Wednesday, April 4, 2012

ಸೃಷ್ಟಿ.

ಮನುಜನೆಂಬುದ ಮರೆತ
ಮನದ ತುಂಬೆಲ್ಲ
ನಿನ್ನದೆ ಭಕ್ತಿ ತುಂಬಿರಲು
ನೀನು ಮರೀಚಿಕೆ
ಕೈಗೆ ಸಿಗಲಾರದ ದೇವ

ಕಲ್ಲಿನ ರೂಪದಲ್ಲೂ
ಜೀವಂತಿಕೆಯ ಕಾಂಬ
ಭಕ್ತನ ಕಣ್ಣಲ್ಲಿ
ನಿನ್ನೆಡೆಗಿನ ದೀನ ಭಾವ
ಕಷ್ಟದ ಹೊದಿಕೆ ಕಳಚಲು
ನಿನಗಿರಿಯುತಿಪ್ಪ ದೈನ್ಯ ಮೊರೆ

ಕೇಳಿಸಲಾರೆ ಗೊತ್ತವನಿಗೆ
ಆದರೂ ತುಂಬೊಡಲ ಭಕುತಿ
ಅವನ ಬೇಡಿಕೆ ಭಾವ
ನೀನರಿವೆ ಎಂಭ ಭ್ರಾಂತು
ನಿನ್ನ ಬರಿದೆ ಕಲ್ಲೆಂಬುದನು
ಯಾಕೊ ಅವನೊಪ್ಪಲಾರ

ತಿರುಕರೆಲ್ಲರು ಜಗದೊಳಗೆ
ಅವರಿದ್ದರೆ ನಿನ್ನ ಅಸ್ತಿತ್ವ
ನಿನಗಷ್ಟು ಪೂಜೆ ಪುನಸ್ಕಾರ
ಹಸಿವ ಬೇಗೆಯ ನಡುವೆ
ಕುದಿವ ದೇಹಗಳು ಕೂಡ
ನಿನ್ನತ್ತ ಕೈ ಚಾಚಿರುತ್ತವೆ
ಇದೆಂತಹ ವಿಪರ್ಯಾಸ

ಆತ್ಮ ಎಂಭ ಅರಿವ
ಅರಿಯದಿರ ಮನುಜ
ಗುಡಿ ದೇವಳವ ಸುತ್ತಿ
ಕಲ್ಲು ದೇವ ನಿನ್ನ ಸ್ತುತಿಪುವರು
ಅಂತರಾಳದೊಳಗೆ
ಒಂದಿನಿತು ಇಣುಕಲಾರರು

ನಂಬುಗೆಯ ಇಂಬು
ಅಷ್ಟೆ ಸಾಕೆನ್ನುವ ಭಾವ

ಧರ್ಮದ ತಳಕು ಬಳುಕಿನೊಂದಿಗೆ
ದೇವ ನಿನ್ನ ಹೆಸರು.
ಜನಕೋಟಿ ನಂಬಿಗೆಗಾದರು
ಕಲ್ಲೆ ನೀ ಜೀವ ತಳೆ
ತೊಳೆದು ಬಿಡು ಜಾತಿ ಧರ್ಮವ
ಮೆರೆಸಿ ಬಿಡು ಮನುಜತೆಯ
ಸೃಷ್ಟಿಸು ನೀ ಹೊಸತೊಂದನು.




No comments:

Post a Comment