Wednesday, March 14, 2012

ಬರಹಕ್ಕಾಗಿ ವಿಷಯವೆ ಸಿಗದಿದ್ದ ದಿನ..........

ಕೆಲವೊಮ್ಮೆ ಅಂದುಕೊಳ್ಳೊದು ಏನಾದರೂ ಬರಿಬೇಕು, ಅದಕ್ಕಾಗಿ ವಿಷಯಗಳ ತಡಕಾಟದಲ್ಲಿ ತೊಡೊಗೋದು, ಒಮ್ಮೊಮ್ಮೆ ಆ ವಿಷಯಗಳು ಕಣ್ಣೆದುರು ರಾಶಿ ರಾಶಿ ಕೆಲವೊಮ್ಮೆ ತನು ಮನಸ್ಸುಗಳನ್ನ ಆಕಾಶಕ್ಕೆ ಏಣಿಯಾಗಿಸುತ್ತಾ ಯೋಚಿಸಿದರು ಸಿಗುವ ವಿಷಯ ಬರೀಯ ಸೊನ್ನೆ. ವಿಷಯಗಳಿಲ್ಲ ಅಂತಲ್ಲ ಅದು ಗೋಚರಿಸದಿರುವದೆ ಒಂದು ವಿಷಯ,ಬರವಣಿಗೆಯೆಂಬುದು ಕಿರಿಡಾಕ್ಕಿ ತಕಧಿಮಿತ,ಸಿಕ್ಕಿದಲ್ಲಿ ಸಿಹಿ ಪಲ್ಯ ಸಿಗದಿದ್ದರೆ ಕೊರಗೊಜ್ಜು. 
ಬರೆಯಲೇನಿಲ್ಲ? ಕಣ್ಣ ಸುತ್ತ ಅಡ್ಡಾಡುವ ವಸ್ತುಗಳೆ ಬರಹಕ್ಕೆಸಾಕು, ಆದರೆ ಅದೆಲ್ಲವನ್ನು ಗ್ರಹಿಸಿ ಅಕ್ಷರಕ್ಕಿಳಿಸಲು ಒಂದಷ್ಟು ಪ್ರಶಾಂತತೆ ಮನದೊಪ್ಪಿಗೆ ಇರಬೇಕು ಅದಿಲ್ಲದಿರುವುದೆ ಈ ಗೊಂದಲಗಳು ಒಡಮೂಡಲು ಕಾರಣ. ಬಹುಶಃ ಇದು ಬರಹಗಾರನೆನೆಸಿಕೊಂಡ ಎಲ್ಲರ ಪಾಡು.ಬರಹದಲ್ಲಿ ಪಕ್ವತೆ ಪಡೆದಂತೆ ವಿಷಯ ಗ್ರಹಿಕಾ ಸಾಮರ್ಥ್ಯ ಬೆಳೆಯುತ್ತಾ ಸಾಗುತ್ತೆ ಬರೆಯುತ್ತಾ ಹೋದಂತೆ ತಮ್ಮ ಬರಹಗಳೆ ಹೊಸ ವಿಷಯ ಹುಟ್ಟಿಸುವಂತೆ ಮಾಡುತ್ತದೆ.ಅದುದರಿಂದ ನನ್ನ ಪ್ರಕಾರ ಬರಹಗಾರನಿಗೆ ಬೇಕಾದ ಮೂಲ ನಡವಳಿಕೆ ಅಂದರೆ ಬರೆಯುವದು ಮತ್ತು ಗ್ರಹಿಸುವದು ಆಗಿರುತ್ತದೆ.ಏನ ಬರೆಯಲಿ ಅನ್ನುತ್ತಾ ಪ್ರಶ್ನೆಗೆ ತೊಡಗಿದಾಗ ಕೆಲವೊಮ್ಮೆ ಏನೊಂದು ಬರೆಯಲು ಆಗದೆಯೆ ಇರಬಹುದು ಅಂದರೆ ವಿಷಯಗಳು ಖಾಲಿಯಾದವು ಅಂತಲ್ಲ, ಕೆಲ ವಿಚಾರಗಳಲ್ಲಿನ ಪಕ್ವತೆಯ ಕೊರತೆ,ಮನಸ್ಸಿನ ಗೊಂದಲಗಳು, ಸರಿಯಾದ ಸಂದರ್ಭ ದೊರೆಯದೆ ಇರುವದರಿಂದ ಒಮ್ಮೊಮ್ಮೆ ಹಿಡಿದ ಲೇಖನಿ ಮೇಜು ಕುಟ್ಟಬಹುದು.ಅದರೆ ಅದು ಕೆಲ ಸಮಯಗಳು, ಕೆಲ ದಿನಗಳು ಅಷ್ಟೆ.ಮಗದೊಂದು ದಿನ ನಮ್ಮ ಬರವಣಿಗೆ ನಮಗೊಲಿಯೋದು ನಿಶ್ಚಿತ.ಹೀಗಿರಬೇಕಾದರೆ ಕೊರಗಬೇಕಾದ್ದಿಲ್ಲ,ಏನು ಬರೆಯದಿದ್ದರು ಸರಿ ಬರಹದ ತುಡಿತ ಹಾಗೆ ಉಳಿಸಿಕೊಂಡರೆ ಸಾಕಷ್ಟೆ. ಕೆಲವೊಮ್ಮೆ ಹೀಗಾದಾವಾಗ ಬರವಣಿಗೆಯಿಂದ ಸಣ್ಣದೊಂದು ವಿಶ್ರಾಂತಿ ಪಡೆದು ಮರಳುವದು ಅದ್ಭುತ ಔಷದಿಯಾಗಿ ಪರಿಣಾಮಕಾರಿಯಾಗಬಲ್ಲುದು. 

