Sunday, February 17, 2013

ಹಣದುಬ್ಬರ

ಈ ದಿನಗಳಲ್ಲಿ…..

ಹೊತ್ತಿನ ಕೂಳಿಗೆ

ಬೆಳೆದ ಧಾನ್ಯ,ಬೇಳೆ,ಕಾಳು

ದಾಸ್ತಾನು ಮಳಿಗೆಗೆ ಸೇರಿ

ಬೆಳೆದ ಆತನದೆ ಮಡಿಲಿಗೆ

ಮತ್ತೆ ತಲುಪುವಲ್ಲಿ ಕಾಡುತಿದೆ ಹಣದುಬ್ಬರ


ಈ ದಿನಗಳಲ್ಲಿ……

ತಿನ್ನೋ ಕೂಳಿಗೆ ಮಾತ್ರವಲ್ಲ

ಬೆಲೆಯೇರಿದ ಬೆಳೆಯ ತಿಂದ

ಮಾನವನ ಮಸ್ಥಿಷ್ಕಕ್ಕೂ ಮದವೇರಿದೆ

ಕಾಂಚಾಣದೆಡೆಗೆ ಒಲವು ತೋರಿಪ ಅವನಿಗೆ

ಕುಳಿತೆದ್ದುನಿಂತರೂ ಕಾಡುತಿದೆ ಹಣದುಬ್ಬರ


ಈ ದಿನಗಳಲ್ಲಿ……..

ಮಾನವೀಯತೆಯೊಳಗೆ ಮಡಿವಂತಿಕೆಯ ಸೆರಗು

ಅವನೆಷ್ಟರ ಮಟ್ಟಿಗೆ ಉಪಕಾರಿ ಎಂಬುದರೊಳಗೆ

ನಿಂತಿದೆ ಸ್ನೇಹ ಸಂಬಂಧ…

ಸ್ವಾರ್ಥತೆಯತ್ತ ಕತ್ತು ಹಿಡಿದು ದಬ್ಬುತ್ತಿದೆ

ಸೆರಗೊಳಗೆ ಕಾಡುತಿದೆ ಹಣದುಬ್ಬರ.


ಈ ದಿನಗಳಲ್ಲಿ…….

ಎತ್ತರದ ಕನಸು ಎತ್ತರೆತ್ತರಕ್ಕೆ ಜಿಗಿದಿದೆ

ಅಗತ್ಯ ಖರ್ಚು ಹೊಂದಿಸುವದರಲ್ಲೆ ದಿನ ಮುಗಿದಿದೆ

ಬಡವನ ನೆತ್ತರು ಮತ್ತಷ್ಟೂ ಬಸಿಯುತ್ತಿದೆ

ಬಲ್ಲಿದನ ತೊಗಲು ತುಂಬಾ ಆತನದೆ ನೆತ್ತರು

ಕಣ್ಣೀರಲ್ಲಿ ತೊಯ್ದ ಆತನುಸಿರಲ್ಲೆ ಮೈ ಕಾಯಿಸಿಕೊಂಡು

ಗಹಗಹಿಸಿ ಕಾಡುತಿದೆ ಹಣದುಬ್ಬರ


ಈ ದಿನಗಳಲ್ಲಿ…..

ಪ್ರೀತಿ ತುಂಬಿದಾ ಆ ದಿನಗಳು ನೆನಪಾಗಿ ಉಳಿದಿದೆ

ಕಷ್ಟಗಳಿಗೆ ಜೊತೆಯಾಗೊ ಮಂದಿ ಮೋರೆ ತುಂಬಾ ಪರದೆ

ಮಾನವೀಯತೆ ಇಂಚಿಂಚೆ ಸಾಯುವ ಇಂದುಗಳಲ್ಲಿ

ಯೋಚಿಸುತ್ತಿರುವೆ ಹೊಟ್ಟೆಯ ಹಿಟ್ಟಿಗೆ ಹೊಡೆದಾಡೋ

ಶಿಲಾಯುಗ ಮತ್ತೆ ಬಂದಿದೆಯೆ ಎಂದು!!!


ಸಂಪಾದನೆ ಏರದ ಈ ದಿನಗಳಲ್ಲಿ ಶರವೇಗ ಪಡೆದಿದೆ ಹಣದುಬ್ಬರ

ಹಣವು ನಿಯಂತ್ರಿಸುವ ಮಾನವನ ಮಾನವೀಯತೆ

ಪೂರ್ತಿ ಅಳಿಯುವ ಮುನ್ನವಾದರೂ


ಇಳಿತ ಕಂಡೀತೆ ಈ ಹಣದುಬ್ಬರ????

Thursday, February 14, 2013

ನಿನ್ನ ಪ್ರೇಮದ ಪರಿಯ….

ಪ್ರೇಮಿಗಳ ದಿನದ ವಿಶೇಷ ಸಂಚಿಕೆಗಾಗಿ ಪಂಜು ಮ್ಯಾಗಝೀನ್ ಗಾಗಿ ಬರೆದದ್ದು..

ಓಯ್,
ಮೊದಲಿಗೆ ಹೇಳಿ ಬಿಡ್ತೀನಿ ಕೇಳು, ನಾ ಸುಮಾರಾಗಿ ಒಂದಷ್ಟು ಪ್ರೇಮ ಪತ್ರಗಳನ್ನ ಹಿಂದೆಯೂ ಬರೆದಿದ್ದೇನೆ, ಆದರೆ ಆ ಎಲ್ಲಾ ಪತ್ರ ಬರಿಯೋದಕ್ಕೂ ಮೊದಲು ಯೋಚಿಸುತಿದ್ದುದು ಇದನ್ನ ಯಾರಿಗೆ ಬರೀಲಿ ಎಂದು, ಕಾರಣ ಇಲ್ಲದಿಲ್ಲ ಕೊಡೋದಕ್ಕೆ ಕಲ್ಪಿತ ಸುಂದರಿಯರೆ ನನ್ನ ಮುಂದಿದ್ದದ್ದು….ಆದರೆ ಈ ಭಾರಿ ಈ ವಿಷಯದಲ್ಲಿ ನಾ ಅದೃಷ್ಟವಂತನೆ ಸರಿ, ಬರೆದಿಟ್ಟಿದ್ದನ್ನು ಕೊಡಲು ನೀನಿದ್ದಿ, ಜತನದಿಂದ ಪತ್ರವನ್ನು ಎತ್ತಿಟ್ಟು ನಿನ್ನ ತೆಕ್ಕೆಯಲ್ಲಿ ನನ್ನ ಬಂಧಿಸಿ “ಐ ಲವ್ ಯೂ” ಎನ್ನುತ್ತಿ ಎಂಬುದು ಗೊತ್ತಿರುವ ಕಾರಣ ನಿನ್ನದೊಂದು ಹೂ ಮುತ್ತಿನ ಆಸೆಯಲ್ಲಿ ಒಂದಷ್ಟು ನೆನಪನ್ನು ನೆನಪಿಸುವ ಪ್ರಯತ್ನ ನಡೆಸುತ್ತೇನೆ ಗೆಳತಿ, ವಿಶೇಷವೆಂಬ ಯಾವೊಂದು ನಿರೀಕ್ಷೆಗಳಿಲ್ಲದೆ ನನ್ನ ಹಂಗಂಗೆ ಒಪ್ಪಿಸಿಕೊಂಡು ಬಿಡು, ನಿನ್ನ ಮನದ ಹೂದೋಟದಲ್ಲಿ  ಚಂಗನೆ ನೆಗೆಯೊ ದುಂಬಿಯಾಗಿ ನಿನ್ನೊಳಗೆ ಅರಳಿ ನಿಂತ ಕುಸುಮಗಳನ್ನು ಹಂಗಂಗೆ ಅಘ್ರಾಣಿಸಿ ಸುತ್ತಿ ಬಿಡುವೆ.

