Wednesday, January 30, 2013

ಹಳ್ಳಿ ರುಚಿ.....

ಕುಂಟಾಲ ಚಿಗುರು, ನೇರಳೆ ಚಿಗುರು, ಎಂಜಿರದ ಚಿಗುರು,ಪೇರಳೆ ಚಿಗುರು,ಮಾದರಿ ಚಿಗುರು ಹೀಗೆ ಒಂದಷ್ಟು ಚಿಗುರು ತಂದು ಬೇಯಿಸಿ ಮಾಡಿದ ಚಟ್ನಿಯ ಜೊತೆ ಮರಳು ಮರಳಾದ ದನದ ತುಪ್ಪ ಸೇರಿಸಿ ಕಲಿಸಿದ ಅನ್ನದ ತುತ್ತ ತಿಂದ ಬಾಯಿ ರುಚಿ ಪೇಟೆಯ ಹೈ ಫೈ ಊಟವನ್ನೂ ಉಣ್ಣೆಂದಾವಾಗ ಒತ್ತಾಸೆಗೆ ಮಣಿದು ಹಸಿವ ನೀಗಿಸ ಸಲುವಾಗಿ ಅಷ್ಟೆ ಒಂದಷ್ಟನ್ನೂ ಕಷ್ಟದಿಂದ ತಿನ್ನುತ್ತೆ.ಮಜ್ಜಿಗೆ ಹುಳಿ, ಪುನಾರ್ಪುಳಿ ಸಾರು,ಕಾಯಿ ಸಾಂಬಾರ್, ದಾಳಿ ತೋವೆ,ಬೋಳು ಹುಳಿ ರುಚಿಕಟ್ಟಿನ ಎದುರು ನಾರ್ತ್, ಸೌತ್ ಇಂಡಿಯನ್ , ಚೈನೀಸ್ ಇತರ ತರೆವಾರಿ ವೆಚ್ಚಭರಿತ ಫೈವ್ ಸ್ಟಾರ್ ಹೋಟೇಲ್ ಊಟಗಳೂ ಕೂಡ ಸಪ್ಪೆ ಎನಿಸಿ ಬಿಡುತ್ತವೆ.ತರೇವಾರಿ ತಂಬಳಿಗಳು,ವಿಧವಿಧವಾದ ಚಟ್ನಿಗಳು,ಬಾಳೆದಿಂಡು, ಬಾಳೆಕಾಯಿ, ಕುಂಬಳಕಾಯಿ ಸಿಪ್ಪೆಯನ್ನೂ ಬಿಡದ ಪಲ್ಯಗಳು ಹೀಗೆ ತರೇವಾರಿ ಹಳ್ಳಿ ಊಟದ ಡಿಶ್ ಗಳು ಇತರ ಎಲ್ಲಾ ಆಧುನಿಕ ಸಸ್ಯಾಹಾರಿ ಊಟಗಳನ್ನೂ ಮೀರಿಸಿ ನಿಲ್ಲುತ್ತವೆ.ಪತ್ರೋಡೆ, ಪುಂಡಿ, ಗಟ್ಟಿ, ಸೆಕೆ ಉಂಡೆ,ಕೊಟ್ಟಿಗೆ, ಕಡುಬು,ನೀರ್ ದೋಸೆ,ಸೇಮಿಗೆ ಹೀಗೆ ವಿಧ ವಿಧವಾದ ಬ್ರೇಕ್ ಪಾಷ್ಟ್ ಅಕ್ಕಿ ತಿಂಡಿಗಳೂ ಕೂಡ ಕಡಿಮೆ ರುಚಿಕಟ್ಟಿದ್ದೆನಲ್ಲ,ಸೀಸನ್ ಗೆ ತಕ್ಕಂತೆ ಬದಲಾಗೋ ಈ ತಿಂಡಿಗಳು ಅರೋಗ್ಯದ ಕಡೆಗೆ ಗಮನ ಕೊಟ್ಟು ಸಂಪ್ರದಾಯಿಕವಾಗಿ ರೂಪುಗೊಂಡಂತವು ಎನ್ನುವದನ್ನು ನಾವು ಗಮನಿಸಬೇಕಾದ ಅವಶ್ಯಕತೆಗಳಲ್ಲೊಂದು. ಇದೆಲ್ಲವೂ ಕರಾವಳಿಯ ಊಟ ತಿಂಡಿಯ ಮೆನುಗಳ ಸ್ಯಾಂಪಲ್ಗಳು. 

ಕರಾವಳಿಯ ಹಳ್ಳಿಗಳು ಎಂದರೆ ಸುಮ್ಮನೆ ಒಂದು ಎತ್ತರದ ಗುಡ್ಡ ಹತ್ತಿ ನೋಡಿದಲ್ಲಿ ಕಾಣಸಿಗುವ ಅಡಿಕೆ ತೆಂಗು ತೋಟಗಳು ಎಂದು ಮೇಲ್ನೋಟಕ್ಕೆ ಬಣ್ಣಿಸಬಹುದೇನೊ. ಆದರೆ ಆ ತೋಟದೊಳಗಿನ ಹಲಸು, ಮಾವು, ನುಗ್ಗೆ, ಗೇರು, ಬಿಂಬಳೆ, ಜಾಯಿಕಾಯಿ, ಬೇರು ಹಲಸು, ಅಮಟೆ, ಚಿಕ್ಕು, ನುಗ್ಗೆ, ಪಪಾಯ, ಸಾಂಬಾರ ಬೇವು ಮುಂತಾದ ಹಸಿರ ಸಮ್ಮೇಳನದೊಳಗೆ ದೊಡ್ಡ ಮರಗಳು ಆವರಿಸಿಕೊಂಡ ಕಾಳು ಮೆಣಸು, ವೀಳ್ಯದೆಲೆ ಬಳ್ಳಿಗಳು, ಮಟ್ಟಕೆಸ, ಸಿಹಿ ಗೆಣಸು, ಮರಗೆಣಸು, ನೇಗಿಲ ಗೆಣಸು, ಕೆಂಪು ಗೆಣಸು, ಬಿಳೆ ಗೆಣಸು, ಹೆಡಗೆ ಗೆಣಸು, ಪಂಜರ ಗಡ್ಡೆ, ಕರಿ ಕೆಸ, ಬಾಂಬೆ ಕೆಸ, ಊರ ಕೆಸ, ಬಿಳಿ ಕೆಸ, ಚೀಪು ಹೀಗೆ ಬೇರು ಬಿಟ್ಟ ಗೆಡ್ಡೆಗಳು ತೊಟದುದ್ದಕ್ಕೂ ಕಾಣ ಸಿಗುವಂತದ್ದೂ , ಇದೆಲ್ಲದರ ಉಪಯುಕ್ತತೆಯೂ ಬರೀಯ ಆರ್ಥಿಕ ವೃದ್ದಿಯಲ್ಲದೆ ಮೇಲೆ ಹೇಳಿದ ತಿಂಡಿ ತಿನಿಸು ಆಹಾರಗಳು ರೂಪುಗೊಳ್ಳಲು ಕಾರಣವಾಗಿದೆ ಅಂದರೆ ತಪ್ಪಿಲ್ಲ.ಎಲ್ಲಿ ನೋಡಿದರಲ್ಲಿ ಕಾಣಸಿಗುವ ಈರುಳ್ಳಿ, ಮೂಲಂಗಿ, ಟೊಮೆಟೋ, ಎಲೆಕೋಸು, ಹೂಕೋಸು, ಬಟಾಟೆಯ ಬಳಗದ ನಡುವೆ ಕರಾವಳಿಯ ಈ ಬೆಳೆಗಳು ವಿಶಿಷ್ಟವಾಗಿ ನಿಲ್ಲುತ್ತೆ ಮತ್ತು ಇದರಿಂದ ರೂಪಿತವಾದಂತ ಅಹಾರ ಪದಾರ್ಥಗಳು ವಿಶೇಷವಾಗಿ ನಮ್ಮ ರುಚಿಗೆ ಸಿಗುತ್ತೆ ಅನ್ನೊದು ನನ್ನ ಅನಿಸಿಕೆ ಮತ್ತು ಅನುಭವ.

ಬೇಸಿಗೆ ಉರಿ ಬಿಸಿಲಲ್ಲಿ ದೇಹ ತಂಪಾಗಿಸಲು ಒಂದೆಲಗ ಸೊಪ್ಪಿನ ಚಟ್ನಿ, ಶೀತ ಜ್ವರ ಶಮನ ಮಾಡಲು ಸಾಂಬಾರ್ ಬಳ್ಳಿ ಸೊಪ್ಪಿನ ತಂಬಳಿ,ದೇಹ ಬೆಚ್ಚಗಾಗಿಸಲು ಬಿದಿರ ಮೊಳಕೆ ಕಣಿಲೆಯ ವಿಧ ವಿಧವಾದ ತಿನಿಸು ಪಲ್ಯಗಳು ಇತ್ಯಾದಿ ತರೆವಾರಿ ಅಹಾರ ಪದಾರ್ಥಗಳು ವಾತಾವರಣದ ಏರು ಪೇರಿಗೆ ಅನುಗುಣವಾಗಿ ಕರಾವಳಿಗಳ ಮನೆ ಮನೆಯಲ್ಲಿ ದಿನಕ್ಕೊಂದು ರೀತಿಯಂತೆ ಮಾಮೂಲಿ ಬದನೆ, ಬೆಂಡೆ, ತೊಂಡೆ, ಹಾಗಲ, ಸವತೆ ಎಂಬ ಅದೇ ಹತ್ತಿಪ್ಪತ್ತು ತರಕಾರಿಗಳ ಬದಲಾಗಿ ಬೇಯುವಂತದ್ದು.ಹೆಚ್ಚಾಗಿ ಕೃಷಿ ಚಟುವಟಿಕೆಯಲ್ಲಿ ಇರುವ ಇಲ್ಲಿನ ಮಂದಿ ತಮ್ಮ ಕೆಲಸ ಮುಗಿದು ಹಿಂತಿರುಗುವ ದಾರಿಯಲ್ಲಿ ಸಿಗುವ ಮಾವಿನಕಾಯಿ, ಒಂದೆಲಗ, ಬಿಲ್ವಪತ್ರೆ, ಕವಲು ಕುಡಿ, ಮುಟ್ಟಿದರೆ ಮುನಿ ಕುಡಿ, ಕೆಂದಿಗೆ ಬಳ್ಳಿಯ ಚಿಗುರು, ಮುರುಗಲು ಕಾಯಿ, ಮಾವಿನ ಸೊಪ್ಪು, ಕರಡಿ ಸೊಪ್ಪು, ಮಜ್ಜಿಗೆ ಹುಲ್ಲು, ದೂರ್ವೆ ಹೀಗೆ ಕೈಗೆ ಸಿಕ್ಕಿದ ಎಲ್ಲವೂ ಸೊಗಸಾದ ಸಾಂಬಾರು, ಗೊಜ್ಜು, ಚಟ್ನಿ, ಪಲ್ಯಗಳಾಗಿ ರೂಪಿತವಾಗುತ್ತದೆ ಎಂಬುದು ತಿಳಿದಲ್ಲಿ ಈ ಬಗ್ಗೆ ಗೊತ್ತೆ ಇರದ ಪೇಟೆ ಮಂದಿ ಹುಬ್ಬೇರಿಸಿದರೆ ಆಶ್ಚರ್ಯವಿಲ್ಲ.(ಇನ್ನು ನಮೂನೆವಾರು ಸೆಂಡಿಗೆ ಹಪ್ಪಳ ಉಪ್ಪಿನಕಾಯಿಯ ಬಗ್ಗೆ ನಾನಿಲ್ಲಿ ಏನನ್ನೂ ಹೇಳಿಲ್ಲ, ಸಾಧ್ಯವಾದರೆ ಅವಕಾಶ ಸಿಕ್ಕಲ್ಲಿ ಇದನ್ನೂ ರುಚಿಸಿಯೆ ಅನುಭವಿಸೋದು ಒಳಿತು.)ಎಲ್ಲವೂ ವಿಷಮಯವಾದ ಈ ದಿನಗಳಲ್ಲಿ ಇಂತಹ ಹಲವು ಅಡವಿ ತರಕಾರಿಗಳು ದೇಹಕ್ಕೆ ಅರೋಗ್ಯವಲ್ಲದೆ ವಿಶಿಷ್ಟ ರುಚಿಯನ್ನು ನಮಗೊದಗಿಸುವದು ಖಂಡಿತ.ಒಂದಷ್ಟು ಜೇಬು ಬರಿದಾಗುವದನ್ನು ತಪ್ಪಿಸಬಹುದು. 

