Saturday, February 2, 2013

ನಾನು ಬರೆದೇನೂ!!! (ದೊಡ್ಡ ಬರಹಗಾರನಲ್ಲದೋನ ಮಾತುಗಳು)

ಎಷ್ಟೊ ದಿನಗಳ ನಂತರ ಲೇಖನಿ ಹಿಡಿದಿದ್ದೆ ಒಂದಷ್ಟೂ ಏನನ್ನೋ ಬರೆದೆ ಕೂಡ. ಆದರೆ ಯಾಕೊ ಮನಸಿಗೊಪ್ಪುವಂತದ್ದೇನೂ ಬರೆಯಲೆ ಆಗುತ್ತಿರಲಿಲ್ಲ.ಭಯ ಶುರುವಾಯಿತು ಎಲ್ಲ ಮರೆತೆ ಬಿಟ್ಟನೆಂದು. ಮತ್ತೊಮ್ಮೆ ಕೊನೆಯ ಭಾರಿಗೆ ಪ್ರಯತ್ನಿಸೋಣವೆಂದು ಏನೋ 2 ಸಾಲು ಗೀಚಿದೆ, ಅದು ಹಾಗೆ ಮುಂದುವರಿಯೋದ,….. ಒಂದರ್ಧ ಘಂಟೆ ಹಂಗೆ ಬರಿಯುತ್ತಾನೆ ಹೋದೆ ಕೊನೆಗೆ ನೋಡುತ್ತೇನೆ ತಕ್ಕ ಮಟ್ಟಿಗೆ ನನಗೆ ಹಿಡಿಸುವಂತಹ ಒಂದು ಸಣ್ಣ ಕಥೆ ಬರೆದು ಮುಗಿಸಿದ್ದೆ.ನನಗೆ ಆಶ್ಚರ್ಯ… ಕಾರಣ ನಾ ಕಥೆ ಬರೆಯಲೆಂದಾಗಲಿ ಲೇಖನ ಬರೆಯಲೆಂದಾಗಲಿ ಕುಳಿತಿರಲಿಲ್ಲ ಆದರೂ ಒಂದು ಪ್ರಕಾರದಲ್ಲಿ ಬರೆದು ಮುಗಿಸಿದ್ದೆ, ಆ ಬರವಣಿಗೆಯ ರೀತಿ ಹೀಗಿತ್ತು…. 

ಉದಾಹರಣೆಗಾಗಿ ಮಾತ್ರ ಹಿಂಗೊಂದು ಸಂಭವವನ್ನು ನೀಡುತ್ತಿರುವೆ,,,,,, 

ಸುಮ್ಮನೆ ಒಂದು ಸಾಲು ಬರೆದೆ ಅದೆನೆಂದರೆ “ಅವನು ಕಾಡಿಗೆ ಹೋದ” 

ಹಿಂಗೆ ಬರೆದಾಗ ಮತ್ತೊಂದು ಪ್ರಶ್ನೆ ಕೇಳಿಕೊಂಡೆ ಅವನು ಹೇಗಿದ್ದ? 

ಸ್ಥುರದ್ರೂಪಿಯಾಗಿದ್ದರೂ ನೀಟಾಗಿ ಉಡುಪು ಧರಿಸಿರಲಿಲ್ಲ, ತಲೆ ಬಾಚದೆ ಅದೆಷ್ಟೋ ವರುಷವಾಗಿತ್ತು, 

ಅಬ್ಬ 2 ಲೈನ್ ಬರೆದು ಮುಗಿಸಿದೆ, ಸ್ವಲ್ಪ ಖುಷಿಯಾಯಿತು, ಅಷ್ಟೆ ಸಾಕೆ? ಮುಂದುವರಿಸಬೇಕಲ್ಲ, ಹೆಂಗೆ ಮುಂದುವರಿಸಲಿ, ಸರಿ ಅವನು ಯಾರು? ಅನ್ನೊದನ್ನ ಕಟ್ಟಿಕೊಡೋಣ ಎಂದುಕೊಂಡೆ.. 

