Wednesday, May 2, 2012

ಮಳೆ ಪಚೀತಿ ಜೊತೆ ನನ್ ಬೈಕ್ ಕ್ಯಾತೆ.

ಎಕ್ಸಲೇಟರ್ ತಿರುವುತ್ತನೇ ಇದ್ದೆ ಗಾಡಿ ಕಿರುಚಾಡುತ್ತಾನೆ ನಡೆದಿತ್ತು.ಅಕ್ಕಪಕ್ಕ ಜನ ಟೂ ವೀಲರ್ ತಳ್ಳುತ್ತನೆ ಇದ್ರೂ ಅವರೆಲ್ಲರೆದುರಿಗೆ ನಾನ್ ಬೈಕಲ್ಲಿ ಸವಾರಿ, ಒಂದು ಸಲ ಪಾರಾದ್ರೆ ಸಾಕು ಇಲ್ಲಿಂದ ಅನ್ನೊ ಧಾವಂತ ನನ್ನದು.ಅಲ್ಲಲ್ಲಿ ಮುಂದೆ ಸಾಗದೆನೆ ನಿಂತ ಪೋರ್ ವೀಲರ್ಗಳು ಇತರವು, ಚಾಲಕರ ಪರದಾಟಗಳನ್ನು ನಾ ನೋಡುತ್ತನೆ ಸಾಗಿದ್ದ ನನ್ ಮೊಬೈಕು ಇನ್ನು ಮುಂದೆ ಸಾಗಲಾರೆ ಎಂದು ಕಿರುಚಾಡುವದನ್ನು ನಿಲ್ಲಿಸಿ ಮೌನವಾಗಿತ್ತು.ಬೇರೆ ಉಪಾಯ ಕಾಣದೆ ಮೊಣಕಾಲುದ್ದ ನೀರಲ್ಲಿ ಇಳಿದೆ, ನನ್ ಬೈಕಿನ ಮುಕ್ಕಾಲು ಚಕ್ರ ನೀರಲ್ಲಿ ಮುಳುಗಿತ್ತು. ರಾತ್ರಿ ಹನ್ನೊಂದು ದಾಟಿದ ಆ ಸಮಯದಲ್ಲಿ ಅದಾಗಲೆ ಒಂದು ಘಂಟೆಗೂ ಹೆಚ್ಚು ಕಾಲ ಮಳೆಯಿಂದ ಪಾರಾಗಲು ಮಾರ್ಗ ಬದಿಯ ಬಸ್ ಸ್ಟಾಂಡನ್ನು ಆಶ್ರಯಿಸಿದ್ದ ನಾನು ಮನೆತಲುಪ ಬೇಕಾದ ಧಾವಂತ ಒಂದು ಕಡೆ ಅದರೆ ಪರಿಸ್ಥಿತಿ ಇಂತು. ಅಂದ ಹಾಗೆ ನಾನೆಲ್ಲೊ ಹಳ್ಳ ಕೊಳ್ಳದಲ್ಲಿ ಸಾಹಸ ಮಾಡೊ ಪ್ರಸಂಗವನ್ನು ವಿವರಿಸುತಿಲ್ಲಾ ಇಲ್ಲಿ. ಬೆಂಗಳೂರೆಂಬ ಮಹಾನಗರದಲ್ಲಿ ಒಂದು ಘಂಟೆ ಸುರಿದ ಭಾರಿ ಮಳೆಯ ನಂತರ ನಾ ಪಟ್ಟ ಪಡಿಪಾಟಲನ್ನ ಹೇಳುತ್ತಿರುವದು. 

