Tuesday, July 31, 2012

ಬುದ್ಧಿವಂತರ ಕೂಪ

ಬೆಳೆಯುತ್ತಾ ಸಂಬಂಧಗಳ
ಕವಲುಗಳನ್ನು ಬೆಳೆಸಿಕೊಂಡಿರುವೆ
ಕವಲುಗಳು ಬೇರುಗಳಾಗಿ
ನನ್ನ ಪೋಷಿಸುತ್ತಲಿತ್ತು.
ತಾಯಿ ಬೇರು ಮೂಲವಾದರೆ
ಕವಲೂ ಬೇರೂಗಳು ನನ್ನ ಅಸ್ಥಿತ್ವ
ತೊರೆಯಬಹುದಾದ ಮಾತೆ ಇಲ್ಲ.

ಸುತ್ತಲೂ ಗಲೀಜು
ಅದರಲ್ಲೂ ಸ್ವಚ್ಚ ನೀರ ಹುಡುಕಾಡಿ
ಉಣ ಬಡಿಸುತಲಿತ್ತು ನನ್ನ ಬೇರುಗಳು
ಕ್ರಮೇಣ ಗಲೀಜನ್ನ ಮೆತ್ತಿಸಿಕೊಂಡ
ಬೇರುಗಳಿಗೆ ನೀರ ದಾಹ
ಉಪಾಯವಿಲ್ಲದೆ ಗಟಾರದ ನೀರ ಪಾನ
ನನ್ನ ಅಸ್ತಿತ್ವವೆ ಕೊಚ್ಚೆಯಾದಾಗ
ನಾನೂ ಕೊಚ್ಚೆ ..ಮೈಹತ್ತಿಸಿಕೊಳ್ಳಲಾಗದೆ
ನನ್ನೊಳಗೆ ಹುಟ್ಟಿದ್ದು ಒಂದಷ್ಟು ಆಕ್ರೋಶ.

ಧರ್ಮವೆಂಬ ನೆತ್ತಿ ಶೂಲ
ಜೊತೆಗೊಂದಿಷ್ಟು ಒಣ ಸಂಸ್ಕೃತಿಯ ಭಾರ
ಈ ಕೊಳಕಿನೊಳಗೆ ಹೆಣ್ಣು ಮಾತ್ರ
ಸಂಸ್ಕೃತಿಯ ಹರಿಕಾರಳಾದ ತಮಾಷೆ,
ಯಾವುದೋ ಸಿದ್ದಾಂತ
ಅಸಂಬದ್ದ ನೀತಿ ನಿಯಮ ತರ್ಕದೊಳಗೆ
ಕಣ್ಣು ಮುಚ್ಚಿ ಹೆಣ್ಣ ಭೋಗಿಸಿದ್ದು
ತಮ್ಮ ತೃಷೆಯ ತೀರಿಸಿಕೊಂಡಿದ್ದು
ಲೋಕಕ್ಕೆ ತಿಳಿಯಲಿಲ್ಲವೆಂಬ ಭ್ರಮೆಯಲ್ಲಿ
ಮುಳುಗಿ ಎದ್ದಾಗ ಹುಟ್ಟಿದ ಹೆಸರು ಸಂಸ್ಕೃತಿ.

ಬುದ್ದಿವಂತರು ಎನಿಸಿಕೊಂಡು
ಬುದ್ದಿಹೀನರಾಗಿ ಕೂಪದೊಳಗೆ ಬಿದ್ದೀವಿ
ಮೋರಿಗಳೊಂದಷ್ಟು ಗಟಾರವ ಹೊತ್ತು
ಕೂಪಕ್ಕೆ ಬಂದು ಸೇರುತ್ತೆ
ನಮಗದುವೆ ಅಮೃತ
ಮೊಗೆದಪ್ಪಿ ಕುಡಿಯುತಿದ್ದೇವೆ
ಕೊಳಚೆ ಯಾವೂದೂ ಶುದ್ದ ಯಾವೂದು
ತಿಳಿಯಲಾರದ ಮನಸ್ಥಿತಿ ನಮ್ಮದೂ
ನಮ್ಮ ತಲೆ ತುಂಬಾ ಬುದ್ದಿವಂತರೆಂಬ ಜೊಳ್ಳು.

ತೊಳೆಯಬೇಕಿದೆ ನನ್ನ ಅಸ್ತಿತ್ವದ ಬೇರ ಕೊಳಚೆ
ಅಳಿಯಬೇಕಿದೆ ಸ್ವಾರ್ಥ ಸಾಧಕರು ಹೆಣ್ಣ ಬದುಕ ಮುಂದೆ
ಮಡಿಯಾಗಬೇಕಿದೆ ಸುತ್ತಲೂ ಹಬ್ಬಿರುವ ಗಲೀಜು ಸರಿಸಿ
ಶುದ್ದಿಕರಿಸಬೇಕಿದೆ ನನ್ನ ಉಸಿರು, ನೆಲ, ಜಲವನ್ನೂ
ಅಸ್ತಿತ್ವವನ್ನೂ ಕೊಂದುಕೊಳ್ಳದೆ ಬದುಕಬೇಕಿದೆ
ಅಲ್ಲಿವರೆಗೆ ..........................

ನನ್ನ ಮೇಲಿನ ಅಸಹ್ಯವನ್ನು ನಾನೆ ಸಹಿಸಿಕೊಳ್ಳಬೇಕಿದೆ.

No comments:

Post a Comment