Sunday, April 15, 2012

ನಿನ್ನ ನೆನಪುಗಳೊಂದಿಗೆ.....

"ಸಾವಿಗೇಕೆ ಭಯ, ಸಾವು ನಿಶ್ಚಿತವೆಂದಾದ ಮೇಲೆ,ಇರುವ ಕೆಲವೆ ದಿನಗಳಲ್ಲಿ ಬದುಕನ್ನು ಬದುಕಾಗಿಸೋಣ ನಡಿ."

-ಗೆಳೆಯನೊಬ್ಬನ ಮಾತು.
ಪ್ರೀಯ ಗೆಳೆಯ,

ದಿನಗಳ ಹಿಂದೆ ಭೂಮಿ ಕಂಪಿಸಿತ್ತು ಗೆಳೆಯ,ಆಫ್ರೀನ್ ಅನ್ನೊ ಹಸಿಗೂಸು ಹುಟ್ಟಿಸಿದ ಅಪ್ಪನಿಂದಲೆ ಕೊಲೆಯಾದಳು ಗೆಳೆಯ,ಆತ್ಮೀಯನೊಬ್ಬ ಕರುಳ ಕ್ಯಾನ್ಸರ್ ಮಹಾಮಾರಿಯ ಜೊತೆ ಜಗಳಕ್ಕೆ ನಿಂತು ಬಿಟ್ಟಿದ್ದಾನೆ, ಹೀಗೆ ಏನೇನೊ ಸಂಕಟಗಳು, ನಿನ್ನೊಡೆ ಹಂಚಿಕೊಳ್ಳಬೇಕಿತ್ತು, ಅದರೆ ಹಂಚಿಕೊಳ್ಳಲು ನೀನಿವತ್ತು ಜೊತೆಗಿಲ್ಲ,ಕಾಲದ ಉರುಳಿನೊಳಗೆ ಬಂಧಿ ನಾನು, ನೀನೋ ಇದೆಲ್ಲವ ತೊರೆದು ನೀಲ ಆಗಸದಿ ನನ್ನ ನೋಡಿ ನಗುತ್ತಿದ್ದಿಯಾ?. ಇರಲಿ ಒಂದಷ್ಟು ನೋವು ಸಂಕಟದೊಂದಿಗೆ ನಿನಗೊಂದು ಓಲೆಯ ಗೀಚುತಿದ್ದೆನೆ, ಕಣ್ಣುಗಳು ತೇವಗೊಂಡಿವೆ ಕಣ್ಣ ಹನಿಗಳ ಗುರುತು ಈ ಪತ್ರದಲ್ಲಿ ಗೋಚರಿಸಿದರೆ ಒಪ್ಪಿಕೊ, ನಿನ್ನನು ಏಡ್ಸ್ ಎಂಭ ಮಹಾಮಾರಿ ಆಹುತಿ ತೆಗೆದುಕೊಂಡು ನೀ ಚಿತೆಗೇರಿ ಇವತ್ತಿಗೆ ಒಂದು ವರುಷವಾಯಿತಲ್ಲ, ಬರಿಯ ಆ ಕಹಿ ನೆನಪು ಮತ್ತೆ ಮತ್ತೆ ಒತ್ತರಿಸಿ ಬರುತ್ತಿರಲು ಒಂದಷ್ಟು ನಮ್ಮಯ ಸಿಹಿ ನೆನಪುಗಳು ಈ ಪತ್ರದ ಮೂಲಕವಾದರು ನೆನಪಾಗಲೆಂದು ಬರೆಯುತಿದ್ದೇನೆ.ನೆನಪಾಗೋ ಸಂಭವಗಳು ಕಡಿಮೆ ಆದರೂ ಸಣ್ಣದೊಂದು ಪ್ರಯತ್ನ.

