಹಾಗಾದರೆ ಆತನನ್ನೂ ರಕ್ಷಿಸಿದ ಆ ಕಾಣದ ಕೈಗಳೂ ಯಾವುದೂ?? ಈ ತರದ ಹಲವು ಶಂಕೆಗಳೂ ಪ್ರಕರಣದ ಸುತ್ತಲೂ ಇದೆ. ಒಬ್ಬ ಜವಬ್ದಾರಿಯುತ ನಾಗರೀಕನಾಗಿ ನನ್ನಂತವ ಬಯಸೋದು ಇಷ್ಟನ್ನೆ ಇಂಥಹ ಯಾವುದೆ ಹಿಡನ್ ಎಲಿಮೆಂಟ್ಸ್ಗಳು ಈ ಪ್ರಕರಣದಲ್ಲಿ ಇಲ್ಲದೆ ಇರಲಿ, ನಾವೂ ಮತ್ತೆ ಮತ್ತೆ ಏಮಾರಿ ಪಶ್ಚಾತ್ತಾಪ ಪಡದಂತೆ ಆಗದಿರಲಿ ಎಂಬುದು.ಒಟ್ಟಿನಲ್ಲಿ ನಿತ್ಯಾನಂದನಂತ ಹಲವು ಕಪಟಿಗಳು ಕನ್ನಡ ನೆಲದಲ್ಲಿ ಇದ್ದಾರೆ ಅವರೆಲ್ಲರ ಮೇಲೂ ಸರ್ಕಾರ , ದೃಶ್ಯ ಮಾಧ್ಯಮಗಳು ಇದೆ ನಿಲುವನ್ನು ತಳೆಯಲಿ. ಇದು ನಿತ್ಯಾನಂದನಿಗಷ್ಟೆ ಸೀಮಿತವಾಗದಿರಿ.ಹೀಗಾದಾವಾಗ ಮಾತ್ರ ನಮ್ಮೊಳಗಿರುವ ಆರೋಗ್ಯಕರ ಶಂಕೆಯೂ ದೂರಾಗೋದಕ್ಕೆ ಸಾಧ್ಯ.ಹಾಗೂ ಈ ಶಂಕೆಯನ್ನು ದೂರ ಮಾಡುವಂತದ್ದೂ ಸಂಬಂಧಪಟ್ಟವರ ಕರ್ತವ್ಯ ಕೂಡ. ಹಾಗಾದಾಗ ಮಾತ್ರವೆ ವಿಶ್ವಾಸ ಎಂಬುದಕ್ಕೆ ಒಂದು ಗಟ್ಟಿ ನೆಲೆ ಕಲ್ಪಿಸಿದಂತೆ. ವಿಶ್ವಾಸವನ್ನಿಟ್ಟುಕೊಳ್ಳಬಹುದೆ????

ಚಿತ್ರಕೃಪೆ:-ಗೂಗಲ್

Friday, June 15, 2012

ನನ್ನೊಳು ಹರಿವ ಪಯಸ್ವಿನಿ.


ದೋಣಿಯೇರಿ ನಿನ್ನೊಡಲಿಗಿಳಿದರೆ
ಆವರಿಸಿಬಿಡುತ್ತಿ, ನೀ ನನ್ನ ಸುತ್ತ.
ನಲ್ಮೆಯಿಂದ ಕರೆಯುವೆ ನಾ ನಿನ್ನ
ನೀರೆ ನೀ  ಜೀವರಾಶಿಯ ಸಂಜೀವಿನಿ
ನೀ ನನ್ನ ನಲ್ಮೆಯ  ಭಾಮಿನಿ
ನಿರಂತರ ನನ್ನೊಳು ಹರಿವ ಪಯಸ್ವಿನಿ.

ಹೊಟ್ಟೆ ಹೊರೆಯಲು
ನಿನ್ನೊಡಲಿಗೆ ಬಲೆ ಬೀಸಿದರೂ
ಬೇಸರಿಸದೆ ನೀಡುವೆ
ಬುಟ್ಟಿ ತುಂಬು ನಿನ್ನೊಡಲ ಜೀವಿಗಳ.
ನನ್ನನೂ ಸಲಹುತಿ
ಮತ್ತದೆ ನಿನ್ನೊಡಲ ಜೀವಸಂಕುಲಗಳನೂ ಪೊರೆಯುತಿ
ನೀರೆ ನೀ  ಜೀವರಾಶಿಯ ಸಂಜೀವಿನಿ..

ದುಗುಡಗಳನ್ನು ನಿನ್ನ ಸನಿಹದಿ ದೂರಾಗಿಸುತ್ತೀ,
ಭಾವನೆಗಳನ್ನು ತುಳುಕಾಡಿಸುತ್ತೀ
ನಿನ್ನ ತೆಕ್ಕೆಗೆ ಬಿದ್ದರೆ ,ನಡುವೆ ಬೇರಾರಿಲ್ಲ
ನಾನು ನೀನು ಜೊತೆಗೆ ನನ್ನ ತೇರು.
ಕರೆಯುವೆನದಕೆ ನೀ ನನ್ನ ನಲ್ಮೆಯ ಭಾಮಿನಿ.

ದೋಣಿ ಯೆಂಬ ಈ ತೇರನು
ನಿನ್ನ ಮೈ ಮೇಲೆನೆ ಹರಿಯಬಿಡುತ್ತಿ
ಮುದವ ನೀಡುತ್ತಿ
ಅಲೆಯೇರಿಸಿ ಓಲಾಡಿಸಿ
ಕಚಕುಳಿಯನಿಡುತ್ತಿ,
ನಾ ಕುಷಿಯಿಂದ ನಿನ್ನ ಮೈದಡವಿ
ನಿನ್ನನೆ ಸಿಂಚಿಸಿ ಚಿತ್ತಾರವ ಬಿಡಿಸಿ
ನಿನ್ನೊಡಲ ಸೇರುತ್ತಿರುತ್ತೇನೆ
ಕಾಯಕದ ನೆನಪು ಮರುಕಳಿಸುವವರೆಗೆ
ನಾನು ನಿನ್ನವ....
ನನ್ನೊಳು ನೀ ನಿರಂತರ ಹರಿವ ಪಯಸ್ವಿನಿ.