ಆತನ ಬಗ್ಗೆ ತಿಳಿದರೆ ಆಶ್ಚರ್ಯವಾದೀತೂ, ಆತ ಆ ಊರ ಶ್ರೀಮಂತ ಮನೆತನದ ಒಬ್ಬ ಹುಡುಗ, ಹೆಸರು ಆದಿತ್ಯ…. 

ಇಷ್ಟು ಬರೆದು ಮುಗಿಸಿದಾವಾಗ ತಲೆಯಲ್ಲಿ ಹೆಂಗೆಲ್ಲಾ ಕಥೆ ಹೆಣಿಯಬಹುದು ಎಂಬ ಚಿತ್ರಣ ರೂಪುಗೊಂಡಿತು. ಕಾಡಿಗೆ ಹೋದ ಉದ್ದೇಶ? ಹೋಗಿ ಮಾಡುವಂತ ಕಾರ್ಯ? ಹೋಗಲು ಕಾರಣವಾದ ಅಂಶ?ಶ್ರಿಮಂತಿಕೆಯ ಬಗ್ಗೆ ಬೇಸರ ಹುಟ್ಟಿದ್ದಕ್ಕೋ?ಕೈ ಕೊಟ್ಟ ಪ್ರೀತಿ ಸಂಬಂಧವೋ? ಇವೆಲ್ಲದರ ಜೊತೆಗೆ ಕಥೆಯಿಂದ ಓದುಗನಿಗೆ ಏನು ಮೆಸೇಜ್ ಕೊಡಬಹುದು?ಎಂಬಿತ್ಯಾದಿ ಪ್ರಶ್ನೆ ನನ್ನೊಳಗೆ ರೂಪುಗೊಂಡವು. ಬಹುಶಃ ಈ ಪ್ರಶ್ನೆಗಳಿಗೆ ಉತ್ತರವೆಂಬಂತೆ ಬರೆಯುತ್ತಾ ಹೋದಲ್ಲಿ ಸೊಗಸಾದ ಕಥೆ ರೂಪ ಪಡೆಯೋದು ಗ್ಯಾರೆಂಟಿ. ಮೊದಲಿಗೆ ನಾನೊಂದು ಕಥೆ ಬರೆದೆ ಎಂದೆನಲ್ಲ? ಅದು ಈ ರೀತಿಯಾಗೆ ರೂಪುಗೊಂಡಿದ್ದು. 

ನನಗೊತ್ತಿಲ್ಲ ಬರೆಯೋದು ಎಂತೆಂದು? ಆದರೆ ನಾ ಬರೆಯೋದು ಇಂತು, ಸಿದ್ದತೆ ಮೂಲಕ ಬರೆಯೋದು ಒಂದು ತೆರನಾದಲ್ಲಿ ನಮ್ಮ ಬರವಣಿಗೆಯೆ ನಮ್ಮನ್ನ ಬರೆಸಿಕೊಂಡು ಸಾಗೋದು ಇಂತು ಎಂಬುದಷ್ಟನ್ನೆ ಹೇಳುತ್ತಲಿರುವೆ.ಬರವಣಿಗೆ ಇಷ್ಟು ಸುಲಭವೆ? ಹೌದು ಬರವಣಿಗೆಯ ಕಲೆ ಒಂದು ಸಲ ರೂಡಿಸಿಕೊಂಡರೆ ಬರವಣಿಗೆ ಕಷ್ಟದಾಯಕವಾದುದೇನಲ್ಲ, ಮೊದ ಮೊದಲಿಗೆ ಓದುಗನಿಗೆ ತುಂಬಾ ಹತ್ತಿರವಾಗುವಂತ ಬರಹವನ್ನು ಆ ಬಗೆಯ ವಿಷಯ ಇದ್ದಾಗಿಯೂ ಕೊಡಲು ಕಷ್ಟವಾದರೂ ಬರೆಯುತ್ತಾ ಬರೆಯುತ್ತಾ ಬರವಣಿಗೆ ಪಕ್ವತೆಯ ಪಡೆಯುವದನ್ನು ನಮಗೆ ನಾವೆ ಕಾಣಬಹುದು. ನಮ್ಮ ಸುತ್ತಲಿನ ಆಗು ಹೋಗುಗಳ ಬಗ್ಗೆ ನಮ್ಮೊಳಗೆ ಕೆಲವು ವಿಚಾರಧಾರೆಗಳು ನಮ್ಮದೆ ಆದ ಅಭಿಪ್ರಾಯಗಳು ರೂಪುಗೊಳ್ಳುತ್ತಿರುತ್ತದೆ, ಆ ನಮ್ಮ ಮನಸ್ಥಿತಿಯನ್ನೆ ಬರವಣಿಗೆಗೆ ಇಳಿಸಿದರಾಯಿತು, ಒಂದಷ್ಟು ಓದೊ ಹವ್ಯಾಸ ಜೊತೆಗಿದ್ದರೆ ಬರವಣಿಗೆ ಇನ್ನೂ ಸುಲಭ. 