ಮಗುವನ್ನು ಹೆಗಲಿಗಾನಿಸಿಕೊಂಡು ಬೈಕ ದೂಡುತ್ತಿರುವ ತನ್ನ ಗಂಡನ ಹಿಂಬಾಲಿಸಿ ಮೊಣಕಾಲುದ್ದ ನೀರಲ್ಲಿ ನಡೆಯುತ್ತಾ ಸಾಗುತಿದ್ದ ಮಹಿಳೆಗೆ ಅದೇನನ್ನಸಿತೋ ಏನೋ ಮಗುವನ್ನು ಹೆಗಲಿನಿಂದಿಳಿಸಿ ನೀರಲ್ಲಿ ಆಡಕ್ಕೆ ನಿಂತಿದ್ದಳೂ ಆ ಅಪರಾತ್ರಿ. ಆಕೆಯ ಗಂಡ ಮುಸುಡಿ ಓರೆ ಮಾಡ್ಕೊಂಡು ಅದೇನೊ ಅಂದಿದ್ದಕ್ಕೆ ಮತ್ತೆ ತಿರುಗಿ ಮಗುವೆತ್ತಿ ನಡೆದಿದ್ದಳು.ಮಗದೊಂದು ಕಡೆ ಆಕೆ ಬೈಕ ಹಿಂಬದಿ ದೂಡುತಿದ್ದರೆ ಅವನೊ ಬೈಕ ಹಾಂಡಲ್ ಹಿಡಿದು ತಳ್ಳುತಲಿದ್ದ. ರಾತ್ರಿ ಮನೆ ಸೇರಬೇಕಾದ ಆ ಜೋಡಿ ನೀರಲ್ಲಿ ನೆನೆದು ಹಿಪ್ಪೆಯಾಗಿತ್ತು.ಗುರಾ ಗುರ್ರನೆ ಕಿರುಚಾಡುತ್ತಾ ಕಾರುಗಳು ಸಾಗುತಿದ್ದರೆ ಅದರೊಳಗೆ ಕುಂತಿದ್ದ ಮಕ್ಕಳ ಕಿರುಚಾಟ ನೀರಿನ ಸದ್ದಿನೊಂದಿಗೆ ಸೇರಿ ಹೊಸ ಸೌಂಡು,ನಡು ನಡುವೆ ನೀರನ್ನು ಸೀಳಿ ಕೊಂಡು ಸಾಗಿ ಬರುತಿದ್ದ ಭಾರಿ ವಾಹನಗಳು ಕೃತಕ ಅಲೆಯೆಬ್ಬಿಸುತಿದ್ದವು, ಬೈಕ ತಳ್ಳೊ ಸವಾರರು ಮೊದಲೆ ಮೊಣಕಾಲುದ್ದ ನೀರು ಜೊತೆಗೆ ವಾಹನಗಳು ಎತ್ತರಕ್ಕೇರಿಸೋ ನೀರು ಯಾಕ್ ಕೇಳ್ತೀರಾ ಪಡಿಪಾಟಲು.ಈ ನಡುವೆ ನನಗ್ಯಾಕೊ ಇದ್ದಕ್ಕಿದ್ದಂತೆ ನೆನಪಾಗಿದ್ದು ಡ್ರೈನೇಜ್ ನೀರು ಕೂಡ ಈ ಮಳೆ ನೀರಿನೊಂದಿಗೆ ಸೇರಿರುತ್ತೆ ಅಲ್ವಾ???? ಯಾಕೊ ವಾಕರಿಕೆ ಬಂದಂಗಾತು.ಪುಣ್ಯ ಊಟ ಮುಗಿಸಿಲ್ಲವಿತ್ತು ಅದಕ್ಕಾಗಿ ಬೇರೇನೊ ತೊಂದರೆ ಆಗಿರಲಿಲ್ಲ, ಆದರೆ ಹಂಗೆ ನೆನಸಿಕೊಂಡ ಕ್ಷಣದಿಂದ ಮೂಗಿಗೆ ಎಂಥದೋ ವಾಸನೆ ಬಡಿದಂಗಾಗಿತ್ತು, ನಿಜವಾಗಿ ವಾಸನೆ ಬಡಿದಿತ್ತೋ? ಅಥವಾ ನನ್ ಭ್ರಮೆನೊ ಯಾವನಿಗೊತ್ತು?.ಒಟ್ಟಲ್ಲಿ ನಾನಿಷ್ಟ ಪಡೊ ಮಳೆಯ ಪರಿಣಾಮಗಳು ಈ ಪರಿ ಕಾಡಿದ್ದು ಹಿಂಸೆ ಅನಿಸತೊಡಗಿತ್ತು. ಒಮ್ಮೆ ಈ ತುಂಬು ನೀರನ್ನು ದಾಟಿದರೆ ಸಾಕಪ್ಪಾ ಎನಿಸಿ ಮತ್ತಷ್ಟು ಜೋರಾಗಿ ಗಾಡಿ ತಳ್ಳತೊಡಗಿದ್ದೆ.ಒಟ್ಟಲ್ಲಿ ಮಳೆ ಮುದದ ಜೊತೆ ರಾಶಿ ಕಿರಿ ಕಿರಿಯನ್ನ ತಂದೊಡ್ಡಿತ್ತು.ಅದರೆ ನಿಜ ಪಚೀತಿ ಮುಂದಿತ್ತು. ನಾನೇನೊ ಈ ಸೀನ್ ಗಳನ್ನು ನೋಡಿಕೊಂಡು,ಅನುಭವಿಸಿಕೊಂಡು ನೀರಿಂದ ಪಾರಾಗಿ ಸಪಾಟಿ ಜಾಗಕ್ಕೆ ಬಂದು ನಿಂತಿದ್ದೆ ನನ್ನಂತೆ ಹಲವರು ಬಂದಿದ್ದರೆನ್ನಿ, ಬೈಕ ಮೇಲತ್ತಿ ಕಿಕ್ ಹೊಡಿಬೇಕಾದರೆನೆ ಗೊತ್ತಾಗಿದ್ದು ನನ್ನದೆ ಪ್ರೀತಿಯಿಂದ ನೋಡಿಕೊಂಡ ಬೈಕು ಕೂಡ ಈ ಪಾಟಿ ಕ್ಯಾತೆ ತೆಗಿಯುತ್ತೆ ಅಂತ.ಉಹೂಂ ಅದರ ಉಸಿರೆ ನಿಂತಿದೆ ಎಂದನಿಸಿತ್ತು.