ತಮಾಷೆಗೆ ಒಂದು ಮಾತು ಯಾವತ್ತೂ ಹೇಳುತ್ತಿರುವಂತೆ ಮತ್ತೆ ಹೇಳುತ್ತೇನೆ ಕೋಪಿಸಿಕೋಬೇಡ, ಅಲ್ಲೋ ಇಷ್ಟೊಂದು ಹುಡುಗರ ಮಧ್ಯೆ ನಾನೆ ನಿನಗಿಷ್ಟವಾಗಿದ್ದು ಏಕೆ? ಮತ್ಯಾಕೆ ಇದೆ ಕೇಳುತ್ತಿ ಅದು ವಿಧಿ ಬರಹ, ನನಗಿಷ್ಟವಾಯಿತು ಅಷ್ಟೆ ಎಂದೆನ್ನುತ್ತಿ ಎಂದು ಗೊತ್ತಿದ್ದರೂ ಈ ಪ್ರಶ್ನೆಯೊಂದು ಪ್ರಶ್ನೆಯಾಗೆ ಉಳಿದು ಬಿಟ್ಟಿದೆ ಕಣೆ, ಅನಗತ್ಯ ಪ್ರಶ್ನೆ ಅದರ ಚಿಂತನೆ ಆರೋಗ್ಯಕ್ಕೆ ಒಳ್ಳೇದಲ್ಲ ಬಿಡು, ಸರಿ ಮತ್ತೊಮ್ಮೆ ಕೇಳುವದಿಲ್ಲ. ನಿನ್ನ ನೋಡಿದ ಮೊದಲ ದಿನ ಗಂಭೀರ ವದನನಾಗಿ ಕೈ ಕಟ್ಟಿ ಕುಳಿತಿದ್ದೆ, ಕೊಬ್ಬಿನಾಂಶ ಜಾಸ್ತಿ ಎಂದು ತೋರಬಹುದಾದ ದೊಡ್ಡ ಹೊಟ್ಟೆ ಕಾಣದಿರಲೆಂದು ಪಡಿಪಾಟಲೂ ಪಟ್ಟಿದ್ದನ್ನೂ ಕಣ್ಣಂಚಿನಲ್ಲೆ ನೋಡಿ ಮನದಟ್ಟು ಮಾಡಿಕೊಂಡರೂ ನಿನಗೆ ನಾನೆ ಇಷ್ಟವಾಗಿ ಬಿಟ್ಟೆ. ಇದ್ದಿಲು ಕಪ್ಪಿನ ನನ್ನನ್ನೂ ಶ್ವೇತ ವರ್ಣದ ನೀನು ಅದೆಂಗೆ ಒಪ್ಪಿದೆಯೋ ತಿಳಿಯೆ. ಇದಕ್ಕಾಗೆ ನೀನು ಇತರರಿಗಿಂತ ವಿಭಿನ್ನವಾಗಿ ನನ್ನೆದುರು ನಿಲ್ಲುತ್ತಿ, ನನ್ನ ಸಂಪಾದನೆ ಬಗ್ಗೆ ನೀ ಕೇಳಿಲ್ಲ, ನನ್ನ ಬಾಹ್ಯಾಕಾರ, ಕಲರ್ ಬಗ್ಗೆ ಎಳ್ಳಷ್ಟೂ ಗಮನಹರಿಸಲಿಲ್ಲ. ಬದಲಾಗಿ ನನ್ನ ಕನಸುಗಳ ಬಗ್ಗೆ ಕೇಳಿದೆ, ನಿನ್ನ ಜೀವನದಲ್ಲಿ ನನ್ನ ಪಾತ್ರವೇನೆಂಬುದ ಕೇಳಿ ನನ್ನ ಅಭಿಪ್ರಾಯ ತಿಳಿದೆ, ಸುಖವಾಗಿಡಬಲ್ಲೆನೆ ನಾನು ಎಂಬುದನ್ನು ಖಾತ್ರಿ ಪಡಿಸಿಕೊಂಡೆ, ನಿನ್ನ ಸ್ವಾತಂತ್ರ್ಯಕ್ಕೆ ನಾ ಧಕ್ಕೆಯಾಗಲಾರೆನೆಂದು ನಿನಗನಿಸಿದ ಮರುಕ್ಷಣವೆ ನನ್ನ ಒಪ್ಪಿಸಿಕೊಂಡೆ. ಇದೆಲ್ಲವೂ ನನಗಿನ್ನು ಕನಸಿನ ಅರಮನೆಯ ಪಯಣ. ಒಳಗಣ್ಣನ್ನು ತೆರೆದು ನೋಡೊ ನಿನ್ನಂತ ಹೆಣ್ಣು ಜಗವೆಲ್ಲ ಇರಬಾರದೇಕೆ? ಹೆಣ್ಣು ಜಗವ ಪೊರೆಯುವ ಜೀವ ಎಂದು ನನ್ನಂತವ ಅಂದುಕೊಂಡಿದ್ದರಿಂದಲೆ ಇಂತಹ ಪ್ರಶ್ನೆ ನನ್ನೊಳಗೆ ಹುಟ್ಟೋದು. ಹೌದೋ ತಾಯಿಯೊಂದೆ ಸರ್ವಸ್ವ ಎನ್ನುತ್ತಾ ಇರುತಿದ್ದ ಕಾಲದಲ್ಲೆ ನೀ ಬಂದೆ ನನ್ನ ತಾಯಿ-ತಂದೆಗೆ ಮಗದೊಂದು ಹೆಣ್ಣು ಮಗಳಾಗಿ ನನ್ನ ತಂಗಿ ತಮ್ಮನೀಗೆ ಅಕ್ಕನಾಗಿ ನನ್ನ ಬಾಳಿನ ಅರ್ಧಾಂಗಿಯಾಗಿ, ನಿನ್ನಾರೈಕೆಯ ಪರಿಯ ನೋಡಿ ಒಮ್ಮೊಮ್ಮೆ ಅಂದುಕೊಳ್ಳುತ್ತೇನೆ ನನಗೀಗ ಈರ್ವರೂ ತಾಯಂದಿರೆಂದು., ಹಿರಿಯರು ಹೇಳಿದ ಮಾತು ಅವಾಗೆಲ್ಲಾ ನೆನಪಾಗುತ್ತದೆ “ಹೆಣ್ಣು ಮಾತೃ ಸ್ವರೂಪಿಯೆಂದು”.
ಇವತ್ತು ಪ್ರೇಮಿಗಳ ದಿನ, ಹರಿವ ನೀರಿಗೆ ಹೇಗೆ ಬಂಡೆಯ ಜಾತಿ ತಿಳಿದಿಲ್ಲವೊ, ಮರದ ಆಶ್ರಯ ಪಡೆದ ಹಕ್ಕಿಗೆ ಮರದ ಜಾತಿ ಹೆಂಗೆ ತಿಳಿದಲ್ಲವೊ ಅಂತೆಯೆ ಪ್ರೇಮಿಗಳ ಆಸ್ತಿಯಾದ ಈ ಪ್ರೀತಿಗೂ ಕೂಡ ಅದರ ಹುಟ್ಟು/ಜಾತಿ ತಿಳಿದಿಲ್ಲ!!!. ಅದಕ್ಕಾಗೆ ಪ್ರೀತಿಗೆ ಸಮಾಜದ ವರ್ಣಾಶ್ರಮವನ್ನು ಮೆಟ್ಟಿ ನಿಲ್ಲುವ ಹಲವು ವರ್ಣಗಳು ಇದೆ ಎಂದರೆ ನನ್ನ ಮಾತು ನಿನಗೆ ಅತೀ ಎನಿಸಲಾರದು ಮತ್ತಿದನ್ನು ಅರ್ಥೈಸಿಕೊಳ್ಳಬಲ್ಲೆ ಎಂಬ ಭರವಸೆ ನನಗಿದೆ. ಸಂಬಂಧಗಳೊಳಗಿನ ಪ್ರೀತಿ, ಸಂಬಂಧಗಳನ್ನಾಗಿಸುವ ಪ್ರೀತಿ ಹಾಗೂ ಹೊಸ ಸಂಬಂಧಗಳು ಏರ್ಪಟ್ಟು ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಜೀವನದಲ್ಲಿ ಒಂದಾಗಿ ನಡೆಯೋ ಪ್ರೀತಿ ಎಂಬುದಾಗಿ ಪ್ರೀತಿಯನ್ನು ವಿಭಜಿಸಿಕೊಂಡಲ್ಲಿ ನಾವೀಗ ಇರೋದು ಹೊಸ ಸಂಬಂಧಗಳು ಏರ್ಪಟ್ಟ ಪ್ರೀತಿ ಕೆಟಗರಿಯಲ್ಲಿ, ಈ ಮೂಲಕ ನಾವು ಸಂಬಂಧಗಳಾಗಿಸುವ ಪ್ರೀತಿಯ ಮೇಲೇರಿ ನಿಂತಿದ್ದೇವೆ ಹಾಗೂ ನನ್ನ ನಿನ್ನಯ ಪೂರ್ವಾಶ್ರಮದ ಸಂಬಂಧಗಳು ಅವರ ಪ್ರೀತಿಯನ್ನು ನನ್ನದು ನಿನ್ನದೆನ್ನದೆ ನಮ್ಮದಾಗಿಸಿ ಸಂಸಾರವೆಂಬ ಈ ಬಾಳನೌಕೆಯನ್ನ ಸುಖವೆಂಬ ದಡಕ್ಕೆ ಸೇರಿಸಬೇಕಾಗಿದೆ, ಅದರತ್ತ ನನ್ನ ನೀ ಕೈ ಹಿಡಿದು ನಡೆಸೀಯೆಂಬ ಭರವಸೆ ನನಗಿದೆ. ಅಷ್ಟಕ್ಕೂ ಪ್ರೀತಿ ಎನ್ನೋದು “ನಾನು ಎಂಬುದನ್ನು ಬದಿಗಿಟ್ಟು ನನ್ನದೆಲ್ಲವೂ ನಿನ್ನದೆ ಎಂದು ಸಮರ್ಪಿಸಿಕೊಂಡು ನಿನ್ನೊಳು ನನ್ನನ್ನು ಕಾಣುವ ಹಂಬಲ” ಎಂಬುದು ನಮಗೆ ನಾವೆ ಪ್ರೀತಿಗೆ ಕೊಟ್ಟ ಹೊಸ ವ್ಯಾಖ್ಯಾನವೆಂದಾದ ಮೇಲೆ ಎಲ್ಲವೂ ಸಾಧ್ಯವೆನ್ನುವ ಭರವಸೆ ಮೂಡಿದೆ. ಅದಕ್ಕೆ ಇರಬೇಕು ಹಿರಿಯರು ಹೇಳಿರೋದು ಪುರುಷನ ಯಶಸ್ಸಿನ ಹಿಂದೆ ಹೆಣ್ಣು ಇರುತ್ತಾಳೆ ಎಂದು, ಆದರೆ ನಾವೂಂಚೂರು ಬದಲಾವಣೆ ಮಾಡ್ಕೊಳ್ಳೋಣ ನಿನ್ನ ಯಶಸ್ಸಿಗೆ ನಾ ಬೆನ್ನಲುಬಾಗಿರ್ತೀನಿ ನನ್ನ ಯಶಸ್ಸಿನ ಹಿಂದೆ ಎಂತೂ ನೀನಿರ್ತಿ ಅಲ್ಲವೆ. ಈ ಬದಲಾವಣೆ ನಿನಗೊಪ್ಪಿಗೆನಾ? ಒಪ್ಪಿಗೆಯೆಂದಾದಲ್ಲಿ ಒಂದ್ ಸ್ಮೈಲ್ ಬಿಸಾಕು ನೋಡುವ!!!! ನಿನ್ನ ಆ ಮುಗುಳ್ನಗೆಯನ್ನ ಹಂಗಂಗೆ ಕ್ಯಾಚ್ ಹಿಡಿಯೋ ಪ್ರಯತ್ನ ನನ್ನಿಂದ ನಡೆದೆ ಬಿಡಲಿ…… ಇನ್ನೇನು ಬೇಕು ನನಗೆ!!! ನಿನ್ನ ಮೊಗದಲ್ಲಿ ಮುಗುಳ್ನಗೆಯೊಂದು ಲಾಸ್ಯವಾಡುತ್ತಿದ್ದರೆ ಸಾಕು ಅದೆ ನನ್ನ ಜೀವ ಚೈತನ್ಯ.