ಹೌದು, 100 ರೂಪಾಯಿ ವೆಚ್ಚದಲ್ಲಿ ತಿಂಗಳೂ ಪೂರ್ತಿ ಹೊಟ್ಟೆ ತುಂಬಾ ಉಂಡೇನೂ ಮಗ, ನಿಮ್ ಪೇಟೆಯಲ್ಲಿ ಇದು ಸಾಧ್ಯಾನಾ? ಎಂದು ನನ್ನಮ್ಮ ನೀ ಬೆಂಗಳೂರಿಗೆ ಬಂದು ನನ್ ಜೊತೆ ಇದ್ದು ಬಿಡು ಎಂದಾಗ ಹೇಳಿದ ಮಾತು.ಹಳ್ಳಿ ಜೀವನನೇ ಹಾಗೆ, ಪರಸ್ಪರ ನೆರವಿಗೆ ನಿಲ್ಲುವ ಜನರಿರುತ್ತಾರೆ,ಊಟ ತಿಂಡಿಗೆ ಕೈ ಹಾಕಿದಲ್ಲಿ ಸೊಪ್ಪು ಸಗಡ ಏನಾದರೊಂದು ಇದ್ದೆ ಇರುತ್ತದೆ,ಆರೋಗ್ಯ ಕೆಟ್ಟಲ್ಲಿ ಹಿತ್ತಿಲಲ್ಲೆ ಮದ್ದಿನ ಕಣಜವಿರುತ್ತೆ,ಅಸ್ಪತ್ರೆ ಮದ್ದು ಮತ್ತೊಂದು ಅಪರೂಪದ ಮಾತು.ಎಲ್ಲಕ್ಕಿಂತ ಮುಖ್ಯವಾಗಿ ಜೀವನ ಅತ್ಯಂತ ನೆಮ್ಮದಿಯಿಂದ ಕೂಡಿರುತ್ತೆ. ಇಂತಹ ವಿಷಯಗಳು ಪೇಟೆ ಜೀವನಕ್ಕೆ ಒಗ್ಗಿ ಹೋದ ನನ್ನಂತವರಿಗೆ ಅಷ್ಟು ಸುಲಭಕ್ಕೆ ಅರ್ಥವಾಗುವದಿಲ್ಲ.ಸಂಪಾದನೆಯ ಮುಂದೆ ಎಲ್ಲವೂ ಗೌಣವೆಂಬ ಗುಣ ನಮಗೆ ನಾವೆ ಅಳವಡಿಸಿಕೊಂಡಿರಬೇಕಾದರೆ ಹಳ್ಳಿ-ಪಳ್ಳಿ ವಿಷಯಗಳು ತಲೆಗೆ ಹತ್ತೋದು ದೂರದ ಮಾತೆ ಸರಿ.ಆದರೂ ಹಳ್ಳಿಯಿಂದ ಬಂದ ನನ್ನಂತವರಿಗೆ ಅತ್ತ ಕಡೆ ಒಂದು ಸೆಳೆತವಿದ್ದೆ ಇದೆ, ಅಲ್ಲಿನ ವಿಶಿಷ್ಟ ಊಟ ತಿಂಡಿಯ ಪಾಲೂ ಈ ಸೆಳೆತಕ್ಕೊಂದು ಕಾರಣ.ಒಂದು ಸಲ ರುಚಿ ಕಂಡ ನಾಲಗೆ ಅಷ್ಟು ಸುಲಭವಾಗಿ ಆ ರುಚಿಯನ್ನೂ ಮರೆಯೋದು ಕಷ್ಟ. ಬಾಳೆ ಎಲೆಯೊಂದಕ್ಕೆ 1 ರೂಪಾಯಿ ಪೇಟೆಯಲ್ಲಿ ಕೊಡಬೇಕೆಂಬುದ ಕೇಳಿ ನಮ್ಮೂರ ಮಂದಿ ಗೊಳ್ಳಂತ ನಗ್ತಾರೆ ಅಂದರೆ ನಂಬಲೇಬೇಕು. ಅದೇನೆ ಇರಲಿ ಹಳ್ಳಿ ಎಂದು ಮೂದಲಿಸುವ ಪೇಟೆ ಮಂದಿಗೊಂದು ನಿಜ ವಿಷಯ ಹೇಳಲಾ??? ಮತ್ತೇನಿಲ್ಲ ಪೇಟೆ ಎಂದರೆ ಹಳ್ಳಿಗರಿಗೆ ಮಾಯಾಲೋಕವೇನೊ ಹೌದು ಆದರೆ ಆ ಮಾಯೆಯೊಳ ತಾಕಿದರೆ ಕಾಣೋದು ಪೇಟೆಯತ್ತ ಹಳ್ಳಿಗರಿಗಿರುವ ಅಗತ್ಯ ತಾತ್ಸರತನ. ನೀವೂ ತಾತ್ಸಾರ ಪದ ಪ್ರಯೋಗವನ್ನು ಒಪ್ಪದಿರಲೂಬಹುದು ಆದರೆ ನಿಮ್ಮ ಅನುಭವಕ್ಕೆ ಬಂದಲ್ಲಿ ಹೀಗೊಂದು ಭಾವನೆಯನ್ನೂ ಅಲ್ಲಗಳೆಯಲಾರಿರಿ.ಕರಾವಳಿ ಹಳ್ಳಿ ರುಚಿಯೆ ಅಂತದ್ದು ಕಾರಣ ಈ ರುಚಿಯೊಂದಿಗೆ ಇಲ್ಲಿನ ಸಂಸ್ಕೃತಿ ಮತ್ತು ಜೀವನಕ್ರಮದ ಬೆಸುಗೆಯಿದೆ.

ಇತ್ತೀಚಿಗಿನ ಒಂದು ತಿಂಗಳ ಕಾಲದ ಊರ ವಾಸ್ಥವ್ಯದ ಗುಂಗಿನಿಂದ ಇನ್ನೂ ಹೊರಬರದ ನಾನೂ ಅಲ್ಲಿನ ತಿಂಡಿ ಊಟದ ಸವಿಯನ್ನೂ ನೆನೆಸುತ್ತಲೆ ಬೆಂಗಳೂರ ಊಟ ತಿಂಡಿಯ ಸವಿಯುತಿದ್ದೇನೆ.ಬೆಂಗಳೂರ ಊಟ ತಕ್ಕ ಮಟ್ಟಿಗೆ ಮೊದಲಿನಿಂದ ಸವಿಯಾಗಿದೆ ಕಾರಣ ಗೊತ್ತಿರೋದೆ ಮೊದಲ ಭಾರಿಗೆ ಹೆಂಡತಿಯ ಕೈ ರುಚಿಯ ಭಾಗ್ಯ ನನ್ನದಾಗಿದೆ :).ಪತ್ನಿ ಊಟದ ಕೈ ರುಚಿ ಸಿಗದವರೀಗೆ ಬೇಗ ಸಿಗುವಂತಾಗಲಿ, ಸಿಕ್ಕವರೀಗೆ ಹೆಚ್ಚು ಹೆಚ್ಚು ಮನೆಯೂಟನೆ ಸಿಗುವಂತಾಗಲಿ ಎನ್ನುತ್ತಾ... ಸುಮಾರು 2 ತಿಂಗಳ ಕಾಲ ಏನೋಂದು ಬರೆಯದೆ ಸುಮ್ಮನಿದ್ದ ನಾನು ಈ ಮೂಲಕ ಬರೆಯಲು ಶುರು ಹಚ್ಚಿದ್ದೇನೆ, ನನಗೆ ಒಳ್ಳೆದಾಗಲಿ:), ಕರಾವಳಿ ಹಳ್ಳಿಯೂಟದ ಸವಿ ಒಂದಲ್ಲ  ಒಂದು ದಿನ ಎಲ್ಲರೀಗೂ ದಕ್ಕಲಿ ಎಂದು ಶುಭ ಹಾರೈಸುತ್ತಾ, ಹೊಟ್ಟೆ ಹಸೀತಿದೆ, ಮನೆ ಕಡೆ ಹೆಜ್ಜೆ ಹಾಕ್ತಿದೇನೆ,ನಿಮ್ಮದೂ ಊಟ ಆಯ್ತಾ???

ಬೈ ಮತ್ತೆ ಸಿಗೋಣ
ನಿಮ್ಮವ.....
ರಾಘವೇಂದ್ರ ತೆಕ್ಕಾರ್.

ನಮ್ ಕನ್ನಡ ಆಲ್ದ ಮರ ಇದ್ದಂಗೆ..

ಕಹಳೆಯಲ್ಲಿ ಪ್ರಕಟವಾದ ಲೇಖನದ ಯಥಾವತ್ ಪ್ರತಿ:-


 ಸೋಮವಾರ 12 ನವೆಂಬರ್ 2012 / 
"ತಮ್ಮಾ ಬಾ ಇಲ್ಲಿ, ಹೆಂಗಿದ್ದೀ..? ಆರಾಮಾ..?"

"ಲೋ.. ನಿನ್ ಮುಖಾ ಕುಟ್ಟಾ!! ಹೆಂಗಿದ್ದೀಯಲೆ..?"

ಹಿಂಗೆ ಕ್ಷೇಮವೇ ಕುಶಲವೇ ಅನ್ನೋ ಜಾಗದಲ್ಲಿ ಈ ತರದ ಮಾತುಗಳು ಕನ್ನಡದೊಳಗೆ ಜಾಗ ಪಡೆದಿವೆ ಮತ್ತು ಯುವ ಜನಾಂಗದ ಮಾತುಕತೆಯೊಗೆ/ಬರಹದೊಳಗೆ ಇಂತದ್ದೂ ಈಗೀಗ ಸಾರ್ವತ್ರಿಕವಾಗಿದೆ. ಸೂಕ್ಷ್ಮವಾಗಿ ಒಂದು ಸಲ ಈಗೀಗ ಬಳಕೆಯಾಗುತ್ತಿರುವ ಕನ್ನಡವನ್ನ ಸುಮ್ಮನೆ ಕೇಳಿಸಿಕೊಂಡು ನೋಡಿ; ಅಲ್ಲಿ ಗ್ರಾಮ್ಯ ಶಬ್ದಗಳಿವೆ, ಇತರೆ ಭಾಷೆಯ ಶಬ್ದಗಳ ಬಳಕೆಯಿದೆ, ಗತ್ತು ಗೌಲತ್ತುಗಳನ್ನೂ ತೊಡೆದುಹಾಕಿ ಆತ್ಮೀಯತೆ ನೆಲೆಸಿದೆ, ವ್ಯವಹಾರಿಕತೆಯಿದೆ, ಹೊಸ ಪೀಳಿಗೆಯ ಒಲವಿನ ದೋತ್ಯಕಗಳಿವೆ, ಹೀಗೆ ಏನೇನೋ ಇರುವುಗಳ ನಡುವೆ ಒಂದಿಲ್ಲ - ಅದುವೇ 'ನಾಟಕೀಯತೆ'. ನಾ ಹೀಗಂತೀನಿ ಅಂತ ಸಂಪ್ರದಾಯಿಕವಾದಿಗಳು ಮೂಗು ಮುರಿಯಬೇಡಿ, ಭಾಷೆ ಕುಲಗೆಟ್ಟು ಹೋಯಿತು ಎಂದೆನ್ನಬೇಡಿ, ಭಾಷೆಯನ್ನು ನೆಚ್ಚಿನಿಂದ ತಮ್ಮದಾಗಿಸುತ್ತಾ ಆತ್ಮೀಯವಾಗಿಸುತ್ತಾ ಯುವಜನತೆ ಸಾಗಿದೆ, ಅದು ಹಿರಿಯರಿಗೆ ಕುಲಗೆಡಿಸಿದಂತೆ ಕಂಡರೆ ತಪ್ಪು ಯುವಜನತೆಯದ್ದಲ್ಲ. ಅಸಲಿಗೆ ಅಂಥಾ ಯಾವ ಉದ್ದೇಶವಾಗಲೀ ಆ ಬಗ್ಗೆಯ ಅರಿವುಗಳಾಗಲೀ ಯುವ ಜನತೆಗಿಲ್ಲ, ಅದು ತನ್ನ ಪಾಡಿಗೆ ತಾನು ಮುನ್ನಡೆಯುತ್ತಿದೆ, ಈ ಕನ್ನಡ ಸರಳೀಕರಣದ ಬಗ್ಗೆ ಅಪಸ್ವರ ಇರುವವರು ಒಂದಂತೂ ಒಪ್ಪಲೇಬೇಕು - ಭಾಷೆಯ ಉಳಿಕೆ ಮತ್ತು ಬೆಳವಣಿಗೆಗೆ ಚಲನಶೀಲತೆ ಇರಬೇಕು, ಹೊಸ ಪ್ರಯೋಗಗಳಿಗೆ ಭಾಷೆಗಳು ಎದುರಾಗಬೇಕು, ಮೂಲ ಸೊಗಡನ್ನು ಕಳೆದುಕೊಂಡಿದೆ ಎಂದರೂ ಸರಿ ಕುಲಗೆಟ್ಟಿತೆಂದರೂ ಸರಿ ಯುವಜನತೆಯ ಬಾಯಲ್ಲಿ ಕುಣಿದಾಡುವ ಕನ್ನಡದ ನವೀನತೆ ಕನ್ನಡವನ್ನೂ ಆತ್ಮೀಯವಾಗಿಸುವಲ್ಲಿ ಗೆದ್ದಿದೆ.

ಯುವ ಜನತೆಯಲ್ಲಿ ಕನ್ನಡ - ಕರ್ನಾಟಕದ ಬಗ್ಗೆ ಅಸಡ್ಡೆ ಇರುವ ದಿನಗಳಿತ್ತು, ಇದು ಇನ್ನೂ ಕೂಡ ಪೂರ್ತಿಯಾಗಿ ಪರಿಹಾರವಾಗಿರದ ಸಮಸ್ಯೆ. ಕಾರ್ಪೊರೇಟ್ ವಲಯದ ಲಗ್ಗೆಯಿಂದ ಹೆಚ್ಚೆಚ್ಚು ಯುವ ಜನತೆ ಉದ್ಯೋಗಕ್ಕಾಗಿ ಅತ್ತ ವಾಲಿತು, ಪರಿಣಾಮ ಇಂಗ್ಲೀಷ್ ಒಂದೇ ಎಲ್ಲದಕ್ಕೂ ಪರಿಹಾರವೆಂಬ ಭ್ರಮೆಯೊಳಗೆ ಸಿಲುಕಿ ಮೂಲ ಭಾಷೆಯತ್ತ ಅಸಡ್ಡೆ, ಮಾತಾಡಲೂ ಕೂಡ ಮುಜುಗರ ಪಡುವಂತ ಸನ್ನಿವೇಶದೊಳಗೆ ಸಿಲುಕಿತು. ಇದರಿಂದ ಹೊರಬರುವಲ್ಲಿ ದಾರಿಯಾಗಿದ್ದು ಯುವಜನತೆಯೊಳಗೆ ಹಾಸುಹೊಕ್ಕಾಗಿರುವ ಈಗಿನ ನವೀನ ಕನ್ನಡ. ಮಾತೃಭಾಷೆ ಇನ್ನಷ್ಟು ಇಷ್ಟವಾಗುವಂತೆ, ಕನ್ನಡದಲ್ಲಿ ಮಾತಾಡಿದಲ್ಲಿ ಇನ್ನಷ್ಟೂ ಆತ್ಮೀಯವಾಗಬಹುದೆಂಬ ಅರಿವು ಈ ಮೂಲಕ ಯುವಜನತೆಗೆ ಬಂದಿದೆ ಅಂದರೆ ತಪ್ಪಿಲ್ಲ. ಹಾಗಂತ ಇದು ಯಾರೋ ಕಂಡುಕೊಂಡ ಸೂತ್ರವಲ್ಲ, ಇದು ಕಂಡುಕೊಳ್ಳುವಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲಸ ಮಾಡಿದ್ದು ಯುವಜನತೆಯೊಳಗಿನ ಕನ್ನಡ ಮನಸ್ಸು. ಯುವ ಜನತೆಯ ಆಸೆ ಅಭಿಲಾಷೆಗಳು ಯಾವತ್ತೂ ಚೌಕಟ್ಟು ಮೀರಿ ಬೆಳೆಯಲು ಹವಣಿಸುತ್ತಿರುತ್ತವೆ. ಅದೇ ಅಭಿಲಾಷೆಯ ಫಲ ಭಾಷೆಯ ಮೇಲೂ ಅಗಿದೆ; ಪರಿಣಾಮ - ವ್ಯಾಕರಣ, ಛಂದಸ್ಸು, ಮಾತ್ರೆ-ಗಣ ಮುಂತಾದವುಗಳ ಹಂಗನ್ನೂ ಮೀರಿ  ಆತ್ಮೀಯತೆಯೊಂದೇ ಸೂತ್ರವಾಗಿ ನವೀನ ಕನ್ನಡವನ್ನು ಯುವಜನತೆ ತನ್ನದಾಗಿಸಿಕೊಂಡಿದೆ. ಭಾಷೆಯೊಂದು ಹೆಚ್ಚು ಆತ್ಮೀಯವಾಗೋದು ಮುಖ್ಯವೆಂಬುದಾದಾಗ ಕುಲಗೆಟ್ಟು ಹೋಯಿತು, ಭಾಷೆಗೊಂದು ಹೊಸ ಸೊಗಡು ದೊರೆಯಿತೆಂದಾದಾಗ ಮೂಲ ಸೊಗಡನ್ನು ಕಳಕೊಂಡಿತು ಎಂಬುದಕ್ಕೆ ಅರ್ಥವಿಲ್ಲ. ನೆಲವಿಲ್ಲವೆಂದಾದಲ್ಲಿ ಮೆಟ್ಟಿಲುಗಳು ಇರಲ್ಲ, ಏರುವ ಅವಕಾಶನೂ ಇರಲ್ಲಾ ಅಲ್ವೆ? ಸಂಪ್ರದಾಯಿ ಕನ್ನಡ ಸೊಗಡು ನವೀನತೆಗೊಂದು ದಾರಿ ಮಾಡಿಕೊಟ್ಟಿದೆ ಎಂದು ಅಂದುಕೊಳ್ಳುವುದೇ ಸರಿ.

