Friday, May 18, 2012

ಮನುಷ್ಯರಾಗಿ ಸಲ್ಲೋಣ ಮನಸ್ಸುಗಳನ್ನು ಗೆಲ್ಲೋಣ..

ಸಮಾಜದಲ್ಲಿ ಕೀಳು ಮೇಲು ಎಂಬುದನ್ನು ಸೃಷ್ಟಿಸಿದ್ದೆ ಒಂದು ಕಾಲಘಟ್ಟದಲ್ಲಿ ಬ್ರಾಹ್ಮಣ ಪಂಗಡಗಳು ಎಂಬುದು ಸರ್ವ ವಿಧಿತ.ತನ್ನ ಪೌರೋಹಿತಶಾಹಿ ನೀತಿಯನ್ನು ಹೇರುತ್ತಾ ಸಮಾಜವನ್ನು ತನ್ನ ಹಿಡಿತದಲ್ಲಿಟ್ಟುಕೊಂಡು  ಅಧಿಕಾರಶಾಹಿತ್ವ ಮೆರೆಯಲು ಬ್ರಾಹ್ಮಣ್ಯ ನೀತಿಯನ್ನು ಹೇರುತ್ತಾ ಹೋಗಿದ್ದು ಕೂಡ ಸತ್ಯ.ಆದರೆ ಇಂದಿನ ದಿನಗಳಲ್ಲಿ ಬ್ರಾಹ್ಮಣ್ಯ ಎಂಬುದು ಒಂದು ಜಾತೀಯ ಪಂಗಡಕ್ಕೆ ಸೀಮೀತವಾಗಿ ಉಳಿದಿಲ್ಲ, ಈ ಜಾತಿ ಸನ್ನಿಗಳು ಹೆಮ್ಮರವಾಗಿ ಬೆಳೆದು ನಿಂತಿದೆ.ವಿಜ್ಞಾನ, ತಂತ್ರಜ್ಞಾನ ಯುಗದಲ್ಲೂ ಜಾತಿಯ ಸನ್ನಿಗೆ ಆ ಮೂಲಕ ಡಂಬಾಚಾರಕ್ಕೆ ಕೊರತೆ ಏನು ಇಲ್ಲ. ಆದರೆ ಇಂತದೆ ಮೇಲ್ಜಾತಿಯೆಂದು ಕರೆಸಿಕೊಳ್ಳುವ ಬ್ರಾಹ್ಮಣ ಪಂಗಡಕ್ಕೆ ಸೇರಿದವನೊಬ್ಬ ಜಾತಿಯತೆಯಿಂದ ಬೇಸತ್ತು ಮನುಷ್ಯ ಮಾತ್ರನಾಗಿ ಇರುತ್ತೇನೆ ಎಂಬ ನೀತಿಗೆ ಬದ್ಧನಾಗಿ ಬದುಕು ನಡೆಸುವಾಗ, ಸಮಾಜ ಎಂಬುದು ಆತನನ್ನ ಜಾತಿಯಿಂದ ಹೊರತಾಗಿ ನೋಡಲು ಇಚ್ಚೆ ಪಡುವದೆ ಇಲ್ಲ.ಆ ಮಟ್ಟಿಗೆ ಜಾತಿಕತೆ ಸಮಾಜವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದರೆ ತಪ್ಪಿಲ್ಲ. ಈ ಪರಿಸ್ಥಿತಿ ಬ್ರಾಹ್ಮಣ ಹುಡುಗ ಅಂತ ಕರೆಸಿಕೊಳ್ಳೊ ಅವನಿಗಷ್ಟೆ ಸೀಮಿತವಾಗಿ ಅಲ್ಲದಿದ್ದರೂ, ಆತನ ಜಾತಿಯೆ ಇವೆಲ್ಲದಕ್ಕೂ ಮೂಲವಾದುದರಿಂದ ಇತರರಿಗಿಂತ ಆತನಿಗೆ ಜಾತಿಯತೆ ಹೊರತಾಗಿ ಮನುಷ್ಯ ಮಾತ್ರನಾಗಿ ತನ್ನ ಗುರುತಿಸಿಕೊಳ್ಳೊದು ಒಂದು ಸವಾಲೆ ಸರಿ. 

ಸಮಾಜದ ಮಾತುಗಳು ಒತ್ತಟ್ಟಿಗಿರಲಿ ತನ್ನದೆ ಕುಟುಂಬದ ತನ್ನವರೆ ಅನಿಸಿಕೊಂಡವರ ಸಂಪ್ರದಾಯಿಕ ಕಟ್ಟುಪಾಡುಗಳ ಹೇರಿಕೆಯನ್ನು ಇತ್ತ ಕಡೆ ಸ್ವೀಕರಿಸಲು ಆಗದೆ ತ್ಯಜಿಸಲು ಆಗದೆ ಅವನೊಳಗೆ ನಡೆಯುವ ತೊಳಲಾಟಗಳ ಭಾದೆಯು ಕೂಡ ಅಲ್ಪವಾದುದೇನಲ್ಲ. ಅರಿವಿನ ತಿಳುವಳಿಕೆಯಿಂದ ಒಡಮೂಡಿದ ತನ್ನದೆ ಆದ ನೀತಿಗಳನ್ನು ಪರಿಪಾಲಿಸುವಲ್ಲಿ ಕೂಡ ಆತ ತನ್ನಲ್ಲೆ ದೊಡ್ಡ ಘರ್ಷಣೆಗೆ ಎದುರುಗೊಳ್ಳಬೇಕು ಎನ್ನುವದು ವಾಸ್ತವ.ಇವೆಲ್ಲವಕ್ಕೂ ಕಾರಣ ಆತ ಗುರುತಿಸಿಕೊಂಡ ಜಾತಿ.ಈ ಸಮೀಕರಣದೊಳಗೆ ತನ್ನ ನೀತಿಯನ್ನು ಬಿಟ್ಟು ಕೊಡದೆ ಹೊಂದಿಕೊಳ್ಳಲು ನಡೆಸಬಹುದಾದ ಒಂದಷ್ಟು ಅಡ್ಜೆಷ್ಟ್ ಮೆಂಟ್ ಕ್ರಿಯೆಗಳೂ ಕೂಡ “ನೋಡಲ್ಲಿ ಅವ ಇನ್ನೂ ಅಲ್ಲೆ ಇದ್ದಾನೆ ಅವನೊಳಗಿನ ಜಾತಿ ಸತ್ತಿಲ್ಲ”ಅನ್ನೊ ಕುಹಕಗಳನ್ನ , ಅಪಹಾಸ್ಯಗಳನ್ನ ಅನಿವಾರ್ಯವಾಗಿ ಎದುರುಗೊಳ್ಳಬೇಕಾಗುತ್ತೆ. 

ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದಲ್ಲಿ ಅಷ್ಟೇನೂ ವ್ಯತ್ಯಾಸವಿಲ್ಲ ಇದು ಒಂದು ತರ ಜೊತೆ ಜೊತೆಗೆ ಇರುವಂತದ್ದು ಎನ್ನೋ ವಾದ ಒಂದು ಕಡೆ ಇದೆ.ಒಂದು ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಇದು ಸೂಕ್ತವೆ ಆಗಿದ್ದರು ಮೇಲೆ ಹೇಳಿದಂತೆ ಇವತ್ತು ಬ್ರಾಹ್ಮಣ್ಯ ಎನ್ನುವದು ಈ ಒಂದು ಜಾತಿಗೆ ಸೀಮಿತವಾಗಿ ಉಳಿದಿಲ್ಲ ಅನ್ನುವದು ಕೂಡ ಅಷ್ಟೆ ವಾಸ್ತವ. ಇದಕ್ಕೆ ಕಾರಣೀಭೂತರಾರು ಎಂಬುದಕ್ಕೆ ಮತ್ತೆ ಸಿಗುವ ಉತ್ತರ ಕೂಡ ಬ್ರಾಹ್ಮಣ ಪುರೋಹಿತಶಾಹಿ ವರ್ಗ ಎನ್ನುವದು ಹೌದಾದರು ಜಾತೀಯತೆಯಿಂದ ಹೊರತಾಗಿ ಯೋಚಿಸುವ ಆತನಿಗೆ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವ ಎಂಭ ಕಾರಣಕ್ಕೆ ಮನುಷ್ಯ ಸಂವೇದಿತನದಿಂದ ಸಮಾಜವನ್ನು ಎದುರುಗೊಳ್ಳಲು ಈ ಪ್ರಮೇಯಗಳನ್ನ ಬಿಡಿಸಿಕೊಂಡು ನಿಲ್ಲಲೇಬೇಕಾಗುತ್ತೆ.ಆದರೆ ಈ ಎಲ್ಲಾ ಸವಾಲುಗಳನ್ನು ತನ್ನದಾಗಿಸಿಕೊಂಡು ಸಮಾಜಮುಖಿಯಾಗಿ ಮುನುಷ್ಯರನ್ನ ಮನುಷ್ಯರಂತೆ ಕಾಣುವ ಬಯಸುವ ಮಂದಿಗಳೆಷ್ಟು? ಅನ್ನೋದು ಪ್ರಶ್ನೆಯಾಗೆ ಉಳಿದು ಬಿಡುತ್ತೆ, ಬಹುಶಃ ಈ ಬಳಗ ಇನ್ನೂ ಅಲ್ಪ ಮಟ್ಟದ್ದೆ.ಹುಟ್ಟಿನಿಂದ ಹೇರಿಕೆ ಮೂಲಕ ಆಪೋಶನಗೊಂಡ ನೀತಿಗಳನ್ನು ತಿರಸ್ಕರಿಸಿ ನಿಲ್ಲವದು ಬಹಳ ಮಂದಿಗೆ ಕಷ್ಟ, ಇನ್ನೂ ವಿಸ್ತರಿಸುವದಾದರೆ ತನ್ನ ಎರವಲು ಪಡೆದ ನೀತಿಗಳಲ್ಲಿ ಹಲವಷ್ಟು ಎಡವಟ್ಟುಗಳಿವೆ ಎಂಬುದರ ಅರಿವು ಕೂಡ ಬಾರದಷ್ಟು ಹೇರಿಕೆಯ ಕಟ್ಟುಪಾಡುಗಳನ್ನೊಳಗೊಂಡ ಸಂಸ್ಕೃತಿ ಎಂದು ಕರೆಸಿಕೊಳ್ಳೊ ಸಂಪ್ರದಾಯಗಳು ಅತನನ್ನು ಜಾತಿಯತೆಯೊಳಗಿನ ಕೂಪದಲ್ಲಿ ಮುಳುಗಿಸಿರುತ್ತದೆ.ನಿಜವಾಗಿ ಮುಳುಗಿರುವದು ತನ್ನೊಳಗಿನ ಮಾನವೀಯ ಸಂವೇದನೆಗಳು ಎಂಬುದರ  ಅರಿವು ಬಾರದಷ್ಟು ತಡೆಯೊಡ್ಡುವದು ಆತನಲ್ಲಿ ಆಪೋಶನಗೊಂಡು ಹೆಮ್ಮರವಾಗಿ ನಿಂತ ಜಾತೀಯತೆ ಎಂಭ ಕಾರ್ಕೋಟಕ ವಿಷ. 

ಇನ್ನೂ ಕೆಲವರು ಒಡಂಬಡಿಕೆಗೆ ಮಾನವೀಯತೆಯ ನೆಲೆಗಟ್ಟಿನ ಸೋಗಿನಲ್ಲಿ ನಾವೆಲ್ಲರೂ ಒಂದು ಎನ್ನುತ್ತಾ ,ಏರು ಪೇರುಗಳನ್ನು ಸರಿ ಪಡಿಸುತ್ತೇವೆ ಎನ್ನುತ್ತಾ ಮುನ್ನಡೆಯುವವರು ಇದ್ದಾರೆ. ಇದು ಹೇಗೆ ಅಂದರೆ ದೇವನೂರು ಮಹಾದೇವ ಅವರು ಹೇಳುವಂತೆ ರೋಟರಿ ಸಂಸ್ಕೃತಿಯ ತರ.ರೋಟರಿಯವರಿಗೆ ಏಸಿ ರೂಮಿನಲ್ಲಿ ಐಷಾರಾಮಿ ಹೋಟೆಲಲ್ಲಿ ಕುಳಿತು ಬಡವರ ಬಗ್ಗೆ ಚಿಂತೆ ಮಾಡುವದಕ್ಕೆ ಬಡವರು ಬೇಕು. ಅಂದರೆ ಬಡವ ಇದ್ದಲ್ಲಿ ಇವರ ಸೇವೆ ಆ ಮೂಲಕ ಸಂಸ್ಥೆ ಜೀವಂತ.ಅದೆ ತರನೆ ಸಮಾಜದ ಏರು ಪೇರು ಅಸ್ಪ್ರಶ್ಯತೆಯಂತ ನೀತಿಗಳು ಇದ್ದಲ್ಲಿ ಮಾತ್ರ ಇವರುಗಳ ರಾಜಕೀಯ ಆಕಾಂಕ್ಷೆಗಳ ಜೀವಂತಿಕೆ. ಗಮನಿಸಬೇಕಾದ ಒಂದು ಅಂಶವೆಂದರೆ ಮಾನವೀಯತೆ ಜೊತೆ ಆದರ್ಶವೆಂಬುದು ಕೂಡ ಜೊತೆಗೆ ತಳುಕು ಹಾಕಿಕೊಳ್ಳುತ್ತದೆ. ಆದರ್ಶ ಮೆರೆಯೋದಕ್ಕಾಗೆ ಸಮಾಜಸುಧಾರಣೆ ಅನ್ನೋದನ್ನ ಮಾನವೀಯತೆ ಅನ್ನೋ ನೆಲೆಯಲ್ಲಿ ನೋಡೋದು ಕಷ್ಟನೆ ಸರಿ. ಅದು ಮಾನವ ಕಾಳಜಿಯ ಸೋಗು ಅಷ್ಟೆ. ಮಾನವೀಯತೆಯೆ ಮೊದಲ್ಗೊಂಡು ಅದು ಇತರರಿಗೆ ಮಾನವೀಯತೆಯ ನಿಟ್ಟಿನಿಂದ ಆದರ್ಶವಾಗಿ ಕಂಡರೆ ಅದು ಬೇರೆ ಮಾತು. 