ಇವ ಸೈಲೆನ್ಸರ್ ಮೂಲಕ ಹೊಟ್ಟೆ ಪೂರ್ತಿ ನೀರ ಕುಡಿದಿದ್ದ, ಸ್ಪಾರ್ಕ್ ಪ್ಲಗ್ ಬೇರೆ ನೀರಿಂದ ತೊಯ್ದು ಪೂರ್ತಿ ಎಂಜೀನ್ನೆ ಥಂಡಾ ಹೊಡೆದಿತ್ತು.ಕಿಕ್ ಹೊಡೆದರೇನು ಬಂತು ಫಲ ಹೊಟ್ಟೆಯೊಳಗಿನ ನೀರ ಬರಿದು ಮಾಡದೆ ಎಂಜಿನ್ನಿಗೊಂದಿಷ್ಟು ಕಾವು ಏರಿಸದೆ? ಟೂಲ್ ಕಿಟ್ ತೆಗೆದು ಸ್ಪಾರ್ಕ್ ಪ್ಲಗ್ ಬಿಚ್ಚಿ ಪೆಟ್ರೋಲ್ ಮೂಲಕ ತೊಳೆದು ಮತ್ತೆ ಫಿಟ್ ಮಾಡಿ ಕಿಕ್ ಹೊಡೆದರು ಉಹೂಂ ಸೌಂಡೆ ಮಾಡುತ್ತಿಲ್ಲ. ವೇಳೆ ನೋಡುತ್ತೇನೆ ಅದಾಗಲೆ ರಾತ್ರಿ ಹನ್ನೆರಡು ದಾಟಿತ್ತು. ಪಕ್ಕದಲ್ಲೆ ನನ್ನಂತೆ ಸಾಹಸ ಮಾಡಿ ಬೈಕ್ ಸ್ಟಾರ್ಟ್ ಮಾಡಿದವನಂದ ಒಂದಷ್ಟು ದೂರ ತಳ್ಳು ಅಮೇಲೆ ಸ್ಟಾರ್ಟ್ ಆಗಬಹುದೆಂದು.ಹಂಗಾಗುತ್ತೊ ಬಿಡುತ್ತೊ ಅವನೊಬ್ಬನಾದರು ಆ ಅಪರಾತ್ರಿ ನನ್ ಕಷ್ಟಕ್ಕೆ ಸ್ಪಂದಿಸಿದ ನೋಡಿ ಖುಷಿ ಕೊಟ್ಟಿತು ಬೇರೇನು ಉಪಾಯ ಕಾಣದೆ ಮತ್ತೆ ಗಾಡಿ ತಳ್ಳಲಿಡಿದೆ, ತೋಯಿಸಿಕೊಂಡ ಮೈಯಲ್ಲು ಬೆವರು ಸುರಿಯುತಿದ್ದುದು ನನ್ನರಿವಿಗೆ ಮಾತ್ರ ಬಂದಿತ್ತು. ಒಂದಷ್ಟು ದೂರ ತಳ್ಳೋದು ಮತ್ತೆ ಕಿಕ್ ಅದುಮೋದು ಸ್ಪಂದನೆ ಕೊಡದ ನನ್ ಗಾಡಿ ಬಗ್ಗೆ ಬೇಸರಿಸಿಕೊಂಡು ಮತ್ತೆ ನಡೆಯೋದು ಹೀಗೆ ಒಂದು ೨ ಕಿ ಮಿ ಸಾಗಿ ಮಾರತ್ ಹಳ್ಳಿ ಸೇರಿದ್ದೆ. ಯಾವುದಾದ್ರು ಅಂಗಡಿ ಬದಿ ಬಿಟ್ಟು ನಾಳೆ ಬಂದು ನೋಡ್ಕೊಳ್ಳೋದು ಈ ಮೊಬೈಕ್ ಯಪ್ಪನ್ನಾ ಅಂದುಕೊಂಡು ಕೊನೆಯ ಬಾರಿ ಎಂಬಂತೆ ೩-೪ ವರುಷದಿಂದ ಒಂದು ದಿನವು ತೊಂದರೆ ಕೊಡದ ನಿನಗೆ ಇವತ್ತೇನು ಬಂತು ರೋಗ, ಸ್ಟಾರ್ಟ್ ಆಗೋದಾದರೆ ಆಗು ಇಲ್ಲಾ ಇಲ್ಲೆ ಎಸ್ದು ಹೋಗೋದೆ ಖರೆ ಅನ್ನುತ್ತಾ ಕಿಕ್ ಹೊಡೆದು ಕಿವಿ ಹಿಂಡಿದೆ ಅಂತರಾಳದಿಂದ ಧ್ವನಿಯುಸಿರಿದಂತೆ ಗೊಗ್ಗರು ಗೊಗ್ಗರಾಗಿ ಕೂಗುತ್ತಾ ಸ್ಟಾರ್ಟ್ ಆಗಿತ್ತು ನನ್ ಬೈಕು.ಹಂಗ್ ಬಾ ದಾರಿಗೆ ನನ್ ಬಿಟ್ಟು ನಿನಗೂ ಇರಕ್ಕಾಗಲ್ಲ ಅಲ್ವಾ ಅಂತ ಸೀಟ್ ಮೇಲೆ  ಹೊಡೆದಿದ್ದೆ. ನನಗೆ ಜೀವ ಬಂದಂತ್ತಾಗಿತ್ತು ಮತ್ತೆರಡು ಭಾರಿ ಕಿವಿ ಹಿಂಡಿ ಗಾಡಿ ಗೇರ್ ಚೇಂಜ್ ಮಾಡಿ ಚಾಲು ಮಾಡಿ ಎಂಬತ್ತರಾಗೆ ಮನೆ ತಲುಪಿದ್ದೆ ೧೫ ನಿಮಿಷದಲ್ಲಿ,ಮನೆ ಚಾವಿ ತೆಗೆದು ಒಳಪ್ರವೇಶಿಸಿದಾಗ ಗೋಡೆ ಗಡಿಯಾರದ ಸಣ್ಣ ಮುಳ್ಳು ೨ ತೋರಿಸುತಿತ್ತು.