ಬರವಣಿಗೆಯೆಂಬುದು ಸಮಾಜದಲ್ಲಿ ನಾವು ಕಂಡ, ಅನುಭವಿಸಿದ, ಕೇಳಿದ ವಿಷಯಗಳ ಒಟ್ಟು ಸಾರ, ಅದು ಬರಹಗಾರನ ಗ್ರಹಿಕೆ ಮತ್ತು ಅನುಭವಗಳ ಮೇಲೆ ನಿಂತಿರೋದು.ಕೆಲವೊಂದು ವಿಚಾರಗಳನ್ನು ಕಂಡದ್ದನ್ನು, ನಾವು ಯೋಚಿಸುವಂತದ್ದನ್ನು ಇತರರಿಗೆ ಹೇಳುವಲ್ಲಿಯವರೆಗೆ ಸಮಾಧಾನ ಸಿಗಲಾರದು, ಈ ಸಮಾಧಾನ ಕಂಡುಕೊಳ್ಳುವ ಪರಿಯೆ ಬರಹ.ಕೆಲವೊಮ್ಮೆ ಬರವಣಿಗೆಯಲ್ಲಿ ಆಸಕ್ತಿಯಿದ್ದು ನಾವು ದುಡಿಯುವ ಕ್ಷೇತ್ರವೆ ಬೇರೆಯದಾದಾವಾಗ ಬರಹ ಅನ್ನುವದು ಅವುಗಳಿಂದೆಲ್ಲ ಹೊರಬಂದು ನಮ್ಮನ್ನು ನಾವು ಚೈತನ್ನಿಸುವ ವಿಧಾನವು ಆಗಿರಬಹುದು.ಬರವಣಿಗೆ ಅನ್ನುವದು ಚೇತೊಹಾರಿಯಾದದ್ದು,ಅದು ಮನಕ್ಕೆ ಸಮಾಧಾನ ತರುವಂತದ್ದು,ಅದಕ್ಕಾಗಿ ಬರಹಗಾರನೆನೆಸಿಕೊಂಡವ ಬರೆಯಬೇಕು.ಬರಹ ಅನ್ನುವದನ್ನು ಕಸುಬಾಗಿ ಸ್ವೀಕರಿಸುವುದಾದರೆ ತಪ್ಪಿಲ್ಲ, ಆದರೆ ಕಸುಬಿಗಾಗಿ ಬರಹದ ಮಾರಾಟಕ್ಕಾಗಿ ಬರೆಯಬಾರದು,ಬರಹ ಮನಸಂತೋಷಕ್ಕಾಗಿ ಬರೆಯುವದು ಬರಹಗಾರನ ಆದ್ಯ ಕರ್ತವ್ಯ, ಈ ನೀತಿ ನಮ್ಮಲ್ಲಿನ ಬರಹಗಾರನನ್ನ ಸಾಣೆ ಹಿಡಿದು ಮತ್ತಷ್ಟು ಹೊಳೆಯುವಂತೆ ಮಾಡುತ್ತದೆ.