ಇವೆಲ್ಲದರ ಹೊರತಾಗಿ ಒಂದಂತೂ ಸತ್ಯ, ಬ್ರಾಹ್ಮಣ ಅಂತ ಸಮಾಜದಿಂದ ಕರೆಸಿಕೊಂಡ ಮಾತ್ರಕ್ಕೆ ಆತ ಬ್ರಾಹ್ಮಣನಾಗಬೇಕಾದ್ದಿಲ್ಲ, ಜಾತೀಯ ಬಂಧನಗಳನ್ನು ಬಿಡಿಸಿಕೊಂಡು ಆತನೂ ಮಾನವನಾಗಬಲ್ಲ, ಆದರೆ ಅವನಿಗೆ ಬೇಡದ ಆತನ ಜಾತಿ ಸಮಾಜಕ್ಕೆ ಬೇಕಿರುತ್ತದೆ.ಆತ ಯಾವ ಜಾತಿಗೂ ನಾ ಒಳಪಟ್ಟವನಲ್ಲ ಎಂಬುದನ್ನು ಎಷ್ಟೆ ಬೊಬ್ಬಿರುದು ಅಂದರು ಸಮಾಜಕ್ಕದು ಕೇಳಿಸುವದೆ ಇಲ್ಲ. ಆತನ ಜಾತಿಯಿಂದ ನಡೆದ ದುರಾಚಾರಗಳು, ಸಮಾಜದ ಏರು ಪೇರುಗಳಿಗೆ ಕಾರಾಣಿಭೂತರಾದ ಆತನ ಹಿರಿಯಿಕರ ಮೂಲಕ ಬಳವಳಿಯೆಂಬಂತೆ ಅವನಿಗೆ ಗೊತ್ತಿಲ್ಲದೆಯೆ ಅದರ ಪಾಪವನ್ನು ಅವನುಣ್ಣುತ್ತಿರಬೇಕು. ಜಾತಿ ಬಂಧನದಿಂದ ಬಿಡಿಸಿಕೊಂಡ ಆತನೂ ಜಾತಿಯ ಕಾರಣದಿಂದ ತನ್ನದಲ್ಲದ ತಪ್ಪಿಗೆ ಪಾಪವೆಂಬಂತೆ ತುಚ್ಚ ಮಾತುಗಳು, ದೃಷ್ಟಿಗಳನ್ನು ಎದುರಿಸಬೇಕಾಗುತ್ತೆ. ಹಾಗಿದ್ದಾಗ ಆತನಿಗೆ ಉಳಿದಿರುವ ದಾರಿ ಎಂದರೆ ಇದೆಲ್ಲವನ್ನೂ ಸಹಿಸುತ್ತೆಲೆ ಜಾತಿಯ ಸೋಗಲಾಡಿತನವನ್ನು ದಾಟಿ ಮನುಷ್ಯನಾಗಿ ಎಲ್ಲಾ ಕಠಿಣ ಹಾದಿಯನ್ನು ದಾಟಿ ಕ್ರಮಿಸುವದಕ್ಕೆ ತನ್ನಿಂದಾದ ಪ್ರಯತ್ನ ಪಡೋದೆ ಆಗಿರುತ್ತದೆ.ಅತನ ಮನಸ್ಸು ಪರಿಶುದ್ದವಾಗಿದ್ದಲ್ಲಿ ಜಾತಿ ಧರ್ಮದಿಂದ ಹೊರತಾಗಿ ಒಂದಲ್ಲ ಒಂದು ದಿನ ಎಲ್ಲರೀಗೂ ಸಲ್ಲುವವನಾಗುತ್ತಾನೆ ಅನ್ನೊ ನಂಬಿಕೆಯೆ ಆತನ ದಾರಿದೀಪವಾಗಬೇಕು.ತನ್ನ ಜಾತಿಯಿಂದ ಅವಮಾನಿತ ಮಂದಿ ಬಳಗದ ಮುಂದು ತನ್ನ ಅವಮಾನ ತೃಣ ಮಾತ್ರದ್ದು ಎಂಬ ಸತ್ಯದ ಅರಿವು ಇರಬೇಕಷ್ಟೆ.


ಚಿತ್ರ ಕೃಪೆ:-ಅವಧಿ

Monday, May 7, 2012

ಬೆಂಕಿ-ಬಿರುಗಾಳಿ ಯಲ್ಲಿ ಹೊತ್ತಿ ಉರಿದ ಡಬ್ಬಿಂಗ್ ವಿರೋಧಿ ಚಿತ್ರರಂಗದ ಅಸಹನೆಗಳು....

ಅಮೀರ್ ಖಾನ್ ರ ಸಾಮಾಜಿಕ ಕಳಕಳಿ ಹೊಂದಿದ ಅದ್ಭುತ ಕಾರ್ಯಕ್ರಮ "ಸತ್ಯಮೇವ ಜಯತೆ" ಡಬ್ಬಿಂಗ್ ಅವೃತಿ ಕನ್ನಡಲ್ಲಿ ಪ್ರಸಾರಕ್ಕೆ ಅವಕಾಶವಿಲ್ಲ ಎಂಭ ಸುದ್ದಿ ಪ್ರಚುರಗೊಳ್ಳುತ್ತಲೆ ಹಲವು ವರುಷದಿಂದ ನಡೆದು ಬಂದಿದ್ದ ಡಬ್ಬಿಂಗ್ ಪರ/ವೀರೋಧ ಚರ್ಚೆಗಳು ಮತ್ತೆ ಗ್ರಾಸಗೊಂಡಿತ್ತು, ಹಲವು ದಿನಗಳಿಂದ ಫೇಸ್ ಬುಕ್, ಬ್ಲಾಗ್ ಗಳ ಮೂಲಕ ಚರ್ಚಿತ ವಿಷಯ ಇದಾಗಿದ್ದು ನಿನ್ನೆ ದೃಶ್ಯ ಮಾಧ್ಯಮವೊಂದಾದ ಪಬ್ಲಿಕ್ ಟಿವಿ ಕೂಡ ಚರ್ಚೆಗೆ ವೇದಿಕೆ ಒದಗಿಸಿತ್ತು.ಅದ್ವಾನದಿಂದಲೆ ಸಾಗಿದ ಈ ಕಾರ್ಯಕ್ರಮ ಯಾವುದೆ ರೀತಿಯ ಅಭಿಪ್ರಾಯ ಮೂಡಿಸುವಲ್ಲಿ ವಿಫಲಗೊಂಡಿತು. ಚಾನಲ್ ಮಂದಿಯ ಪ್ರಯತ್ನ ಒಳ್ಳೆದೆ ಆಗಿದ್ದರೂ ಚರ್ಚೆ ಬೇಕಿಲ್ಲದ ಒಂದಷ್ಟು ಮಂದಿ ಕಾರ್ಯಕ್ರಮ ಕೆಡಿಸಿ ಅವರುದ್ದೇಶ ನೆರವೇರಿತೆಂದು ಅಂದುಕೊಂಡು ಹೊರನಡೆದಿದ್ದರು, ಅಯ್ಯೊ ಪಾಪ ಎಲ್ಲವೂ ಮುಗಿಯಿತು ಅಂದುಕೊಂಡರೇನೊ? ಅದರೆ ಈ ವಿಷಯವನ್ನು ಇಲ್ಲಿಗೆ ಬಿಡುವಂತದ್ದಲ್ಲ ಇದನ್ನು ಮುಂದುವರಿಸಬೇಕಾದ ಅಗತ್ಯವಿದೆ ಏನಾಗದಿದ್ದರು ಸರಿ ಡಬ್ಬಿಂಗ್ ಪರ ನಿಲುವುಗಳ ಧ್ವನಿ ದಾಖಲಾಗಬೇಕಿದೆ ಅನ್ನೊ ಸ್ಪಷ್ಟ ನಿರ್ಧಾರಗಳೊಂದಿಗೆ ನಾವು ಮರಳಿದ್ದು ಸತ್ಯ.ಡಬ್ಬಿಂಗ್ ಇವತ್ತಲ್ಲ ನಾಳೆ ಬರಲೇಬೇಕು ಅದನ್ನು ತಡೆಯಲು ಸಾಧ್ಯವಿಲ್ಲ ಎಂಬುದರ ಅರಿವು ನಮಗಿದ್ದುದರಿಂದ ನಿರಾಶೆ ಏನು ಆಗಿರಲಿಲ್ಲ, ಬದಲಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಡಬ್ಬಿಂಗ್ ಪರವಾಗಿ ಧ್ವನಿ ಇದೆ ಎಂಬುದು ಪ್ರೇಕ್ಷಕರ ಮುಂದೆ ದಾಖಲಾಗಿದ್ದು ಹಾಗು ಅದು ಚಿತ್ರೋದ್ಯಮದ ಮಂದಿಗೆ ತಲುಪಿದ್ದು ನಮಗೆ ಖುಷಿ ಕೊಟ್ಟ ವಿಚಾರ.