ಏನು ಕೋರಿತಾನಪ್ಪ ಎಂದನ್ನುಕೊಳ್ಳುತಿದ್ದಿಯಾ? ಸಹಜ ಬಿಡು ಫಿಲಾಸಫಿ ಬಗ್ಗೆ ಮಾತಾಡೋದಕ್ಕೆ ಇನ್ನೂ ಟೈಮಿದೆ, ನಾವಿನ್ನೂ ಶಿಶುಗಳು ಎಂಬ ಭ್ರಮೆಯೊಳಗೆ ಬದುಕುತ್ತಿರೋರು ಈ ಭ್ರಮೆ ಒಂದಷ್ಟೂ ದಿನ ಹಂಗಂಗೆ ಮುಂದುವರೀಲಿ… ನೀನೊಪ್ಪಿದರೆ ಪ್ರೇಮಿಗಳ ಈ ದಿನದಂದು ಒಂದು ಜಾಲಿ ರೈಡ್ ಹೋಗ್ ಬರೋಣ, ಹಕ್ಕಿಯಂತೆ ಮುದ್ದಾಡೊ ಹಾರಾಡೊ ಪ್ರೇಮಿಗಳ ಕಂಡು ಅವರ ಕಣ್ಣಾಸೆಗಳ ದಿಟ್ಟೈಸಿ ಮನತುಂಬಿಕೊಳೋಣ, ಪ್ರೇಮಿಸುವದರ ವಿವಿಧ ಆಯಾಮಗಳನ್ನು ಕಂಡುಕೊಳೋಣ, ಹೊಸದನ್ನು ಪ್ರಯೋಗಿಸುತ್ತಾ ಕೂತು ಕಲಿಯೋಕೆ ನಾವೇನೂ ಪ್ರಯೋಗ ಶಿಶುಗಳೆ? ಅಲ್ಲವೆಂದಾದ ಮೇಲೆ ಕಂಡು ಕಲಿಯೋಣ, ಹೀಗನ್ನುತ್ತೇನೆ!!! ಆದರೂ ನಂಗೊತ್ತಿದೆ ನಮ್ಮ ಪ್ರೇಮವೆ ದೊಡ್ಡದೆಂದು ಅದು ಹೇಗೆಂದರೆ ಉಳಿದೆಲ್ಲರಕ್ಕಿಂತಲೂ ನೀನೆ ಸುಂದರವಾಗಿ ನನ್ನ ಕಣ್ಣಿಗೆ ಕಂಡಂತೆ. ಏನೂ ಗಿಪ್ಟ್ ಕೊಡಿಸುತ್ತೀಯೆಂದು ಕೇಳಿದೆಯಾ???? ಹೂಂ ನನ್ನನ್ನೆ ನಿನಗರ್ಪಿಸಿದ ಮೇಲೆ ಇನ್ನೆಂತದೂ ಗಿಪ್ಟ್ ಮಣ್ಣಂಗಟ್ಟಿ ಎಂದರೆ ಏನ್ ಜಿಪುಣನಪ್ಪಾ? ಎಂದು ನೀ ಮುನಿಸಿಕೊಳ್ಳಬಹುದು ಆದರೂ ಏಕಾಂತದಲ್ಲಿ ಕೂತು ಯೋಚಿಸಿದಾಗ ಇದು ಹೌದಲ್ಲವೆ ಎಂದು ಎನಿಸೋಸು ಸತ್ಯ ಅಲ್ವೆ. ಇರಲಿ ನಿನಗಿಷ್ಟವಾದ ಬೇಯಿಸಿದ ಜೋಳ, ಕಡ್ಲೆ ಕಾಯಿ ಕೊಡಿಸಿಯೇನೂ, ಸಂಜೆ ಒಂದೊಳ್ಳೆ ಮಸಾಲೆ ದೋಸೆ ಅರ್ಧ ಕಫ್ ಟೀ ಮೆಲ್ಲುತ್ತಾ ನೀನ್ಯಾವಾಗಲೂ ಆಶಿಸುವ ಟೆಡ್ಡಿಬೇರ್ ಒಂದನ್ನು ನೆನಪಿಗೋಸ್ಕರ ಕೊಡಿಸಿಯೇನೂ. ಸದ್ಯಕ್ಕೆ ನಿನ್ನವನಾದ ನನಗೆ ಇದಕ್ಕಿಂತಲೂ ಹೆಚ್ಚಿನದೇನೂ ಹೊಳೆಯುತ್ತಿಲ್ಲ, ಪ್ರೇಮಿಗಳ ಪಾಲಿನ ಈ ದಿನಕ್ಕೆ ಮಾತ್ರ ನಮ್ಮಲ್ಲಿಯ ಪ್ರೀತಿ ಸೀಮೀತವಾಗದೆ ಪ್ರತಿದಿನದ್ದಾಗಲಿ ಈ ಹಿಂದಿನಂತೆ ಕೊನೆಯವರೆಗೂ ಎನ್ನೂತ್ತಾ ನಿನ್ನ ಜೊತೆಗೂಡಿ ಪ್ರೇಮಿಗಳೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯ ಕೋರುತಿದ್ದೇನೆ.