ಡಿ. ಎನ್. ಶಂಕರ ಭಟ್ ಅವರ ಹೆಸರು ಕೆಲವರಾದರೂ ಕೇಳಿರಬಹುದು, ಇವರ ಹೆಸರು ಕೇಳಿದಲ್ಲಿ ಕೆಲವರು ಉರಿದು ಬೀಳುವವರೂ ಇರಬಹುದು, ಕಾರಣ ಇವರು ಕನ್ನಡ ಲಿಪಿಯ ಬಗ್ಗೆ ಮುಂದಿಟ್ಟ ಕೆಲವು ಸೂತ್ರಗಳ ಬಗ್ಗೆ ಒಮ್ಮತವಿಲ್ಲದಿರುವುದು. ಅಷ್ಟಕ್ಕೂ ಇವರು ಪ್ರತಿಪಾದಿಸುತ್ತಿರುವುದು ತುಂಬಾ ಸರಳ - ಅದಾವುದೇ ಭಾಷೆಯಾಗಿರಲಿ ಭಾಷೆಯು ಮೂಲತಃ ಶಬ್ದ ಸಂಕೇತಗಳು, ಇಲ್ಲಿ ಉಚ್ಛಾರದಂತೆ ಲಿಪಿ ಇದ್ದರೆ ಬರವಣಿಗೆಯಲ್ಲಿ ಸಂಶಯ ಜಾಗ ಪಡೆಯುವದಿಲ್ಲ; ಹಾಗೂ ಭಾಷೆಯೊಂದು ಕಠಿಣವಾಗಲಾರದು ಎಂದು. ಕನ್ನಡದಲ್ಲಿ ಈ ರೀತಿ ಗೊಂದಲಗಳಿವೆಯೇ ಎಂಬುದು ನಿಮ್ಮ ಪ್ರಶ್ನೆಯಾದರೆ, ಹೌದು ಎಂಬುದೇ ಉತ್ತರವಾಗಿರುತ್ತದೆ. ಉದಾಹರಣೆಗೆ 'ಷ' ಮತ್ತು 'ಶ' ಅಕ್ಷರಗಳ ಉಚ್ಚಾರದಲ್ಲಿ ಏನೊಂದು ವ್ಯತ್ಯಾಸವಿಲ್ಲ, ಆದರೂ 2 ಅಕ್ಷರಗಳಿವೆ. ರುಣ ಎಂದು ಬರೆದರೂ, ಋಣ ಎಂದರೂ ಉಚ್ಚಾರ ರೀತಿ ಒಂದೇ. ಹಾಗಾದಾಗ 'ಋ' ಅಕ್ಷರದ ಜರೂರಿ ಇದೆಯೆ? ಒತ್ತಕ್ಷರವಾಗಿ 'ಞ' ದ ಬದಲು 'ನ' ವನ್ನೆ ಬಳಸಬಹುದಾದಾಗ 'ಞ' ದ ಅವಶ್ಯಕತೆ ಇದೆಯೆ? ಇಂತವೇ ಹಲವು ಪ್ರಶ್ನೆಗಳನ್ನು ಮುಂದಿಟ್ಟಿವೆ ಇವರ ವಿಚಾರಧಾರೆಗಳು. ಭಾಷೆ ಮತ್ತು ಅದರ ಲಿಪಿ ಸರಳವಾದಷ್ಟೂ ಜನಜನಿತವಾಗಬಲ್ಲುದು,  ಉಚ್ಚಾರದಂತೆ ಲಿಪಿಯಿದ್ದರೆ ಕನ್ನಡ ಕಲಿಯುವವರಿಗೂ ಇನ್ನಷ್ಟು ಸುಲಭವಾಗಿ ಭಾಷೆಯ ಬಗ್ಗೆ ಇನ್ನೂ ಹೆಚ್ಚಿನ ಒಲವೂ ಮೂಡಬಹುದು ಎಂಬುದು ಮೂಲ ಕಾಳಜಿ. ಭಾಷೆ ಬೆಳವಣಿಗೆ ಪಡೆಯಬೇಕೆಂದರೆ ಹೊಸ ಪ್ರಯೋಗಕ್ಕೆ ಒಳಪಡಲೇಬೇಕು; ಇದು ಕನ್ನಡಕ್ಕೆ ಮಾತ್ರ ಸೀಮಿತವಾದುದಲ್ಲ. ಹಾಗಂತ ಇಂತಹ ಪ್ರಯೋಗಗಳನ್ನು ವಿರೋಧಿಸುವವರದ್ದು ತಪ್ಪೇನೂ ಇಲ್ಲ , ಎಲ್ಲಿ ಭಾಷೆಗೆ ಧಕ್ಕೆಯಾಗಿಬಿಡುತ್ತದೋ ಎಂಬ ಮೂಲ ಕಾಳಾಜಿಯೇ ವಿರೋಧಕ್ಕೆ ಕಾರಣ. ಆದುದರಿಂದ ನವೀನತೆಯನ್ನು ಬಯಸುವವರೂ ಹಾಗೂ ಸಂಪ್ರದಾಯಿ ಕನ್ನಡಪರರ ಕನ್ನಡೀಯತೆಯ ಬಗ್ಗೆ ಯಾವುದೇ ಪ್ರಶ್ನೆ, ಸಂಶಯಗಳು ಸಲ್ಲದು. ಆದರೆ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಹೊಸತೊಂದರತ್ತ ಮುನ್ನಡೆಯುವಾಗ ಚರ್ಚೆಗೆ ತೆರೆದುಕೊಳ್ಳುವ ಮನಸ್ಸು ನಮಗಿರಬೇಕು, ಒಪ್ಪುವದು ಬಿಡುವದು ಆಮೇಲಿನ ಪ್ರಶ್ನೆ. ಕನ್ನಡಿಗರು ಹೃದಯವೈಶಾಲ್ಯರು, ಭಾಷೆಯ ಉಳಿವು ಬೆಳವಿನ ಹಾದಿಯಲ್ಲೂ ನಮ್ಮ ಮನಸ್ಸು ತೆರೆದಿರಲಿ ಎಂಬುದಷ್ಟೆ ನನ್ನ ಆಶಯ.

ಭಾಷೆಯ ಉಳಿವಿಗೆ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳಬೇಕೆ? ಬೆಳವಣಿಗೆಯ ಜರೂರಿಗಳಿವೆಯೆ? ಇಂತಹ ಪ್ರಶ್ನೆ ಕಾಡುತಿದ್ದರೆ ಇತಿಹಾಸವನ್ನೊಮ್ಮೆ ನೋಡಿದಲ್ಲಿ ಉತ್ತರ ಸಿಗುತ್ತದೆ. ಕನ್ನಡದ ಎಲ್ಲೆ ದೂರದ ಮಹರಾಷ್ಟ್ರದವರೆಗೂ, ಇತ್ತ ಕಡೆ ಕಾಸರಗೋಡಿನವರೆಗೂ ಬೆಳೆದು ನಿಂತಿತ್ತು. ಆದರೀಗ ಅದೇ ಕನ್ನಡ ಭಾಷೆಯ ಗಡಿ (ರಾಜ್ಯದ ಗಡಿಯ ಹೊರತಾಗಿ) ಎಲ್ಲಿದೆ ಅನ್ನುವದನ್ನೂ ಅವಲೋಕಿಸುವುದು ಒಳಿತು. ಕರ್ನಾಟಕದ ರಾಜಧಾನಿ ಬೆಂಗಳೂರೇ ಕನ್ನಡ ಪರವಾಗಿಲ್ಲ ಅನ್ನುವದನ್ನು ಒಪ್ಪುವುದು ಕಷ್ಟವಾದರೂ ವಾಸ್ತವವನ್ನು ತಿರಸ್ಕರಿಸುವದೆಂತು? ಹೀಗಿರಬೇಕಾದರೆ ಕನ್ನಡವನ್ನು ಸರಳೀಕರಿಸಿ ಇನ್ನಷ್ಟು ಅತ್ಮೀಯವಾಗಿಸುವ ವಾದಕ್ಕೆ ತೂಕ ಬರುವುದಲ್ಲವೆ? ಸಂಪ್ರದಾಯತ್ವ ಕನ್ನಡವೇ ಬರಲಿ, ನವೀನ ಆಡು ಭಾಷೆಯಾಗಿ ಚಾಲ್ತಿಗೆ ವಿಭಿನ್ನ ರೀತಿಯಲ್ಲಿ ತೆರೆದುಕೊಂಡಿರುವ ಕನ್ನಡವೇ ಆಗಲಿ ಕನ್ನಡ ಪರವಾದ ವಾತಾವರಣ ಬೆಳೆಯೋದು ಮುಖ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಕನ್ನಡಕ್ಕೆ ಹೊಸ ಪ್ರಯೋಗಗಳು ಎದುರಾದಾಗ ನಾವು ಚರ್ಚೆಗೆ, ಆ ಮೂಲಕ ಬೆಳವಣಿಗೆಗೆ ನಾವು ತೆರೆದುಕೊಳ್ಳಬೇಕಿರುವದು. ಮೂಲ ತಳಹದಿಯ ಮೇಲೆ ಹೊಸದೊಂದನ್ನು ಕಂಡುಕೊಳ್ಳಬೇಕಷ್ಟೆ. ಆದುದರಿಂದ ಕನ್ನಡದ ವಿರೂಪ ಇತ್ಯಾದಿಗಳು ವಾಸ್ತವ ನಿಟ್ಟಿನ ವಾದಗಳಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಅಯ್ಯೋ ಲೇ.. ಏನ್ ಕೊರಿತೀಯಾ ಕನ, ಆವಾಗಿಂದ ನೋಡ್ತಾ ಇವ್ನಿ.. ಬರೀಯ ಕಥೆನೇ ಹೇಳ್ಕೊಂಡು ಕೂತಿಯಲ್ಲೊ ಮಾರಾಯ. ನಿಂದೇನು ಗೋಳು? ಎಂದುಕೊಂಡು ಮನಸಲ್ಲೆ ಬೈದಾಡ್ತೀರಾ ನನ್ ಬಗ್ಗೆ.. ಬೈಕೋ ಬೇಡಿ ಪಿಲೀಸು, ಏನೋ ಸಣ್ ತಮ್ಮ ಹೋಯ್ದಾಡ್ತಾವ್ನೆ ಹೊಟ್ಟೆಗಾಕ್ಕೋಳ್ಳಿ ಇಲ್ಲಾಂದ್ರೆ ಸ್ಯಾನೆ ಬೇಜಾರಾಗುತ್ತೆ ನಂಗೆ. ಏನೋ ನಮುಗೆ ತಿಳಿದಂಗೆ ನಾವ್ ನೋಡ್ತಿರೊ ಹಂಗೆ ಬರಿಯಕ್ಕೆ ಬರುತ್ತೆ ಅನ್ಕೊಂಡು (ಹಂಗೆ ಅನ್ಕೊಂಡಿದೀನಿ, ಆ ಬಗ್ಗೆ ನಂಗೆ ಕೊಂಬೇನೂ ಇಲ್ಲ) ಬರ್ದೀನಿ ಅಷ್ಟೆ; ಒಪ್ಪೋದು ಬಿಡೋದು ನಿಮ್ಗೆ ಬಿಟ್ಟೀರೋದು, ಅಲ್ವೂರಾ? ಕನ್ನಡ ಆಲ್ದ ಮರ ಇದ್ದಂಗೆ, ಹೊಸತನ್ನು ಹುಡುಕುತ್ತಾ ಪೋಷಿಸೋದು ಆ ಮರಕ್ಕೆ ನೀರುಣಿಸಿದಂತೆ. ಕನ್ನಡದ ಜೊತೆ ಜೊತೆಗೆ ಇರುವ ಇತರ ಭಾಷೆನೂ ಕನ್ನಡಕ್ಕೆ ಬೇರುಗಳಿದ್ದಂಗೆ, ಈ ಮರದ ನೆರಳಲ್ಲಿ ಅದು ಬೆಳಿಬೇಕು, ಜೊತೆಗೆ ಕನ್ನಡ ಬೆಳಿಬೇಕು ಎಂಬುದು ನನ್ನಾಸೆ. ಇಷ್ಟೇ.. ಇದುಕ್ಕೆ ಇಷ್ಟೂದ್ದ ಹೇಳ್ಕೋತಾ ಬಂದೆ. ಏನಂದುಕೊಂಡ್ರೋ ಏನೋ? ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳೋಣ, ಕನ್ನಡವನ್ನು ಬೆಳೆಸೋಣ. 57ನೇ ರಾಜ್ಯೋತ್ಸವದ ಈ ತಿಂಗಳಿನಲ್ಲಿ ಈಟಾದ್ರೂ ಚಿಂತನೆ ನಮ್ಮಲ್ಲಿ ಮೂಡ್ಲಿ. "ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ" ಎಂದು ಹಾಡುತ್ತಾ ಹೆಂಗಾದ್ರೂ ಸರಿ ಕನ್ನಡವನ್ನೇ ದಿನನಿತ್ಯ ಬಳಸೋಣ, ಆ ಮೂಲಕ ಭಾಷೆಯನ್ನು ಬೆಳೆಸೋಣ.

ಲೇಖಕರ ಕಿರುಪರಿಚಯ
ಶ್ರೀ ರಾಘವೇಂದ್ರ ತೆಕ್ಕಾರ್

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ತೆಕ್ಕಾರ್ ಎಂಬ ಪುಟ್ಟ ಹಳ್ಳಿಯವರಾದ ಇವರು ಕಳೆದ ಒಂಭತ್ತು ವರ್ಷಗಳಿಂದ ಬೆಂಗಳೂರಿನಲ್ಲಿಯೇ ನಲೆಸಿದ್ದಾರೆ.

ಟೆಲಿಕಾಂ ಕ್ಷೇತ್ರದಲ್ಲಿ ವೃತ್ತಿನಿರತರಾಗಿರುವ ಇವರಿಗೆ ಬರವಣಿಗೆಯು ಹವ್ಯಾಸ ಮತ್ತು ಮನದ ಭಾವನೆಯನ್ನು ಹೊರಗೆಡುವುತ್ತಾ, ಆಲೋಚನೆಗೊಂದು ದಿಕ್ಕು ತೋರುವ ಪ್ರವೃತ್ತಿಯಾಗಿ ತಾನಾಗಿಯೇ ಇವರ ಜೊತೆಗೆ ಬೆಳೆದು ಬಂದಿದೆ.