ಡಬ್ಬಿಂಗ್ ಬೇಕೋ ಬೇಡ್ವೊ ವಿಷಯದ ಕುರಿತಾದ ಪಬ್ಲಿಕ್ ಟಿವಿಯ "ಬೆಂಕಿ ಬಿರುಗಾಳಿ" ಕಾರ್ಯಕ್ರಮದ ಕೆಲ ಒಳಸುಳಿಗಳನ್ನು ಇಲ್ಲಿ ಬಿಚ್ಚಿಡುತಿದ್ದೇನೆ. ಕಾರಣ ಇಷ್ಟೆ ಗ್ಯಾಲರಿಯಲ್ಲಿ ಕುಳಿತ ಒಂದಷ್ಟು ಮಂದಿಗಳ ಧ್ವನಿಗಳು ದಾಖಲಾಗಲಿಲ್ಲ ಅನ್ನುವದಕ್ಕಾಗಿ.ಡಬ್ಬಿಂಗ್ ಬೇಕು ಅನ್ನುವ ನಮ್ಮ ಪರವಾಗಿ ವೇದಿಕೆಯಲ್ಲಿ ಇದ್ದ ದಿನೇಶ್ ಕುಮಾರ್ ಹಲವು ಮಾತುಗಳು ಕೂಡ ಬಾಕಿಯಾಗಿದ್ದವು ಮಾತಾಡಿದಷ್ಟು ಮಾತುಗಳೆ ಅರಗಿಸಿಕೊಳ್ಳುವಲ್ಲಿ ಹೆಣಗಾಡಿದ ಚಿತ್ರರಂಗ ಮಂದಿ ಇನ್ನು ಪೂರ್ತಿ ಮಾತನ್ನು ಕೇಳಿಸಿಕೊಂಡಿದ್ದರೆ ಅವಸ್ತೆ ಹೆಂಗಿರುತಿತ್ತೊ ಅನ್ನೋದ ನೆನೆದಾಗ ನಗು ತರಿಸುತ್ತೆ. ಹಲವು ದಾಖಲೆ ಹಾಗು ಮಾತನಾಡಬೇಕಾದ ವಿಷಯದ ಕುರಿತಾದ ಸಿದ್ದತಾ ಪ್ರತಿ ನಾ ಓದಿಕೊಂಡಿದ್ದೆನಾದ್ದರಿಂದ ಈ ಮಾತು. ಅದು ಒತ್ತಟ್ಟಿಗಿರಲಿ ಎಂ ಎಸ್ ರಮೇಶ್ ರ ಪೂರ್ತಿ ಮಾತು ಕೇಳಿಸಿಕೊಂಡು ದಿನೇಶ್ ಕುಮಾರ್  ನಿಷೇಧ ಎಂಭ ಪದದ ಮೂಲಕ ಉತ್ತರಿಸಲು ಪ್ರಾರಂಭಿಸಿದ ಕೂಡಲೆ ಮಾತಿಗಡ್ಡ ಬಂದ ರಮೇಶ್ ರಿಗೆ ನಾನು ಮಾತು ಮುಗಿಸ್ತೀನಿ ಅಂದರೂ ಕೇಳದಾಗ ಗ್ಯಾಲರಿಯಲ್ಲಿ ಕುಳಿತ ಡಬ್ಬಿಂಗ್ ವಿರೋಧಿ ಮಂದಿ ಸುಮ್ಮನಿರಿ ಅಂತ ದೀನೇಶ್ ಅವರಿಗೆ ಆರ್ಡರ್ ಮಾಡಿ ಉದ್ದಟತನ ಮೆರೆದರು, ಡಬ್ಬಿಂಗ್ ಪರ ಗ್ಯಾಲರಿ ಮಂದಿಯು ಮಾತನಾಡಲು ಬಿಡ್ರಿ ಅಂತ ಹೇಳಲೆ ಬೇಕಾಯಿತು. ಕಾರ್ಯಕ್ರಮ ಮೊದಲಿಗೆ ನಡೆದ ಈ ವಾಗ್ಯುದ್ದ ಮೂಲಕ ಒಂದು ಸ್ಪಷ್ಟವಾಗಿದ್ದೇನೆಂದರೆ ಇವರಿಗೆ ಚರ್ಚೆ ಬೇಕಾಗಿಲ್ಲ ಅವರಿಗೆ ಬೇಕಿರುವದು ನಮ್ಮ ಧ್ವನಿ ಅಡಗುವದು ಎಂದು.ಪುರಾವೆಯಂತೆ ಚೈಲ್ಡು ಇನ್ನಿತರ ಅಸಂಭದ್ದ ಮಾತುಗಳು ಕೊಂಕು ನುಡಿಗಳು ಕೆರಳಿಸುವ ಮಾತುಗಳು ಡಬ್ಬಿಂಗ್ ವಿರೋಧಿ ಗ್ಯಾಲರಿಯಿಂದ ತೇಲಿ ಬರುತ್ತಾನೆ ಇತ್ತು. ಬರೀಯ ಹತಾಶೆ ಅಸಹನೀಯ ಮಟ್ಟಕ್ಕೆ ತಲುಪಿದ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡಬೇಕಾದ ದರ್ದುಗಳು ನಮಗೊದಗಿರಲಿಲ್ಲ. ಸರಿಯಾದ ಉತ್ತರಗಳನ್ನು ಸೂಕ್ತವಾಗಿ ಕೊಡಬೇಕಾದ ಅನಿವಾರ್ಯತೆಗಳು ಎದುರುಗೊಂಡಾಗ ಉತ್ತರಿಸಿದ್ದಂತೂ ಸತ್ಯ.

ಕುವೆಂಪು , ರಾಜ್ ಕುಮಾರ್ ಭಾವಚಿತ್ರಗಳನ್ನು ಬಳಸುವ ನೈತಿಕತೆ ನಿಮ್ಮಲ್ಲಿ ಇಲ್ಲ ನಾಚಿಕೆಯಾಗಬೇಕು ನಿಮಗೆ ಅನ್ನುತ್ತ ಹರಿಹಾಯ್ದಿದ್ದು ಹತಾಶೆ ತುದಿ ತಲುಪಿದ     ಸಾ ರ ಗೋವಿಂದು. ಅಲ್ಲಾ ಕುವೆಂಪು ರಾಜ್ ಕುಮಾರ್ ಏನು ಇವರ ಆಸ್ತೀನಾ?ಕುವೆಂಪು ಕೃತಿಗಳು ಯಾವುದು ಹೆಸರಿಸಿ ಅಂದರೆ ಬ್ಬೆ ಬ್ಬೆ ಅನ್ನೋ ಈ ಸಾರ್ ಗೋವಿಂದು ಕುವೆಂಪು ಪಾಠ ನಮಗೆ ಹೇಳ ಹೊರಟಿದ್ದು ನಮಗೆ ನಾಚಿಕೆಗೇಡು. ಪ್ರಶ್ನೆ ಮಾಡೋಣವೆಂದರೆ ಎಲ್ಲಿ? ಅವಕಾಶನೆ ಇಲ್ವೆ.ದಿನೇಶ್ ಕುಮಾರ್ ಅವರ ಗುಣದಿಂದ ಹೊರತಾಗಿ ಸ್ವಲ್ಪ ಖಾರವಾಗಿ ಸಾರು ಗೋವಿಂದುಗೆ ಪ್ರತಿಕ್ರಿಯಿಸಿದ್ದು ಸೂಕ್ತವೆ ಎನಿಸಿತ್ತು. ಇನ್ನೊಂದು ದ್ವಂದ್ವವನ್ನು ಎಳೆದಿದ್ದು ನೀವು ಕರ್ನಾಟಕ ರಕ್ಷಣಾ ವೇದಿಕೆಯ ಪರವಾಗಿ ಬಂದಿದ್ದೋ ಅಥವಾ ದಿನೇಶ್ ಕುಮಾರ್ ಆಗಿ ಬಂದಿದ್ದೋ ಅನ್ನೊ ಸಾರ್ ಗೋವಿಂದು ಅವರ ಮುಠ್ಠಾಳ ಮಾತು.ಕಾಲಕ್ಕೆ ತಕ್ಕಂತೆ ಬದಲಾಗಬೇಕು ಇನ್ನೂ ಫೀಡಿಂಗ್ ಹಾಲು ಕುಡಿಯುವ ಮಗುವಿನಂತೆ ಅಡೋದು ಬೇಡ ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳಿ, ನಿಶೇಧ ಅನ್ನುವದು ಇಲ್ಲವಾದ ಮೇಲೆ ಡಬ್ಬಿಂಗ್ ಗೆ ಅನುವು ಮಾಡಲ್ಲ ಯಾಕೆ?ಪ್ರೇಕ್ಷಕನ ಆಯ್ಕೆಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ನೀವು ಯಾರು? ಅನ್ನೊ ಡಬ್ಬಿಂಗ್ ಪರವಾಗಿ ಎತ್ತಿದ ಪ್ರಶ್ನೆಗೆ ಉತ್ತರಿಸಬೇಕಾದ ಗೋವಿಂದು ಅದ ಬಿಟ್ಟು ಯಡಬಿಡಂಗಿ ಪ್ರಶ್ನೆಗಳನ್ನು ಹಾಕುವದ ನೋಡಿದಾಗ ಅವರ ಅಸಹನೀಯತೆ ಮಟ್ಟ ಹೇಸಿಗೆ ಹುಟ್ಟಿಸಿತ್ತು. ಈ ಸಂದರ್ಭದಲ್ಲಿ ಡಬ್ಬಿಂಗ್ ನಿಲುವುಗಳ ಬಗ್ಗೆ ಚರ್ಚೆ ಮಾಡಿ ಸಂಘಟನೆಗಳ್ನು ಎಳೆದು ತರಬೇಡಿ ಅನ್ನುವ ಧ್ವನಿ ಡಬ್ಬಿಂಗ್ ಪರ ಗ್ಯಾಲರಿಯಿಂದ ಹೊರಟಿದ್ದು ಕೂಡ ಸೂಕ್ತವಾಗಿತ್ತು.