ಕೊನೆ ಮಾತು:- ಪ್ರೀತಿಗೊಂದು ಅಳತೆ ಮಾಪನ ಇಲ್ಲದ ಇಂದುಗಳಲ್ಲಿ ಪ್ರಶ್ನೆ ಮಾಡ್ತೀಯಾ? ನನ್ನೆಷ್ಟೂ ಪ್ರೀತಿಸುತ್ತೀಯೆಂದು?
ಉಂಗುಷ್ಟದಿಂದ ನೆತ್ತಿವರೆಗೆ, ನನ್ನ ಹೃದಯವನ್ನೆ ನಿನ್ನದೆಂದು ಬರೆಸಿ, ಈ ಜೀವವ ನಿನಗಾಗಿಸುವಷ್ಟು ಪ್ರೀತಿಸುವೆ, ಒಪ್ಪಿಸಿಕೋ ಎಂಬುದಷ್ಟೆ ನನ್ನುತ್ತರ.

ಅತಿಯಾಯಿಯಿತು ಎನ್ನುತ್ತೀಯೇನೋ? ಸಮಸ್ಯೆಯೇನಿಲ್ಲ ನನ್ನ ಕಲ್ಪಿತ ಸುಂದರಿ ಲವರ್ಸೂ ಹಿಂದೆ ಕನಸಲ್ಲಿ ಕಾಡಿ ಹಿಂಗೆ ಅನುತಿದ್ದರೂ. ನೀನು ನನ್ನ ಪಾಲಿಗೆ ಕನಸನ್ನು ನನಸಾಗಿಸಿದ ಅರ್ಧಾಂಗಿ. ಅದುಕ್ಕಾಗೆ ನಾ ನಿನ್ನ ಹೇಳೋದು ನೀ ನನ್ನ ಹಳೆ ಲವರ್ರೂ ಹೊಸ ಹೆಂಡ್ತಿ ಎಂದು, ರೇಗಿಸದಂಗಾತ ಚಿಂತಿಸ್ಬೇಡ, ಕೆ ಎಸ್ ಎನ್ ರ ಈ ಗೀತೆಯ ಸಾಲನ್ನು ಗುನುಗುತಿದ್ದೇನೆ ಕೇಳಿಸಿಕೊಂಡು ನಸು ನಕ್ಕು ಬಿಡು….

ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು…
ಹುಣ್ಣಿಮೆಯ ರಾತ್ರಿಯಲಿ
ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
ನಿನ್ನೊಳಿದೆ ನನ್ನ ಮನಸು…

ಇಂತು…
ನಿನ್ನ ಅನುದಿನದ ಪ್ರೇಮಿ.

-ರಾಘವೇಂದ್ರ ತೆಕ್ಕಾರ್

 


Tuesday, February 12, 2013

ಪ್ರೆಶ್ ಪ್ರೆಶ್ ಪ್ರೇಮ್ ಕಾವ್ಯ - ಚಾರ್ ಮಿನಾರ್


ಪ್ರೀತಿಸುವ ಜೀವಕ್ಕೆ ಕುಷ್ಠರೋಗ ಬಂದಿದೆ ಅಂದ್ರೂ ಪ್ರೀತಿಸ್ಬೇಕ್ರಿ ಕೊನೆ ತನ್ಕ.!!!! 

ಏಲ್ಲೋ ಇದ್ದವ್ರನ್ನು ಏನೇನೆಲ್ಲಾಗಿಸಿ ಅವ್ರ ಒಳಿತನ್ನು ಕಣ್ಣು ತುಂಬುಕೊಂಡು ತಾವೂ ಮಾತ್ರ ಹಾಗೆ ಇರುವ ಏಕೈಕ ಜೀವ ಎಂದ್ರೆ ನಮ್ಮನ್ನು ತಿದ್ದಿ ತೀಡಿ ಬೆಳೆಸಿದ ಮೇಷ್ಟ್ರುಗಳು ಕಣ್ರಿ!!!! 
ಇಂತವೆ ಗಿರಕಿ ಹೊಡೆಯೋ ಡೈಲಾಗ್ ಮಧ್ಯೆ ವ್ಯಕ್ತಿಯೊಬ್ಬನ ಏಳ್ಗೆಗೆ ಬೇಕಾದ ನಾಲ್ಕು ಸಂಬಂಧಗಳ ಸುತ್ತನೆ ಒಂದು ಕಥೆ ಕಟ್ಟಿಕೊಡುವ ಪ್ರಯತ್ನ ಚಾರ್ ಮಿನಾರ್ ಚಿತ್ರದ್ದು. ಸುಭದ್ರ ಜೀವನಕ್ಕೆ ಬೇಕಾದ ಈ ನಾಲ್ಕೂ ಪಿಲ್ಲರ್ಗಳು ಒಬ್ಬ ವ್ಯಕ್ತಿಗೆ ಸರಿಯಾಗಿ ದೊರೆತಲ್ಲಿ ಆತ ಯಶಸ್ಸು ಕಾಣಬಲ್ಲ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಸಮರ್ಪಕವಾಗಿದೆ ಮತ್ತೂ ಗೆದ್ದಿದೆ. 

ಸಣ್ಣ ಪುಟ್ಟ ಕೊರತೆಗಳ ಹೊರತಾಗಿಯೂ ಚಿತ್ರವೊಂದು ಪ್ರೇಕ್ಷಕನ ಜೀಬಿಗೆ ಸಂದ ಖರ್ಚಿಗೆ ನ್ಯಾಯ ಒದಗಿಸುತ್ತದೆ, ಹಳ್ಳಿ ಪರಿಸರದ ಚಿತ್ತಾರವನ್ನ ಚಂದ ಬಿಡಿಸಿಕೊಟ್ಟಿದ್ದಾರೆ ನಿರ್ದೇಶಕ ಚಂದ್ರು.ಅಲ್ಲಲ್ಲಿ ಒಂದಷ್ಟೂ ಕಥೆ ಎಳೆದಂತೆ ಭಾಸವಾದರೂ ಚಿತ್ರ ಕಥೆಯ ಮೇಲಿನ ಬಿಗಿ ಹಿಡಿತ ಈ ಕೊರತೆಯ ತೀವ್ರತೆ ಮನತಟ್ಟದಂದೆ ಮಾಸಿ ಬಿಡುತ್ತದೆ. 