ನಿನಗೆ ಈ ಖಾಹಿಲೆ ಬಂದಿದೆಯೆಂದು ಮೊದಲು ನನಗೆ ತಿಳಿಸಿದಿ ನೋಡು, ಅದಾಕೊ ಏನೊ ಒಂದು ಕ್ಷಣ ನಿನ್ನನು ಅನುಮಾನದಿಂದ ನೋಡಿದೆ, ಆಮೇಲೆ ಪಿಚ್ಚೆನಿಸಿಕೊಂಡಿದ್ದೆ, ನಿನ್ನ ಒಡನಾಡಿಯಾಗಿದ್ದ ನಾನೆ ಈ ಪರಿ ನಿನ್ನ ಸ್ವೀಕರಿಸಿದನೆಂದರೆ ಈ ಸಮಾಜ ನಿನ್ನ ಹೇಗೆ ಸ್ವೀಕರಿಸಿರಬೇಡ? ಹೌದು ನೀ ಬಹಳ ಅವಮಾನಿತನಾದೆ, ಅದರು ನಿನ್ನ ಬದುಕುವ ಛಲ ಅದಕ್ಕಾಗಿ ನಿನ್ನ ಪ್ರಯತ್ನಗಳ ನೆನೆದು ಅದ ನಾನಿವತ್ತು ಮೆಲುಕು ಹಾಕುತಿದ್ದೇನೆ,ಒಂದೆಂಟು ವರುಷ ಖಾಹಿಲೆಯೆ ಅರಿವನ್ನೆ ತಿಪ್ಪೆಗೆಸೆದು ನಾಳೆ ಎಂಬುದು ನನಗಿಲ್ಲ ನಾನೇನೆ ಮಾಡೋದಿದ್ದರು ಇವತ್ತೆ ಮಾಡಿ ಮುಗಿಸ್ತೀನಿ ಅಂತ ನಿರಂತರ ಕ್ರೀಯಾಶೀಲತೆಯಲ್ಲಿ ಬರಿಯ ಎಂಟು ವರುಷದಲ್ಲೆ ಬದುಕ ಗೆದ್ದು ಬಿಟ್ಟೀಯಲ್ಲ ಗೆಳೆಯ,ನಿನ್ನ ನಾ ಮರೆಯೋದಾದರು ಎಂತು? ಸರ್ಜಾಪುರ ರೋಡಿನಲ್ಲಿ ನಿನಗೆ ಬಾಧಿಸಿದ ಖಾಹಿಲೆಯ ಬಾಧಿತ ಮಂದಿಗೆ ಆಶ್ರಯವಾಗಲೆಂದು ನೀ ಕಟ್ಟಿದ ಸಂಸ್ಥೆಯ ಕಟ್ಟಡದ ಮೆಟ್ಟಿಲಿಗೊರಗಿ ನಿನ್ನ ಧ್ಯಾನಿಸುತ್ತಲೆ ಇರುತ್ತೇನೆ,ಅದಾಕೊ ಏನೊ ಊರಲ್ಲಿ ಕಾಡ ಮಧ್ಯದ ಎತ್ತರದ ಕಲ್ಲಿನಲ್ಲಿ ಕುಳಿತು ಹರಟುತಿದ್ದೆವಲ್ಲ ಅವೆಲ್ಲ ನೆನಪುಗಳೊಡೆ ಬಹಳ ಹೊತ್ತು ನಿನ್ನೊಳು ಅಲ್ಲಿ ನಾನಿರುತ್ತೇನೆ.ಸಾರ್ವಜನಿಕರು ಅದೇನೊ ದೆವ್ವ ಬಂಗಲೆನೊ ಎಂಭ ತರ ನೋಡುತ್ತಾರೆ ಕಾರಣ ಏಡ್ಸ್ ಭಾದಿತರು ಇದ್ದಾರೆ ಎಂಭ ಭೀತಿ ಅವರಿಗೆ,ಇಲ್ಲ ಗೆಳೆಯ ಮಾತಿಗೆ ಸಮಾಜ ಬದಲಾಗಿದೆ ಅನ್ನುತ್ತೇವೆ ಕೆಲ ವಿಷಯದಲ್ಲಿ ಅದು ಇನ್ನೂ ಕೂಡ ಕೊಳದ ನೀರೆ, ಹರಿವ ಸಾಮರ್ಥ್ಯ ತನಗಿದೆ ಎಂಬುದನ್ನು ಅದು ಮರೆತಿದೆ.