ಮೊದಲಿಗೆ ಬರೆಯಬೇಕು ಅಂದುಕೊಳ್ಳುವವರು ವಿಷಯದ ಬಗ್ಗೆ ಬರೆದರೆ ಸಾಕಷ್ಟೆ , ಅದು ಹೀಗೆ ಇರಬೇಕು, ಹಾಗೆ ಇರಬೇಕು, ಅವರು ಬರೆದಂತಿರಬೇಕು ,ಇವರು ಬರೆದಂತಿರಬೇಕು ಅನ್ನೊ ಹೋಲಿಕೆ ಮತ್ತು ಹೋಲಿಸಿಕೊಂಡು ಬರೆಯೋದು ಸರ್ವಥಾ ಸಲ್ಲ. ತಮಗನಿಸಿದಂತೆ ಬರೆಯಬೇಕಾದ್ದು ಧರ್ಮ,ಆಗಲೆ ಆ ಬರಹಗಾರನಿಗೆ ತನ್ನದೆ ಶೈಲಿ ಮತ್ತು ತನ್ನದೆ ಆದ ಗ್ರಹಿಕೆಗಳು ಒಲಿಯೋದು.ಇದರ ಜೊತೆ ಓದುವಿಕೆಯ ಕ್ರಿಯೆಯೂ ರೂಢಿಯಾಗಿರೋದು ಮುಖ್ಯ, ಹೀಗಾದಾವಾಗ ಮಾತ್ರ ಬರವಣಿಗೆ ಸುಲಭವಾಗಿ ದಕ್ಕೋದು ಅನ್ನುವದು ನನ್ನ ಅಭಿಪ್ರಾಯ.ಬರವಣಿಗೆ ನಮ್ಮೊಳಗಿನ ಶೋಧನೆಗಳ ಪ್ರಸ್ತುತಪಡಿಸುವಿಕೆ ಹಾಗು ಕಲೆ ಅಷ್ಟೆ.ಬರವಣಿಗೆ ಒಲಿಯೋದು ಅಂದರೆ ನಾವು ಬರೆದ ಬರಹಗಳು ನಮಗೆ ಮೆಚ್ಚುಗೆಯಾಗುವದು ಎಂದರ್ಥ.ನಮ್ಮ ಬರಹಗಳು ನಮಗೆ ಒಪ್ಪಿಗೆಯಾದ ನಂತರವಷ್ಟೆ ಕಥೆ, ಕಾದಂಬರಿ, ಕವಿತೆ ಇತ್ಯಾದಿ ಬರಹದ ಪ್ರಕಾರಕ್ಕೆ ಒಳಪಡಿಸೋದು ಅತ್ಯಂತ ಸೂಕ್ತ.ತನಗೆ ಮೆಚ್ಚುಗೆಯಾದ ಬರಹಗಳು ಇತರರೀಗೆ ಮೆಚ್ಚುಗೆಯಾಗಲುಬಹುದು ಆಗದಿರಲುಬಹುದು ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ್ದಿಲ್ಲ.ಹೆಚ್ಚಿನ ಸಂದರ್ಭದಲ್ಲಿ ಬರಹಗಾರನಿಗೆ ಮೆಚ್ಚುಗೆಯಾದ ಬರಹಗಳು ಇತರರೀಗು ಮೆಚ್ಚಗೆಯಾಗಿರುವಂತದ್ದೆ ಆಗಿರುತ್ತದೆ. ಬರವಣಿಗೆ ಬರಹಗಾರನಿಗೆ ಖುಷಿ ಕೊಡೋದು ಮುಖ್ಯ ಅಷ್ಟೆ.