ಚಿತ್ರದ ನಾಯಕನ ವಿಭಿನ್ನ ಗೆಟಪ್ಪುಗಳು ಹಾಗು ನಾಯಕ ಪ್ರೇಮ್ ನ ನವಿರು ನಟನೆ ಪ್ರೇಕ್ಷಕನಿಗೆ ಖುಷಿಕೊಡುತ್ತದೆ, ಈ ಚಿತ್ರದ ಮೂಲಕ ಪ್ರೇಮ್ ಗೊಂದು ಗಟ್ಟಿ ಬ್ರೇಕ್ ಸಿಕ್ಕಿದೆ ಎಂದರೆ ಅತಿಶಯೋಕ್ತಿ ಅನಿಸಲಾರದು.ಚಿತ್ರದ ನಾಯಕಿ ಮೇಘನಾದ್ದು ಮೊದಮೊದಲು ಚೆಲ್ಲು ಚೆಲ್ಲು ಚೆಲುವಿನಾಟವಾಗಿದ್ದರೆ ಚಿತ್ರ ಕ್ಲೈಮ್ಯಾಕ್ಸ್ ತಲುಪುತಿದ್ದಂತೆ ಜೀವನದ ಏಳು ಬೀಳಿನ ಚಿತ್ರಣ ಕೊಡುವ ಗಂಭೀರತೆಗೆ ತಲುಪುವ ಚೆಲುವಿನ ಪಾತ್ರ.ತಮ್ಮ ತಮ್ಮ ಪಾತ್ರಕ್ಕಂತೂ ಇಬ್ಬರೂ ನ್ಯಾಯ ಒದಗಿಸಿದ್ದಾರೆ. 

ನಮ್ಮ ಉನ್ನತಿಗೆ ಮೂಲ ಕಾರಣೀಭೂತರಾದ ಗುರುಗಳು ಹಾಗೂ ತಾ ಕಲಿತ ಶಾಲೆಯು ಒಂದು ಅಂತಸ್ತು ತಲುಪಿದ ಮೇಲೆ ನೆನಪಾಗಿ ಆ ಮೂಲಕ ಹಳೆಯ ಸಹಪಾಠಿಗಳೆಲ್ಲ ಮತ್ತೆ ಸೇರುವ ಒಂದು ಕಾರ್ಯಕ್ರಮ ಈ ಚಾರ್ ಮಿನಾರ್ ಚಿತ್ರದ ಮೇಲ್ನೋಟದ ಒಂದೆಳೆಯ ಕಥೆ, ಸಹಜವಾಗಿ ಶಾಲ ದಿನಗಳ ಬಾಲ್ಯ,ಇಡ್ಲಿ ತಿನಿಸುವ ಅಜ್ಜಿ, ಕುರಿ ಕಾಯ್ವ ಚಿತ್ರದ ನಾಯಕನ ತಂದೆ,ಇದೆಲ್ಲವಕ್ಕಿಂತ ಮುಖ್ಯವಾಗಿ ತನ್ನ ಸಹಪಾಠಿ ಚಿತ್ರದ ನಾಯಕಿ ರಾಧೆ ಆಕೆಯ ಉತ್ತೇಜನದಿಂದ ನಾ ಪಡೆದ ಇಂದಿನ ಸ್ಥಾನ ಎಲ್ಲವೂ ಚಿತ್ರದ ನಾಯಕ ಮೋಹನನೀಗೆ ನೆನಪಾಗೋದು ಆ ಮೂಲಕ ಚಿತ್ರ ಪ್ರೇಕ್ಷಕನೆದುರು ತೆರೆದುಕೊಳ್ಳುವದು ಈ ಕಾರ್ಯಕ್ರಮಕ್ಕೆ ಅಮೇರಿಕದಾ ಕಂಪೆನಿಯೊಂದರಲ್ಲಿ ಸಿಇಓ ಆಗಿರುವ ಈತ ಬರುವ ದಾರಿಯಲ್ಲೆ…… ಮುಂದಿನದ್ದು ಶಾಲೆಯ ಆ ಕಾರ್ಯಕ್ರಮ ಬಾರದ ರಾಧೆ….., ಕೊನೆಗೂ ಒಂದಾಗೋ ರಾಧಾ-ಮೋಹನರ ಅತ್ಯದ್ಬುತ ಕ್ಲೈಮ್ಯಾಕ್ಸ್. ಪ್ರೀತಿ ಎಂತಿದ್ದರೂ ಪ್ರೀತಿನೆ ಎಂಬ ಚಂದ್ರು ಅಂಬೋಣಕ್ಕೆ ಪ್ರೇಕ್ಷಕ ಫುಲ್ ಖುಷ್, ತುಂತುರು ಮಳೆ ಒಮ್ಮಲೆ ಭೋರ್ಗರೆದು ನಿಂತ ಅನುಭವಕ್ಕೆ ಪ್ರೇಕ್ಷಕನ ಮೌನದುತ್ತರ. 

ನವಿರು ಗೀತೆಗೆ ಜೊತೆಯಾಗಿದ್ದು ಹರಿಕೃಷ್ಣರ ಸೊಗಸಾದ ಸಂಗೀತ. ಲೋಕೇಶರ ಸಾಹಿತ್ಯ ತುಸು ಹೊಸ ಬಗೆಯದ್ದು ಎನಿಸಿದರೂ ಪ್ರೇಕ್ಷಕನೆದೆಗೆ ನಾಟುವಂತದ್ದು.ಚಂದ್ರಶೇಖರ್ ಕೆಮಾರಾ ವರ್ಕ್ ಕೂಡ ಚೆಂದಕ್ಕಿದೆ. ಹಾಟ್ ಹಾಟ್ , ಹೈ ಫೈ ಲವ್ ಸ್ಟೋರಿ ಅಲ್ಲದಿರಬಹುದು ಆದರೆ ಪ್ರೀತಿಯ ಜೊತೆ ಜೊತೆಗೆ ಇದರ ಸುತ್ತಲೂ ಗುರುಗಳು ಹೆತ್ತವರೂ ಸ್ನೇಹಿತರೂ ಎಂಭ ಪಿಲ್ಲರ್ಗಳನ್ನೂ ಕಟ್ಟಿಕೊಟ್ಟು ಕಥೆಯಾಗಿಸಿದ ಚಾರ್ ಮಿನಾರ್ ಪ್ರೀತಿಯ ಹೊಸ ಆಯಾಮವನ್ನು ಕೊಡುವ ಪ್ರೇಮಕಾವ್ಯವಾಗಿ ದಕ್ಕುವದರಲ್ಲಿ ಸಂದೇಹವಿಲ್ಲ, ಪ್ರೇಮಿಗಳ ದಿನ ಬೇರೆ ಹತ್ತಿರದಲ್ಲಿದೆ. ಜೋಡಿಯಾಗಿ ಹೋಗಿ ನೋಡ್ಬನ್ನಿ,ಪ್ರೇಮಿಗಳು ಅಷ್ಟೆ ಏಕೆ? ಒಂದು ಪ್ರೆಶ್ ಕಥೆ ಬೇಕು ಎಂದು ಬಯಸೋ ಎಲ್ಲಾ ಮಂದಿ ಹೋಗಿ ಕುಳಿತು ಅನಂದ ಪಡೋ ಚಿತ್ರ ಚಾರ್ ಮಿನಾರ್. ಚಿತ್ರ ನೋಡುತ್ತಾ ನೀವು ನಿಮ್ಮ ಪ್ಲಾಶ್ ಬ್ಯಾಕ್ ಬಾಗಿಲನ್ನು ತೆರೆದುಕೊಂಡು ಚಿತ್ರ ಸವಿಯಲಾಗಲಿಲ್ಲ ಕಥೆ ಏನೆಂದು ತಿಳೀಲಿಲ್ಲ ಎಂದು ಕೊರಗಿಕೊಂಡೀರಿ ಜೋಕೆ.