ನಂತರದ ಸರದಿ ನಟ ಪ್ರೇಮ್ ಅವರದ್ದು.ಅಭಿಮಾನಿಗಳನ್ನು ಪ್ರೆಕ್ಷಕರನ್ನು ಈ ರೀತಿ ತುಚ್ಚಿಕರಿಸಿ ಮಾತಾಡೋದು ಸರಿಯಲ್ಲ, ನಿಮ್ಮ ಥಿಯೇಟರ್ ಸಮಸ್ಯೆ ನೀಗಿಸಲು ಹೋರಾಡಿ ಜೈಲೂ ಸೇರಿದವರು ನಾವು ಇಲ್ಲಿರುವ ಯಾವ ಘಟಾನುಘಟಿಗಳು ವಿಚಾರಿಸಲು ಬಂದವರಲ್ಲ, ಸೌಜನ್ಯ ತೋರಿಸದ ಮಂದಿಗಳು ಪಾಠ ಹೇಳೋದು ಬೇಕಾಗಿಲ್ಲ, ನಿಮಗೆ ತೆಲುಗು ಸುಲಲಿತವಾಗಿ ಬರಬಹುದು ನಮಗೆ ಬರಲ್ಲ ಸ್ವಾಮಿಗಳೆ ಅದೇನು ಮಾತಾಡೋದಿದ್ದರು ಕನ್ನಡದಲ್ಲೆ ಮಾತಾಡಿ. ದಯಮಾಡಿ ಕುಟುಂಬ ಸಮೇತರಾಗಿ ನೋಡುವ ಚಿತ್ರಗಳನ್ನೆ ಕೊಡುತಿದ್ದೇವೆ ಅನ್ನೋ ಬೂಸಿಯನ್ನು ನಮ್ಮೆದುರು ಆಡದಿರಿ ಎಂದು ಡಬ್ಬಿಂಗ್ ಪರ ಗ್ಯಾಲರಿ ಮಂದಿಯಿಂದ ಹೇಳಿಸಿಕೊಂಡು ವಿಚಲಿತವಾಗಿದ್ದರು ಪ್ರೇಮ್.ಚರಿತ್ರೆ ಇತಿಹಾಸ ಹೇಳುತ್ತ ಔರಂಗಜೇಬ್ ಅಕ್ಬರ್ ಕಥೆ ಜೊತೆ ಕಾಗಕ್ಕ ಗುಬ್ಬಕ್ಕ ಅನ್ನುತ್ತಾ ಮುಂದುವರಿದವರು ರಾಜೇಂದ್ರ ಸಿಂಗ್ ಬಾಬುರವರು. ಇದೆ ರಾಜೇಂದ್ರ ಸಿಂಗ್ ಬಾಬುರವರು ತೆಲುಗು ಚಿತ್ರವೊಂದನ್ನ ನಿರ್ಮಿಸಿ ಅದುನ್ನ ಕನ್ನಡಕ್ಕೆ ಡಬ್ ಮಾಡಿ ಜೇಬುತುಂಬಿಸಿಕೊಂಡ ವಿಷಯ ನೆನಪಿಗೆ ಬಂದು ಮಾತಾಡಲು ಅವಕಾಶವಿಲ್ಲದೆ ಕೂತಿದ್ದವರು ನಾವು.ತಕ್ಕ ಉತ್ತರಗಳು ಸಿನಿಮಾ ಗ್ಯಾಂಗ್ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ನಮ್ಮ ಗ್ಯಾಲರಿಯಿಂದಲೂ ಹರಿದಿತ್ತು.ಇಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಲು ಇಚ್ಚಿಸುವದೇನೆಂದರೆ ಕಾರ್ಯಕ್ರಮದಲ್ಲಿ ಈ ರೀತಿಯಾಗಿ ಪಾಲ್ಗೊಳ್ಳುವದು ನಮಗೂ ಬೇಕಾಗಿರಲಿಲ್ಲ ಯಾವಾಗ ನಮ್ಮ ಮಾತುಗಳನ್ನೆ ಕೇಳುವ ಸಹನೆಗಳು ಸಿನಿಮಾ ಗ್ಯಾಂಗ್ ನಲ್ಲಿ ಇಲ್ಲವಾಯಿತೊ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ರಿಯಾಕ್ಟ್ ಮಾಡೊದು ಕೂಡ ಅನಿವಾರ್ಯವಾಗಿತ್ತು ಹಾಗೂ ಅದು ಸ್ವಾಭಿಮಾನಿ ಕನ್ನಡಿಗರಾದ ನಮ್ಮ ಕರ್ತವ್ಯವೂ ಹೌದು.