ಅದೊಂದು ಖಾಹಿಲೆ ಅದೇಗೊ ಬರುತ್ತೆ ಅದಕ್ಕೆ ಅದೆಷ್ಟೋ ಕಾರಣಗಳು, ಅದರೆ ಮಂದಿ ತಲೆಗೆ ಖಾಹಿಲೆಯ ಹೆಸರು ಕೇಳಿದೊಡನೆ ಅವರ ಯೋಚನೆ ನಿಲುಕುವದು ಆ ಮೂಲದೆಡೆಗೆ, ಪಾಪ ಅದೆಷ್ಟೋ ಪಾಪುಗಳು ಖಾಹಿಲೆಯೊಂದಿಗೆ ಜನ್ಮ ತೆಳೆಯುತ್ತದಲ್ಲ ಗೆಳೆಯ, ತಾಯಿಗೂ ಗೊತ್ತಿಲ್ಲದ ಆ ಖಾಹಿಲೆ ಹೊಕ್ಕುಳ ಬಳ್ಳಿ ಮೂಲಕ ಕಂದಮ್ಮನಿಗೆ ಪ್ರಸರಿಸಿಬಿಡುತ್ತದಲ್ಲ,ಪಾಪ ಕಂದಮ್ಮನದೇನು ತಪ್ಪಿದೆ? ಆದರೂ ಆ ಕಂದಮ್ಮ ಸಮಾಜದಿಂದ ದೂರ,ನಿನ್ನಂತೆ ತಿಳಿಯುವಿಕೆಯಿಲ್ಲದೆ ಖಾಹಿಲೆ ಬರಿಸಿಕೊಂಡವರು ಅದೆಷ್ಟೋ ಮಂದಿ, ಅದೊಂದು ಬೈಕಲ್ಲಿ ನೀ ಮಗುಚಿಕೊಂಡಿಲ್ಲದಿದ್ದರೆ ಅದಕ್ಕಾಗಿ ರಕ್ತ ಪಡೆಯದೆ ಇರುತಿದ್ದರೆ ನೀನು ಇವತ್ತೂ ಕೂಡ ನನ್ನೊಂದಿಗಿರುತಿದ್ದಿ, ಆದರೆ ಈ ಪರಿ ನಿನ್ನ ಹೆಸರು ಉಳಿಸುವಂತ ಕಾರ್ಯಗಳನ್ನು ಮಾಡುತಿದ್ದಿಯೋ?ಬಹುಶಃ ಇಲ್ಲ, ನಿಶ್ಚಿತ ಸಾವು ಕಣ್ಮುಂದೆ ಸುಳಿದಾಡಕ್ಕೆ ಪ್ರಾರಂಭಿಸಿದಾಗ ನೀ ಕಾರ್ಯಪ್ರವರ್ತನಾದೆ.ಸಾವು ,ಸಾವು........... ಅನ್ನೋದ ಬಿಟ್ಟು "ಬದುಕನ್ನು ಚಂದಗೊಳಿಸಿ ಬದುಕಿದಾಗ ಸಾವು ಕೂಡ ಆನಂದಿತವಾಗಿ ಬದುಕಿನ ಸಾರ್ಥಕತೆಯ ಅನುಭೂತಿ ಕೊಡಬಲ್ಲುದು"ಎಂಬುದನ್ನು ಅದಾಕೊ ಹೇಳುತ್ತಲೆ ಆ ಸಾವನ್ನು ನಿನ್ನದಾಗಿಸಿದೆ.ಕಲಿತೆ ಗೆಳೆಯ ಬಹಳಷ್ಟು ನಿನ್ನಿಂದ,ಇತ್ತೀಚೆಗೆ ಆ ನಿನ್ನ ಸಂಸ್ಥೆಯ ಮಕ್ಕಳನ್ನು ಕರಕೊಂಡು ಬನ್ನೇರುಘಟ್ಟಕ್ಕೆ ಹೋಗಿದ್ದೆ, ಕುಣಿದಾಡಿ ನಲಿದಾಡಿ ಬಂದಿದ್ದೆ ಆ ಕ್ಷಣಗಳಲ್ಲಿ ನನ್ನೊಳು ನೀನಿದ್ದಿಯೊ? ಗೊತ್ತಿಲ್ಲ, ನಿನ್ನ ಸಾಮಿಪ್ಯವ ಅನುಭವಿಸಿದಂತಿತ್ತು , ಭ್ರಮೆ ಇರಬಹುದು ಅಂದುಕೊಂಡೆ ಇಲ್ಲ ಹಾಗೊಪ್ಪಿಸಿಕೊಳ್ಳಲಾಗುತ್ತಿಲ್ಲ.