Saturday, February 2, 2013

ನಾನು ಬರೆದೇನೂ!!! (ದೊಡ್ಡ ಬರಹಗಾರನಲ್ಲದೋನ ಮಾತುಗಳು)

ಎಷ್ಟೊ ದಿನಗಳ ನಂತರ ಲೇಖನಿ ಹಿಡಿದಿದ್ದೆ ಒಂದಷ್ಟೂ ಏನನ್ನೋ ಬರೆದೆ ಕೂಡ. ಆದರೆ ಯಾಕೊ ಮನಸಿಗೊಪ್ಪುವಂತದ್ದೇನೂ ಬರೆಯಲೆ ಆಗುತ್ತಿರಲಿಲ್ಲ.ಭಯ ಶುರುವಾಯಿತು ಎಲ್ಲ ಮರೆತೆ ಬಿಟ್ಟನೆಂದು. ಮತ್ತೊಮ್ಮೆ ಕೊನೆಯ ಭಾರಿಗೆ ಪ್ರಯತ್ನಿಸೋಣವೆಂದು ಏನೋ 2 ಸಾಲು ಗೀಚಿದೆ, ಅದು ಹಾಗೆ ಮುಂದುವರಿಯೋದ,….. ಒಂದರ್ಧ ಘಂಟೆ ಹಂಗೆ ಬರಿಯುತ್ತಾನೆ ಹೋದೆ ಕೊನೆಗೆ ನೋಡುತ್ತೇನೆ ತಕ್ಕ ಮಟ್ಟಿಗೆ ನನಗೆ ಹಿಡಿಸುವಂತಹ ಒಂದು ಸಣ್ಣ ಕಥೆ ಬರೆದು ಮುಗಿಸಿದ್ದೆ.ನನಗೆ ಆಶ್ಚರ್ಯ… ಕಾರಣ ನಾ ಕಥೆ ಬರೆಯಲೆಂದಾಗಲಿ ಲೇಖನ ಬರೆಯಲೆಂದಾಗಲಿ ಕುಳಿತಿರಲಿಲ್ಲ ಆದರೂ ಒಂದು ಪ್ರಕಾರದಲ್ಲಿ ಬರೆದು ಮುಗಿಸಿದ್ದೆ, ಆ ಬರವಣಿಗೆಯ ರೀತಿ ಹೀಗಿತ್ತು…. 

ಉದಾಹರಣೆಗಾಗಿ ಮಾತ್ರ ಹಿಂಗೊಂದು ಸಂಭವವನ್ನು ನೀಡುತ್ತಿರುವೆ,,,,,, 

ಸುಮ್ಮನೆ ಒಂದು ಸಾಲು ಬರೆದೆ ಅದೆನೆಂದರೆ “ಅವನು ಕಾಡಿಗೆ ಹೋದ” 

ಹಿಂಗೆ ಬರೆದಾಗ ಮತ್ತೊಂದು ಪ್ರಶ್ನೆ ಕೇಳಿಕೊಂಡೆ ಅವನು ಹೇಗಿದ್ದ? 

ಸ್ಥುರದ್ರೂಪಿಯಾಗಿದ್ದರೂ ನೀಟಾಗಿ ಉಡುಪು ಧರಿಸಿರಲಿಲ್ಲ, ತಲೆ ಬಾಚದೆ ಅದೆಷ್ಟೋ ವರುಷವಾಗಿತ್ತು, 

ಅಬ್ಬ 2 ಲೈನ್ ಬರೆದು ಮುಗಿಸಿದೆ, ಸ್ವಲ್ಪ ಖುಷಿಯಾಯಿತು, ಅಷ್ಟೆ ಸಾಕೆ? ಮುಂದುವರಿಸಬೇಕಲ್ಲ, ಹೆಂಗೆ ಮುಂದುವರಿಸಲಿ, ಸರಿ ಅವನು ಯಾರು? ಅನ್ನೊದನ್ನ ಕಟ್ಟಿಕೊಡೋಣ ಎಂದುಕೊಂಡೆ.. 

ಆತನ ಬಗ್ಗೆ ತಿಳಿದರೆ ಆಶ್ಚರ್ಯವಾದೀತೂ, ಆತ ಆ ಊರ ಶ್ರೀಮಂತ ಮನೆತನದ ಒಬ್ಬ ಹುಡುಗ, ಹೆಸರು ಆದಿತ್ಯ…. 

ಇಷ್ಟು ಬರೆದು ಮುಗಿಸಿದಾವಾಗ ತಲೆಯಲ್ಲಿ ಹೆಂಗೆಲ್ಲಾ ಕಥೆ ಹೆಣಿಯಬಹುದು ಎಂಬ ಚಿತ್ರಣ ರೂಪುಗೊಂಡಿತು. ಕಾಡಿಗೆ ಹೋದ ಉದ್ದೇಶ? ಹೋಗಿ ಮಾಡುವಂತ ಕಾರ್ಯ? ಹೋಗಲು ಕಾರಣವಾದ ಅಂಶ?ಶ್ರಿಮಂತಿಕೆಯ ಬಗ್ಗೆ ಬೇಸರ ಹುಟ್ಟಿದ್ದಕ್ಕೋ?ಕೈ ಕೊಟ್ಟ ಪ್ರೀತಿ ಸಂಬಂಧವೋ? ಇವೆಲ್ಲದರ ಜೊತೆಗೆ ಕಥೆಯಿಂದ ಓದುಗನಿಗೆ ಏನು ಮೆಸೇಜ್ ಕೊಡಬಹುದು?ಎಂಬಿತ್ಯಾದಿ ಪ್ರಶ್ನೆ ನನ್ನೊಳಗೆ ರೂಪುಗೊಂಡವು. ಬಹುಶಃ ಈ ಪ್ರಶ್ನೆಗಳಿಗೆ ಉತ್ತರವೆಂಬಂತೆ ಬರೆಯುತ್ತಾ ಹೋದಲ್ಲಿ ಸೊಗಸಾದ ಕಥೆ ರೂಪ ಪಡೆಯೋದು ಗ್ಯಾರೆಂಟಿ. ಮೊದಲಿಗೆ ನಾನೊಂದು ಕಥೆ ಬರೆದೆ ಎಂದೆನಲ್ಲ? ಅದು ಈ ರೀತಿಯಾಗೆ ರೂಪುಗೊಂಡಿದ್ದು. 