ಬೆಂಗಳೂರಿನಲ್ಲಿ ಭಾರಿ ಮಳೆ ಅಲ್ಲಲ್ಲಿ ಮನೆಗಳಿಗೆ ನೀರು ಪ್ರವೇಶ, ಕೃತಕ ನೆರೆ, ಮಳೆಯ ಸಿದ್ದತೆ ಪೂರ್ಣಗೊಂಡಿಲ್ಲ ಅಷ್ಟರಲ್ಲೆ ಮಳೆ ಬಂದಿದ್ದಕ್ಕೆ ಹಿಂಗಾತು ಅನ್ನೊ ಕಾರ್ಪೊರೇಟರ್ ಮೇಯರ್ ಗಳ ಒಕ್ಕಣೆ ಟಿವಿಯಲ್ಲಿ ಪ್ರತಿವರುಷದಂತೆ ಮಾಮೂಲಿ ಮಳೆ ನ್ಯೂಸ್ ನಂತೆ ಬರುತಿತ್ತು. ನಾನೊ ಒದ್ದೆಗೊಂಡ ಬಟ್ಟೆಯನ್ನು ಹಂಗೆ ಇಡಲಾಗದೆ ತೊಳೆದು ಸ್ನಾನ ಮುಗಿಸಿ ಹೊಟ್ಟೆ ಹಿಟ್ಟು ಬೇಯಿಸಿಕೊಳ್ಳುವ ವೇಳೆ ಇದಲ್ಲವೆಂದು ನಿರ್ಧರಿಸಿ ತಂಬಿಗೆ ನೀರು ಕುಡಿದು ಟಿವಿ ಎದುರು ಮಲಗಿದ್ದೆ. ಬೆಳಿಗ್ಗೆ ಎದ್ದು ಆಫ್ ಮಾಡಲು ಮರೆತ ಟಿವಿಯ ಅದೆ ನ್ಯೂಸ್ ಛಾನಲ್ ನಲ್ಲಿ ಗಡ್ಡ ಬಿಟ್ಟ ಜ್ಯೋತಿಷಿ ರಾಶಿ ಭವಿಷ್ಯ ಹೇಳುತಿದ್ದ, ಥಥ್ತೇರಿಕೆ ಎಂದು ಟಿ ವಿ ಆಫ್ ಮಾಡಿ ಎದ್ದಿದ್ದೆ.ಮಳೆಯ ವಿಷಯ ಚಾನೆಲ್ ಮಂದಿಗೂ ಬೇಡವಾಗಿತ್ತು ಮಗದೊಂದು ಮಳೆ ಸುದ್ದಿ ಸಿಗುವ ತನಕ!!!.

No comments:

Post a Comment