ಬರವಣಿಗೆ ಎಂದರೆ ಮನದಲ್ಲಿ ನಡೆಯೋ ಪ್ರಶ್ನೋತ್ತರದ ಒಟ್ಟು ಪರಿಕಲ್ಪನೆ.ಒಂದು ಲೇಖನ ಬರೆದು ಮುಗಿಸಬೇಕಾದರೆ ಮನದೊಳಗೆ ಹತ್ತು ಹಲವು ಪ್ರಶ್ನೋತ್ತರ ನಡೆಯುತ್ತೆ ಈ ಮೂಲಕ ನಮ್ಮ ಚಿಂತನೆ ಒಂದು ಸ್ಪಷ್ಟತೆಯನ್ನು ಪಡೆಯುತ್ತದೆ ಎಂದರೂ ಅತಿಶಯೋಕ್ತಿ ಆಗಲಾರದು.ಆದರೆ ಈ ಪ್ರಶ್ನೋತ್ತರಕ್ಕೆ ವಿಷಯ ಸಂಬಂಧಿತವಾಗಿ ಒಂದು ಚೌಕಟ್ಟು ನಮಗೆ ನಾವೆ ಹಾಕಿಕೊಂಡು ಬರೆಯಬೇಕಾಗುತ್ತದೆ, ಇಲ್ಲವೆಂದಾದಲ್ಲಿ ಲೇಖನದ ವಿಷಯ ಯಾವ ಸಂಬಂಧಿತವಾಗಿ ಬರೆಯುತಿದ್ದೇವೊ ಅದು ಹೈಲೈಟ್ ಆಗದೆ ಲೇಖನಕ್ಕೊಂದು ಸ್ಪಷ್ಟ ರೂಪ ಸಿಗೋದು ಅಸಾಧ್ಯ ಯಾವುದೇ ಪ್ರಕಾರದ ಬರವಣಿಗೆಯೆ ಆಗಿರಲಿ ಬರೆದು ಮುಗಿಸಿದಾಗ ಮನಸ್ಸು ನಿರಾಳಗೊಳ್ಳುತ್ತದೆ, ಕಾರಣ ಇಷ್ಟೆ ನಮ್ಮ ಮನದೊಳಗಿನ ವಿಚಾರಗಳು ಪ್ರಶ್ನೋತ್ತರಗಳ ಮೂಲಕ ನಮ್ಮೊಳಗೆ ಚರ್ಚಿತಗೊಂಡು ಒಂದು ಅಂತ್ಯವನ್ನು ಕಂಡಿರುತ್ತದೆ , ಅಂದರೆ ಆ ವಿಚಾರ ಹಾಗೂ ಅದು ಕೊನೆಯಾಗಬೇಕಾದ ಬಗೆ ಎರಡೂ ಸ್ಪಷ್ಟಗೊಂಡಿರುತ್ತದೆ .ಇದೆಲ್ಲದರ ಒಟ್ಟು ಫಲಿತಾಂಶವೆ ನಿಮ್ಮ ಮನ ನಿರಾಳತೆ ಪಡೆಯುವದು ಆ ಮೂಲಕ ಪ್ರಪುಲ್ಲಗೊಳ್ಳುವದು. ಆದುದರಿಂದ ನಮ್ಮಯ ಬರವಣಿಗೆ ಇತರರೀಗೆ ಎಷ್ಟು ಹಿಡಿಸುತ್ತೋ ಬಿಡುತ್ತೊ ಅದು ಆಮೇಲಿನ ಪ್ರಶ್ನೆ ಆದರೆ ನಮಗೆ ಲಾಭದಾಯಕವಾಗಿ ಉಪಕಾರಿಯಾಗುವದಂತು ದಿಟ.ಒಂದು ವೇಳೆ ಓದುಗನಿಗೆ ಹಿಡಿಸಿಲ್ಲವೆಂದರೆ ಏನೂ? ಬರವಣಿಗೆ ನಿಮ್ಮನ್ನೊಮ್ಮೆ ಕೈ ಹಿಡಿಯೋದಷ್ಟೆ ಬೇಕಾಗಿರೋದು ಆಮೇಲಿದ್ದು ಓದುಗ ನಿಮ್ಮ ಬರವಣಿಗೆಯನ್ನು ಎದುರು ನೋಡೊದಷ್ಟೆ ಉಳಿಯೋದು. ನಾನು ಬರೆಯೋದು ನನಗಾಗಿ ಎಂದು ನಾ ಬಹಳಷ್ಟು ಸಾರಿ ಹೇಳಿಕೊಂಡಿರೋದು ಮೇಲಿನ ಕಾರಣಗಳಿಗಾಗಿ. 