Blog  |  Facebook  |  Twitter

3 comments:

Nataraju S M } on: 12 ನವೆಂಬರ್ 2012 09:19 AM ಹೇಳಿದರು...
ರಾಘಣ್ಣ, ನಿಮ್ ಮೊಕ ಕುಟ್ಟಾ.. ಲೇಖನ ಚಂದಾಗಿದೆ.. :)
ಗುರುರಾಜ } on: 12 ನವೆಂಬರ್ 2012 10:09 AM ಹೇಳಿದರು...
ಬಹಳ ಸರಳ ಹಾಗು ಅರ್ಥಪೂರ್ಣ ವಾದ ಲೇಖನ.. ನೀವು ಹೇಳಿರುವ points ಗಳು ಸರಿಯಾಗಿವೆ..
ಡಾ. ಸಿ-ಕೇ-ಮೂರ್ತಿ } on: 12 ನವೆಂಬರ್ 2012 08:29 PM ಹೇಳಿದರು...
ಶ್ರೀ ರಾಘವೇಂದ್ರ ತೆಕ್ಕಾರ್ ರವರು ಹೇಳಿರುವಂತೆ, ಈ ಕನ್ನಡದ ಆಲದಮರದ ಕೆಳಗೆ ಹಳ್ಳೀ ಭಾಷೆಯ ಸೊಗಡು ಪಟ್ಟಣದ ಹೈಕಳ ನಾಲಿಗೆಯಲ್ಲಿ ಹೇಗೆ ಸುಲಲಿತವಾಗಿ ಹರಿದಾಡುವುದನ್ನು ನಾವು ಅಲ್ಲಲ್ಲಿ ಕಾಣಬಹುದು .ಅದು ಒಂದು ಈಗಿನ ಪೀಳಿಗೆಯವರ ಹವ್ಯಾಸವಾಗಿ ಬೆಳೆಯುತ್ತಿದೆ ಎಂದರೂ ತಪ್ಪಾಗಲಾರದು .

Thursday, November 1, 2012

ಏನ ಬರೀಯಲಿ ರಾಜ್ಯೋತ್ಸವದ ಬಗ್ಗೆ?

ಕಾವೇರಿ ಬಗ್ಗೆ ಬರಿಯೋದಾ? ಉತ್ತರ ಕರ್ನಾಟಕದ ಬಗ್ಗೆ ಬರೀಯೋದಾ? ಕರ್ನಾಟಕ ಸರ್ಕಾರದ ನಾಡು ನುಡಿಯ ಪರ/ ವಿರೋಧ ಬಗ್ಗೆ ಬರಿಯೋದಾ? ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿ, ಹೈದರಾಬಾದ್ ನಿಜಾಮಗಿರಿ ಬಗ್ಗೆ ಬರಿಯೋದಾ?ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಬರಿಯೋದಾ?ಕರಾವಳಿ ಕರ್ನಾಟಕದ ಬಗ್ಗೆ ಬರಿಯೋದಾ?ಮೈಸೂರು ಸಂಸ್ಥಾನ, ವಿಜಯನಗರದ ಬಗ್ಗೆ ಬರಿಯೋದಾ?ಹೊಸದಾಗಿ ಹುಟ್ಟಿದ ಉತ್ತರ ಕರ್ನಾಟಕ ರಾಜ್ಯ, ಹಳೆಯದಾಗಿ ಹುಟ್ಟಿ ಮುಸುಲಾದ ಕೊಡಗೂ ರಾಜ್ಯದ ಕೂಗೂಗಳ ಬಗ್ಗೆ ಬರೀಯೋದಾ?ಕನ್ನಡ ಭಾಷೆ ಬಗ್ಗೆ ಬರಿಯೋದಾ? ಕರ್ನಾಟಕ ಹಾಗೂ ಕನ್ನಡ ನುಡಿಸಿರಿಗಳನ್ನು ಎತ್ತಿ ಹಿಡಿದ ಕವಿ ಬರಹಗಾರರೂ ಗಣ್ಯರ ಬಗ್ಗೆ ಬರೀಯೋದಾ?ಕನ್ನಡ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಸಂಘಟನೆಗಳ ಬಗ್ಗೆ ಪರ/ವಿರೋಧಗಳ ಬಗ್ಗೆ ಬರೀಯೋದಾ?ಏನ ಬರೀಯಲಿ ಕನ್ನಡ ರಾಜ್ಯೋತ್ಸವದ ಬಗ್ಗೆ? ಹೀಗೆಂದು ಕೇಳಿದ್ದೆ ಗೆಳೆಯನೋರ್ವ ರಾಜ್ಯೋತ್ಸವಕ್ಕೊಂದು ಅಕ್ಷರಗಳ ಕೊಡುಗೆಯೊಂದನ್ನೂ ನೀಡೆಂದಾವಾಗ.ಬರೀ ಸಂಭ್ರಮವನ್ನಷ್ಟೆ ಬರೆಯುವದೂ ನನಗೆ ಸಾಧ್ಯವಿಲ್ಲವೆಂದಾಗ ಇಂತಹದೊಂದು ದ್ವಂದ್ವ ನನ್ನೊಳಗೆ ಕಾಡತೊಡಗಿತು.

ವೈವಿಧ್ಯತೆಯಲ್ಲಿ ಏಕತೆ ಅನ್ನೋದು ದೇಶದ ಮೂಲಮಂತ್ರವಾಗಿದ್ದರೂ ಕೂಡ ಅದೇನೆಂದೂ ತಿಳಿಯಲೂ ದೇಶದ ಉದ್ದಗಲಕ್ಕೂ ತಿರುಗಬೇಕಾದ ಅವಶ್ಯಕತೆಯಿಲ್ಲ ಕರ್ನಾಟಕವನ್ನೊಮ್ಮೆ ಸುತ್ತಿದರೆ ಅದರ ಸ್ಥೂಲ ಪರಿಚಯ ದಕ್ಕಬಲ್ಲುದು. ಸಾಂಸ್ಕೃತಿಕವಾಗಿ,ಭೌಗೋಳಿಕವಾಗಿ,ಜೀವನ ಕ್ರಮಗಳಲ್ಲಿ,ಆಹಾರ ಶೈಲಿಗಳಲ್ಲಿ ಹೀಗೆ ಪ್ರತಿಯೊಂದರಲ್ಲೂ ವೈವಿಧ್ಯತೆಯನ್ನು ಹೊಂದಿರುವ ರಾಜ್ಯ ನಮ್ಮದೂ. ಇಷ್ಟೆಲ್ಲಾ ವೈವಿಧ್ಯತೆಗಳೂ ಇದ್ದರೂ ಭಾವನೀಯವಾಗಿ ಒಟ್ಟಾಗಿ ಹಿಡಿದಿಡಬಹುದಾದ್ದು ಎಂದರೆ ಅದು ನಮ್ಮ ನುಡಿ, ಅದೆ ಕನ್ನಡ.ಬ್ಯಾರಿ, ತುಳು,ಕೊಡವ, ಲಂಬಾಣಿ, ಕೊಂಕಣಿ,ಅಲ್ಲದೆ ಇತರ ರಾಜ್ಯದ ಭಾಷೆಗಳ ಭಾಷಿಕರೂ ಈ ರಾಜ್ಯದಲ್ಲಿ ಇದ್ದರೂ ಕೂಡ ಕನ್ನಡ ಎಂಬ ಐಕ್ಯ ಮಂತ್ರ ಇವರೆಲ್ಲರನ್ನೂ ಒಂದುಗೂಡಿಸಿದೆ ಅಂದರೆ ತಪ್ಪಿಲ್ಲ (ಈ ಮಾತಿನ ಬಗ್ಗೆ ನನ್ನಲ್ಲೆ ಕೆಲ ಭಿನ್ನಾಭಿಪ್ರಾಯ ಇದ್ದು ಸದ್ಯಕ್ಕೆ ಐಕ್ಯ ಮಂತ್ರ ಕನ್ನಡವೆ ಅನ್ನುತ್ತಾ ಮುಂದುವರಿಯುವೆ).ಕನ್ನಡ ಎಲ್ಲಾ ಭಾಷೆಗಳ ರೀತಿಯಲ್ಲಿ ಪ್ರಾದೇಶಿಕವಾಗಿ ಪರಿಸರಕ್ಕೆ ಅನುಗುಣವಾಗಿ ಮಾತನಾಡುವ ಶೈಲಿಗಳು ಬೇರೆ ಬೇರೆ ಯಾಗಿ ವೈವಿಧ್ಯತೆ ಹೊಂದಿದ್ದನ್ನೂ ನೋಡುತಿದ್ದೇವೆ, ಅದೆಷ್ಟರ ಮಟ್ಟಿಗೆ ಅಂದರೆ ದಾವಣಗೆರೆ ಕನ್ನಡ ಹರಿಹರದ್ದಲ್ಲ, ಹರಿಹರದ ಕನ್ನಡ ರಾಣಿಬೆನ್ನೂರಿನದ್ದಲ್ಲ ಆದರೆ ಈ ಊರುಗಳು ಬೆಸೆದಿರೋದು ಬರೀಯ ೫೦ ಕಿ ಮೀ ಮದ್ಯದಂತರದಲ್ಲಿ.ಹುಬ್ಬಳ್ಳಿ- ಧಾರವಾಡ ಕನ್ನಡ, ಶಿವಮೊಗ್ಗ ಕನ್ನಡ, ಮಂಗಳೂರು ಕನ್ನಡ, ಕುಂದಾಪುರ ಕನ್ನಡ, ಮೈಸೂರು ಕನ್ನಡ, ಬೆಂಗಳೂರ ಕನ್ನಡ, ಬಯಲು ಸೀಮೆ ಕನ್ನಡ,ಬೀದರ್ ಕನ್ನಡ ಹೀಗೆ ತರೇವಾರಿ ಕನ್ನಡ ರಾಜ್ಯದ ಉದ್ದಗಲಕ್ಕೂ ಇದೆ.ಹತ್ತಿರದ ರಾಜ್ಯ ಭಾಷೆಗಳ ಪ್ರಭಾವವೂ ಕನ್ನಡ ಭಾಷಿಕರ ಮೇಲೆ ಭಾಷೆಯ ಮೇಲಾಗಿದೆ ಅದು ರಾಜ್ಯದ ರಾಜಧಾನಿ ಬೆಂಗಳೂರನ್ನು ಹೊರತಾಗಿಸಿಲ್ಲ.ಇಲ್ಲೊಂದು ಸೂಕ್ಷ್ಮ ವಿಚಾರವನ್ನೂ ಪ್ರಸ್ತಾಪಿಸಲು ಇಚ್ಚಿಸುತ್ತೇನೆ.ಕನ್ನಡ ನಮ್ಮುಸಿರು ನಿಜ ಆದರೆ ಕರ್ನಾಟಕದೊಳಗಿನ ಇತರ ಭಾಷೆಯ ತುಚ್ಚೀಕರಣ ಕನ್ನಡ ಬೆಳೆಸುವ ನಿಟ್ಟಿನಲ್ಲಿ ಸಲ್ಲದೂ, ಇದರ ಅಪಾಯ ತುಚ್ಚೀಕರಿಸುವ ಭಾಷೆಯಿಂದಲೂ ಹೆಚ್ಚಾಗಿ ಕನ್ನಡಕ್ಕೆ ಆಗುವ ಸಂಭವಗಳಿವೆ, ತಲ ತಲಾಂತರದಿಂದ ಕನ್ನಡ ಜೊತೆಗೆ ಈ ಭಾಷೆಗಳು ಅಸ್ತಿತ್ವ ಉಳಿಸಿಕೊಂಡು ಬಂದುದರಿಂದ ಅದನ್ನೂ ಗೌರವಿಸುವದನ್ನೂ ರೂಢಿಸಿಕೊಳ್ಳುವದು ಕನ್ನಡ ಭಾಷೆಯ ಒಳಿತಿನ ದೃಷ್ಟಿಯಿಂದ ಒಳ್ಳೆಯದು.ಉದಾಹರಣೆಗೆ ತುಳು ಭಾಷೆಯನ್ನೆ ತೆಗೆದುಕೊಳ್ಳೋಣ, ಕನ್ನಡದಂತೆ ಇದೂ ಒಂದು ದ್ರಾವಿಡ ಭಾಷೆ, ಒಂದು ವಾದದ ಪ್ರಕಾರ ಕೆಲವೊಂದು ಪುರಾವೆಗಳ ಪ್ರಕಾರ ತುಳು ಕೂಡ ಲಿಪಿ ಹೊಂದಿದ ಭಾಷೆ, ಮಲೆಯಾಳಿ ಭಾಷೆಯ ಲಿಪಿ ತುಳು ಭಾಷೆ ಲಿಪಿಯ ಎರವಲೂ ಕಾಲ ಕ್ರಮೇಣ ನಶಿಸುತ್ತಾ ಬಂದಿರುವ ಈ ಭಾಷೆ ಕೇವಲ ಆಡುಭಾಷೆಯಾಗಿ ಮಾರ್ಪಟ್ಟು ಅಸ್ತಿತ್ವ ಉಳಿಸಿಕೊಂಡಿದೆ.ಹೀಗಿರಬೇಕಾದಲ್ಲಿ ಈ ತುಳು ಮೇಲಿನ ದೌರ್ಜನ್ಯ ಕನ್ನಡ ಭಾಷೆಯ ಹೇರಿಕೆಯಿಂದಾಗಿದೆ ಎಂಭ ವಾದವೂ ಹಿಂದಿನಿಂದಲೂ ಕೇಳಿ ಬರುತ್ತಿದೆ, ಇಂತಹ ವಾದಗಳೂ ಈ ಪರಿಯ ಅನುಮಾನಗಳೂ ಮುಂದೊಂದು ದಿನ ನಮ್ಮಯ ಸಮಗ್ರತೆಗೆ ಹೊಡೆತ ಕೊಡುವಂತದ್ದೂ.ಆದುದರಿಂದ ಕನ್ನಡವೆಂಬ ಮೂಲ ಮಂತ್ರದೊಳಗೆ ಕರ್ನಾಟಕದ ಸಮಗ್ರತೆ ಉಳಿಯಲು ಈ ರೀತಿಯ ಉಳಿದೆಲ್ಲಾ ಭಾಷೆಗೆ ಗೌರವಿಸುತ್ತಾ ಎಲ್ಲರೊಂದೊಳಗಾಗಿ ಎತ್ತರಕ್ಕೆ ಬೆಳೆಯುವದೇ ಆಗಿರುತ್ತದೆ, ಆದಷ್ಟೂ ಈ ರೀತಿಯ ಅನುಮಾನಗಳನ್ನೂ ಪರಿಹರಿಸುತ್ತಾ ಎಲ್ಲವನ್ನೂ ಬೆಳೆಸುತ್ತಾ ಬೆಳೆಯುವದೆ ಆಗಿರುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ತುಂಗಭದ್ರಾ, ನೇತ್ರಾವತಿ, ಕಾವೇರಿ,ಅಘನಾಶಿನಿ, ಕುಮಾರಧಾರ, ಫಲ್ಗುಣಿ,ಕಬಿನಿ, ಕಾಳಿ, ಗುರುಪುರ ನದಿ,ಕೇದಕ, ಅರ್ಕಾವತಿ,ಘಟಪ್ರಭಾ, ಮಲಪ್ರಭ,ಯಗಚಿ ನದಿ,ಹೇಮಾವತಿ,ಸೌಪರ್ಣಿಕಾ,ವಾರಾಹಿ,ವರದ,ಶಿಂಶಾ,ಶಾಂಭವಿ,ಶಾಲ್ಮಲಾ,ಶರಾವತಿ, ಕೃಷ್ಣ, ಭೀಮಾ ಹೀಗೆ ಸುಂದರ ಹೆಸರನ್ನೂ ಹೊಂದಿರುವ ಈ ನಾಡಿನ ನದಿಗಳೂ ತನ್ನ ಸುತ್ತಲೂ ಒಂದು ಜನಜೀವನವನ್ನೂ ಈ ನಾಡಿನ ಸುಂದರತೆಯನ್ನೂ ಪೊರೆಯುತ್ತಾ ಬಂದಿದೆ. ನಾಡಿನ ಜಲದ ವಿಷಯ ಬಂದಾಗ ಕಾವೇರಿ ಕೃಷ್ಣೆಗಷ್ಟೆ ನಮ್ಮಯ ಕಾಳಾಜಿಗಳು ಸೀಮಿತವಾಗದೆ ಎಲ್ಲ ನದಿಗಳೂ ಕೂಡ ಮುಖ್ಯವೆ ಅಗಿರಬೇಕಿದೆ. ಜೀವನದಿಯೆಂಬ ಹೆಸರೂ ಎಲ್ಲಾ ನದಿಗಳೀಗೂ ಅನ್ವಯವಾಗುವಂತದ್ದೂ ಕಾರಣ ಜೀವ ಸಂಕುಲವನ್ನೂ ಎಲ್ಲಾ ನದಿಯೂ ಪೊರೆಯುವಂತದ್ದೆ ಆಗಿರುವದರಿಂದ.ಒಂದಷ್ಟೂ ವಿಶಾಲ ಮನೋಭಾವನೆಗಳು ನಾಡಿನ ಜಲ ಸಂರಕ್ಷಣೆಯ ವಿಷಯದಲ್ಲಿ ನಮ್ಮೆಲ್ಲರಲ್ಲೂ ಆಗಿರಬೇಕಿರುವದು ಅವಶ್ಯಕ.ನದಿಗಳ ವಿಷಯ ಬಂದಾಗಲೆಲ್ಲ ನನಗೆ ನೆನಪಿಗೆ ಬರೋದು ನಮ್ಮೂರ ನದಿ ನೇತ್ರಾವತಿ, ನೇತ್ರಾವತಿ ನದಿಗೆ ಬಂದು ಕೂಡುವ ಕುಮಾರಧಾರ ಸಂಗಮ ಸ್ಥಳ ಉಪ್ಪಿನಂಗಡಿ.ನೇತ್ರಾವತಿಯೊಳ ಬಿದ್ದಿದ್ದೇನೆ ಎದ್ದೀದ್ದೇನೆ ಮನ ತನು ತಣಿಸಿದ್ದೇನೆ ದಡದ ಜಾತ್ರೆ ಸಂಭ್ರಮಗಳನ್ನೂ ನೋಡಿದ್ದೇನೆ,ಕೆಂಪಾಗಿ ರೌದ್ರವಾಗುವದನ್ನೂ ಕಂಡಿದ್ದೇನೆ ಇವೆಲ್ಲದರ ಜೊತೆ ಜೊತೆಗೆ ನನ್ನ ಬದುಕನ್ನೂ ಕಟ್ಟಿಕೊಂಡಿದ್ದೇನೆ ಆದ್ದರಿಂದ ಜೀವ ನದಿಯೆಂಬುದನ್ನು ಯಾವುದೋ ಒಂದು ನದಿಗೆ ಸೀಮೀತವಾಗಿರಿಸುವದು ತಪ್ಪು ಎಂಬುದು ನನ್ನ ಆಕ್ಷೇಪ, ಬಹುಶಃ ಇದು ನದಿ ಪಾತ್ರದಲ್ಲಿರುವ ಮಂದಿಯೆಲ್ಲರದೂ, ಅದ ಕಂಡೆ ಬೆಳೆದ ಮಂದಿಯೆಲ್ಲರದೂ ಅಭಿಪ್ರಾಯಗಳಾಗಿರಬಹುದು.ಅದೇನೆ ಇರಲಿ ನಾಡಿನ ಸಮಗ್ರತೆಯ ದೃಷ್ಟಿಯಿಂದ ಜಲವೆನ್ನುವ ಎಲ್ಲವೂ ಪ್ರಾಮುಖ್ಯತೆ ಪಡೆಯುವಂತದ್ದೂ ಎಂಬುದನ್ನಷ್ಟೆ ನಾ ಹೇಳ ಬಯಸಿರುವದು.ಪ್ರಾಕೃತಿಕ ರಮ್ಯತೆಗೆ ನಾಡಿನ ಸುಂದರತೆಗೆ ಈ ನದಿಗಳ ಪಾತ್ರ ಬಹಳ ದೊಡ್ಡದು. 