ತನ್ನದೆ ಕ್ಷೇತ್ರದ ಈ ಮಂದಿಯ ಹುಚ್ಚಾಟವನ್ನು ನೋಡಿ ಏನೊಂದು ತಿಳಿಯದೆ ಸುಮ್ಮನಾಗಿದ್ದು ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಬಂದಿದ್ದ ನಾಗತೀಹಳ್ಳಿ ಚಂದ್ರಶೇಖರ್. ಲಾಜಿಕ್ ಅನ್ನುವದರ ಅರ್ಥನೆ ಗೊತ್ತಿರದ ಈ ಮಂದಿಯನ್ನು ಸಮರ್ಥಿಸಬೇಕಾದ ಅನಿವಾರ್ಯತೆಯೊಳಗೆ ತೀರ್ಪು ಕೊಡಬೇಕಾಗಿದ್ದ ಜಡ್ಜ್ ಮೈಕ್ ಕೆಳಗಿರಿಸಿ ಮೌನವಾಗಿದ್ದು ಸೂಕ್ತವೆ ಆಗಿತ್ತು.ಸಿನಿಮಾ ಮಂದಿಯ ಅಸಹನೆ ಇಷ್ಟಕ್ಕೆ ಮುಗಿಯದೆ ತಾಳ್ಮೆಯಿಂದ ಇವರ ಹುಚ್ಚಾಟಕ್ಕೆ ವೇದಿಕೆ ಕೊಟ್ಟ ಚಾನಲ್ ಮಂದಿಗೆ ಹಾಗು ಭಾಗವಹಿಸಿದ ಕಾರ್ಯಕ್ರಮಕ್ಕೆ ಒಂದಷ್ಟು ಉಗಿದು ಇತಿಶ್ರೀ ಹಾಡಿದ್ದರು.ಇವರೆಲ್ಲರನ್ನೂ ಏಕಾಂಗಿಯಾಗಿ ಎದುರಿಸಿದ್ದು ಶ್ರೀಯುತ ದಿನೇಶ್ ಕುಮಾರ್, ಸಿನಿಮಾದವರ ಮಾತನ್ನು ಅವರಿಗೆ ತಿರುಗಿಸಿ ಹೇಳೋದಾದರೆ ಚೈಲ್ಡುಗಳಿಗೆ ಇನ್ನೆಷ್ಟೂ ಮಂದಿ ತಗುಲಿಕೊಳ್ಳೊದು, ನಮುಗೆ ಕರುಣೆ ಎಂಬುದಿಲ್ವೆ. ದಿನೇಶ್ ಕುಮಾರ್ ಎತ್ತಿದ ಪ್ರಶ್ನೆಗಳಿಂದ ಸದ್ಯಕ್ಕೆ ಚೇತರಿಸಿದರೆ ಸಾಕು.ಆ ಲಕ್ಷಣಗಳು ಕಡಿಮೆ ಅದು ಬೇರೆ ಮಾತು.

ಎಡಬಿಡಂಗಿ ವಾದಗಳು, ವಾದಗಳಿಂದ ಜಾಸ್ತಿ ಪಾಳೆಗಾರಿಕೆ ಮಾತುಗಳು ಕನ್ನಡ ಜನರ ಮುಂದು ಬಯಲಾಗಿತ್ತು.ಜನರ ನಿಲುವುಗಳು ಏನು? ಜನಗಳು ಏನನ್ನ ಬಯಸುತ್ತಿದ್ದಾರೆ ಅನ್ನುವದನ್ನು ಕೇಳಲು ತಯಾರಿಲ್ಲದ ಸಿನಿಮಾ ಮಂದಿ ಈ ಬಗ್ಗೆ ಚರ್ಚೆ ನಡೆಯಬೇಕು ಅನ್ನುತ್ತಲೆ ಡಬ್ಬಿಂಗ್ ಬೇಡ ಕನ್ನಡವೆ ನಾಶವಾಗುತ್ತೆ ಅನ್ನೊ ಮಾತುಗಳನ್ನು ಆಡುತ್ತಾರೆ, ಹೀಗಿದ್ದಾವಾಗ ಇದುನ್ನ ಯಡಬಿಡಂಗಿ ವಾದ ಅನ್ನದೆ ಬೇರೆ ಯಾವ ಹೆಸರನ್ನು ನೀಡದೆ ಇರೋದೆ ಒಳಿತು.ಇದೆಲ್ಲವನ್ನೂ ಬಿಟ್ಟು ತನ್ನ ಉದ್ಯಮದ ಕುರಿತಾಗಿ ಮಾತ್ರವಲ್ಲದೆ ಪ್ರೇಕ್ಷಕನ ದೃಷ್ಟಿಯಲ್ಲಿ ಇಟ್ಟುಕೊಂಡು ಕೂಡ ಸಿನಿಮಾ ಮಂದಿ ಆತ್ಮಾವಲೋಕನ ಮಾಡಿಕೊಂಡರೆ ಒಳ್ಳೇದು, ಬಹುಶಃ ಇದು ಕಷ್ಟ ಸಾಧ್ಯ. ಕನಿಷ್ಟ ಅಶ್ಲೀಲ ಬೈಗುಳ, ಅಶ್ಲೀಲ ಸನ್ನೆಗಳು, ಹೊರಗೆ ಬಾ ನೋಡ್ಕೋತಿನಿ ಎನ್ನುವ ಧಮಕಿಗಳು, ಗೂಂಡಾಗಿರಿ ಇತರರ ಮಾತುಗಳನ್ನು ಕೇಳಿಸಿಕೊಳ್ಳಲಾಗದಷ್ಟು ಅಸಹನೆ, ಪಾಳೇಗಾರಿಕೆಯ ಪ್ರದರ್ಶನ , ನನ್ನ ಕೊಳೆತ ಸರಕುಗಳೆ ಹೆಚ್ಚು ಅನ್ನುವ ನಿಲುವುಗಳು ವರ್ತನೆಗಳನ್ನು ಬಿಡದಿದ್ದಲ್ಲಿ ಕನ್ನಡಿಗರಾದ ನಾವುಗಳು ಜಾಗೃತರಾಗಬೇಕಾದ ಅನಿವಾರ್ಯತೆ ಇದೆ.ಇಂತದ್ದೊಂದು ಪರಿಸ್ಥಿತಿಯನ್ನು ತಂದುಕೊಳ್ಳದಿರುವದು ಎಲ್ಲರ ಹಿತ ದೃಷ್ಟಿಯಿಂದ ಒಳ್ಳೆದು.

Wednesday, May 2, 2012

ಮಳೆ ಪಚೀತಿ ಜೊತೆ ನನ್ ಬೈಕ್ ಕ್ಯಾತೆ.

ಎಕ್ಸಲೇಟರ್ ತಿರುವುತ್ತನೇ ಇದ್ದೆ ಗಾಡಿ ಕಿರುಚಾಡುತ್ತಾನೆ ನಡೆದಿತ್ತು.ಅಕ್ಕಪಕ್ಕ ಜನ ಟೂ ವೀಲರ್ ತಳ್ಳುತ್ತನೆ ಇದ್ರೂ ಅವರೆಲ್ಲರೆದುರಿಗೆ ನಾನ್ ಬೈಕಲ್ಲಿ ಸವಾರಿ, ಒಂದು ಸಲ ಪಾರಾದ್ರೆ ಸಾಕು ಇಲ್ಲಿಂದ ಅನ್ನೊ ಧಾವಂತ ನನ್ನದು.ಅಲ್ಲಲ್ಲಿ ಮುಂದೆ ಸಾಗದೆನೆ ನಿಂತ ಪೋರ್ ವೀಲರ್ಗಳು ಇತರವು, ಚಾಲಕರ ಪರದಾಟಗಳನ್ನು ನಾ ನೋಡುತ್ತನೆ ಸಾಗಿದ್ದ ನನ್ ಮೊಬೈಕು ಇನ್ನು ಮುಂದೆ ಸಾಗಲಾರೆ ಎಂದು ಕಿರುಚಾಡುವದನ್ನು ನಿಲ್ಲಿಸಿ ಮೌನವಾಗಿತ್ತು.ಬೇರೆ ಉಪಾಯ ಕಾಣದೆ ಮೊಣಕಾಲುದ್ದ ನೀರಲ್ಲಿ ಇಳಿದೆ, ನನ್ ಬೈಕಿನ ಮುಕ್ಕಾಲು ಚಕ್ರ ನೀರಲ್ಲಿ ಮುಳುಗಿತ್ತು. ರಾತ್ರಿ ಹನ್ನೊಂದು ದಾಟಿದ ಆ ಸಮಯದಲ್ಲಿ ಅದಾಗಲೆ ಒಂದು ಘಂಟೆಗೂ ಹೆಚ್ಚು ಕಾಲ ಮಳೆಯಿಂದ ಪಾರಾಗಲು ಮಾರ್ಗ ಬದಿಯ ಬಸ್ ಸ್ಟಾಂಡನ್ನು ಆಶ್ರಯಿಸಿದ್ದ ನಾನು ಮನೆತಲುಪ ಬೇಕಾದ ಧಾವಂತ ಒಂದು ಕಡೆ ಅದರೆ ಪರಿಸ್ಥಿತಿ ಇಂತು. ಅಂದ ಹಾಗೆ ನಾನೆಲ್ಲೊ ಹಳ್ಳ ಕೊಳ್ಳದಲ್ಲಿ ಸಾಹಸ ಮಾಡೊ ಪ್ರಸಂಗವನ್ನು ವಿವರಿಸುತಿಲ್ಲಾ ಇಲ್ಲಿ. ಬೆಂಗಳೂರೆಂಬ ಮಹಾನಗರದಲ್ಲಿ ಒಂದು ಘಂಟೆ ಸುರಿದ ಭಾರಿ ಮಳೆಯ ನಂತರ ನಾ ಪಟ್ಟ ಪಡಿಪಾಟಲನ್ನ ಹೇಳುತ್ತಿರುವದು. 