ನನಗೊತ್ತಿಲ್ಲ ಬರೆಯೋದು ಎಂತೆಂದು? ಆದರೆ ನಾ ಬರೆಯೋದು ಇಂತು, ಸಿದ್ದತೆ ಮೂಲಕ ಬರೆಯೋದು ಒಂದು ತೆರನಾದಲ್ಲಿ ನಮ್ಮ ಬರವಣಿಗೆಯೆ ನಮ್ಮನ್ನ ಬರೆಸಿಕೊಂಡು ಸಾಗೋದು ಇಂತು ಎಂಬುದಷ್ಟನ್ನೆ ಹೇಳುತ್ತಲಿರುವೆ.ಬರವಣಿಗೆ ಇಷ್ಟು ಸುಲಭವೆ? ಹೌದು ಬರವಣಿಗೆಯ ಕಲೆ ಒಂದು ಸಲ ರೂಡಿಸಿಕೊಂಡರೆ ಬರವಣಿಗೆ ಕಷ್ಟದಾಯಕವಾದುದೇನಲ್ಲ, ಮೊದ ಮೊದಲಿಗೆ ಓದುಗನಿಗೆ ತುಂಬಾ ಹತ್ತಿರವಾಗುವಂತ ಬರಹವನ್ನು ಆ ಬಗೆಯ ವಿಷಯ ಇದ್ದಾಗಿಯೂ ಕೊಡಲು ಕಷ್ಟವಾದರೂ ಬರೆಯುತ್ತಾ ಬರೆಯುತ್ತಾ ಬರವಣಿಗೆ ಪಕ್ವತೆಯ ಪಡೆಯುವದನ್ನು ನಮಗೆ ನಾವೆ ಕಾಣಬಹುದು. ನಮ್ಮ ಸುತ್ತಲಿನ ಆಗು ಹೋಗುಗಳ ಬಗ್ಗೆ ನಮ್ಮೊಳಗೆ ಕೆಲವು ವಿಚಾರಧಾರೆಗಳು ನಮ್ಮದೆ ಆದ ಅಭಿಪ್ರಾಯಗಳು ರೂಪುಗೊಳ್ಳುತ್ತಿರುತ್ತದೆ, ಆ ನಮ್ಮ ಮನಸ್ಥಿತಿಯನ್ನೆ ಬರವಣಿಗೆಗೆ ಇಳಿಸಿದರಾಯಿತು, ಒಂದಷ್ಟು ಓದೊ ಹವ್ಯಾಸ ಜೊತೆಗಿದ್ದರೆ ಬರವಣಿಗೆ ಇನ್ನೂ ಸುಲಭ. 

ಬರವಣಿಗೆ ಎಂದರೆ ಮನದಲ್ಲಿ ನಡೆಯೋ ಪ್ರಶ್ನೋತ್ತರದ ಒಟ್ಟು ಪರಿಕಲ್ಪನೆ.ಒಂದು ಲೇಖನ ಬರೆದು ಮುಗಿಸಬೇಕಾದರೆ ಮನದೊಳಗೆ ಹತ್ತು ಹಲವು ಪ್ರಶ್ನೋತ್ತರ ನಡೆಯುತ್ತೆ ಈ ಮೂಲಕ ನಮ್ಮ ಚಿಂತನೆ ಒಂದು ಸ್ಪಷ್ಟತೆಯನ್ನು ಪಡೆಯುತ್ತದೆ ಎಂದರೂ ಅತಿಶಯೋಕ್ತಿ ಆಗಲಾರದು.ಆದರೆ ಈ ಪ್ರಶ್ನೋತ್ತರಕ್ಕೆ ವಿಷಯ ಸಂಬಂಧಿತವಾಗಿ ಒಂದು ಚೌಕಟ್ಟು ನಮಗೆ ನಾವೆ ಹಾಕಿಕೊಂಡು ಬರೆಯಬೇಕಾಗುತ್ತದೆ, ಇಲ್ಲವೆಂದಾದಲ್ಲಿ ಲೇಖನದ ವಿಷಯ ಯಾವ ಸಂಬಂಧಿತವಾಗಿ ಬರೆಯುತಿದ್ದೇವೊ ಅದು ಹೈಲೈಟ್ ಆಗದೆ ಲೇಖನಕ್ಕೊಂದು ಸ್ಪಷ್ಟ ರೂಪ ಸಿಗೋದು ಅಸಾಧ್ಯ ಯಾವುದೇ ಪ್ರಕಾರದ ಬರವಣಿಗೆಯೆ ಆಗಿರಲಿ ಬರೆದು ಮುಗಿಸಿದಾಗ ಮನಸ್ಸು ನಿರಾಳಗೊಳ್ಳುತ್ತದೆ, ಕಾರಣ ಇಷ್ಟೆ ನಮ್ಮ ಮನದೊಳಗಿನ ವಿಚಾರಗಳು ಪ್ರಶ್ನೋತ್ತರಗಳ ಮೂಲಕ ನಮ್ಮೊಳಗೆ ಚರ್ಚಿತಗೊಂಡು ಒಂದು ಅಂತ್ಯವನ್ನು ಕಂಡಿರುತ್ತದೆ , ಅಂದರೆ ಆ ವಿಚಾರ ಹಾಗೂ ಅದು ಕೊನೆಯಾಗಬೇಕಾದ ಬಗೆ ಎರಡೂ ಸ್ಪಷ್ಟಗೊಂಡಿರುತ್ತದೆ .ಇದೆಲ್ಲದರ ಒಟ್ಟು ಫಲಿತಾಂಶವೆ ನಿಮ್ಮ ಮನ ನಿರಾಳತೆ ಪಡೆಯುವದು ಆ ಮೂಲಕ ಪ್ರಪುಲ್ಲಗೊಳ್ಳುವದು. ಆದುದರಿಂದ ನಮ್ಮಯ ಬರವಣಿಗೆ ಇತರರೀಗೆ ಎಷ್ಟು ಹಿಡಿಸುತ್ತೋ ಬಿಡುತ್ತೊ ಅದು ಆಮೇಲಿನ ಪ್ರಶ್ನೆ ಆದರೆ ನಮಗೆ ಲಾಭದಾಯಕವಾಗಿ ಉಪಕಾರಿಯಾಗುವದಂತು ದಿಟ.ಒಂದು ವೇಳೆ ಓದುಗನಿಗೆ ಹಿಡಿಸಿಲ್ಲವೆಂದರೆ ಏನೂ? ಬರವಣಿಗೆ ನಿಮ್ಮನ್ನೊಮ್ಮೆ ಕೈ ಹಿಡಿಯೋದಷ್ಟೆ ಬೇಕಾಗಿರೋದು ಆಮೇಲಿದ್ದು ಓದುಗ ನಿಮ್ಮ ಬರವಣಿಗೆಯನ್ನು ಎದುರು ನೋಡೊದಷ್ಟೆ ಉಳಿಯೋದು. ನಾನು ಬರೆಯೋದು ನನಗಾಗಿ ಎಂದು ನಾ ಬಹಳಷ್ಟು ಸಾರಿ ಹೇಳಿಕೊಂಡಿರೋದು ಮೇಲಿನ ಕಾರಣಗಳಿಗಾಗಿ. 