ಪ್ರಾಥಮಿಕ ಶಿಕ್ಷಣ ಪಡೆಯುತ್ತಿರಬೇಕಾದರೆನೆ ನಮ್ಮ ಶಾಲೆಯ ಟೀಚರ್ಗಳು ಪ್ರಬಂಧ,ಕಥೆ ಅದಕ್ಕಾಗಿ ಅಲ್ಲಿ ಇಲ್ಲಿ ನಡೆಯುವ ಸ್ಪರ್ಧೆಗಳಿಗೆ ನಮ್ಮನ್ನು ಸಿದ್ದಗೊಳಿಸಿ ಕರೆದುಕೊಂಡು ಹೋಗೊ ಪರಿಪಾಠಗಳಿತ್ತು. ಇಂದು ಈ ನಿಟ್ಟಿನ ಶಿಕ್ಷಣ ಎಷ್ಟರ ಮಟ್ಟಿಗೆ ಜೀವಂತವಿದೆ ಅನ್ನೊದು ನಾ ತಲೆ ಕೆಡಿಸಿಕೊಳ್ಳದ ವಿಚಾರ.ಬಹುಶಃ ಆ ರೀತಿಯ ಅಂದಿನ ನಮ್ಮ ಚಟುವಟಿಕೆಗಳು ಇಂದು ಕೂಡ ನಮ್ಮೊಳಗೆ ಹಾಸುಹೊಕ್ಕಾಗಿರೊ ಫಲಿತಾಂಶವೆ ನಮ್ಮ ಬರವಣಿಗೆಗಳು. ಇಂದೆನಾದರೂ ಪುಸ್ತಕ ಓದೊ ಹವ್ಯಾಸ,ಬರವಣಿಗೆಯ ಆಸಕ್ತಿ ನನ್ನಲ್ಲಿದ್ದರೆ ಇದರ ಕ್ರೆಡಿಟ್ ಸೇರಬೇಕಾಗಿರೋದು ನನ್ನನ್ನು ಈ ರೀತಿಯಾಗಿ ರೂಪಿಸಿದ ನನ್ನ ಗುರುಗಳಿಗೆ ಹಾಗೂ ದಂಡಿಯಾಗಿ ಪುಸ್ತಕ ತಂದು ಸುರಿದು ಓದೆನ್ನುತಿದ್ದ ನನ್ನ ಹೆತ್ತವರೀಗೆ.ಸಾಮಾನ್ಯ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೆ ಓದಿರಬಹುದು, ಹೈ ಪೈ ಶಾಲೆಯ ಬಾಗಿಲು ಕೂಡ ಮುಟ್ಟಿ ನೋಡದಿರಬಹುದು ಆದರೆ ಅದುಕ್ಕಿಂತ ಹೆಚ್ಚಿನದನ್ನು ಈ ಶಾಲೆ ನಮಗೆ ಕೊಟ್ಟಿದೆ, ನಾ ಪಡೆದ ಶಿಕ್ಷಣ ಇಂಜಿನಿಯರ್ ಡಾಕ್ಟರ್ ಗಿರಿ ಸಂಪಾದಿಸಲು ( ನನ್ನ ಮಟ್ಟಿಗೆ ಮಾತ್ರ, ಕನ್ನಡ ಶಾಲೆಯಲ್ಲಿ ಕಲಿತ ಅತೀ ಹೆಚ್ಚಿನ ಮಂದಿ ಈ ಗಿರಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ) ಕಷ್ಟದಾಯಕವಾಗಿದ್ದಿರಬಹುದು ಆದರೆ ನಾ ಪಡೆದ ಶಿಕ್ಷಣ ನನಗೆ ಜೀವನ ಕ್ರಮ ಕಲಿಸಿಕೊಟ್ಟಿದೆ, ಅದರ ಫಲವೆ ನಮ್ಮೊಳಗೆ ಹುಟ್ಟುವ ವಿಚಾರಧಾರೆ, ಅದ ಪ್ರಸ್ತುತಪಡಿಸಲು ನಾ ಕಂಡುಕೊಂಡಿರೊ ಮಾರ್ಗವೆ ಬರವಣಿಗೆ. 