ನಮ್ಮೂರು ತೆಕ್ಕಾರು ೭೦೦ ರಿಂದ ೮೦೦ ಮನೆ ಹೊಂದಿದ ಸುಂದರ ಹಳ್ಳಿ, ನಾ ನನ್ನ ಹಳ್ಳಿಯ ಬಗ್ಗೆ ಇಲ್ಲಿ ಪ್ರಸ್ತಾಪಿಸುದಕ್ಕೆ ಕಾರಣವಿದೆ.ಸರಾಸರಿ ಮನೆಯೊಂದರಂತೆ ಒಬ್ಬರೂ ನನ್ನನ್ನು ಸೇರಿಸಿ ಬೆಂಗಳೂರು ಹಾಗೂ ಇತರ ಮಹಾ ನಗರವನ್ನೂ ಸೇರಿಕೊಂಡಿದ್ದೇವೆ.ಕಾರಣವಿಷ್ಟೆ ಮೂಲ ನೆಲೆಯಲ್ಲಿ ಉದ್ಯೋಗವಕಾಶಗಳಿಲ್ಲ, ನನ್ನ ಹಳ್ಳಿಯೊಂದರದೆ ಈ ಪರಿಸ್ಥಿತಿಯಾದರೆ ರಾಜ್ಯದ ಪೂರ್ತಿ ಪರಿಸ್ಥಿತಿಯೂ ಬೇರೆಯದಾಗಿಲ್ಲ, ಮಂಗಳೂರು, ಮೈಸೂರು,ಹುಬ್ಬಳ್ಳಿ, ಗುಲ್ಬರ್ಗಾ,ಶಿವಮೊಗ್ಗ ಹೀಗೆ ಎಲ್ಲಾ ಪಟ್ಟಣಗಳು ಬೆಂಗಳೂರಂತೆ ಬೆಳೆದಲ್ಲಿ(ನಾ ಹೇಳುತ್ತಿರುವದು ಉದ್ಯೋಗವಕಾಶದ ನೆಲೆಯಲ್ಲಿ)ರಾಜ್ಯದ ಕ್ಷಿಪ್ರ ಬೆಳವಣಿಗೆಗೆ ಸಹಕಾರಿಯಾಗಬಲ್ಲುದು.ಮೈಸೂರು, ಶಿವಮೊಗ್ಗೆ, ಮಂಗಳೂರು,ಒಂದಷ್ಟೂ ಹುಬ್ಬಳ್ಳಿ ಈ ನಿಟ್ಟಲ್ಲಿ ಬೆಳೆಯುತಿದ್ದರೂ ಗುಲ್ಬಾರ್ಗಾ ಬೀದರ್ ಬಿಜಾಪುರ ಬಾಗಲಕೋಟೆ ಮುಂತಾದ ನಗರಗಳನ್ನೂ ನೋಡಿದಲ್ಲಿ ಇಲ್ಲಿ ಪ್ರಾಥಮಿಕ ಮೂಲ ಸೌಲಭ್ಯ ಪೂರೈಸುವಲ್ಲೆ ಪೂರ್ತ ಯಶಸ್ಸು ನಾವು ಕಂಡುಕೊಂಡಿಲ್ಲ.ಈ ನಿಟ್ಟಲ್ಲಿ ಯೋಚಿಸಿದಾಗ ರಾಜಕೀಯ ಇಚ್ಚಾ ಶಕ್ತಿಯ ಕೊರತೆ ಎದ್ದು ಕಾಣುತ್ತದೆ ಇದರ ಪರಿಣಾಮಗಳೆ ಆಗಾಗೆ ನಮ್ಮಯ ಸಮಗ್ರತೆಯ ಮದ್ಯೆ ಹುಟ್ಟುವ ಅಪಸ್ವರಗಳು.ಅಪಾಯ ಎದುರುಗೊಂಡಾಗ ತಂತ್ರ ಹೂಡುತ್ತಾ ಕೂರುವ ಬದಲು ಕರ್ನಾಟಕವನ್ನೂ ಉತ್ತರ ದಕ್ಷಿಣ ಎಂಬುದಾಗಿ ವಿಭಜಿಸಿಕೊಳ್ಳದೆ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ರಾಜಕೀಯ ಇಚ್ಚಾ ಶಕ್ತಿಗಳು ಕೆಲಸ ಕೈಗೊಳ್ಳುವ ಕೈಂಕರ್ಯ ತೊಟ್ಟಲ್ಲಿ ಕರ್ನಾಟಕಕ್ಕೆ ಒಳಿತು.ಅದರೆ 2700 ಕನ್ನಡ ಶಾಲೆಯನ್ನು ಮುಚ್ಚಲು ಹೊರಟ ರಾಜಕೀಯ ಇಚ್ಚಾಶಕ್ತಿಯ ಎದುರು ಇದು ಸಾಧ್ಯವೇ?ಯಕ್ಷ ಪ್ರಶ್ನೆ ಅಂದರೆ ಇದೆ ಇರಬೇಕು.

ನಾವು ಸ್ನೇಹಪರರೂ ಬಹಳ ಬೇಗ ಎಲ್ಲರೊಳಗೆ ಒಂದಾಗಿ ಬಿಡುತ್ತೇವೆ ,ಹೌದು ಇದು ಒಳ್ಳೆಯದೆ ಆದರೆ ಎಲ್ಲರೊಂದಿಗೆ ಒಂದಾಗಿ ಬಿಡುವುದೆಂದರೆ ನಾವೂ ನಮ್ಮನ್ನೂ ಕೊಂದುಕೊಂಡು ಅವರಾಗುವದಲ್ಲ.ಕೆಲವೊಮ್ಮೆ ಅತೀ ಒಳ್ಳೆಯದೂ ಕೆಟ್ಟದ್ದೆ ಮಾಡುತ್ತದೆ, ಮೊನ್ನೆ ಹೀಗೆ ತರಕಾರಿ ಪಡೆಯಲೆಂದು ಹೋಗಿದ್ದೆ ಅಂಗಡಿಯವ ತಮಿಳಿನಲ್ಲಿ ಮಾತಾಡಿಸಿದ ನಾನು ಕನ್ನಡದಲ್ಲೆ ಉತ್ತರಿಸಿದೆ, ಅಯ್ಯೋ ನೀವೂ ಕನ್ನಡ ಕಲಿತು ಬಿಟ್ಟೀರಾ?ಎಂದ, ನಾ ಕಲಿಯುವದೆಲ್ಲಿಂದ ಬಂತು ನಾ ಕನ್ನಡದವನೆ ಅಂದರೂ ಅವ ಒಪ್ಪಲೂ ರೆಡಿ ಇರಲೇ ಇಲ್ಲ. ಹೂಂ ಇದು ಹೀಗಾದರಾಗಲ್ಲ ಎಂದೆನಿಸಿ ನಾನು ತುಸು ವರಸೆ ಬದಲಿಸಿದೆ ನಾ ಪರಭಾಷಿಕ ಸರಿ ನೀನು? ನಾನು ಇದೇ ಊರು ಅಂದಿದ್ದ, ಹಾಗಿದ್ದ ಮೇಲೆ ನೀ ತಾನೆ ಕನ್ನಡ ಕಲಿಸಬೇಕಿರೋದು ,ಅದಕ್ಕಾಗಿ ನೀನು ಕನ್ನಡದಲ್ಲಿ ಮಾತಾಡಬೇಕು ತಾನೆ ಬದಲಾಗಿ ನಾ ಕನ್ನಡದಲ್ಲೆ ಮಾತಾಡಿಸಿದ್ರೂ ತಮಿಳಲ್ಲಿ ಮಾತಾಡ್ತೀಯಲ್ಲೊ ಮಾರಾಯ? ಇಲ್ಲೆ ಹುಟ್ಟಿದ್ದು ಅಂತಿ ಕನ್ನಡಕ್ಕಾಗಿ ಇಷ್ಟಾದ್ರೂ ಮಾಡ್ಬಾರ್ದಾ ಅಂದಿದ್ದೆ.ಪೆಚ್ಚಾಗಿ ನೀವೂ ನೋಡಕ್ಕೆ ತಮಿಳಿಯನ್ ತರ ಕಂಡ್ರಿ ಅದುಕ್ಕೆ ತಮಿಳಲ್ಲಿ ಮಾತಾಡಿಸಿದೆ, ಅವರ ಭಾಷೆಯಲ್ಲಿ ಮಾತನಾಡಿ ಆತ್ಮೀಯತೆ ಕುದುರಿಸಿಕೊಂಡ್ರೆ ವ್ಯಾಪಾರ ಕುದುರುತ್ತೆ ಅನ್ನೋದು ನಮ್ ಅನುಭವ ಸ್ವಾಮಿ ಅಂದ, ಅಯ್ಯೊ ಅಂದ್ಕೊಂಡು ಅವನಿಗೆ ಕಾಣುವಂತೆ ತಲೆ ಚಚ್ಕೊಂಡು ದುಡ್ಡೆಣಿಸಿ ಕೊಟ್ಟು ಮುಂದುವರಿದೆ, ಪೆಚ್ಚಾಗಿ ನೋಡೋ ಅವನ ದೃಷ್ಟಿ ನನ್ನ ಒಂದಷ್ಟು ದೂರ ಹಿಂಬಾಲಿಸಿತ್ತು. ನಾವೂ ಬದಲಾಗಬೇಕಿರೋದು ಇಲ್ಲಿಯೆ, ನುಡಿಯ ಬಗ್ಗೆ ,ನಮ್ಮಯ ಬಗ್ಗೆ ನಮ್ಮೊಳಗಿರುವ ಕೀಳರಿಮೆಯ ತೊಡೆದು ಹಾಕುತ್ತಾ ಕನ್ನಡ ಬೆಳೆಸಬೇಕಿದೆ, ದಿನ ನಿತ್ಯದ ಕಾರ್ಯಗಳಿಗೆ ನಮಗಾತ್ಮೀಯವಾದ ಕನ್ನಡವನ್ನೂ ಉಪಯೋಗಿಸುತ್ತಲೆ ಬಂದಲ್ಲಿ ಪರಿಸರವೂ ಕನ್ನಡ ಮಯವಾಗುತ್ತೆ ಆ ಮೂಲಕ ನಾವೂ ಬೆಳೆಯುತ್ತೇವೆ, ಹೀಗಿರಬೇಕಾದರೆ ಇಷ್ಟು ಸುಲಭದ ಕೆಲಸ ಮಾಡುವದರಲ್ಲಿ ನಾವೂ ಎಡವಬಾರದೂ ಅಲ್ಲವೆ?, ಈ ಮೂಲಕ ಪರಭಾಷಿಕರೂ ಕನ್ನಡ ಕಲಿಯುವಂತಾದರೆ ಒಳಿತೂ ನಮಗೆ ಅಲ್ಲವೆ, ಜ್ಞಾನದ ದೃಷ್ಟಿಯಿಂದ ಎಲ್ಲಾ ಭಾಷೆ ಕಲಿಯೋಣ ಆದರೆ ನಾವೆ ಬೇರೆ ಭಾಷಿಗರಾಗಿ ಬದಲಾಗೋದು ನಮ್ಮನ್ನೂ ನಾವೇ ಕೊಂದುಕೊಂಡಂತೆ ಸರಿ.

ರಾಜ್ಯ ಭಾಷೆ ನಮ್ಮಯ ಬಗ್ಗೆ ಬರೆಯುತ್ತಾ ಕೂತರೆ ಕೊನೆ ಎಲ್ಲಿ? ಬರೆಯುವದಿದೆ ಸಾಕಷ್ಟೂ , ಒಂದಷ್ಟೂ ಚಿಂತನೆಗೆ ನಾವೇ ತೆರೆದುಕೊಳ್ಳಬೇಕೂ ಅನ್ನೊದು ನನ್ನ ಆಶಯವಾದುದರಿಂದ ಸಂಕ್ಷಿಪ್ತ ರೂಪದಲ್ಲೆ ಕೆಲವನ್ನೂ ಕಟ್ಟಿಕೊಟ್ಟಿರುವೆ, ಬರೆಯುವದೂ ಮೂಲ ಉದ್ದೇಶ ಅಲ್ಲವಾದುದರಿಂದ ಇದಿಷ್ಟನ್ನೆ ಹೇಳಿದ್ದೇನೆ, ಕೊನೆಯದಾಗಿ ಬರೆಯುವದೂ ಇಷ್ಟೆ... ಕನ್ನಡ ಚಿಂತನೆ , ಸಂಭ್ರಮಗಳೂ ರಾಜ್ಯೋತ್ಸವ ದಿನಕ್ಕೆ ನವೆಂಬರ್ ತಿಂಗಳಿಗಷ್ಟೆ ಸೀಮಿತವೇ? ಅದು ಪ್ರತಿ ದಿನವಿರಲಿ ಅನ್ನುವದೂ ಎಲ್ಲರ ಅಭಿಪ್ರಾಯ,ಆದರೆ ರಾಜ್ಯೋತ್ಸವದ ಈ ದಿನ ಇಲ್ಲದಿದ್ದರೆ ಕನ್ನಡ ದಿನಗಳೆ ನಮ್ಮದಾಗಿರಲಿ ಎಂದು ಹೇಳುವದಕ್ಕೆ ನಾವೂ ಮುಂದೆ ಬರುತಿದ್ದೆವಾ?ಕನ್ನಡ ಚಿಂತನೆ ಅವಲೋಕನಗಳಿಗೆ ಇಷ್ಟೊಂದು ತೆರೆದುಕೊಳ್ಳುತಿದ್ದೇವಾ?ಎಂಬುದು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳೂ,ಯಾರು ಮರೆಯಲಿ ಬಿಡಲಿ ಕನ್ನಡಕ್ಕಾಗಿ ಪ್ರತಿದಿನ ಚಿಂತಿಸುವ ಮನಸ್ಸು ಇದ್ದೇ ಇದೆ ಇದರ ಹೊರತಾಗಿಯೂ ಕನ್ನಡಕ್ಕೊಂದು ಹಬ್ಬ, ಆ ಮೂಲಕ ಒಂದಷ್ಟೂ ನಾಡು ನುಡಿಯ ಚಿಂತನೆ, ಸಂಭ್ರಮದೊಳಗೆ ಕನ್ನಡದ ಹೊರತಾದವರನ್ನೂ ಸೇರಿಸಿಕೊಂಡು ಸಂಭ್ರಮಿಸಿ ಖುಷಿ ಹಂಚಿಕೊಂಡರೆ ತಪ್ಪೇನೂ ಇಲ್ಲ,ಈ ಮೂಲಕವೂ ಕನ್ನಡಿಗರ ಹೃದಯ ವೈಶಾಲ್ಯ ಹೊರ ಜಗತ್ತಿಗೆ ಪಸರಿಸಿದಲ್ಲಿ ಒಳಿತು ಕನ್ನಡಕ್ಕೆ ಅ ಮೂಲಕ ಕನ್ನಡ ಜನತೆಗೆ.ಈ ಕಾರಣಕ್ಕಾಗಿ ರಾಜ್ಯೋತ್ಸವದ ಈ ದಿನ ಸಂಭ್ರಮಿಸುತಿದ್ದೇನೆ,ಹಂಚಿಕೊಳ್ಳುವ ಆಶಯದಿಂದ ಎಲ್ಲರೀಗೂ ಸಂಭ್ರಮದ 57ನೇ ವರುಷದ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತಾ ಖುಷಿಯಿಂದ ಮುಗಿಸುತಿದ್ದೇನೆ . ಧನ್ಯವಾದಗಳು... :)

Saturday, October 27, 2012

ಮತ್ತೆ ಮತ್ತೆ ನೆನಪಾಗೋ ಬಾಲ್ಯ.



ಅಂಬಿಗನ ಹಂಗಿಲ್ಲದ , ತೂಫಾನೆಂಬುದನ್ನೆ ಕಾಣದ ಅಷ್ಟೇ ಏಕೆ ಅಸಲಿ ದಡವೇ ಇಲ್ಲದ, ಮನಸೆಲ್ಲಾ ಸಂತಸವನ್ನೆ ಸಮುದ್ರದಂತೆ ಹೊದ್ದು ಮಲಗಿದ್ದ ಬಾಲ್ಯ ಕಳೆದಿದೆ.ಬಾಲ್ಯವೆಂಬುದು ಬದುಕಿನ ಮೊಟ್ಟ ಮೊದಲ ಮಳೆಗಾಲ,ಆ ದಿನಗಳ ಮೋಡದ ತುಂಬ ಸಂತಸವೆಂಬ ತುಂತುರ ಪನಿ, ಕೆಲವೊಮ್ಮೆ ರಭಸದಿಂದ ಸುರಿದು ಹಿಪ್ಪೆಯಾಗಿಸಿದರೆ ಕೆಲವೊಮ್ಮೆ ಹಿಡಿದಿಟ್ಟುಕೊಳಬಹುದಾದಷ್ಟೆ ಮೋಡದಿಂದ ಜಾರುವ ಹನಿ, ಅಸಲಿಗೆ ಇವೆಲ್ಲ ಗೊತ್ತಾಗಿದ್ದು ಬಾಲ್ಯವೆಂಬ ಮಳೆಗಾಲದ ಮೋಡ ಸರಿದು ನೆತ್ತಿಗೆ ಇಂಚಿಂಚೆ ಬಿಸಿಲು ತಾಕಿದ ನಂತರ.ಮಂಜು ಕವಿದ ಮುಂಜಾವೂ ನುಸುಳುವ ಸುಳಿಗಾಳಿಯ ಜೊತೆ ತುಂತುರು ಸೋನೆ ಮಳೆಯು ತಂಪೆರೆದು ನೇಸರನ ಕಿರಣಗಳಿಗೆ ಚೂರು ಚೂರೆ ಕರಗಿದಂತೆ ನಮ್ಮ ಬಾಲ್ಯವೂ ಕಳೆದಿದೆ.

ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ 
ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು 
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ದಡವೇ ಇಲ್ಲದ ನಮ್ಮದೆ ಸಮುದ್ರದಲ್ಲಿ ಹೊಸ ಹೊಸ ಗುರಿಯೆಂಬ ದಡಗಳು ಹುಟ್ಟಲಾರಂಬಿಸಿದವು,ಅಂಬಿಗನಂತೆ ದಾರಿ ತೋರುವ ಶಿಕ್ಷಣ ವ್ಯವಸ್ಥೆಯನ್ನ ತಬ್ಬಿಕೊಂಡು ಮುಂದುವರಿಯಲಾರಂಭಿಸಿದೆವು,ಸಂತಸದ ಜಾಗದೊಳಗೆ ಖಿನ್ನತೆ ಭಾವಗಳೂ ಒಂದಿಂಚೂ ಆಕ್ರಮಿಸಿ ಸೂರು ಪಡಕೊಂಡವೂ.ಗೊತ್ತಿದ್ದೋ ಗೊತ್ತಿಲ್ಲದೆಯೋ ಸಹನೆ,ಉನ್ಮಾದ,ಕೋಪ, ದ್ವೇಷ,ನಾನು,ಎಂಭಿತ್ಯಾದಿ ಬಿಳಿಮೋಡದೊಳಗಿನ ಕಪ್ಪು ಕಲೆಗಳನ್ನೂ ಮೈದಡವಲಾರಂಭಿಸಿದೆವು ಅದು ನಮ್ಮೊಳಗೆ ಹುಟ್ಟಿದ ಬಿಳಿ ಪದರದ ಹೊದಿಕೆ ಹೊಂದಿದ ಕಾರ್ಮುಗಿಲು.ಇವೆಲ್ಲವದರ ಮದ್ಯೆಯೂ ಆಗಾಗ ನೆನಪಾಗೊ ಆ ಮೊದಲ ಮಳೆಗಾಲ ಮುದವೆನಿಸುವ ತುಂತುರು ಸುಳಿಗಾಳಿಯೊಡಲಿನ ಮುಂಜಾವೂ ತುಂಬುತಿತ್ತು ಚೈತನ್ಯ . ಮುಂದುವರಿದಂತೆ ಇದ್ದುದರ ಬಗ್ಗೆ ಒಂತರಾ ಜಿಗುಪ್ಸೆ, ಹೊಸತೊಂದನ್ನು ನಮ್ಮದಾಗಿಸುವ ಆಸೆಗಳು.ಯಾಕೋ ತಾಯೆ ಬಂಧನದಲ್ಲಿರಿಸಿದ ಭಾವ, ಬಂಧನ ಬಿಡಿಸಿಕೊಂಡು ನಭಕ್ಕೆ ನೆಗೆಯುವ ತುಡಿತ. 

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ, 
ಅಡಗಲಿ ಎಷ್ಟು ದಿನ..? 
ದೂಡು ಹೊರಗೆ ನನ್ನ 
ಓಟ ಕಲಿವೆ ಒಳ-ನೋಟ ಕಲಿವೆ 
ನಾ ಕಲಿವೆ ಉರ್ಧ್ವಗಮನ 
ಓ ಅಗಾಧ ಗಗನ. 

ರೆಕ್ಕೆ ಬಿಚ್ಚಿದ ಹಕ್ಕಿ ಹಾರುತ್ತದೆಯೆ ಆದರೂ ಹಾರುವ ಕಲೆ ಕರಗತವಾಗಿರುವದಿಲ್ಲ ಈ ಕ್ಷಣಗಳಲ್ಲೆ ಒಂದಷ್ಟು ಯೌವನದ ಎಡವಟ್ಟುಗಳು ನಡೆದುಬಿಡುತ್ತದೆ ಅಮ್ಮನ ಮಡಿಲು ಬಿಟ್ಟಿದ್ದು ರೂಢಿಯಿಲ್ಲದವನೀಗೆ ಒಳನೋಟ ಕಲಿಯಲು ತನ್ನವರೆನಿಸಿಕೊಂಡವರ ಹುಡುಕಾಟದಲ್ಲಿ ತೊಡಗಿರುತ್ತೇವೆ, ಯಾಕೋ ನಿಂಗಿ ಪದ ಕಿವಿಗಪ್ಪಳಿಸುತ್ತದೆ... 

ನಿಂಗಿ ನಿಂಗಿ ನಿಂಗಿ ನಿಂಗಿ 
ನಿದ್ದಿ ಕದ್ದೀಯಲ್ಲೆ ನಿಂಗಿ 
ನಿಂಗಿ ನಿಂಗಿ ನಿಂಗಿ ನಿಂಗಿ 
ಆಸಿ ಎದ್ದೀತಲ್ಲೆ ನಿಂಗಿ 
ಚಂದಾನ ಚಂದ್ರ – ಹೊಯ್ಯಾರೆ ಹೊಯ್ಯ 
ಭೂಮಿಗ ಲಾಂದ್ರ – ಹೊಯ್ಯಾರೆ ಹೊಯ್ಯ 
ಆಗ್ಯಾನ ನೋಡಲ್ಲಿ 

ಹಿಂಗೆ ಮುಂದುವರಿದೂ ಜಾಲಿ ಬಾರಿನಲ್ಲಿ ಮೂರು ಪೋಲಿ ಗೆಳೆಯರು ಗೋಪಿಯನ್ನೂ ಗೋಳು ಹೊಯ್ಕೊಳೋದು, ಹೆಂಡ ಹೆಂಡತಿ ಕನ್ನಡದ ರತ್ನನ್ ಪದಗಳೂ ನೆನಪಾದರೂ ಆದೀತೂ :) ಕಾಲಾಯೈ ತಸ್ಮೈ ನಮಃ ......(ಕಫಾಲಿ ಟಾಕೀಸ್ ನಲ್ಲಿ ನೇತಾಕಿದ್ದ ಪಿಚ್ಚರ್ ಪೋಷ್ಟರ್ ನೆನಪಿಗೆ ಬಂತು. :) ). 

ಅಮ್ಮನ ರಕ್ಷೆಯ ಗೂಡೂ ಬೇಡೆಂದು ಹೊರಬಂದಾದ ಮೇಲೂ ಮಗದೊಬ್ಬರ ಪ್ರೀತಿಯ ಕಕ್ಷೆಯೊಳಗೆ ಸೇರಿಕೊಂಡು ತಿರುಗಲಾರಂಭಿಸುತ್ತೇವೆ, ಬಾಳೆಂಬುದು ಬಂಧನದಿಂದ ಮುಕ್ತವಾದುದಲ್ಲವೆಂಬುದರ ಸತ್ಯ ಬಹಳ ಸಲ ಅರಿವಿಗೆ ಬಂದಿರುವದೆ ಇಲ್ಲ.ಈಗೀಗ ಮನಸ್ಸು ಬದುಕು ತಂದೊಡ್ಡುವ ತೂಫಾನನ್ನು ಎದುರುಗೊಳ್ಳುತ್ತದೆ ಹೆಚ್ಚಿನೆಲ್ಲಾ ಏಟು ತಿಂದು ಬಿಕ್ಕಳಿಸಿ ಸುಮ್ಮನಾಗಿ ಮಲಗಿಬಿಡುವ ಮಗುವಿನಂತೆ ಸೋಲೊಪ್ಪಿಕೊಳ್ಳುತ್ತದೆ, ರಚ್ಚೆ ಹಿಡಿದು ಹಠ ಹಿಡಿವ ಸ್ವಭಾವವನ್ನೂ ರೂಢಿಸಿಕೊಳ್ಳುತ್ತದೆ,ಎಷ್ಟೋ ಸಲ ಬದುಕಲ್ಲಿ ಮುಖ್ಯವಾದುದನ್ನೂ ಕಳೆದುಕೊಳ್ಳುತ್ತಾ ಇದ್ದೀನಿ ಎಂಭ ಭಯದಲ್ಲೆ ಹಿಡಿದಿಟ್ಟುಕೊಳ್ಳಬೇಕೆಂಬ ಛಲದಲ್ಲೆ ಎಲ್ಲವನ್ನೂ ಕಳೆದುಕೊಂಡಿರುತ್ತೇವೆ.ಮತ್ತೆ ಕಳೆದ ಸಂತಸದ ಕಡಲು ಬಾಲ್ಯ ನೆನಪಾಗಿರುತ್ತದೆ. 