ಪ್ರಾಥಮಿಕ ಶಿಕ್ಷಣ ಪಡೆಯುತ್ತಿರಬೇಕಾದರೆನೆ ನಮ್ಮ ಶಾಲೆಯ ಟೀಚರ್ಗಳು ಪ್ರಬಂಧ,ಕಥೆ ಅದಕ್ಕಾಗಿ ಅಲ್ಲಿ ಇಲ್ಲಿ ನಡೆಯುವ ಸ್ಪರ್ಧೆಗಳಿಗೆ ನಮ್ಮನ್ನು ಸಿದ್ದಗೊಳಿಸಿ ಕರೆದುಕೊಂಡು ಹೋಗೊ ಪರಿಪಾಠಗಳಿತ್ತು. ಇಂದು ಈ ನಿಟ್ಟಿನ ಶಿಕ್ಷಣ ಎಷ್ಟರ ಮಟ್ಟಿಗೆ ಜೀವಂತವಿದೆ ಅನ್ನೊದು ನಾ ತಲೆ ಕೆಡಿಸಿಕೊಳ್ಳದ ವಿಚಾರ.ಬಹುಶಃ ಆ ರೀತಿಯ ಅಂದಿನ ನಮ್ಮ ಚಟುವಟಿಕೆಗಳು ಇಂದು ಕೂಡ ನಮ್ಮೊಳಗೆ ಹಾಸುಹೊಕ್ಕಾಗಿರೊ ಫಲಿತಾಂಶವೆ ನಮ್ಮ ಬರವಣಿಗೆಗಳು. ಇಂದೆನಾದರೂ ಪುಸ್ತಕ ಓದೊ ಹವ್ಯಾಸ,ಬರವಣಿಗೆಯ ಆಸಕ್ತಿ ನನ್ನಲ್ಲಿದ್ದರೆ ಇದರ ಕ್ರೆಡಿಟ್ ಸೇರಬೇಕಾಗಿರೋದು ನನ್ನನ್ನು ಈ ರೀತಿಯಾಗಿ ರೂಪಿಸಿದ ನನ್ನ ಗುರುಗಳಿಗೆ ಹಾಗೂ ದಂಡಿಯಾಗಿ ಪುಸ್ತಕ ತಂದು ಸುರಿದು ಓದೆನ್ನುತಿದ್ದ ನನ್ನ ಹೆತ್ತವರೀಗೆ.ಸಾಮಾನ್ಯ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೆ ಓದಿರಬಹುದು, ಹೈ ಪೈ ಶಾಲೆಯ ಬಾಗಿಲು ಕೂಡ ಮುಟ್ಟಿ ನೋಡದಿರಬಹುದು ಆದರೆ ಅದುಕ್ಕಿಂತ ಹೆಚ್ಚಿನದನ್ನು ಈ ಶಾಲೆ ನಮಗೆ ಕೊಟ್ಟಿದೆ, ನಾ ಪಡೆದ ಶಿಕ್ಷಣ ಇಂಜಿನಿಯರ್ ಡಾಕ್ಟರ್ ಗಿರಿ ಸಂಪಾದಿಸಲು ( ನನ್ನ ಮಟ್ಟಿಗೆ ಮಾತ್ರ, ಕನ್ನಡ ಶಾಲೆಯಲ್ಲಿ ಕಲಿತ ಅತೀ ಹೆಚ್ಚಿನ ಮಂದಿ ಈ ಗಿರಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ) ಕಷ್ಟದಾಯಕವಾಗಿದ್ದಿರಬಹುದು ಆದರೆ ನಾ ಪಡೆದ ಶಿಕ್ಷಣ ನನಗೆ ಜೀವನ ಕ್ರಮ ಕಲಿಸಿಕೊಟ್ಟಿದೆ, ಅದರ ಫಲವೆ ನಮ್ಮೊಳಗೆ ಹುಟ್ಟುವ ವಿಚಾರಧಾರೆ, ಅದ ಪ್ರಸ್ತುತಪಡಿಸಲು ನಾ ಕಂಡುಕೊಂಡಿರೊ ಮಾರ್ಗವೆ ಬರವಣಿಗೆ. 

ನಮ್ಮಯ ಕಿರಿಯರೀಗೆ, ನಮ್ಮ ಮಕ್ಕಳೀಗೆ ಆಸ್ತಿ ಮಾಡಿ ಕೊಡಲಾಗಲಿಲ್ಲವೆಂದರೂ ಸರಿ ಜ್ಞಾನ ಆ ಮೂಲಕ ಚಿಂತನೆಗೆ ತೆರೆಯಬಲ್ಲುದಾದ ಮನಸ್ಸು ಅವರಿಗೆ ಮೂಡುವಂತೆ ಮಾಡೋಣ, ಆ ಮೂಲಕ ದೊಡ್ಡ ಆಸ್ತಿಯನ್ನಾಗಿ ಅವರನ್ನೆ ರೂಪಿಸೋಣ. ಹೆಚ್ಚೆಚ್ಚು ಪುಸ್ತಕ ಓದುವ ಹವ್ಯಾಸ ಅವರಲ್ಲಿ ಮೂಡುವಂತೆ ಮಾಡೋದು ಇದಕ್ಕಿರುವ ಸುಲಭ ದಾರಿ. 

ನೀವೇನೊ ತಿಳುಕೊಂಡಿದ್ದೀರಿ!!! ಬರೀತೀರಿ, ನಾವ್ ಲೋಕಲ್. ಅಂತ ನನ್ನ ಗೆಳೆಯನೊಬ್ಬ ನೀ ಇಷ್ಟೆಲ್ಲಾ ಮಾತಾಡ್ತಿ ಏನಾದರೂ ಬರಿಯಕ್ಕೆ ಟ್ರೈ ಮಾಡ್ಬಾರ್ದಾ ಎಂದು ನಾ ಹೇಳಿದಾಗ ನನ್ನ ಕಿಂಡಲ್ ಮಾಡಿದ ರೀತಿ… 

ನನ್ನುತ್ತರ ಹೀಗಿತ್ತು ಲೋಕಲ್ ಜೊತೆ ಲೋಕಲ್ ಆಗಿ ಚಿಂತಿಸಿದಾವಾಗಲೆ ಬರವಣಿಗೆ ಸುಲಭ ಸಾಧ್ಯ ಎಂದು.. 

ನನ್ನ ಮಟ್ಟಿಗೆ ನಾನೇನೋ ಜೀನಿಯಸ್ ಎಂದು ಮನುಷ್ಯ ಸಂಬಂಧದಿಂದ ದೂರವಾಗಿ ಏನನ್ನೊ ಬರೆಯಲು ಸಾಧ್ಯವಿಲ್ಲ, ಏನಾದರೂ ಬರೆಯೋದಾದರೆ ಫಿಲಾಸಫಿ ಬರೆದಾನೂ ಎಂದನ್ನುಕೊಳ್ಳುವಂತಲೂ ಇಲ್ಲ ಕಾರಣ ಅದು ಬರೆಯಕ್ಕೂ ಜಗತ್ತಿನೊಳಗೆ ಬೆರೆತ ಅನುಭವವಿರಬೇಕು, ಆದುದರಿಂದ ಬರವಣಿಗೆ ಎಂಬುದು ಎಲ್ಲರೊಂದಿಗೆ ಒಂದಾದೋರ ಆಸ್ತಿ,ಅದೇನೂ ಹಂಗಂಗೆ ಮಳೆಯಂತೆ ಮೇಲಿಂದ ಉದುರೋವಂತದ್ದಲ್ಲ.ಬರಹಗಾರ,ದೊಡ್ಡ ಹೆಸರು ಮಾಡಬೇಕು ಎಂದೆಲ್ಲಾ ಇಲ್ಲದ್ದು ಅನಿಸಿಕೊಳ್ಳುವ ಹಂಬಲ ಬಿಟ್ಟು ಮನದೊಳಗಿನ ತುಮುಲಗಳನ್ನು ಹೊರಗೆಡವುತ್ತಾ ರಿಪ್ರೆಶ್ ಆಗುವದಕ್ಕಾದರೂ ಬರೆಯೋಣ, ಸಮಾಜದಲ್ಲಿನ ಜನತೆ ಹೆಚ್ಚೆಚ್ಚು ಪುಸ್ತಕ ಓದುವಂತಾಗಲಿ ಬರೆಯಲಾರೆ ಎಂದು ಕೂತೋರು ನಾನು ಬರೆದೇನೂ!!! ಕೊನೆ ಪಕ್ಷ ಸಣ್ಣ ಪ್ರಯತ್ನ ಆ ಬಗ್ಗೆ ಮಾಡೋಣ ಎಂದು ಕಾರ್ಯೋನ್ಮುಖವಾದಾರೂ!!! ಎಂಭ ಆಶಯ ನನ್ನದು.ಹೌದು ಬರವಣಿಗೆ ಎನ್ನೋದು ಬರಿಯುತ್ತಾ ಹೋದಂತೆ ಬೆಳೆಯುತ್ತೆ ಜೊತೆ ಜೊತೆಗೆ ನಮ್ಮನ್ನೂ ಬೆಳೆಸುತ್ತೆ.