ಬೇರೆಲ್ಲ ಕ್ರಿಯೆಯ ಹಾಗೆ ಬರವಣಿಗೆ ಅನ್ನೊದು ಒಂದು ಕ್ರಿಯೆಯಷ್ಟೆ, ಅದರ ಮೇಲಿರುವ ನಮ್ಮ ಅಸ್ಥೆಗಳು, ಅಭಿರುಚಿಯ ಪ್ರಮಾಣಗಳು ನಮ್ಮನ್ನು ಬರಹಗಾರರ ಬೇರೆ ಬೇರೆ ಅಂತಸ್ತುಗಳಲ್ಲಿ ನಿಲ್ಲಿಸೋದು,ಬರವಣಿಗೆ ಬಗ್ಗೆನೆ ಮಾತಾಡುವಷ್ಟು ದೊಡ್ಡ ಬರಹಗಾರನೆ ನಾನು? ಖಂಡಿತ ಅಲ್ಲ.ಬರವಣಿಗೆ ಬಗ್ಗೆ ನಾನಿಷ್ಟು ಹೇಳಬಹುದು ಅನ್ನುವದು ನನಗು ಗೊತ್ತಿರಲಿಲ್ಲ. ಹೇಳಿದ್ದೇನೆ ಎಂಥಾದರೆ ಅದರ ಕ್ರೆಡೀಟ್ ನನ್ನ ಬರವಣಿಗೆ ಹುಚ್ಚಿಗೆ ಸೇರಬೇಕು, ಆ ಬರಹಗಳ ಅನುಭವವೆ ಇಷ್ಟೆಲ್ಲಾ ಹೇಳಿಸಿರೋದು ಎಂದು ಅಂದುಕೊಳ್ಳುತ್ತೇನೆ.ಬರವಣಿಗೆಯ ಎಲ್ಲಾ ಸಂದರ್ಭಗಳಲ್ಲಿ ಅದನ್ನ ಮುಗಿಸಿದಾಗ ಸಿಗುವ ಖುಷಿಯನ್ನು ಯಾವಾಗಲು ಸವಿಯಲು ಇಚ್ಚಿಸುತ್ತೇನೆ ಎಂಬುದಷ್ಟೆ ಸತ್ಯ.ಇವತ್ತು ನನಗು ಕೂಡ ಹಾಗೆ ಬರೆಯಲು ಏನೊಂದು ವಿಷಯಗಳೆ ಸಿಗದಿದ್ದ ದಿನ,ಅದಕ್ಕಾಗಿ ಅದೆ ವಿಷಯವನ್ನೆ ಇಟ್ಟುಕೊಂಡು ಬರೆದುದಕ್ಕೆ ಇಷ್ಟೆಲ್ಲಾ ವಿಚಾರ ಹೇಳುವಂತಾಯಿತು ಅಷ್ಟೆ,ಇನ್ನೂ ಬರೆಯಬೇಕಿತ್ತು ಅನ್ನಿಸುತ್ತದೆ,ಈ ತರ ಓದುಗರೂ ಅಂದುಕೊಂಡರೆ ಬರಹಕ್ಕೊಂದು ಸಾರ್ಥಕತೆ.

2 comments:

  1. ಒಂದು ಅತ್ತ್ಯುತ್ತಮ ಬರಹ ರಾಘಣ್ಣ. ಬರಹಗಾರನಿಗೆ ಮಾರ್ಗದರ್ಶಕವಾಗಬಹುದಾದ ಲೇಖನ. ಖಂಡಿತವಾಗಿಯೂ ಎಲ್ಲಾ ಕಡೆಯಿಂದ ನಿಮಗೊಂದು ಕ್ರೆಡಿಟ್ ಸಲ್ಲಲೇ ಬೇಕು.

    ReplyDelete
  2. ಕ್ರೆಡಿಟ್ ಪಡೆಯುವಷ್ಟು ಯೋಗ್ಯನಲ್ಲ, ಪ್ರೀತಿಯಿರಲಿ ಅದಷ್ಟೆ ಸಾಕು :)

    ReplyDelete