ಭೂಮಿ ಕಂಪಿಸುತ್ತಿದೆ, ಪ್ರಳಯವಾಗುತ್ತೆ ಎಂಭ ಗುಲ್ಲು ಹಬ್ಬಿದೆ,ವರುಷದ ಹಿಂದೆ ಪ್ರಳಯ ಅನೂಭೂತಿ ಪಡೆಯಬೇಕು, ಅಲ್ಲಿವರೆಗಾದರು ಬದುಕಿರಬೇಕು ಅನ್ನುತಿದ್ದೆ, ಯಾಕೋ ಆ ಮೊದಲೆ ಸಾವಿನ ಕರೆಗೆ ಓಗೊಟ್ಟು ಜಗವ ತೊರೆದೆ, ಆದರೆ ನನ್ನ ಮುಂದೆ ನೀ ಕಟ್ಟಿಕೊಟ್ಟ ಪ್ರಪಂಚವಿದೆಯಲ್ಲ ಅದು ಅಭೇಧ್ಯ,ನನಗೂ ಅಷ್ಟೆ ಸಾವಿನ ಭಯ ನಿನ್ನ ನೋಡಿದ ಮೇಲೆ ಇವತ್ತಿಲ್ಲ,ಹಾಗಂತ ಸಾವು ಕಣ್ಮುಂದೆ ಸುಳಿಯತ್ತಲೂ ಇಲ್ಲ, ಇರೋವಷ್ಟು ದಿನ ಸಮಾಜ ಸೇವೆ ಅಂತ ಕೆಲಸದಲ್ಲಿ ಭಾಗಿಯಾಗಲು ನೀ ಬಿಟ್ಟು ಹೋದ ಕೆಲಸಗಳೆ ಇವೆ, ಸದ್ಯಕ್ಕೆ ನನ್ಮುಂದೆ ಬೇರೆ ಯಾವುದೆ ಯೋಜನೆಗಳು/ಯೋಚನೆಗಳಿಲ್ಲ.ಹಿಂಗನ್ನುತ್ತಿರುವದಕ್ಕೆ ಬೈತಿದ್ದೆ ನೀನಿದ್ದರೆ, ಹೊಸದೇನಾದರು ಕ್ರೀಯಾಶೀಲತೆಯಲ್ಲಿ ತೊಡಗಿಕೊಳ್ಳದೆ ಇನ್ನೊಬ್ಬರ ಕೆಲಸದಲ್ಲಿ ಜೋತು ಬಿದ್ದು ಮುಂದುವರಿಸುವದನ್ನು ನಿನಗೆ ನೋಡಿದರಾಗದು!! ಈ ನಿನ್ನ ನಿಲುವುಗಳಿಗೆ ಆದಷ್ಟು ಬದ್ದನಾಗೆ ಇರುವೆ ಗೆಳೆಯ,ಆದರೆ ನಿನ್ನ ಸನಿಹವ ಬಿಟ್ಟು ನಾನು ಮುಂದುವರಿಯಲಾರೆ ಇದು ನನ್ನ ವೀಕ್ ನೆಸ್ಸು, ಅದಕ್ಕೆ ನಿನ್ನ ಕಾರ್ಯಗಳನ್ನು ನನ್ನದೆ ಆದ ರೀತಿಯಲ್ಲಿ ಮುನ್ನಡೆಸುವೆ, ಒಪ್ಪಲೇಬೇಕಾಗಿದೆ ನೀನಿದನ್ನ.ಬೆಳಿಗ್ಗೆ ಟೀವಿ ಹಚ್ಚಿದೆ, ಆಫ್ರೀನ್ ಎಂಭ ಮುಗ್ದ ಬಾಲೆಯ ಸಾವು ಹುಟ್ಟಿಸಿದ ಅಪ್ಪನಿಂದಲೆ ಆಗಿದೆ, ತಾಯಿಯ ತೊಳಲಾಟ ಹುದುಗಿದ ನೋವು ಕಣ್ಣೀರಾಗಿ ಹರಿಯುತ್ತಿರಲು ನನ್ನದೂ ಕಣ್ಣು ಮಂಜು, ಯಾಕೊ ನೋಡಲಾಗಲಿಲ್ಲ, ಸುಮ್ಮನೆ ಮತ್ತೆ ಬೆಡ್ ಮೇಲುರುಳಿ ಮನಸಾರೆ ಅತ್ತೆ, ನೀನರಬೇಕಿತ್ತು ಗೆಳೆಯ ದುಃಖ ಹಂಚಿಕೊಳ್ಳಲು,ಈ ಪರಿಯ ಸಮಾಜವನ್ನು ನಿನ್ನದೆ ಮಾತುಗಳಿಂದ ಅವಲೋಕಿಸಿ ನನಗೊದಗಿದ ದುಃಖ ನೀಗಲು, ನಿನ್ನ ಸಾವಿನ ದಿನ ಹಸುಳೆಯ ಸಾವಿನ ಸುತ್ತಲಿನ ಸುದ್ದಿ!!!!,ನಿಂತ ನೀರನ್ನು ಹರಿಸುವ ಕೆಲಸವಾಗ ಬೇಕು, ನಡಿ ನಮ್ಮಿಂದಾದ ಪ್ರಯತ್ನ ಮಾಡೋಣ ಎಂದು ಹುರಿದುಂಬಿಸಿ ಸಂತೈಸುತಿದ್ದಿ, ಆದರೆ ಇವತ್ತು ನೀನು ಭೌತಿಕವಾಗಿ ನನ್ನಿಂದ ದೂರ.............