ಮಗುವನ್ನು ಹೆಗಲಿಗಾನಿಸಿಕೊಂಡು ಬೈಕ ದೂಡುತ್ತಿರುವ ತನ್ನ ಗಂಡನ ಹಿಂಬಾಲಿಸಿ ಮೊಣಕಾಲುದ್ದ ನೀರಲ್ಲಿ ನಡೆಯುತ್ತಾ ಸಾಗುತಿದ್ದ ಮಹಿಳೆಗೆ ಅದೇನನ್ನಸಿತೋ ಏನೋ ಮಗುವನ್ನು ಹೆಗಲಿನಿಂದಿಳಿಸಿ ನೀರಲ್ಲಿ ಆಡಕ್ಕೆ ನಿಂತಿದ್ದಳೂ ಆ ಅಪರಾತ್ರಿ. ಆಕೆಯ ಗಂಡ ಮುಸುಡಿ ಓರೆ ಮಾಡ್ಕೊಂಡು ಅದೇನೊ ಅಂದಿದ್ದಕ್ಕೆ ಮತ್ತೆ ತಿರುಗಿ ಮಗುವೆತ್ತಿ ನಡೆದಿದ್ದಳು.ಮಗದೊಂದು ಕಡೆ ಆಕೆ ಬೈಕ ಹಿಂಬದಿ ದೂಡುತಿದ್ದರೆ ಅವನೊ ಬೈಕ ಹಾಂಡಲ್ ಹಿಡಿದು ತಳ್ಳುತಲಿದ್ದ. ರಾತ್ರಿ ಮನೆ ಸೇರಬೇಕಾದ ಆ ಜೋಡಿ ನೀರಲ್ಲಿ ನೆನೆದು ಹಿಪ್ಪೆಯಾಗಿತ್ತು.ಗುರಾ ಗುರ್ರನೆ ಕಿರುಚಾಡುತ್ತಾ ಕಾರುಗಳು ಸಾಗುತಿದ್ದರೆ ಅದರೊಳಗೆ ಕುಂತಿದ್ದ ಮಕ್ಕಳ ಕಿರುಚಾಟ ನೀರಿನ ಸದ್ದಿನೊಂದಿಗೆ ಸೇರಿ ಹೊಸ ಸೌಂಡು,ನಡು ನಡುವೆ ನೀರನ್ನು ಸೀಳಿ ಕೊಂಡು ಸಾಗಿ ಬರುತಿದ್ದ ಭಾರಿ ವಾಹನಗಳು ಕೃತಕ ಅಲೆಯೆಬ್ಬಿಸುತಿದ್ದವು, ಬೈಕ ತಳ್ಳೊ ಸವಾರರು ಮೊದಲೆ ಮೊಣಕಾಲುದ್ದ ನೀರು ಜೊತೆಗೆ ವಾಹನಗಳು ಎತ್ತರಕ್ಕೇರಿಸೋ ನೀರು ಯಾಕ್ ಕೇಳ್ತೀರಾ ಪಡಿಪಾಟಲು.ಈ ನಡುವೆ ನನಗ್ಯಾಕೊ ಇದ್ದಕ್ಕಿದ್ದಂತೆ ನೆನಪಾಗಿದ್ದು ಡ್ರೈನೇಜ್ ನೀರು ಕೂಡ ಈ ಮಳೆ ನೀರಿನೊಂದಿಗೆ ಸೇರಿರುತ್ತೆ ಅಲ್ವಾ???? ಯಾಕೊ ವಾಕರಿಕೆ ಬಂದಂಗಾತು.ಪುಣ್ಯ ಊಟ ಮುಗಿಸಿಲ್ಲವಿತ್ತು ಅದಕ್ಕಾಗಿ ಬೇರೇನೊ ತೊಂದರೆ ಆಗಿರಲಿಲ್ಲ, ಆದರೆ ಹಂಗೆ ನೆನಸಿಕೊಂಡ ಕ್ಷಣದಿಂದ ಮೂಗಿಗೆ ಎಂಥದೋ ವಾಸನೆ ಬಡಿದಂಗಾಗಿತ್ತು, ನಿಜವಾಗಿ ವಾಸನೆ ಬಡಿದಿತ್ತೋ? ಅಥವಾ ನನ್ ಭ್ರಮೆನೊ ಯಾವನಿಗೊತ್ತು?.ಒಟ್ಟಲ್ಲಿ ನಾನಿಷ್ಟ ಪಡೊ ಮಳೆಯ ಪರಿಣಾಮಗಳು ಈ ಪರಿ ಕಾಡಿದ್ದು ಹಿಂಸೆ ಅನಿಸತೊಡಗಿತ್ತು. ಒಮ್ಮೆ ಈ ತುಂಬು ನೀರನ್ನು ದಾಟಿದರೆ ಸಾಕಪ್ಪಾ ಎನಿಸಿ ಮತ್ತಷ್ಟು ಜೋರಾಗಿ ಗಾಡಿ ತಳ್ಳತೊಡಗಿದ್ದೆ.ಒಟ್ಟಲ್ಲಿ ಮಳೆ ಮುದದ ಜೊತೆ ರಾಶಿ ಕಿರಿ ಕಿರಿಯನ್ನ ತಂದೊಡ್ಡಿತ್ತು.ಅದರೆ ನಿಜ ಪಚೀತಿ ಮುಂದಿತ್ತು. ನಾನೇನೊ ಈ ಸೀನ್ ಗಳನ್ನು ನೋಡಿಕೊಂಡು,ಅನುಭವಿಸಿಕೊಂಡು ನೀರಿಂದ ಪಾರಾಗಿ ಸಪಾಟಿ ಜಾಗಕ್ಕೆ ಬಂದು ನಿಂತಿದ್ದೆ ನನ್ನಂತೆ ಹಲವರು ಬಂದಿದ್ದರೆನ್ನಿ, ಬೈಕ ಮೇಲತ್ತಿ ಕಿಕ್ ಹೊಡಿಬೇಕಾದರೆನೆ ಗೊತ್ತಾಗಿದ್ದು ನನ್ನದೆ ಪ್ರೀತಿಯಿಂದ ನೋಡಿಕೊಂಡ ಬೈಕು ಕೂಡ ಈ ಪಾಟಿ ಕ್ಯಾತೆ ತೆಗಿಯುತ್ತೆ ಅಂತ.ಉಹೂಂ ಅದರ ಉಸಿರೆ ನಿಂತಿದೆ ಎಂದನಿಸಿತ್ತು.