ನಮ್ಮಯ ಕಿರಿಯರೀಗೆ, ನಮ್ಮ ಮಕ್ಕಳೀಗೆ ಆಸ್ತಿ ಮಾಡಿ ಕೊಡಲಾಗಲಿಲ್ಲವೆಂದರೂ ಸರಿ ಜ್ಞಾನ ಆ ಮೂಲಕ ಚಿಂತನೆಗೆ ತೆರೆಯಬಲ್ಲುದಾದ ಮನಸ್ಸು ಅವರಿಗೆ ಮೂಡುವಂತೆ ಮಾಡೋಣ, ಆ ಮೂಲಕ ದೊಡ್ಡ ಆಸ್ತಿಯನ್ನಾಗಿ ಅವರನ್ನೆ ರೂಪಿಸೋಣ. ಹೆಚ್ಚೆಚ್ಚು ಪುಸ್ತಕ ಓದುವ ಹವ್ಯಾಸ ಅವರಲ್ಲಿ ಮೂಡುವಂತೆ ಮಾಡೋದು ಇದಕ್ಕಿರುವ ಸುಲಭ ದಾರಿ. 

ನೀವೇನೊ ತಿಳುಕೊಂಡಿದ್ದೀರಿ!!! ಬರೀತೀರಿ, ನಾವ್ ಲೋಕಲ್. ಅಂತ ನನ್ನ ಗೆಳೆಯನೊಬ್ಬ ನೀ ಇಷ್ಟೆಲ್ಲಾ ಮಾತಾಡ್ತಿ ಏನಾದರೂ ಬರಿಯಕ್ಕೆ ಟ್ರೈ ಮಾಡ್ಬಾರ್ದಾ ಎಂದು ನಾ ಹೇಳಿದಾಗ ನನ್ನ ಕಿಂಡಲ್ ಮಾಡಿದ ರೀತಿ… 

ನನ್ನುತ್ತರ ಹೀಗಿತ್ತು ಲೋಕಲ್ ಜೊತೆ ಲೋಕಲ್ ಆಗಿ ಚಿಂತಿಸಿದಾವಾಗಲೆ ಬರವಣಿಗೆ ಸುಲಭ ಸಾಧ್ಯ ಎಂದು.. 

ನನ್ನ ಮಟ್ಟಿಗೆ ನಾನೇನೋ ಜೀನಿಯಸ್ ಎಂದು ಮನುಷ್ಯ ಸಂಬಂಧದಿಂದ ದೂರವಾಗಿ ಏನನ್ನೊ ಬರೆಯಲು ಸಾಧ್ಯವಿಲ್ಲ, ಏನಾದರೂ ಬರೆಯೋದಾದರೆ ಫಿಲಾಸಫಿ ಬರೆದಾನೂ ಎಂದನ್ನುಕೊಳ್ಳುವಂತಲೂ ಇಲ್ಲ ಕಾರಣ ಅದು ಬರೆಯಕ್ಕೂ ಜಗತ್ತಿನೊಳಗೆ ಬೆರೆತ ಅನುಭವವಿರಬೇಕು, ಆದುದರಿಂದ ಬರವಣಿಗೆ ಎಂಬುದು ಎಲ್ಲರೊಂದಿಗೆ ಒಂದಾದೋರ ಆಸ್ತಿ,ಅದೇನೂ ಹಂಗಂಗೆ ಮಳೆಯಂತೆ ಮೇಲಿಂದ ಉದುರೋವಂತದ್ದಲ್ಲ.ಬರಹಗಾರ,ದೊಡ್ಡ ಹೆಸರು ಮಾಡಬೇಕು ಎಂದೆಲ್ಲಾ ಇಲ್ಲದ್ದು ಅನಿಸಿಕೊಳ್ಳುವ ಹಂಬಲ ಬಿಟ್ಟು ಮನದೊಳಗಿನ ತುಮುಲಗಳನ್ನು ಹೊರಗೆಡವುತ್ತಾ ರಿಪ್ರೆಶ್ ಆಗುವದಕ್ಕಾದರೂ ಬರೆಯೋಣ, ಸಮಾಜದಲ್ಲಿನ ಜನತೆ ಹೆಚ್ಚೆಚ್ಚು ಪುಸ್ತಕ ಓದುವಂತಾಗಲಿ ಬರೆಯಲಾರೆ ಎಂದು ಕೂತೋರು ನಾನು ಬರೆದೇನೂ!!! ಕೊನೆ ಪಕ್ಷ ಸಣ್ಣ ಪ್ರಯತ್ನ ಆ ಬಗ್ಗೆ ಮಾಡೋಣ ಎಂದು ಕಾರ್ಯೋನ್ಮುಖವಾದಾರೂ!!! ಎಂಭ ಆಶಯ ನನ್ನದು.ಹೌದು ಬರವಣಿಗೆ ಎನ್ನೋದು ಬರಿಯುತ್ತಾ ಹೋದಂತೆ ಬೆಳೆಯುತ್ತೆ ಜೊತೆ ಜೊತೆಗೆ ನಮ್ಮನ್ನೂ ಬೆಳೆಸುತ್ತೆ.

1 comment:

  1. super article raghanna... aadare nanage baribeku andre thumba patience beku annisutte... 2 putada mele bariyoke sadya agolla.... sumaaru baari try maadidini...

    ReplyDelete