ಸಿಹಿ ನೆನಪುಗಳ ಹುಡುಕಾಟಕ್ಕಾಗಿ ಪತ್ರ ಬರೆಯಲು ಶುರು ಹಚ್ಚಿಕೊಂಡೆ, ಮುಂದೆ ಬೇರೆ ಯಾವುದೆ ನೆನಪುಗಳು ನೆನಪೆ ಆಗದಷ್ಟು ತಲೆ ಗಿಮ್ಮೆನ್ನುತ್ತಿದೆ,"ಕಹಿ ನೆನಪುಗಳನ್ನೆ ನೆನಪಾಗಿಸಿಕೊಂಡು ಸಿಹಿ ಅರಸಬೇಕು" ಅಂದಿದ್ದೆ ನೀನೊಮ್ಮೆ, ಅದೆ ಸರಿ ಅಂದುಕೊಂಡು ಪತ್ರವನ್ನು ಕೊನೆಯಾಗಿಸುತ್ತೆನೆ, ಹೃದಯ ಭಾರ ಹಗುರಾದಾಗ ಮತ್ತೆ ಮರಳಿ ನನೆನಪಿಸಿಕೊಳ್ಳುವೆ ನಿನ್ನ ಒಡನಾಟದ ಸಿಹಿ ನೆನಪುಗಳನ್ನ.......!!!!


ಇಂತಿ ನಿನ್ನ ನೆನಪುಗಳೊಂದಿಗೆ..................

2 comments:

  1. ಯಾಕೋ ಮಾತುಗಳು ಹೊರಡುತ್ತಿಲ್ಲ ರಾಘಣ್ಣ.. ಹೋದೋರೆಲ್ಲಾ ಒಳ್ಳೆಯವರು ನಮ್ಮನು ಹರಸೋ ಹಿರಿಯರು ಅಂತಷ್ಟೇ ಹೇಳಬಲ್ಲೆ..

    ReplyDelete
  2. ನಿಮ್ಮ ಆಲೋಚನೆಗಳು ಬಹಳ ಸ್ಪೂರ್ತಿದಾಯಕವಾಗಿದೆ. ನಿಮ್ಮೊಳಗಿನ ಅಂತರಾಳದ ಹೃದಯವಂತ ಸದಾ ಜಾಗೃತರಾಗಿರಲಿ ಎಂದು ಹಾರೈಸುವೆ.

    ReplyDelete