ಇವ ಸೈಲೆನ್ಸರ್ ಮೂಲಕ ಹೊಟ್ಟೆ ಪೂರ್ತಿ ನೀರ ಕುಡಿದಿದ್ದ, ಸ್ಪಾರ್ಕ್ ಪ್ಲಗ್ ಬೇರೆ ನೀರಿಂದ ತೊಯ್ದು ಪೂರ್ತಿ ಎಂಜೀನ್ನೆ ಥಂಡಾ ಹೊಡೆದಿತ್ತು.ಕಿಕ್ ಹೊಡೆದರೇನು ಬಂತು ಫಲ ಹೊಟ್ಟೆಯೊಳಗಿನ ನೀರ ಬರಿದು ಮಾಡದೆ ಎಂಜಿನ್ನಿಗೊಂದಿಷ್ಟು ಕಾವು ಏರಿಸದೆ? ಟೂಲ್ ಕಿಟ್ ತೆಗೆದು ಸ್ಪಾರ್ಕ್ ಪ್ಲಗ್ ಬಿಚ್ಚಿ ಪೆಟ್ರೋಲ್ ಮೂಲಕ ತೊಳೆದು ಮತ್ತೆ ಫಿಟ್ ಮಾಡಿ ಕಿಕ್ ಹೊಡೆದರು ಉಹೂಂ ಸೌಂಡೆ ಮಾಡುತ್ತಿಲ್ಲ. ವೇಳೆ ನೋಡುತ್ತೇನೆ ಅದಾಗಲೆ ರಾತ್ರಿ ಹನ್ನೆರಡು ದಾಟಿತ್ತು. ಪಕ್ಕದಲ್ಲೆ ನನ್ನಂತೆ ಸಾಹಸ ಮಾಡಿ ಬೈಕ್ ಸ್ಟಾರ್ಟ್ ಮಾಡಿದವನಂದ ಒಂದಷ್ಟು ದೂರ ತಳ್ಳು ಅಮೇಲೆ ಸ್ಟಾರ್ಟ್ ಆಗಬಹುದೆಂದು.ಹಂಗಾಗುತ್ತೊ ಬಿಡುತ್ತೊ ಅವನೊಬ್ಬನಾದರು ಆ ಅಪರಾತ್ರಿ ನನ್ ಕಷ್ಟಕ್ಕೆ ಸ್ಪಂದಿಸಿದ ನೋಡಿ ಖುಷಿ ಕೊಟ್ಟಿತು ಬೇರೇನು ಉಪಾಯ ಕಾಣದೆ ಮತ್ತೆ ಗಾಡಿ ತಳ್ಳಲಿಡಿದೆ, ತೋಯಿಸಿಕೊಂಡ ಮೈಯಲ್ಲು ಬೆವರು ಸುರಿಯುತಿದ್ದುದು ನನ್ನರಿವಿಗೆ ಮಾತ್ರ ಬಂದಿತ್ತು. ಒಂದಷ್ಟು ದೂರ ತಳ್ಳೋದು ಮತ್ತೆ ಕಿಕ್ ಅದುಮೋದು ಸ್ಪಂದನೆ ಕೊಡದ ನನ್ ಗಾಡಿ ಬಗ್ಗೆ ಬೇಸರಿಸಿಕೊಂಡು ಮತ್ತೆ ನಡೆಯೋದು ಹೀಗೆ ಒಂದು ೨ ಕಿ ಮಿ ಸಾಗಿ ಮಾರತ್ ಹಳ್ಳಿ ಸೇರಿದ್ದೆ. ಯಾವುದಾದ್ರು ಅಂಗಡಿ ಬದಿ ಬಿಟ್ಟು ನಾಳೆ ಬಂದು ನೋಡ್ಕೊಳ್ಳೋದು ಈ ಮೊಬೈಕ್ ಯಪ್ಪನ್ನಾ ಅಂದುಕೊಂಡು ಕೊನೆಯ ಬಾರಿ ಎಂಬಂತೆ ೩-೪ ವರುಷದಿಂದ ಒಂದು ದಿನವು ತೊಂದರೆ ಕೊಡದ ನಿನಗೆ ಇವತ್ತೇನು ಬಂತು ರೋಗ, ಸ್ಟಾರ್ಟ್ ಆಗೋದಾದರೆ ಆಗು ಇಲ್ಲಾ ಇಲ್ಲೆ ಎಸ್ದು ಹೋಗೋದೆ ಖರೆ ಅನ್ನುತ್ತಾ ಕಿಕ್ ಹೊಡೆದು ಕಿವಿ ಹಿಂಡಿದೆ ಅಂತರಾಳದಿಂದ ಧ್ವನಿಯುಸಿರಿದಂತೆ ಗೊಗ್ಗರು ಗೊಗ್ಗರಾಗಿ ಕೂಗುತ್ತಾ ಸ್ಟಾರ್ಟ್ ಆಗಿತ್ತು ನನ್ ಬೈಕು.ಹಂಗ್ ಬಾ ದಾರಿಗೆ ನನ್ ಬಿಟ್ಟು ನಿನಗೂ ಇರಕ್ಕಾಗಲ್ಲ ಅಲ್ವಾ ಅಂತ ಸೀಟ್ ಮೇಲೆ  ಹೊಡೆದಿದ್ದೆ. ನನಗೆ ಜೀವ ಬಂದಂತ್ತಾಗಿತ್ತು ಮತ್ತೆರಡು ಭಾರಿ ಕಿವಿ ಹಿಂಡಿ ಗಾಡಿ ಗೇರ್ ಚೇಂಜ್ ಮಾಡಿ ಚಾಲು ಮಾಡಿ ಎಂಬತ್ತರಾಗೆ ಮನೆ ತಲುಪಿದ್ದೆ ೧೫ ನಿಮಿಷದಲ್ಲಿ,ಮನೆ ಚಾವಿ ತೆಗೆದು ಒಳಪ್ರವೇಶಿಸಿದಾಗ ಗೋಡೆ ಗಡಿಯಾರದ ಸಣ್ಣ ಮುಳ್ಳು ೨ ತೋರಿಸುತಿತ್ತು.

ಬೆಂಗಳೂರಿನಲ್ಲಿ ಭಾರಿ ಮಳೆ ಅಲ್ಲಲ್ಲಿ ಮನೆಗಳಿಗೆ ನೀರು ಪ್ರವೇಶ, ಕೃತಕ ನೆರೆ, ಮಳೆಯ ಸಿದ್ದತೆ ಪೂರ್ಣಗೊಂಡಿಲ್ಲ ಅಷ್ಟರಲ್ಲೆ ಮಳೆ ಬಂದಿದ್ದಕ್ಕೆ ಹಿಂಗಾತು ಅನ್ನೊ ಕಾರ್ಪೊರೇಟರ್ ಮೇಯರ್ ಗಳ ಒಕ್ಕಣೆ ಟಿವಿಯಲ್ಲಿ ಪ್ರತಿವರುಷದಂತೆ ಮಾಮೂಲಿ ಮಳೆ ನ್ಯೂಸ್ ನಂತೆ ಬರುತಿತ್ತು. ನಾನೊ ಒದ್ದೆಗೊಂಡ ಬಟ್ಟೆಯನ್ನು ಹಂಗೆ ಇಡಲಾಗದೆ ತೊಳೆದು ಸ್ನಾನ ಮುಗಿಸಿ ಹೊಟ್ಟೆ ಹಿಟ್ಟು ಬೇಯಿಸಿಕೊಳ್ಳುವ ವೇಳೆ ಇದಲ್ಲವೆಂದು ನಿರ್ಧರಿಸಿ ತಂಬಿಗೆ ನೀರು ಕುಡಿದು ಟಿವಿ ಎದುರು ಮಲಗಿದ್ದೆ. ಬೆಳಿಗ್ಗೆ ಎದ್ದು ಆಫ್ ಮಾಡಲು ಮರೆತ ಟಿವಿಯ ಅದೆ ನ್ಯೂಸ್ ಛಾನಲ್ ನಲ್ಲಿ ಗಡ್ಡ ಬಿಟ್ಟ ಜ್ಯೋತಿಷಿ ರಾಶಿ ಭವಿಷ್ಯ ಹೇಳುತಿದ್ದ, ಥಥ್ತೇರಿಕೆ ಎಂದು ಟಿ ವಿ ಆಫ್ ಮಾಡಿ ಎದ್ದಿದ್ದೆ.ಮಳೆಯ ವಿಷಯ ಚಾನೆಲ್ ಮಂದಿಗೂ ಬೇಡವಾಗಿತ್ತು ಮಗದೊಂದು ಮಳೆ ಸುದ್ದಿ ಸಿಗುವ ತನಕ!!!.