ಕಾಣದ ಕಡಲಿಗೆ ಹಂಬಲಿಸಿದೆ ಮನ 
ಕಾಣಬಲ್ಲೆನೆ ಒಂದು ದಿನ 
ಕಡಲನು ಕೂಡಬಲ್ಲೆನೆ ಒಂದುದಿನ!!!! 

ಬರಬರುತ್ತಾ ಬದುಕು ಪಕ್ವವಾಗುತ್ತೆ , ಸ್ವ ಸಾಮರ್ಥ್ಯದಿಂದ ರೆಕ್ಕೆ ಬಿಚ್ಚಿ ಹಾರುವ ಕಲೆಯೂ ರೂಢಿಯಾಗುತ್ತೆ, ಏಟೂ ತಿಂದ ಮನಸ್ಸು ಹೊಸತೊಂದರತ್ತ ಹೊರಳಿರುತ್ತದೆ, ನಿಜ ಹೇಳಲಾ ಸಂಗಾತಿ ದೊರೆತ ಈ ಕಾಲದಲ್ಲೆ ಅಮ್ಮ ಮತ್ತೆ ನೆನಪಾಗ್ತಾಳೆ, ಮನಸ್ಸು ಅಮ್ಮ ಮತ್ತು ಸಂಗಾತಿ ಪ್ರೀತಿಯನ್ನೂ ಬೇಡವೆಂದರೂ ಅಳತೆ ಮಾಡಿಯೇ ಸಿದ್ದವೆಂದು ರಚ್ಚೆ ಹಿಡಿದು ನಿಲ್ಲುತ್ತೆ. ತಾಯಿ ಪ್ರೀತಿಯೆ ಗೆಲ್ಲುತ್ತೆ ಆದರೂ ಸಂಗಾತಿ ಪ್ರೀತಿಯ ಆಸರೆಯೊಂದಿಗೆ ಮತ್ತೆ ತಾಯಿ ಮಡಿಲು ನೆನಪಾಗುತ್ತೆ, ಅದಕ್ಕೆ ಇರಬೇಕು ಆಕೆಯ ಪ್ರೀತಿಯನ್ನೂ ತಾಯಿ ಪ್ರೀತಿಗೆ ಹೋಲಿಸಿಕೊಂಡು ಆಕೆಯನ್ನು ಸಂಗಾತಿಯೆಂದು ಒಪ್ಪಿಕೊಳೋದು, ಪ್ರೀತಿಯೂ ಒಂದು ಉಪಾಸನೆಯಾಗಿ ಕಾಣೋದು. 

ನಿನ್ನ ಸವಿನೆನಪೆ ಮನದಲ್ಲಿ 
ಆರಾಧನೆ............ 
ಪ್ರೀತಿಯ ಸವಿಮಾತೆ ಉಪಾಸನೆ 

ಮಡಿಲ ಬಯಸುವ ಮನ ಮತ್ತೆ ಬಾಲ್ಯದತ್ತ ಹೊರಳೋದು ಸಹಜ, ಪ್ರೌಢತೆಯ ಮದ್ಯೆ ಬಾಲ್ಯ ತುಂಟಾಟ ಅಲ್ಲಲ್ಲಿ ನುಸುಳುತ್ತದೆ,ಹುಟ್ಟು ತರಲೆ ಗುಣ ಸುಟ್ಟರೂ ಹೋಗದಂತೆ,ಮನುಷ್ಯನ ಜೀವಿತಾವಧಿ ತುಂಬಾ ಬಾಲ್ಯದ ನೆನಪುಗಳು ಎಡೆ ಬಿಡದೆ ಕಾಡುತ್ತೆ, ಹೊಸ ಚೈತನ್ಯಗಳನ್ನು ಹುದುಗಿಸಿ ಇಟ್ಟು ಕೊಂಡಿರುವ ಆ ಖಜಾನೆ ಯಾವತ್ತೂ ಬರಿದಾದುದಲ್ಲ, ಮುಪ್ಪು ಮತ್ತೊಂದು ಬಾಲ್ಯದತ್ತ ನಡೆಯೊ ಹೆಜ್ಜೆ ಎಂಬುದು ತಿಳಿದವರ ಅಂಬೋಣ, ನನ್ನ ಅಜ್ಜ -ಅಜ್ಜಿಯ ಮುಪ್ಪಿನ ದಿನಗಳನ್ನೂ ನೆನಪಿಸಿಕೊಂಡಾಗ ಈ ಮಾತನ್ನೂ ಸಾರಸಗಟಾಗಿ ತಳ್ಳಿಹಾಕುವದೂ ಕೂಡ ನನ್ನಿಂದ ಸಾಧ್ಯವಿಲ್ಲ, 

ಏ ದುನಿಯಾವಾಲೇ ಪೂಛೇಂಗೇ 
ಮುಲಾಖಾತ್ ಹುಯೀ? 
ಕ್ಯಾ ಬಾತ್ ಹುಯೀ? 

ಮುಪ್ಪು ಬಾಲ್ಯದ ತುಂತುರ ಹನಿಯ ಮೋಡವನ್ನು ಜೀವನದಲ್ಲಿ ಮತ್ತೊಮ್ಮೆ ಸಂಧಿಸುವ ಕಾಲವೆಂದಾದಲ್ಲಿ ಮುಪ್ಪೆಂಬುದು ನಮ್ಮದೆ ಜೀವನದ ಏಳೂ ಬೀಳನ್ನೂ ಅವಲೋಕಿಸಿ ಅಜ್ಜಿ ತಾತ ಎಂದೆನ್ನುವ ಮಕ್ಕಳೊಂದಿಗೆ ಮಕ್ಕಳಾಗಿ ಮಾರ್ದಗರ್ಶಿಯಾಗುವ ಕಾಲ.ಜೀವವೊಂದರ ಕೊನೆ ಮಗದೊಂದು ಜೀವದ ಹುಟ್ಟೆ ಆದರೆ ಮತ್ತದೆ ಬಾಲ್ಯ ಮರುಕಳಿಸೀತೂ ಎಂಭ ಆಸೆಯೊಂದಿಗೆ ಗುನುಗಲಡ್ಡಿಯಿಲ್ಲ ಕೆಳಗಿನ ಹಾಡು..... 

ಕರೆದು ಬಿಡು, 
ಬಂದುಬಿಡುವೆನೆಲ್ಲಿಂದಲೆ ಆಗಲಿ 
ಬೆಟ್ಟ ಹತ್ತಿ ಹೊಳೆಯ ದಾಟಿ 
ಯಾರೆ ನನ್ನ ತಡೆಯಲಿ....

Friday, October 26, 2012

ಕನಸಿನ ಬಣ್ಣ......

ಹೃದಯ ಜೋಪಡಿಯೊಳಗೆ
ಅವಿತಿಟ್ಟ ಭಾವನೆಗಳ ರೂಪವೆ
ನನ್ನ ಮಾತು.

ಮನದ ಸಂದಿಯೊಳಗೆ
ಅಡಗಿರುವ ಋಣಾಂಶವೆ
ನನ್ನೊಳಗಿನ ಅಸಹನೆ.

ನಾ ಪಡೆವ ಒಲವೂ
ಅದರತ್ತಲಿನ ತುಡಿತವೇ
ನನ್ನುಸಿರು.

ಅರ್ಥವಿಲ್ಲದ ನಾನು ಎಂಬೊಳಗೆ
ಎಲ್ಲಾವೂ ನೀನಾದರೆ
ಅದೆ ನನ್ನ ನಿಟ್ಟುಸಿರು.

ನೋವ ಕಾರ್ಮುಗಿಲ ದಿನದಲ್ಲಿ
ಮೌನಕ್ಕೆ ಶರಣಾಗುವದೆ
ನನ್ನ ಏಕಾಂತ.

ನನ್ನ ಬಣ್ಣ ಬಿಚ್ಚಿಡುತ್ತಲೆ
ನಿನ್ನವನಾಗುವ ಕನಸು
ನನ್ನ ಬಯಕೆ

ನೀನು ನಾನು ಭೇಧವಿಲ್ಲದೆ
ಎಲ್ಲವೂ ನಾವೆಂದಾದಲ್ಲಿ
ಸಂಶಯ ಬೇಡ
ನೀನೆ ಎನ್ನ ಅರಸಿ.

Sunday, October 21, 2012

ತನ್ನೊಳಗಿನ ಪ್ರಶ್ನೋತ್ತರ

ಪ್ರಶ್ನೆ ಎದುರಿಸಬೇಕಾ? ಹೌದು ಪ್ರಶ್ನೆಗಳೂ ನಮ್ಮಲ್ಲಿ ಹುಟ್ಟಿಕೊಳ್ಳುತ್ತಲೆ ಇರಬೇಕು ಉತ್ತರ ಕಂಡುಕೊಳ್ಳುತ್ತಲೆ ಇರಬೇಕು ಆ ಮೂಲಕ ಮಗದೊಂದು ಮಜಲಿನ ಪ್ರಶ್ನೆಗಳ ಎಡತಾಕಲು ಸಿದ್ದತೆ ನಡೆಯುತ್ತಲೆ ಇರಬೇಕು, ಇದೆ ಜೀವನದ ಚಲನಶೀಲತೆ, ಸುಲಭಾರ್ಥದಲ್ಲಿ ಜೀವನೋತ್ಸಾಹದ ಜೀವಂತಿಕೆಯನ್ನು ಸಜೀವವಾಗಿರುಸುವಲ್ಲಿನ ರಹದಾರಿ. ಉತ್ತರವಿಲ್ಲದ ಪ್ರಶ್ನೆಗಳೆ ಇಲ್ಲವೆಂದಾದ ಮೇಲೆ ಉತ್ತರಕ್ಕಾಗಿ ನಡೆಯುವ ನಮ್ಮೊಳಗಿನ ಹುಡುಕಾಟ ನಮ್ಮನ್ನು ನಾವು ಜಾಡ್ಯದ ಬಲೆಗೆ ಬೀಳದಂತೆ ಕಾಯೊ ರಿಪ್ರೆಶ್ ಮೆಂಟ್ ಕ್ರಿಯೆ ಹಾಗೂ ಪ್ರೌಢತೆಯತ್ತ ಸಾಗುವ ಸುಲಭದ ಬೆಳವಣಿಗೆ.

ಪ್ರಶ್ನೆಗಳು ಇತರರಿಂದಲೂ ಬರಬಹುದು, ಸ್ವಿಕರಿಸಬಹುದಾದ ಆಯ್ಕೆ ನಮ್ಮದೆ, ಇದು ನನ್ನ ಒಳಿತಿಗಾಗಿನ ಪ್ರಶ್ನೆಯೆ? ಉತ್ತರಿಸಬೇಕಾದ ಜರೂರಿಗಳಿವೆಯೆ? ಪ್ರಶ್ನೆಕಾರನ ಕಾಳಾಜಿ ಎಂತದ್ದೂ? ಎಂಭಿತ್ಯಾದಿ ವಿಮರ್ಶೆ ನಮ್ಮಲ್ಲಿ ಹುಟ್ಟಬೇಕಾಗುತ್ತದೆ, ಈ ಪ್ರೌಢತೆಯನ್ನೂ ಗಳಿಸಬಲ್ಲುದಾದ ನಮ್ಮೊಳಗಿನ ಸಿದ್ದತೆ ಮೇಲೆ ಹೇಳಿದಂತೆ ನಮ್ಮನ್ನೆ ನಾವೂ ಪ್ರಶ್ನೆ ಮಾಡಿಕೊಳ್ಳುವದರಿಂದ ಹುಟ್ಟಿಕೊಳ್ಳುವಂತದ್ದು.ಪ್ರಶ್ನೆಗಳು ಕೆಲವೊಮ್ಮೆ ಸಲಹೆಗಳಾಗಿಯು ರೂಪುಗೊಳ್ಳುತ್ತದೆ ಅಥವಾ ಪ್ರಶ್ನೆಗಳ ಕೊನೆಯಲ್ಲಿ ಮಾರ್ಗದರ್ಶಿ ಸಲಹೆಗಳು ಅಡಗಿಕೊಂಡಿರುತ್ತದೆ ಇದ ಗುರುತಿಸಬಹುದಾದ ಮೆಚ್ಯೂರಿಟಿ ನಮ್ಮಲ್ಲಿ ಬೇಕಷ್ಟೆ. ಒಂದು ಮಗು ಪ್ರಶ್ನೆ ಮಾಡುತ್ತನೆ ಬೆಳೆಯುತ್ತೆ, ಬಾಲ್ಯ ಕಳೆದು ಪ್ರೌಢತೆಯನ್ನು ಪಡೆಯುತ್ತೆ ಅನ್ನುವದನ್ನು ನಾವು ಮರೆಯಬಾರದು.

ಇದಷ್ಟೆ ಅಲ್ಲದೆ ಪ್ರಶ್ನೆಗಳು ತನ್ನ ಜೊತೆ ಹಲವು ಭಾವಗಳನ್ನೂ ಹೊರ ಸೂಸುತ್ತವೆ, ಪ್ರಮುಖವಾದುವುಗಳೆಂದರೆ ಕೋಪ, ದರ್ಪ, ಅಹಂಕಾರ,ಸಹನೆ, ಕರುಣೆ ಇತ್ಯಾದಿ, ಇವುಗಳಲ್ಲಿ ಸೂಕ್ತವಾದುದಕ್ಕೆ ಉತ್ತರಿಸಬೇಕಾದಕ್ಕೆ ಉತ್ತರಿಸಿ ಮೌನಕ್ಕೆ ಶರಣಾಗುವದೂ ಮಾನಸಿಕ ನೆಮ್ಮದಿ ದೃಷ್ಟಿಯಿಂದ ನಮ್ಮ ಚೈತನ್ಯಗಳನ್ನೂ ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಸೂಕ್ತ. ಕೆಲ ಪ್ರಶ್ನೆಗಳಿಗೆ ಮೌನ ಕೂಡ ಸೂಕ್ತ ಉತ್ತರವಾಗಬಲ್ಲುದು.ಪ್ರಶ್ನೆಗಳಿಗೆ ಉತ್ತರಿಸಬೇಕಾದಲ್ಲಿ ಪ್ರಮುಖವಾಗಿ ಅಳವಡಿಸಿಕೊಳ್ಳಬೇಕಾದುದು ಏನೆಂದರೆ "ಕಡಿಮೆ ಮಾತು ಸ್ಪಷ್ಟ ಸಂದೇಶ", ಈ ಸೂತ್ರ ಅಳವಡಿಸಿಕೊಂಡಿದ್ದೆ ಆದರೆ ಇದು ಕೊಡಬಲ್ಲುದಾದ ಉತ್ತರದ ಮೌಲ್ಯವನ್ನ ಹೆಚ್ಚಿಸುತ್ತದೆ ಮತ್ತು ಅನಾವಶ್ಯಕ ಕಿರಿ ಕಿರಿಯನ್ನೂ ಮನ ತಾಕದಂತೆ ದೂರವಿರಿಸುತ್ತದೆ,

ಕೆಲವೊಂದು ಉತ್ತರಗಳೂ ಪ್ರಶ್ನೆಯ ರೂಪದಲ್ಲೆ ಇದ್ದು ಅದರೆ ಅದು ಪ್ರಶ್ನೆಯಾಗಿರದೆ ಉತ್ತರವಾಗಿರುತ್ತದೆ. ಉದಾಹರಣೆಗೆ ನನಗೆ ಗೊತ್ತಿಲ್ಲ ಅನ್ನುವದಕ್ಕೆ ಯಾವನಿಗೊತ್ತು?ಯಾರಿಗೊತ್ತು? ಹಂಗೆ ಆದ್ರೆ ಒಳ್ಳೇದು, ಹಾಗೆಯೆ ಅಗ್ಬೇಕೂ ಅನ್ನೋದಕ್ಕೆ ಯಾಕೆ ಆಗ್ಬಾರ್ದೂ? ಇತ್ಯಾದಿ........ ಅದರೆ ಇವುಗಳಲ್ಲಿ ಒಂದು ಸ್ಪಷ್ಟ ಸಂದೇಶ ಇದ್ದೆ ಇರುತ್ತದೆ, ಅದು ಎದುರಿಗಿದ್ದವನ ಮೈಂಡ್ ರೀಚ್ ಅಗುವಂತದ್ದೂ.ಈ ಸ್ಪಷ್ಟತೆ ಪ್ರಶ್ನೆಯಲ್ಲಾಗಲಿ ಕೊಡುವ ಉತ್ತರದಲ್ಲಾಗಲಿ ಇದ್ದಲ್ಲಿ ಮಾತ್ರ ಯಾವುದೆ ವಿಚಾರ ಮನದಟ್ಟಾಗಬಲ್ಲುದು ಅಥವಾ ತಾರ್ಕಿಕ ಅಂತ್ಯ ಪಡೆಯಬಲ್ಲುದು.ಒಂದು ವೇಳೆ ಉತ್ತರ ಅಥವಾ ಪ್ರಶ್ನೆಗಳಲ್ಲಿ ಸ್ಪಷ್ಟ ಸಂದೇಶವಿಲ್ಲವೆಂದಾದಲ್ಲಿ ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ ಅಥವಾ ಇನ್ನಷ್ಟೂ ಪ್ರಶ್ನೆ -ಉತ್ತರಗಳ ಹುಟ್ಟುವಿಕೆಗೆ ಕಾರಣವಾಗುತ್ತದೆ, ಇದು ಸುಲಭದಲ್ಲಿ ಗುಣವಾಗುವ ವೃಣವೊಂದನ್ನೂ ಕೆರೆದು ದೊಡ್ಡದಾಗಿಸಿದಂತೆ.ಹೀಗಾಗಬಾರದೆಂದರೆ ನಾವು ಕೇಳುವ/ಹೇಳುವ - ಉತ್ತರ/ಪ್ರಶ್ನೆಗಳಲ್ಲಿ ಸಾಚಾತನವಿರಬೇಕು ಅಲ್ಲದೆ ನಮ್ಮ ಮಾತಿನಲ್ಲೊಂದು ತೂಕವಿರಬೇಕು, ಈ ಪ್ರೌಢತೆ ನಮ್ಮಲ್ಲಿ ಬರಬೇಕಾದರೆ ನಾವೂ ನಮ್ಮಲ್ಲೆ ಪ್ರಶ್ನೋತ್ತರ ಕ್ರಿಯೆಯಲ್ಲಿ ತೊಡಗಿರಬೇಕು, ಇನ್ನೊಬ್ಬರು ಹೇಳಿಕೊಟ್ಟು ಬರಲಾರದ , ಪ್ರೌಢತೆಯನ್ನೂ ಸಂಪಾದಿಸುವ ಈ ದಾರಿ ನಮ್ಮನ್ನೂ ನಾವೂ ಅವಲೋಕಿಸುವ ನಿಟ್ಟಿನಲ್ಲಿ ಅತ್ಯಂತ ಸುಲಭದ್ದೂ ಹೌದು.

ಅವನಿಗೆ ಟೈಮ್ ಸೆನ್ಸ್ ಇಲ್ಲಾ! ಹಣಕಾಸು ವ್ಯವಹಾರದಲ್ಲಿ ವೆರಿ ಪುವರ್!! ಶುದ್ದ ಬಾಯಿ ಹರುಕ!! ಅಹಂಕಾರಿ!!! ಮನೆಹಾಳ!!!!ಮುಂತಾದ ಅಪಾದನೆಗಳೂ ಸಮಾಜದಲ್ಲಿ ಸುಲಭವಾಗಿ ನಮ್ಮ ಬೆನ್ನೇರಿಬಿಡಬಹುದು.ಈ ಅಪಾದನೆಗಳಲ್ಲಿ ಹುರುಳಿರಬೇಕೆಂದೇನಿಲ್ಲ,ಅದ್ದರಿಂದ ಅನಗತ್ಯವಾಗಿ ತಲೆಕೆಡಿಸಿಕೊಳ್ಳಬೇಕೆಂದೇನಿಲ್ಲ, ಅಪಾದನೆ ಹೊರಿಸಬಲ್ಲವನಿಗೆ ಅವನದೆ ಅದ ಲಾಭದಾಯಕ ಅಥವಾ ಹವ್ಯಾಸದ ಕಾರಣಗಳಿರಬಹುದು.ಹಾಗಂತ ಈ ಅಪಾದನೆಗಳನ್ನೂ ಏಕಾಏಕಿ ದೂರ ಮಾಡದೆ ಒಂದು ಸಲ ನಮ್ಮದೆ ಮನಸಾಕ್ಷಿಯನ್ನು ಸವರಿ ಬಂದಲ್ಲಿ ಋಣಾತ್ಮಕ ಅಂಶಗಳನ್ನೂ ಧನಾತ್ಮಕವಾಗಿ ಬದಲಾಯಿಸಿಕೊಂಡು ನಾವೂ ಬೆಳೆಯಲು ಪೂರಕವಾಗಿ ಈ ಅಪಾದನೆಗಳು ಸಹಕಾರಿಯಾಗಬಹುದು.ಮನಸಾಕ್ಷಿಗೆ ವಿರುದ್ದವಾಗಿ ಯಾವೂದೆ ಕೆಲಸ ನಮ್ಮಿಂದ ಆಗಿದೆ ಅನ್ನುವ ತೀರ್ಪು ಮನಸಾಕ್ಷಿ ಕೊಟ್ಟಲ್ಲಿ, ಆ ಕ್ಷಣದಲ್ಲೆ ತಪ್ಪನ್ನು ಸರಿಪಡಿಸಿಕೊಂಡರೆ ಒದಗಬಹುದಾದ ದೊಡ್ಡ ಅಪಾಯವನ್ನೂ ಜೀವಂತಿಕೆಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಪ್ಪಿಸಿದಂತೆ. ಈ ಮನಸಾಕ್ಷಿಯನ್ನೂ ಎದುರುಗೊಳ್ಳುವ ದಾರಿಯೂ ಮತ್ತೇನಲ್ಲ ಅದು ನಮ್ಮನ್ನೆ ನಾವೂ ನಮ್ಮ ಬೆಳೆವಣಿಗೆ ನಿಟ್ಟಿನಲ್ಲಿ ಪ್ರಶ್ನಿಸಿಕೊಳ್ಳುವದೆ ಆಗಿರುತ್ತದೆ.

ತಪ್ಪುಗಳನ್ನೂ ಒಪ್ಪಿ ತಿದ್ದಿಕೊಳ್ಳೋದಕ್ಕೆ ಬೇಕಾದ ಮನೋಸ್ಥೈರ್ಯ , ತಪ್ಪೆಂದು ಅರಿವಾಗಬಲ್ಲ ಅರಿವುಗಳು, ನಮ್ಮೊಳಗೆ ನಡೆಯುವ ಪ್ರಶ್ನೊತ್ತರ ಕ್ರಿಯೆಯು ನಮಗೆ ಕೊಡಬಲ್ಲುದು.ನಮ್ಮ ನಡೆವಳಿಕೆಗಳಲ್ಲಿನ ಹುಳುಕುಗಳನ್ನೂ ಸರಿಡಿಸಿಕೊಳ್ಳಬೇಕಾದ್ದೂ ನಾವೆ ಹೊರತಾಗಿ ಇನ್ಯಾರಲ್ಲ. ಈ ನಿಟ್ಟಿನಲ್ಲಿ ಇತರರ ಸಲಹೆಗಿಂತ ಹೆಚ್ಚಿಗೆ ಲಾಭದಾಯಕವೆನಿಸುವದು ನಮಗೆ ನಾವೆ ಒಡ್ಡಿಕೊಳ್ಳಬಹುದಾದ ಪ್ರಶ್ನೆಗಳೂ ಮತ್ತು ಉತ್ತರ ಹುಡುಕಾಟ ಕ್ರಿಯೆಯಲ್ಲಿ ದೊರೆವ ಅರಿವು.ತನ್ನ ಜೀವನವೂ ತನಗೆ ಆದರ್ಶವಾಗಿದ್ದೂ ಹಾಗೂ ತೃಪ್ತಭಾವ ಹೊಂದಿರಬೇಕಾದ್ದೂ ಮೊದಲೂ ತದ ನಂತರವೇ ಉಳಿದದ್ದೆಲ್ಲ, ಹೀಗಿರಬೇಕಾದರೆ ನಮ್ಮ ನಡೆ ನಮ್ಮ ಮನಸಾಕ್ಷಿ ಒಪ್ಪುವಂತಿರಬೇಕು.ಮನಸಾಕ್ಷಿಯನ್ನೂ ತಿಳಿಯುವ ಕ್ರಿಯೆಯೆ ನಮ್ಮೊಳಗೆ ನಡೆವ ಪ್ರಶ್ನೋತ್ತರ.ಒಳ್ಳೆ ಕಾಲಗಳೂ , ಒಳ್ಳೆ ಮಂದಿ ನಮ್ಮ ಜೀವನದಲ್ಲಿ ಬಂದಿದ್ದೂ ಗೊತ್ತಾಗಲ್ಲ ಮುಂದುವರಿದಿದ್ದೂ ಗೊತ್ತಾಗಲ್ಲ ಗೊತ್ತಾಗಬೇಕಾದರೆ ವರುಷಗಳು ಉರುಳಿರುತ್ತವೆ.ಹೀಗಾಗಬಾರದೆಂದರೆ ತನ್ನೊಳಿತಿಗೆ ತನ್ನನ್ನೆ ತಾನೂ ತನ್ನೊಳಗೆ ಪ್ರಶ್ನಿಸಿ ಅವಲೋಕಿಸಿಕೊಳ್ಳುವದು ಶುಭ, ಮನುಷ್ಯ ಮಾತ್ರನಿಂದ ಸಾಧ್ಯವಾಗಬಲ್ಲ ಈ ಕ್ರಿಯೆಯಿಂದ ವಿಮುಖನಾಗುವದಷ್ಟೆ ಅಶುಭ.ಆಯ್ಕೆಯಂತು ನಮ್ಮದೆ. :) :)

Tuesday, October 2, 2012

ದೃಷ್ಟಿ

ಅಕಾರ ಹೀನ
ನಿರಾಕಾರವಾದ
ದೃಷ್ಟಿಯೂ
ಚೆಂದವಾಗಿ
ರೂಪುಗೊಳ್ಳುವದು
ಸುಂದರ ಕಣ್ಣುಗಳ
ಅಪ್ಪುಗೆಯಲ್ಲಿ
ಎಂಬುದು
ನಿರ್ವಿವಿವಾದ
ದೃಷ್ಟಿಯು
ಸುಂದರವೆ ?
ಎಂಬುದು
ನಿಲುಕಿಗೆ
ನಿಲುಕದ್ದು.

ಇಂತದೆ
ಕಣ್ಣುಗಳ
ನಾ ನೋಡಿದ
ಕ್ಷಣದಿಂದ
ಆ ನೇತ್ರಗಳ
ಸೌಂದರ್ಯ
ದೃಷ್ಟಿ ಸುಂದರತೆಯ
ಎಡತಾಕದೆ
ಒಟ್ಟಾರೆ
ಚಂದವಷ್ಟೆ
ಚಂದವಾಗಿ
ಮನದೊಳಗೆ
ಮನೆಮಾಡಿತು

ಮುಂದುವರಿದು
ಆ ಬೊಗಸೆ ತುಂಬೊ
ಬಟ್ಟಲು ಕಣ್ಣೊಳಗೆ
ಮೂಡಿದ ನನ್ನ ಪಡಿಯಚ್ಚು
ನನ್ನನೆ ಮಾಸಿ
ನನ್ನ ಗಮನಿಸಿದ
ದೃಷ್ಟಿಯೊಂದೆ
ತುಂಬಿತು
ನನ್ನೊಳಗೆ.

Photo: ದೃಷ್ಟಿ
----------------

ಅಕಾರ ಹೀನ
ನಿರಾಕಾರವಾದ
ದೃಷ್ಟಿಯೂ
ಚೆಂದವಾಗಿ
ರೂಪುಗೊಳ್ಳುವದು
ಸುಂದರ ಕಣ್ಣುಗಳ
ಅಪ್ಪುಗೆಯಲ್ಲಿ
ಎಂಬುದು
ನಿರ್ವಿವಿವಾದ
ದೃಷ್ಟಿಯು
ಸುಂದರವೆ ?
ಎಂಬುದು
ನಿಲುಕಿಗೆ
ನಿಲುಕದ್ದು.

ಇಂತದೆ
ಕಣ್ಣುಗಳ
ನಾ ನೋಡಿದ
ಕ್ಷಣದಿಂದ
ಆ ನೇತ್ರಗಳ
ಸೌಂದರ್ಯ
ದೃಷ್ಟಿ ಸುಂದರತೆಯ
ಎಡತಾಕದೆ
ಒಟ್ಟಾರೆ 
ಚಂದವಷ್ಟೆ
ಚಂದವಾಗಿ
ಮನದೊಳಗೆ
ಮನೆಮಾಡಿತು

ಮುಂದುವರಿದು
ಆ ಬೊಗಸೆ ತುಂಬೊ
ಬಟ್ಟಲು ಕಣ್ಣೊಳಗೆ
ಮೂಡಿದ ನನ್ನ ಪಡಿಯಚ್ಚು
ನನ್ನನೆ ಮಾಸಿ
ನನ್ನ ಗಮನಿಸಿದ
ದೃಷ್ಟಿಯೊಂದೆ
ತುಂಬಿತು
ನನ್ನೊಳಗೆ.